
ಬಿ ಸುರೇಶ
(ಉರ್ದು ಕವಯತ್ರಿ ಫಾಹ್ಮಿದಾ ರಿಯಾಜ್ ಅವರ “ತುಮ್ ಬಿಲ್ಕುಲ್ ಹಮ್ ಜೈಸೇ” ಭಾವಾನುವಾದ )
ಓ! ಹಾಗಾದಾರೆ ನೀವೂ ನಮ್ಮ ಹಾಗೆಯೇ ಗೆಳೆಯರೇ
ಇಷ್ಟು ದಿನ ಅದೆಲ್ಲಿ ಅವಿತಿದ್ದಿರಿ, ದೋಸ್ತಿಗಳೇ
ಅದೇ ಮೂರ್ಖತನ, ಅದೇ ಜಡ್ಡುತನ…
ನಾವು ಧರಿಸಿದ್ದೇವೆ ಶತಮಾನದಿಂದ…
ಅದೀಗ ನಿಮ್ಮ ಪಾದರಕ್ಷೆಯನ್ನೇರುತ್ತಿದೆ ಎಂಬ ಅನುಮಾನದಿಂದ…
ಶುಭಾಶಯ ಹೇಳುತ್ತಿದ್ದೇವೆ ಹತಾಶೆಯಿಂದ…
ಧರುಮದ ಬಾಗಿಲುಗಳು ತೆರೆದುಕೊಂಡಿವೆ…
ಧರುಮದ ಬಾವುಟಗಳೂ ಹಾರತೊಡಗಿವೆ…
ಇನ್ನು ನೀವು… ನೀವೂ ಕೂಡ ಎಲ್ಲವನ್ನೂ ಒರೆಸುವಿರಲ್ಲವೇ…?
ನಿಮ್ಮದೇ “ರಾಜ್ಯ” ಸ್ಥಾಪಿಸುವಿರಲ್ಲವೇ…?
ಸುಂದರ ಹೂ ತೋಟದ ಅಂದಗೆಡಿಸುತ್ತೀರಲ್ಲವೇ?

ಕಾಣುತ್ತಿದೆ….
ಸಿದ್ಧತೆ ಶುರುವಾಗಿದೆ…
ಯಾರು “ನಿಜ” ಮೂಲದವರು ತಿಳಿಯಬೇಕಾಗಿದೆ…
ನಾಯಕರು ಹೊರಡಿಸುವ ಫರ್ಮಾನು – ಫತ್ವಾಗಳಿಗೆ ನಮ್ಮವರಂತೆ
ನಿಮ್ಮವರು ಬಾಯ್ದೆರೆದು ಕೂತದ್ದು ಕಾಣುತ್ತಿದೆ…
ಇನ್ನು ನಮ್ಮವರಂತೆಯೇ…
ನಿಮ್ಮವರೂ ಮಾತಾಡುತ್ತಾರೆ…
ಬದುಕು ಹಸನಾಗಲಿದೆ ಎಂದು ಕಿರಲುತ್ತಾರೆ…
ಬೀದಿ ಬೀದಿಗಳಲ್ಲಿ ರಕ್ತದ ಕಾಲುವೆ ಹರಿಸುತ್ತಾರೆ…
ಇನ್ನೆಲ್ಲಾ ಇಲ್ಲಿನಂತೆಯೇ…
ನೀವು ಆನಂದಗಳಿಲ್ಲದ ಬದುಕ ಬೇಯಿಸುತ್ತೀರಿ…
ಸ್ವಚ್ಛ ಗಾಳಿಗೆ ಎಡಬಿಡದೆ ತಹತಹಿಸುತ್ತೀರಿ…
ಕೊರಗುತ್ತಿರುವ ನಾವು ನಗುತ್ತೇವೆ ನೋಡುತ್ತಾ…
ನಮ್ಮಂತಾದ ನಿಮ್ಮನ್ನ
ಒಡೆದು ಎರಡಾಗಿಸಿದವರು “ಮಹಾಜಾಣರು” ಎನ್ನುತ್ತಾ…
ಇನ್ನಷ್ಟೆ…
ವಿದ್ಯೆ – ಶಿಕ್ಷಣಗಳನು ಗಾಳಿಗೆ ತೂರಿಬಿಡಿ…
ರಸ್ತೆಯಲ್ಲಿನ ಹಳ್ಳ ತಿಟ್ಟಿನ ಚಿಂತೆ ಬಿಟ್ಟುಬಿಡಿ…
ಕಲ್ಪಿತ ನಿನ್ನೆಗಳ ಸುಖದಲ್ಲಿ ಮೈಮರೆತು ಕೂತುಬಿಡಿ…
ತಜ್ಞರಾಗುವವರೆಗೆ ತಾಲೀಮು ಮಾಡಿಬಿಡಿ…
ಹಿಂದಕ್ಕೆ ದಾಪುಗಾಲಿಡುವುದನ್ನ ಬೇಗ ಕಲಿತುಬಿಡಿ…
ಇಂದಿನ ಈ ಕ್ಷಣಗಳಿಗೆ ಬೆಂಕಿ ಇಟ್ಟುಬಿಡಿ…
ನಿನ್ನೆಯ ಹಳಸುಗಳನ್ನೆ ಹಾಸಿ ಹೊದ್ದುಬಿಡಿ…
ಮತ್ತೆ ಮತ್ತೆ…
ಮತ್ತೆ ಮತ್ತೆ….
ಅದನ್ನದನ್ನದನ್ನೇ…
ಹೇಳುತ್ತಾ ಉಳಿದುಬಿಡಿ…
“ನಮ್ಮ ಪರಂಪರೆಯ ಶ್ರೇಷ್ಟತೆಯು ಗೊತ್ತೇನಣ್ಣಾ…
ನಮ್ಮ ಪುರಾಣ ಪುರುಷರ ಸಾಧನೆಯ ಲೆಕ್ಕವಿದೆಯೇನಣ್ಣಾ…”
ಆಗ…. ಆಗ ಸಂಗಾತಿಗಳೇ…
ನೀವೂ ತಲುಪುತ್ತೀರಿ…
ನಾವು ತಲುಪಿದ ತಾಣಕ್ಕೆ…
ಹೌದು… ಅನುಮಾನ ಬೇಡ…
ನೀವೀಗ ಅಲ್ಲೇ ಇದ್ದೀರಿ…
ಹೊಸಿಲು ದಾಟಿ ಒಳಗಡಿ ಇಡುವುದಷ್ಟೇ ಬಾಕಿ…
ನಮ್ಮ ನರಕದ ದರುಶನವಾಗಲಿದೆ ನಿಮಗೂ…
ರೆಕ್ಕೆ ಸುಟ್ಟಮೇಲೆ… ಸಂಪರ್ಕದಲ್ಲಿರಿ…
ನಮ್ಮ ಹಾಗೆಯೇ ನೀವೂ ಆಗಿದ್ದನ್ನ
ನರಕದ ನಾಡ ‘ಗೀತೆ’ ಮಾಡೋಣ…
ಒಟ್ಟಿಗೆ ಇಬ್ಬರೂ ಹಾಡುತ್ತಾ ಸಾಯೋಣ…





uttama kavite..vaastavika…