ವೈ ಬಿ ಹಾಲಬಾವಿ
ಕಳಚಿ ಬಿಡೋಣ ನಾವೂ
ರಾಗ ದ್ವೇಷ ಅಸೂಯೆ…
ಯಾವುದನ್ನು
ಹಿಡಿದಿಟ್ಟುಕೊಳ್ಳುವುದಿಲ್ಲ
ಮರ-ಗಿಡಗಳು;
ನಮ್ಮಂತೆ ಯಾವುದನ್ನೂ
ಕೂಡಿಟ್ಟುಕೊಳ್ಳುವುದಿಲ್ಲ…

ಕೊಡುವುದಷ್ಟೇ ಅವುಗಳ ಕೆಲಸ
ಒಮ್ಮೆ ಅರಳಿ ಹೂ ಹಬ್ಬವಾಗಿ
ಇನ್ನೊಮ್ಮೆ ಹೊರಳಿ ಮೈ ಬೆತ್ತಲಾಗಿ
ಒಡ್ಡಿಕೊಳ್ಳುತ್ತವೆ ಸದಾ
ಬದಲಾವಣೆಯ ಸಂಭ್ರಮಕ್ಕೆ…
ಹೂ, ಕಾಯಿ, ಹಣ್ಣು, ಎಲೆ
ಎಲ್ಲಾ ಮಾಗಿದಂತೆ ತೊಟ್ಟು, ತೊಗಟೆ
ಒಂದೊಂದೇ ಕಳಚಿಬಿಡುತ್ತವೆ
ಮಣ್ಣ ಋಣ ಮಣ್ಣಿಗೆ ಬಿಟ್ಟು…
ಕಳಚಿ ಬಿಡೋಣ ನಾವೂ…
ರಾಗ, ದ್ವೇಷ, ಅಸೂಯೆ
ರೋಗವಾಗಿ ಕಾಡುವ ಮುನ್ನ
ಹಗುರಾಗೋಣ ಮರ-ಗಿಡಗಳಂತೆ
ಪ್ರೀತಿ, ಸ್ನೇಹದ ಬೇರು ಬಿಟ್ಟು…






Very good poem that I have read recently in ‘Avadhi’
chennaagide … yentaha SAHAJA sundara prateeka !! aadare alavadisi oggikolluvudu sulabhave ??!!
manasige thattida padya.