****
ರೂಪ ಹಾಸನ
ಈ ರಣಗುಡುತಿರುವ
ಹಸಿ ಗಾಯದಿಂದ
ಒಸರುತ್ತಿರುವ ರಕ್ತ
ಅವರೆದೆಯವರೆಗೆ
ಮುಟ್ಟಿಸಲು
ಒಂದು ನದಿಯ
ಮಾಡು ನನ್ನ
ಹರಿವು ನಿಲ್ಲಿಸುವುದಿಲ್ಲ.
ಇವರ ಕಣ್ಣೀರ ಧಾರೆ ಹರಿದು
ಮಡುಗಟ್ಟಿ ನಿಂತ ಈ
ಕಮಟು ವಾಸನೆಯ
ಅವರ ನಾಸಿಕಕೆ ತಲುಪಿಸಲು
ಅವರು ದೇವರಿಗರ್ಪಿಸುವ
ಹೂ ಮಾಡು ನನ್ನ
ಗಂಧ ಸೂಸುತ್ತಲೇ ಉಳಿವೆ.
ಈ ಸುಟ್ಟ ಕರುಳಿನ ಆಕ್ರಂದನ
ಅವರ ಕರುಳು ತಾಗಿಸಲು
ಒಂದೇ ಒಂದು
ನಿಸ್ತಂತುವಿನೆಳೆ
ಮಾಡು ನನ್ನ
ಹಾಡು ನಿಲ್ಲಿಸುವುದಿಲ್ಲ.
ಖಂಡಾಂತರಗಳಾಚೆಯ
ಹಕ್ಕಿಯಾರ್ತ ಸ್ವರ
ಕೇಳಿಸುತ್ತದಂತೆ
ಭೂಮಿಯೀಚೆಗಿನ
ಪಕ್ಷಿಗಳಿಗೆ……
ಅದು ಬರೆದ ಕವಿತೆ
ಇದರ ಓದಿಗೆ, ಮಿಡಿತಕ್ಕೆ.
ಅಲ್ಲೆಲ್ಲೋ ಯಾವುದೋ
ಮಿಂಚುಳ್ಳಿ ನೋವಲ್ಲಿ ನರಳಿದರೆ
ಇಲ್ಲಿ ಮಿಡುಕುತ್ತದಂತೆ
ಚುಕ್ಕಿಮುನಿಯ.
ಕವಿತೆ ತಲುಪಿದಂತೆ
ಎದೆಯಿಂದ ಎದೆಗೆ.
ಅಲ್ಲಿಂದ…… ಇಲ್ಲಿವರೆಗೆ
ಬರೀ ಇಷ್ಟೇ ಇಷ್ಟು ದೂರ!
ಆದರೂ…..
ಆ ಜೀವದುಸಿರಿಂದ
ಈ ಜೀವ ಧಮನಿವರೆಗೆ
ಮಾಡು ನನ್ನ
ಹರಿವ ಒಂದು ಎಳೆ
ಒಂದು ನಿಸ್ತಂತುವಿನೆಳೆ.





Olle kavithe roopakka-smitha