ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಣ್ಣು ಕೊಳದೊಳಗೆ ಹೊಸ ನೀರಿಗೆ ನಾವೆ ಇಳಿದಂತೆ ಸಡಗರ…’ – ಕೆ ವೈ ನಾರಾಯಣಸ್ವಾಮಿ

ಕೆ ವೈ ನಾರಾಯಣ ಸ್ವಾಮಿ


ಒಂದು ದಿನ ನೀನು ಹೀಗೆ
ಕಾಣಬಹುದೆಂಬ ಯಾವ ಆಸೆಯೂ ಇರಲಿಲ್ಲ ನನಗೆ
ಏಕೆಂದರೆ
ನೀನು ಯಾರೆಂದು ಗೊತ್ತಿರಲಿಲ್ಲ ನನಗೆ.
ನನ್ನ ಪಾಡಿಗೆ ನಾನು ಗಾಳಿಗೆ ತೇಲಿ
ಹೋಗುವ ಎಲೆ
ಕಾಲ ಸುಂಟರಗಾಳಿಯಲ್ಲಿ
ಕೊಚ್ಚಿ ಹೋಗುವ ಎಲೆಗೆ
ಇರಲಿಲ್ಲವೇ ಯಾವುದೇ ಯಾನ, ಧ್ಯಾನ
ಇಲ್ಲ,  ನಿರ್ಲಿಪ್ತ ಎನ್ನಲಾಗುತ್ತಿಲ್ಲ
ಧಗೆ ತುಂಬಿದ ಉರಿ ಬಿಸಿಲಿನಲ್ಲಿ ಬರಿಗಣ್ಣಿನ ಮೇಲೆ
ನೀನು ಕತ್ತರಿಸಿ ಬಿದ್ದ ಮಂಜಿನ ತುಂಡು
ಈ ಉಪಮೆ ಸವಕಲು ನಿಜ
ಒಲವು ಹುಟ್ಟುವುದೆಎಂಜಲು ಮಾತಿನ ಜೌಗಿನಲ್ಲಿ.
ನೋಡು ನೋಡುತ್ತಿದ್ದಂತೆ ಮಂಜು ಕಣ್ಣಲ್ಲಿ ಇಡುಗಿ
ಆವರಿಸಿ ಆವಿಯಾಗಿ, ಮೋಡ ದಟ್ಟೈಸಿ
ಕಪ್ಪುಗಟ್ಟಿತು ಹಗಲು ಸುರಿದಂತೆ ಸೋನೆ.
ಕಣ್ಣಮುಂದೆ ಇಳಿಬಿದ್ದ ನೀಳ ಕೂದಲು
ಕಣ್ಣು ಕೊಳದೊಳಗೆ
ಹೊಸ ನೀರಿಗೆ ನಾವೆ ಇಳಿದಂತೆ ಸಡಗರ
ನನಗೆ ಗೊತ್ತಿತ್ತು
ಇಷ್ಟು ದಿನ ಯಾರೋ ಇದ್ದಾರೆ
ನನ್ನ ಕಣ್ಣ ಮರೆಗೆಂದು
ಯಾವುದೋ ಬೀಜ ಎದೆಯ ಹೊಲದಲ್ಲಿ ಹುದುಗಿದೆಯೆಂದು
ಆದರೂ ಚೋದ್ಯವೆ
ನನ್ನೊಳಗಿದ್ದವಳು ನೀನೇ ಆಗಿಯೂ
ಮತ್ತೆಲ್ಲೋ ಮೊಳಕೆ ಒಡೆದು
ಗಿಡವಾಗಿ ಬೆಳೆದು ಹೂ ಮುಡಿದು ಬಂದು
ಪರರಂತೆ ನಿಂದು
ಸಿಗಲಿಲ್ಲವೆ ಗುರುತು
ನಕ್ಕೆ ಅಹಂಕಾರವನ್ನ ಹಂಗಿಸುವಂತೆ.
ಆ ಗಳಿಗೆ ನನ್ನೊಳಗೆ
ಕಲಬೆರೆಕೆಗೊಂಡವು ಕಾಲ ದೇಶಗಳು
ಆವರೆಗೆ ನಾನಾಗಿದ್ದ ಕನಸು ತರ್ಕ ವಿವೇಕಗಳನ್ನು
ಬಿಚ್ಚಿ ಒಳಗಣ್ಣ  ತೆರೆದು ಹುಡುಕಿದೆ
ನೀನು ಇರಲಿಲ್ಲ ಒಳಗೆ.
 

‍ಲೇಖಕರು G

14 February, 2015

9 Comments

  1. mmshaik

    tumbaane chennaagide kavite..ee dinakke olleya koduge avdhiyinda thanks….

  2. ಲಕ್ಷ್ಮೀಕಾಂತ ಇಟ್ನಾಳ

    ಸುಂದರ ಕವನ, ಭಾವ ಪದರುಗಳ ಅನಾವರಣಗೊಳಿಪ ಅನುರಣಗಳು

  3. bharathi b v

    ಎದೆಯಲ್ಲಿ ಹುದುಗಿದ್ದವರು ಎದುರಾಗಿಯೂ ಬಿಟ್ಟಾಗಿನ ಸ್ಥಿತಿ ಬಲ್ಲವರೇ ಬಲ್ಲರು …. ನವಿರು ನವಿರು ಕವನ … ಚೆಂದ ಇದೆ ಸರ್ …

  4. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

  5. samyuktha

    ಪ್ರತಿ ಸಾಲಿನಲ್ಲೂ ಪ್ರೌಢತೆ. A mature n graceful love note sir! 🙂

  6. ಲಲಿತಾ ಸಿದ್ಧಬಸವಯ್ಯ

    ವಾಹ್, ಎಷ್ಟು ನವಿರಾದ ಅಭಿವ್ಯಕ್ತಿ.

  7. Ravi Kulkarni

    Mestre… Superrr!!

  8. ಗವಿಸಿದ್ಧ ಹೊಸಮನಿ

    ಪದ್ಯ ಚೆನ್ನಾಗಿದೆ ಸರ್..

  9. Anonymous

    “Ilibidda neela koodalu…..neerige ilida naave…..” sundara saalugalu.Dhanyavaadagalu!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading