ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡೆಗೂ ನೀ ಅಕ್ಷರವ ಮುಟ್ಟಿದೆ ಕೇಬಿ…ನಾನಿನ್ನ ಮುಟ್ಟಲಿಲ್ಲ…

ಮಾಳಿಂಗರಾಯ ಕೆಂಭಾವಿ

ಆಗ ನಾನು ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ, ತುಮಕೂರಿನ ವಿಶ್ವ ವಿದ್ಯಾನಿಲಯ ಕಲಾ ಕಾಲೇಜು, ಅಲ್ಲಿ ನಮ್ಮ ಅಡ್ಡ ಅಂದ್ರೆ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೆಟ್ಟಿಲು, ಕಾಲೇಜು ಪ್ರಾರಂಭವಾಗುವ ಸ್ವಲ್ಪ ಹೊತ್ತು ಮುಂಚೆ , ಕಾಲೇಜು ಮುಗಿದ ಮೇಲೆ ಆಗಾಗ ಬಂಕ್ ಹಾಕಿ ಕೂಡ ಅಲ್ಲಿ ಬಂದು ಕೂರುತ್ತಿದ್ದೆವು…

ಸಾಹಿತ್ಯದ ವಿದ್ಯಾರ್ಥಿ ಆದ ಕಾರಣ ಕವಿ, ಕವಯಿತ್ರಿಯರ ಹೆಸರು ಗೊತ್ತಿದ್ದವು… ಅದರಲ್ಲಿ ಕೆ ಬಿ ಸಿದ್ಧಯ್ಯ ಕೂಡ…!!

ಕೆಬಿ ಸಿದ್ಧಯ್ಯ ಹೆಸರು ಗೊತ್ತಿತ್ತು ಅವರು ಕಂಡ ಕಾವ್ಯ ಬರೀತಾರೆ… ಬಕಾಲ, ದಕ್ಲಕತಾ ದೇವಿ, ಕೃತಿಗಳನ್ನ ಅವರೇ ಬರೆದಿದ್ದಾರೆ ಎಂದು ಗೊತ್ತಿತ್ತು.. ಆದರೆ ಕೇಬಿ…ಇವರೇ ಎನ್ನವ ಮುಖ ಪರಿಚಯ ಇರಲಿಲ್ಲ…

ಬಿಳಿ ಗಡ್ಡ , ಬುಡ್ಡನೆಯ ಮನುಷ್ಯನೊಬ್ಬ ಆಗಾಗ ಅಂಬೇಡ್ಕರ್ ಅಧ್ಯಯನ ಕೇಂದ್ರದೊಳಗೆ ಹೋಗ್ತಾನೆ… ಇರ್ತಾರೆ… ನಾನು ತುಂಬಾ ಬಾರಿ ನೋಡಿದ್ದೆ ಆದರೆ ಒಮ್ಮೆಯೂ ಮಾತಾಡಿಸುವ ಪ್ರಯತ್ನ ಮಾಡಲೇ ಇಲ್ಲ….

ಹೀಗೆ ಒಂದಿನ ಅವರು ಒಳಗೆ ಹೋಗಬೇಕಾದರೆ ಮೆಟ್ಟಿಲು ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ನನಗೂ ನನ್ನ ಸಂಗಾತಿಗಳಿಗೂ ಸ್ವಲ್ಪ ಖಾರವಾಗೇ ಹೇಳಿದರೂ…ಸುಮ್ನೆ ಇಲ್ಲಿ ಕುಳಿತು ಯಾಕಿಷ್ಟು ಗಲಾಟೆ ಮಾಡ್ತೀರಾ ? ಸ್ವಲ್ಪ ಹೊತ್ತು ಒಳಗಡೆ ಕೂತು ಬಾಬಾ ಸಾಹೇಬರ ಬಗ್ಗೆ ತಿಳ್ಕೋ ಬಾರ್ದಾ? ಎಂದರು…!! ಅವರನ್ನು ಮನಸೊಳಗೆ ಬೈಯುತ್ತಾ… ಅಂಬೇಡ್ಕರ್ ಅಧ್ಯಯನ ಕೇಂದ್ರದೊಳಗೆ ಹೋದೆವು….ಒಳಗೆ ಹೋಗಿ ನೋಡಿದಾಗ ಸುತ್ತಲೂ ಗೋಡೆಗಳಿಗೆ ಅಂಬೇಡ್ಕರ್ ಫೋಟೋಗಳು ಮತ್ತೊಂದು ರೂಮಿ ನಲ್ಲಿ ಅವರ ಬರಹಗಳ ಪುಸ್ತಕ….ತುಂಬಿದ್ದವು.

ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡುವುದೆಂದರೆ ಹೊಸದೊಂದು ಪ್ರಪಂಚಕ್ಕೆ ಕಾಲಿಟ್ಟಂತೆ ಎಂದು ಹೇಳುತ್ತಾರೆ.

ಆ ದಿನ ನಿಜವಾಗಲೂ ಕೇಬಿ ಯವರು ಹೊಸ ಪ್ರಪಂಚ ಒಂದನ್ನು ಪರಿಚಯಿಸಿಕೊಟ್ಟರು.

ಅಂಬೇಡ್ಕರ್ ಬಗ್ಗೆ ನನಗೆ ಇರುವ ಆಸಕ್ತಿಯನ್ನು ಹೆಚ್ಚು ಗೊಳಿಸುವಲ್ಲಿ ಕೇಬಿ ಯವರ ಪಾತ್ರ ದೊಡ್ಡದೆಂದು ನನಗೆ ಈಗ ಅರಿವಿಗೆ ಬಂತು !!!

ಮತ್ತೊಂದು ದಿನ ಕಾಲೇಜು ಮುಂಬಾಗ ತಿರುಗಾಡ್ತಾ ಇದ್ದೆ… ನಮ್ಮ ಪ್ರೊಫೆಸರ್ ಬಿ ಕರಿಯಣ್ಣನವರು ಮತ್ತೆ ಡಾ. ಸಿದ್ಧಲಿಂಗಯ್ಯ ಅವ್ರು… ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ನಿಂತು… ಕೇಬಿಯವರನ್ನ ಮಾತಾಡಿಸುತಿದ್ದರು…ಸಿದ್ದಲಿಂಗಯ್ಯ ಅವರನ್ನ ಮಾತಾಡಿಸುವ ಕುತೂಹಲವಿದ್ದರೂ ಅವರ ಮಾತು ಮುಗಿಯಲೆಂದು ದೂರದಲ್ಲಿ ನಿಂತೆ….ಮಾತು ಮುಗಿದ ಕೂಡಲೇ ಕೇಬಿ ಕುಲಪತಿ ಕಛೇರಿ ಕಡೆಗೆ ಹೋದರು ಡಾ.ಸಿದ್ದಲಿಂಗಯ್ಯ ಮತ್ತು ಪ್ರೊಫೆಸರ್ ನಾನಿರುವ ಕಡೆಗೆ ಬಂದರು…

ನಾನು ಹೋಗಿ ಸಿದ್ದಲಿಂಗಯ್ಯ ಅವರಿಗೆ ನಮಸ್ತೆ ಸರ್ ಎಂದೆ… ಎಷ್ಟೊತ್ತಿಗಾಗಲೇ ನಮ್ಮದೇ ತರಗತಿಯ ಇನ್ನಷ್ಟು ವಿದ್ಯಾರ್ಥಿಗಳು ಬಂದು ಸೇರಿದರು. ನಮ್ಮ ಪ್ರೊಫೆಸರ್ ಎಲ್ಲರನ್ನೂ ಇವರು ನನ್ನ ವಿದ್ಯಾರ್ಥಿಗಳು ಎಂದು ಪರಿಚಯಿಸಿದರು. ಎಲ್ಲರೂ ಅಲ್ಲಿಂದ ಹೋದರು ನಾನು ಸಿದ್ಧಲಿಂಗಯ್ಯ ಅವರ ಜೊತೆ ತುಸು ದೂರ ಹೆಜ್ಜೆ ಹಾಕಿದೆ. ನಮ್ಮ ಪ್ರೊಫೆಸರ್ ಇವನು ಕವಿತೆ ಬರೀತಾನೆ. ಜನಪರ ಹೋರಾಟದಲ್ಲಿ ಭಾಗಿ ಆಗ್ತಾನೆ…. ಒಂದಿನ ಇಂವ ಖಾದಿ ಅಂಗಿ ತೊಟ್ಟಾಗ ಥೇಟ್ ಲೋಹಿಯಾ ಥರ ಕಾಣ್ತಿದ್ದ ಅವತ್ತಿಂದ ನನ್ನ ಲೋಹಿಯಾ ಆಗಿ ಬಿಟ್ಟ ಎಂದರು…

ಡಾ.ಸಿದ್ದಲಿಂಗಯ್ಯ ಅವರು ನನ್ನ ಭುಜದ ಮೇಲೆ ಕೈಯಿಟ್ಟು ನಕ್ಕರೂ….

ಆಗಲೂ ತಲೆಯಲ್ಲಿ ಹೊಳೆಯುತಿತ್ತು… ಈ ಬಿಳಿಗಡ್ಡದ ಮನುಷ್ಯ ಯಾರೆಂದು ? ನಮ್ಮ ಪ್ರೊಫೆಸರ್ ಗೆ ಕೇಳಬೇಕೆಂದೆ ಆದರೆ ಕೇಳಲೇ ಇಲ್ಲ…

ಇದಾದ ಕೆಲವು ತಿಂಗಳು ಕಳೆದವು ಪತ್ರಿಕೆಗಳಲ್ಲಿ ಸುದ್ದಿ ಜೊತೆಗೆ ಫೋಟೋ ನೋಡಿ…. ನಾ ಕಂಡ ಬಿಳಿಗಡ್ಡದ ಮನುಷ್ಯ ಬಕಾಲ ಕವಿ ಕೇಬಿ ಎಂದು ಆಗಷ್ಟೇ ಗೊತ್ತಾಗಿ ಮರುಕ ಶುರುವಾಯಿತು….

ಕಡೆಗೂ ಅವರು ಅಕ್ಷರವ ಮುಟ್ಟಿ ಹೋಗಿದ್ದರು ನಾನು ಅವರನ್ನು ತಲುಪದಾದೇ…!!!

‍ಲೇಖಕರು avadhi

12 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading