ನನ್ನ ಕವಿಮಿತ್ರರ ಅಪ್ಪಣೆ ಪಡೆದು……
ಶೇಷಗಿರಿ ಜೋಡಿದಾರ್
ದುರಾಸೆಯ ಉಳಿಮೆಮಾಡಿ,ಅಹಂಕಾರ ಬೆಳೆಯ ಸುಗ್ಗಿಯ ಹಿಗ್ಗಲ್ಲಿ
ಕಳೆಯಂತೆ ಬೆಳೆಯುವ, ಹಳ್ಳದ ಪಕ್ಕದ ಉಸುಕು ದಿಬ್ಬಕ್ಕೆ
ಹತ್ತಿಕೊಂಡ ಮುಳ್ಳಿನ ಬಿಳಿ ಗಡ್ಡ,
ಬಾಚದೆ ಸ್ವೇಛ್ಛೆಯಾಗಿ ಚಾಚುವ ಮುಳ್ಳು ಹಂದಿ ಕೂದಲು,
ಇದೇ ತಾನೇ ಖಡ್ಗ ತೆಗೆದು ಝಳಪಿಸಿದ ಲೇಖನಿ
ಯಾರ ಇರಿಯುವುದೆಂದು ಆತನಿಗೆ ತಿಳಿದಿಲ್ಲ
ಆದರೂ ಸನ್ನಧ್ದ, ಶತ್ರುಗಳ ಹುಡುಕಾಟದಲ್ಲಿ
ತನ್ನನ್ನೇ ಮರೆತಿರುವ ಕವಿಗೆ ವೀರಾವೇಶ
ಬೇಕಿಲ್ಲ ಉಪದೇಶ,ಇನ್ನಷ್ಟು ಕೆದಕಲಿದೆ ಅವನ ರೋಶ
ವರ್ಣಗಳ ಜಾಲದಲ್ಲಿ, ಸುಮಧುರ ಪದಗಳ ಜೋಡಿಸಿ
ಒಗಟು ಬಿಡಿಸುವ ಕಲೆ, ರಾಗರಹಿತ ಸಾಲುಗಳ ಪೋಣಿಸಿ
ಕಟ್ಟುವ ಹಾರ ಒಮ್ಮೊಮ್ಮೆ, ಭೇಧಿಸಲಾರದ ಬಲೆ
ಗೋಚರಿಸಬಹುದು ಒಮ್ಮೊಮ್ಮೆ ಅಪೂರ್ವ ಅಸಂಗತ ಕಲೆ
ಸಾಹಿತ್ಯದ ಸೆಲೆ, ನಿರ್ಜಲ ಮರಳು
ಏರಲಾರದ ಏಣಿಗೆ ಯಾವ ಆಸರೆ ಇಲ್ಲ
ಆದರೂ ಮೆಟ್ಟಿಲ ಕೊಟ್ಟು ತನ್ನದೇ ಭಾಷೆಯಲ್ಲಿ
ಕಟ್ಟುತ್ತಾನೆ ತನ್ನ ನೆಲೆ,
ನಿಶ್ಯಭ್ದ ತಂಗಾಳಿಯಲಿ ಕಂಪಿಸಿವ ಬಿರುಗಾಳಿ
ಎಂದೂ ಕೇಳಿರದ ಶಭ್ದಾತೀತ ತರಂಗ
ಹೊಂದಾಣಿಕೆಯ ಕಾವ್ಯಕ್ಕೆ ಈರ್ಷೆಯ ತಾಳ
ಕ್ರಾಂತಿಯ ಚಳುವಳಿಗೆ ಹೊಸದೊಂದು ಮೇಳ
ಹಳ್ಳಿಯ ಲಾವಣಿಯ ಸಂಗೀತ ಕಛೇರಿ
ನಗರದ ನಗಾರಿಗಳ ಗೊಂದಲದಲಿ ಅಬ್ಬೆಪಾರಿ
ವೃಂದ ಗೀತೆಯಲ್ಲಿ ಹಂಸಗೀತೆಯ ಅಪಶೃತಿ
ಅಸಹನೆ ಗಾಯನದಲಿ,ಕೊರತೆ ಕಂಡ ಮಮಕಾರ
ಮಾಯವಾದ ಕೋಮಲ ಗಾಂಧಾರ
ಮೈನೆರೆಯಲಿರುವ ಹೊಸ ಶತಮಾನದ ಕಾವಿಗೆ
ಮೊಗ್ಗಾಗಿರುವ ಪೀಳಿಗೆಯ ಸುತ್ತ ಕಿವುಡಾಗಿಸುವ ಝೇಂಕಾರ
ಸೋಲೊಪ್ಪದ ಪರಾಗಸ್ಪರ್ಷಕ್ಕೆ ಬೀಜವಾಗಿ
ಮೊಳಕೆಯೊಡೆಯುವ ಚಿಗುರು
ಬೆಳೆಯಬಹುದೇನೋ ಹೆಮ್ಮರವಾಗಿ?







ತನ್ನ್ನನೇ ಮರೆತಿರುವ ಕವಿಗೆ ವೀರಾವೇಷ. …
chennagide