–ಮೊಗಳ್ಳಿ ಗಣೇಶ್ ಬರೆದ ಕೊನೆಯ ಕವಿತೆ..
ನಾನೊಂದು ಬಟಾಬಯಲ ಹುಲ್ಲುಗಾವಲಾಗಿದ್ದರೆ
ಎಷ್ಟೊಂದು ಪ್ರಾಣಿಗಳ ಅನ್ನದ ಆಲಯವಾಗುತ್ತಿದ್ದೆನೋ
ತರ ತರದ ಹೂ ಕಾಯಿ ಹಣ್ಣು ಬಳ್ಳಿಗಳ ಹೊಲವಾಗಿದ್ದರೆ ಎಷ್ಟೆಲ್ಲ ಚಿಟ್ಟೆಗಳು ಮುತ್ತಿಕ್ಕಿ
ಮತ್ತೆ ಋತುಗಾಲಕ್ಕೆ ಮುಟ್ಟಲು ಬರುತ್ತಿದ್ದವೊ
ಬೆಟ್ಟ ಸಾಲುಗಳಾಗಿದ್ದರೆ ನಿಸರ್ಗ ನನ್ನೊಡನೆ
ಏನೇನು ರಹಸ್ಯಗಳ ಕಲಿಸಿ ಹುಟ್ಟಿನ
ಮೇಲು ಕೀಳಿಲ್ಲದ ಸತ್ಯವ ಎಷ್ಟು ಉಣಿಸುತ್ತಿತ್ತೊ
ಬೆಟ್ಟದ ಹೆಬ್ಬಂಡೆ ಆಗಿ ಅದರಲ್ಲೊಂದು
ಮರವಾಗಿದ್ದಿದ್ದರೆ ಎಷ್ಟು ಜೀವಿಗಳು
ಗೂಡು ಕಟ್ಟುತ್ತಿದ್ದವೋ
ನನ್ನಂತವರು ಮನುಷ್ಯರಾಗಿ ಹುಟ್ಟಿ
ಏನೇನು ಮಾಡಿದೆವೋ ಯಾರ್ಯಾರು
ದಾರಿ ತಪ್ಪಿಸಿದರೋ ಹಳಿದೇನು ಫಲ…
ಅಮಾಯಕ ವೇಷಗಳಲ್ಲಿ
ಎಷ್ಟೊಂದು ಬರ್ಬರ ನಾಟಕ
ಬೆಳಕ ನುಂಗುವ ಕೂಪಗಳೆಲ್ಲ ನಮ್ಮವೇ
ಹಳ್ಳ ಹೊಳೆ ತೊರೆ ನದಿ
ಕಡಲೆಲ್ಲ ಬೇರೆ ಬೇರೆಯೇ
ಮಳೆಯ ನೀರಾಗುವ ಆಸೆ
ಆಗಲಾದರೂ ನಾನು ಎಲ್ಲರ ದಾಹಕ್ಕೆ ಪನ್ನೀರಾಗುವೆ.






0 Comments