-ಕವಿತಾ ವಿರೂಪಾಕ್ಷ
ಕಾಲ ಮತ್ತು ನಾನು
ನೀನೊಂದು ಜೀನ ಧರಿಸಿದ ಕುದುರೆ
ಸುಮ್ಮನೆ ಓಡುತ್ತಲೇ ಇರುವೆ
ಜನನವೋ, ಮರಣವೋ
ನೋವೋ, ನಲಿವೋ
ಶಾಂತಿಯೋ, ಯುದ್ದವೋ..?
ನಿನ್ನ ಚಲನೆಯ ನಶೆ ಏರಿಸಿಕೊಂಡ
ಕೆಲವರು; ಭವ್ಯತೆಯನ್ನು
ಬಡಿದು ಕೊಂದರು
ನೋಡಿದೆಯಲ್ಲಾ,
ಗಾಜಾಪೆಟ್ಟಿಯಲ್ಲಿ?
ಭೂತ ವರ್ತಮಾನ ಭವಿಷ್ಯದ
ಯಾವ ಸುಳಿಗೂ ನಿಲುಕದ
ನಿನ್ನ ಜೊತೆ ನಡೆಯುವುದೇ ಬದುಕೋ;ಬಂಡತನವೋ..?
ಅವರಿಂದ ಕಿತ್ತ ಬದುಕನ್ನೆಲ್ಲಾ
ಭೂತದ ಕೂಪಕ್ಕೆ ತಳ್ಳಿ,
ಹೊಸ ಬದುಕ ತರುವ,ತೋರುವ
ನಿನ್ನ ರಫ್ತಾರ್ :ಅಲ್ಲಿನ ಎಳೆ ಕಣ್ಗಳಲ್ಲಿ ಲವಲೇಶವೂ ಇಲ್ಲ.
ಭರವಸೆಯೇ ಕೊಚ್ಚಿ ಹೋಯ್ತಲ್ಲ
ಹರಿದ ಕೋಡಿ ಕಣ್ಣೀರಿನಲಿ.
ಬಾಂಬುಗಳು ಬೀಳುವ ಗಳಿಗೆಯಲ್ಲಾದರೂ
ನಿಧಾನಿಸಯ್ಯಾ
ಅದ ಎಸೆವ ಕೈಗಳಿಗಿಷ್ಟು ಕರುಣೆಬಂದು,
ಕನಸುಗಳ ಸಾವಾದರೂ ತಪ್ಪಲಿ.
ಕಳೆದ ಖುಷಿಗಳ ಭೂತ
ಮನದೊಳಿರುವಾಗ
ನೆತ್ತರ ನಾತ ಬಡಿವ
ಈ ವರ್ತಮಾನ
ಬೇಡವೇ ಬೇಡ.
ಸಾಕಿನ್ನು ಬಿಡು
ಈ ಯುದ್ಧಕಾಂಡ.
ನಿನ್ನ ಕಟ್ಟಳೆಗೆ ದಫನ್ ಆದ
ಆ Rapha ನೆಲದಲ್ಲಿ
ಬಿಳಿ ಹೂವು ಅರಳಿ,
ಶಾಂತಿಯ ಮಳೆ ಹುಯ್ದು
ನೆತ್ತರ ನಾತವೆಲ್ಲಾ ತೊಲಗಿ ಹೋಗಲಿ.
ದ್ವೇಷ ದಾಟಿದ ನಿನ್ನ ಹಾದಿಯಲಿ
ಬಿಳಿ ಪಾರಿವಾಳಗಳು ಹಾರಿ
ಆ
ಯುದ್ಧವೆಂಬ ಯುದ್ಧದ
ಸಾವಾಗಿಹೋಗಲಿ ..!






0 Comments