-ಧನಂಜಯ ಕುಲಕರ್ಣಿ
ಧಾರವಾಡದಲ್ಲಿ ನಮ್ಮ ಗೆಳೆಯರ ಗುಂಪು ಆಗಾಗ ಮಾತನಾಡಿಕೊಳ್ಳುತ್ತಿದ್ದ ಒಂದು ಆರೋಗ್ಯಕರ ಜೋಕ್ ಇದು…ಯಾರಾದರು ಕವನ ವಾಚನ ಮಾಡಲು ಇಚ್ಚಿಸಿದರೆ ಅದನ್ನು ನಾವು ಲಾಠೀ ಚಾರ್ಜ್ ಎನ್ನುತ್ತಿದ್ದೆವು ಮತ್ತು ಕಥೆ ಓದಲು ಇಚ್ಚಿಸಿದರೆ ಅದನ್ನು ಗೋಲಿ ಬಾರ್ ಎಂದು ಹೇಳುತ್ತಾ ನಗುತ್ತಿದ್ದೆವು…ಏಕೆಂದರೆ ಧಾರವಾಡದ ವಾತಾವರಣವೇ ಅಂಥದ್ದೋ ಏನೋ ಗೊತ್ತಿಲ್ಲ…ಯಾವನಾದರೂ ಎರಡು ಕವಿಗೋಷ್ಠಿಗೆ ಹಾಜರಾದನೆಂದರೆ ಸಾಕು ಮುಂದಿನ ಕವಿಗೋಷ್ಠಿಗೆ ಅವನ ಕವನ ವಾಚನ ಇರಲೇಬೇಕು…ಅಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು..
ಇಂಥದ್ದರಲ್ಲಿ ಅದೊಂದುದಿನ ಒಂದು ವಿಚಿತ್ರ ಕರಪತ್ರ ನಮ್ಮ ಕೈಸೇರಿತು…ಧಾರವಾಡದ ವಕೀಲರಾದ ಶ್ರೀ. ವೆಂಕಟೇಶ್ ಕುಲಕರ್ಣಿ ಅದನ್ನು ಮುದ್ರಿಸಿದ್ದರು ಮತ್ತು ಅದರ ಒಕ್ಕಣಿಕೆ ಈ ರೀತಿಯಾಗಿತ್ತು… “ರೊಕ್ಕ ಕೊಟ್ಟು ಕವನ ಕೇಳ್ರಿ…ಬ್ಯಾಸರಾ ಆದ್ರ ನಿಮ್ಮ ರೊಕ್ಕ ವಾಪಸ್ ತಗೊಳ್ರಿ…” ಮತ್ತು ಅದರ ಪ್ರವೇಶ ದರ ಕೂಡ ಕೇವಲ ಒಂದು ರುಪಾಯಿ ಮಾತ್ರ…
ಈ ರೀತಿಯ ವಿಚಿತ್ರ ಸರ್ಕಸಗಳನ್ನು ಮಾಡುವುದರಲ್ಲಿ ವೆಂಕು ನಿಸ್ಸೀಮರು ಮತ್ತು ಪ್ರಸ್ತುತ ಕವಿಗೋಷ್ಠಿಗೆ ಚಂಪಾ ಅಧ್ಯಕ್ಷತೆ…ಚಂಪಾ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದಾರೆಂದರೆ ಅದರಲ್ಲಿ ಯಾವುದೇ ಮೋಸವಿರುವುದಿಲ್ಲ ಎಂಬ ಖಾತ್ರಿ ನಮಗೆಲ್ಲ ಇರುತ್ತಿತ್ತು…ಅದರಂತೆಯೇ ಅಂದು ನಡೆದ ಈ “ಪೆ ಅಂಡ್ ಲಿಸನ್” ಕವಿಗೋಷ್ಠಿಗೆ ಜನ ಕಿಕ್ಕಿರಿದು ತುಂಬಿದ್ದರು…ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕವಿಗೊಷ್ಟ್ಹಿಯನ್ನು ಕೇಳಲು ಪಕ್ಕದ ಹುಬ್ಬಳ್ಳಿ, ಹಾವೇರಿ, ರಾಣೇಬೆನ್ನೂರು, ಬೆಳಗಾವಿ ಮುಂತಾದ ಕಡೆಗಳಿಂದ ಜನ ಬಂದಿದ್ದರು…ಕವಿಗೋಷ್ಥಿ ಹೌಸ್ ಫುಲ್!!!! ಮತ್ತು ಇದರಿಂದ ಸಂಗ್ರಹವಾದ ಹಣ ೨೫೦೦ ರೂಪಾಯಿಗಳು….ವೆಂಕು ಅಂದು ಎಲ್ಲರಿಗು ಚಹಾ ಕುಡಿಸಿದರು….ಎಲ್ಲರು ಬಹಳ ಸಂಭ್ರಮಿಸಿದೆವು… ಮೂರುಗಂಟೆಗಳ ಕಾಲ ನಡೆದ ಕವಿಗೊಷ್ಥಿಯಲ್ಲಿ ಭರ್ಜರಿ ಮಲೆನಾಡು ಮಳೆಯ ದರ್ಶನವಾಗಿತ್ತು…ಎಲ್ಲರ ಮನಸ್ಸು ಒದ್ದೆಯಾಗಿ ನೆನಪುಗಳು ಮಾಸದಂತೆ ಕವನಗಳು ತಮ್ಮ ತೇವವನ್ನು ನಮ್ಮೊಂದಿಗೆ ಬಿಟ್ಟು ಹೋಗಿದ್ದವು…
ಇಂತಹ ಅನೇಕ ಹೊಸತನಗಳು ಧಾರವಾಡದಲ್ಲಿ ನಡೆಯುತ್ತವೆ ಆದರೆ ವಿಪರ್ಯಾಸವೆಂದರೆ ಅವು ಯಾವವು ಸಹ ಬೆಳಕಿಗೆ ಬರುವುದಿಲ್ಲ…ರಾಜಧಾನಿಯಲ್ಲಿ ಒಂದು ಸಣ್ಣ ಸೊಳ್ಳೆ ಸತ್ತರು ಸಹ ಅದು ಸುದ್ದಿಯಾಗುತ್ತದೆ…ಅದನ್ನೇ ನಾವು ಲಾಬಿ ಎಂದು ಕರೆಯುವುದು…ನಮ್ಮ ಭಾಗದ ಜನರಿಗೆ ಅದು ಅರ್ಥವಾಗದೆ ಇರುವುದು ದುರಂತ…






0 Comments