ಕಾಂತರಾಜು ಕನಕಪುರ
ನಿಮಗೆ ತಿಳಿದಿರಲಿ
ಎಂದಷ್ಟೇ ಹೇಳುತಿರುವುದು
ಗಾಯ ಕೆರೆಯುವುದಿಲ್ಲ
ಕೀವು ಒಸರುವುದಿಲ್ಲ ಎಂದು
ನನ್ನ ಮತ್ತು ನನ್ನ ನೆನಪುಗಳ
ನಡುವೆ ಒಮ್ಮತದ ಒಪ್ಪಂದವಾಗಿದೆ…
ಏನೋ…
ಭಾನುವಿನುದಯಕೆ ಆಗಸದಿ
ಬಣ್ಣದ ದಿಬ್ಬಣವು ಹೊರಟಾಗ…
ರಜನಿಯ ಅಪ್ಪುಗೆಯಿಂದ ಬಿಡಿಸಿಕೊಂಡ
ಇಳೆಯು ಬಣ್ಣದುಡುಗೆಯನು ತೊಡುವಾಗ…
![](https://i0.wp.com/avadhimag.in/wp-content/uploads/2019/11/Skyline-Barcelona.jpg?resize=504%2C394&ssl=1)
ಅಚ್ಚ ಹಸುರೆಲೆಗಳ ನಡುವೆ
ಹಕ್ಕಿ ಕಲರವವು ಅಲೆಯಾದಾಗ…
ಅಂಗಳದ ಹೂವಿನೊಡಲಿನಲಿ
ಬಣ್ಣದ ಚಿಟ್ಟೆ ಬಂಡುಣ್ಣುವಾಗ…
ಮಧ್ಯಾಹ್ನದ ಸುಡುಬಿಸಿಲಿನಲಿ
ಅಂಗಳದ ಹೊಂಗೆಯ ಮರವು
ನೆರಳ ರಂಗೋಲಿ ಬಿಡಿಸಿದಾಗ…
ಸಂಜೆ ಗೋಧೂಳಿಯಲಿ
ಮನೆ ಮುಂದಿನ ಹಾದಿಯು
ಮೀಯುತಲಿರುವಾಗ…
![](https://i0.wp.com/avadhimag.in/wp-content/uploads/2017/11/cloud-craft-pic-e1628164359920.jpg?resize=350%2C471&ssl=1)
ರಾತ್ರಿ ಬಾನಿನಂಗಳದಲಿ
ಚಂದಿರನು ಬೆಳ್ಳಿಯ ಬಟ್ಟಲಾದಾಗ…
ಕಣ್ಣನು ಕಡಿದರೂ ನಿದ್ದೆಯು
ಸುಳಿವೀಯದಿರುವಾಗ…
ಹೀಗೆ…
ಸುಮ್ಮನೆ ಕುಳಿತಿರುವಾಗ
ನಮ್ಮ ಒಪ್ಪಂದ
ಮುರಿಯುತ್ತಿರುತ್ತೇವೆ…
ಅಷ್ಟೇ…
ಸೊಗಸಾಗಿದೆ