ಅನಾವರಣಗೊಳ್ಳದ ಕವಿತೆಯಂತೆ
ಅಶೋಕ.ಬಿ
ಉಸಿರು ಬಿಟ್ಟು ಹೋಗುವ ಮುನ್ನ
ಮೊಳೆತಿದ್ದಳು
ಕರಕಲು ಚಿಗುರು ನಾಚುವಂತೆ
ಕನಸು ಸುರಿವ ಈ ಹಾಳು ಸಂತೆ ಗೊಣಗು
ಒಣ ರೊಟ್ಟಿಯ ಈ ಹಾಳು ತನು
ಹೂನಗೆಯ ಹೆಂಚು
ನಿರಾಳ
ಹರಿದು ಹಂಚಿ ಹೋದ ಅಂಗಳ ಕಿತ್ತು
ಕುಪ್ಪಸದೊಳಿಟ್ಟು
ಮೆಲ್ಲನೆ ಹಾಲುಗಲ್ಲವ ಎದೆಗವಚಿಕೊಂಡು
ಚಂದ್ರನ ಚಂದನವನವನ್ನು ದಿಟ್ಟಿಸುತ್ತಾಳೆ
ಎದೆಗಿರಿವ ತಿರಿಚೋ ನಾಲಿಗೆ ಕಟ್ಟಿಹಾಕುವ ಹಪಾಹಪಿ
ಮೊಳ ಹೂವಿಗೆ ಅಲೆದಾಡುತ್ತಾನೆ
ತಿರಸ್ಕಾರದ ಈ ಸರಿ ಹೊತ್ತಿನಲಿ
ಕಣ್ಣೀರು ಸುರಿಸಲು ತುಸು ಜಾಗವಿಲ್ಲ
ನನ್ನಿನಿಯಗೆ
ಮಾಸಿದ ಬಟ್ಟೆ ಬರೆ,ಪತ್ರಗಳ ಭಾವ ಬೆಚ್ಚಗೆ
ಉಸಿರಾಡುತ್ತಿವೆ
ಜನ ಜಾತ್ರೆ ಸತ್ತಂತಿವೆ
ನನ್ನಾತ್ಮವ ತುಳಿದದ್ದು ಜೊತೆಗಾರನೇ
ಇರುವಿಕೆ ಅಲ್ಲಗಳೆದಾಗಲೂ
ಅನಾವರಣಗೊಳ್ಳದ ಕವಿತೆಯಂತೆ
ಈ ನೆಲದಲಿ ಉಸಿರು ಬಿಟ್ಟೆ







0 Comments