–ಮಾಲತಿ ಗೋರೆಬೈಲ್
ಕಾಲದ ಹಂಗು ಮರೆತು
ಹನಿಗಳನ್ನೂ ಗಡಿ ದಾಟಿಸಿದ್ದು
ಭುವಿಯ ಮೇಲಣ ಸಿಟ್ಟಿಗಲ್ಲ,
ಇದ್ದೆಲ್ಲ ನೋವುಗಳ ಎದೆಯೊಳಗೆ
ಒತ್ತಿಟ್ಟು ಸಾವಧಾನದ ಸಾಲು
ಚಿಗುರೊಡೆಯುವ ಸುಖಕ್ಕೆ
ಹೆಗಲೊಡ್ಡಿ ನಿಲ್ಲುವ ಛಾತಿ ಅದಕೆ
ಮಲ್ಲಿಗೆಯ ಮೊಗ್ಗು, ಪಾರಿಜಾತದ ಕುಸುಮ
ಘಮವ ಬೀರುವ ಅವಧಿ
ಮೀರಿಯೇ ಹೋಗಿದ್ದು
ಹಸಿರಿಗೂ ಉರಿಯು ಹರಿಹಾಯ್ದಿದ್ದು
ಇಳೆಯ ಶೋಷಿಸಲೂ ಅಲ್ಲ,
ಬಚ್ಚಿಟ್ಟ ಕನಸುಗಳ ಬಿಚ್ಚಿ
ಹಚ್ಚಗಾಗಿಸುವ, ಕಾದು ಪಾಠವಾಗುವ
ಕೆಚ್ಚು ಇದಕೆ…
ಸಂಜೆ ಕೆಂಪಿನ ತಂಪು,
ಒಲವ ಗಾಳಿಯ ಒನಪು
ಕಮರಿ ಸೀದು ಹೋಗಿದ್ದು,
ಆಗಸಕೆ ಮುತ್ತಿಟ್ಟು
ಬವಣೆಯ ಮುದ್ರೆಯೊತ್ತಿದ್ದು;
ವಸುಧೆಯೊಡಲ ಬರಡುಗೊಳಿಸಲಲ್ಲ,
ಬೆಂಕಿ ಶಾಖದ ಪಾತ್ರ,
ಸೃಷ್ಟಿ ಮುನಿಯುವ ಚಿತ್ರ
ಅರುಹಿ, ಗಟ್ಟಿಗೊಳಿಸುವ
ಹಚ್ಚನ್ನೇ ಬದುಕನ್ನು
ಹೆಚ್ಚು ಪ್ರೀತಿಸುವಂತೆ
ವ್ಯಾಖ್ಯಾನ ರೂಪಿಸುವ
ಹುಚ್ಚು ಇವಕೆ… ಈ ಮೇಘಗಳಿಗೆ!!






0 Comments