ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಜಲ್

ಡಾ. ಪ್ರಕಾಶ ಬುದ್ದಿನ್ನಿ

ನಿನ್ನ ಮೌನ ಬಿಟ್ಟು ಬಿಡು ನಮ್ಮಿಬ್ಬರ ಮನಗಳೆರಡು ಮಾತಾಡಲಿ ಸಖಿ
ನಿನ್ನ ಮೌನದ ಭಾಷೆಯನು ಏನೆಂದು ನಾ ಹೇಗೆ ತಿಳಿದುಕೊಳ್ಳಲಿ ಸಖಿ

ಮೌನದೂರ ಬಾಗಿಲ ಎಷ್ಟಂತ ಬಡಿಯುತ್ತಿರುವೆ ಹೇಳು ನಾ ಬಂದ ಸದ್ದು ಕೇಳಿಸದೆ
ನಿನ್ನ ಮೌನವನು ಮುರಿದು ಮಾತಾಗಿ ಬಾ, ನೀನೋಮ್ಮೆ ಜೊತೆಯಲಿ ಸಖಿ

ಬಿಂಕು-ಬಿಗುಮಾನ ಸಿಟ್ಟು ಸೆಡವುಗಳೆಲ್ಲವನು ಮರೆತು ಬಿಡು ನನ್ನೊಳಗಿನ ಕನಸು ನೀನು
ನಿನ್ನ ಮೌನಕ್ಕೆ ಭಾವಕ್ಕೆ ರೆಕ್ಕೆ ಮೂಡಿ ಇಂದೆ ನನ್ನೆದೆಗೆ ಹಾರಿಬಿಡಲಿ ಸಖಿ

ಈ ರಾತ್ರಿಗೆ ದೀಪ ಹಚ್ಚುವುದು ಮರೆತು ಕಾದು ಕೂತಿದ್ದೇನೆ ನಿನ್ನ ಬರುವಿಗಾಗಿ
ನಿನ್ನ ಮೌನದ ಬೊಗಸೆಯೊಳಗೆ ಬೆಳಕ ಬೀಜವಿಡಿದು ಬಂದು ಬಿಡು ಜೀವ ಕಾಯಲಿ ಸಖಿ

ನನ್ನ ಮನದ ಬಯಲ ತುಂಬ ನಿನ್ನ ಕಾಲಕಿರುಗೆಜ್ಜೆಯೇ ಮಾತಂತೆ ಪಿಸುಗುಡುತಿವೆ
ನಗುವ ಚಂದಿರನ ಮುಂದೆ ಮೌನ ಸರಿಸಿಬಿಡು ‘ಪ್ರಕಾಶ’ನೊಳಗೆ ಹೂಗಳೆಲ್ಲ ಅರಳಲಿ ಸಖಿ

‍ಲೇಖಕರು Avadhi

19 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading