ದೊಡ್ಡಗೌಡ್ರು ಮತ್ತು ಕಾವೇರಿ
ಹಳ್ಳಿಹೈದನ ರಾಜಕೀಯ ಹಾದಿ
………………
ದಶಕಗಳು ಸರಿದುಹೋಗಲಿ ಸತ್ಯಕ್ಕಿಲ್ಲಿ ಜಾಗವಿಲ್ಲ ಎಂಬ ನಿರಾಶೆಯ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸಲಿ ಆದರೆ ಗಾಂಧೀಜಿ ಎಂದಿಗು ಪ್ರಸ್ತುತವಾಗಿಯೇ ಇರುತ್ತಾರೆ. ಹಾಗಾಗಿ ಕಾವೇರಿ ವಿಚಾರವಾಗಿ ನಡೆಯುತ್ತಿರುವ ಹೋರಾಟದ ವೇಳೆಯು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರಿಗೆ ಗಾಂಧೀಜಿ ಪ್ರಸ್ತುತರಾದ್ರು.
ಗಾಂಧೀಜಿ ಜಯಂತಿಯ ಮುನ್ನಾ ದಿನ. ಮುಂಜಾನೆ 7. 30 ಗಂಟೆಗೆ ಮನೆಯಿಂದ ವಿಧಾನಸೌಧದತ್ತ ಹೊರಟೆ. ದೇವೇಗೌಡರ ಅಹೋರಾತ್ರಿ ಧರಣಿ ಕುರಿತಂತೆ ರಿಪೋರ್ಟಿಂಗ್ ಮಾಡಬೇಕಿತ್ತು. ನಾ ಮಹಾತ್ಮಗಾಂಧಿ ಪ್ರತಿಮೆ ಬಳಿ ತಲುಪುವ ಮುನ್ನವೇ ದೇವೇಗೌಡ ಸ್ಥಳಕ್ಕೆ ಆಗಮಿಸಿದ್ರು .
ಈ ಇಳಿವಯಸ್ಸಿನಲ್ಲಿ ದೇವೇಗೌಡರ ಹುಮ್ಮಸ್ಸು ಕಡಿಮೆಯಾಗಿಲ್ಲ. ಕಲಿಯಬೇಕೆಂಬ ಆತುರವು ಬತ್ತಿ ಹೋಗಿಲ್ಲ. ತಿಳಿಯಬೇಕೆಂಬ ಕುತೂಹಲ, ಹಂಚಿಕೊಳ್ಳಬೇಕೆಂಬ ಹಂಬಲ ಅವರಲ್ಲಿ ಹೆಚ್ಚಾಗುತ್ತಲೇ ಇದೆ. ಕೈಯಲ್ಲಿ ಮೊಬೈಲ್ ಹಿಡಿದಿದ್ದ ದೇವೇಗೌಡ್ರು ವಕೀಲ ಮೋಹನ್ ಕಾತರಕಿ ಜೊತೆ ಮಾತಾಡುತ್ತಿದ್ರು. ರಾಜ್ಯಕ್ಕಿರುವ ಆಯ್ಕೆಗೆ ಸಂಬಂಧಿಸಿಂತೆ ಸಮಾಲೋಚಿಸುತ್ತಿದ್ರು. ರಾಜ್ಯಕ್ಕೆ ನ್ಯಾಯ ಕೊಡಿಸಲು ಬೇಕಾದ ಮಾರ್ಗಗಳ ಹುಡುಕಾಟದಲ್ಲಿ ತೊಡಗಿದ್ರು.
ಕೈಯಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಹಿಡಿದಿದ್ದ ಗೌಡರು ಅದರ ಅಂಶಗಳ ವಿವರಗಳನ್ನು ವಿವರಿಸುತ್ತಿದ್ರು. ಮಧ್ಯೆ ಬಾಯಿ ಹಾಕಿದ್ರೆ ಸ್ವಲ್ಪ ರೇಗುತ್ತಿದ್ರು . ಸಹಜವಾಗಿಯೇ ಆಳವಾಗಿ ತಿಳಿದುಕೊಂಡ ಅವರಿಗೆ ಎಲ್ಲವನ್ನು ತಿಳಿಸಬೇಕೆಂಬ ಕುತೂಹಲವಿತ್ತು.
ದೇವೇಗೌಡರು ಗಾಂಧೀಜಿಯ ಉಪವಾಸ ಸತ್ಯಾಗ್ರಹದ ಹಾದಿ ತುಳಿದಿದ್ರು. ರಾತ್ರಿ ವೇಳೆಗೆ ಕೇಂದ್ರದಿಂದ ಸ್ವಲ್ಪ ಮಟ್ಟಿಗೆ ಭರವಸೆ ದೊರೆತ ಮೇಲೆ ಮನೆಗೆ ತೆರಳಿದ್ರು. ಹೀಗೆ ಕಾವೇರಿ ವಿಚಾರವಾಗಿ ಮುತ್ಸದ್ದಿ ರಾಜಕಾರಣಿ ದೇವೇಗೌಡ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಕಳೆದ ಎರಡು ತಿಂಗಳುಗಳ ಹಿಂದೆ ಒಂದು ತಿಂಗಳು ತೀವ್ರ ಜ್ವರದಿಂದ ಬಳಲುತ್ತಿದ್ದರು, ನಿತ್ರಾಣದ ಮಧ್ಯೆಯು ಕಾವೇರಿ ಕುರಿತಂತೆ ಪತ್ರಿಕಾಗೋಷ್ಟಿ ನಡೆಸಿದ್ರು. ಪತ್ರಿಕಾಗೋಷ್ಟಿಗು ಮುನ್ನ ಹಿಡಿ ಮಾತ್ರೆ ನುಂಗಿ ನುಂಗಿ ಸಾಕಾಗಿದೆ. ತುಂಬಾನೆ ಸುಸ್ತಿದೆ. ಆದ್ರೆ ರಾಜ್ಯಕ್ಕೆ ಅನ್ಯಾಯವಾದಾಗ ಮಾತಾಡಲೇಬೇಕಲ್ವ ಎಂದಿದ್ರು.
ಕಾವೇರಿ ಕುರಿತಂತೆ ಸಿದ್ಧರಾಮಯ್ಯ ಅವರ ನಿವಾಸಕ್ಕೆ ತೆರಳಿದ ನಂತ್ರ ಸಂದರ್ಶನಕ್ಕೆಂದು ಹೋದಾಗ ನಿಮ್ಮ ಯುನಿಟ್ ಎಲ್ಲಿ ಬನ್ನಿ ಈಗ ಬಂದೆ ಎಂದು ಎದ್ದು ಹೋದ ಗೌಡರು ಮತ್ತೆ ಆಗಮಿಸಿ ಅರ್ಧ ಗಂಟೆ ಮಾತಾಡಿದ್ರು. ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪಕ್ಷದ ಮುಖಂಡರು ಕೆಸರೆರಚಾಟ ಮಾಡಬಾರಂದೆದು ಎಚ್ಚರಿಕೆಯ ಸಂದೇಶ ರವಾನಿಸಿದ್ರು. ಜಯಲಲಿತಾ ಸರ್ವಾಧಿಕಾರಿ ಧೋರಣೆಯನ್ನು ಮೊನಚಾಗಿ ಖಂಡಿಸಿದ್ರು.
ಹೀಗೆ ದೇವೇಗೌಡರನ್ನು ಹಲವಾರು ಸಂದರ್ಭದಲ್ಲಿ ಮಾತಾಡಿಸುವ ಅವಕಾಶ ಬಂದಿದೆ. ಮಂಗಳೂರಿನಲ್ಲಿ ಸಮಾವೇಶವೊಂದರಲ್ಲಿ ಮಾತಾಡಿದ್ದನ್ನು ವರದಿ ಮಾಡಿದ್ದೆ. ಸುಮಾರು 16 ವರ್ಷಗಳ ಹಿಂದೆ. ಕರ್ನಾಟಕದಲ್ಲಿ ಜನನಾಯಕರ ಸಂಖ್ಯೆ ಕುಸಿಯುತ್ತಿರುವ ಮಧ್ಯೆ ದೇವೇಗೌಡರಂತವರು ಬಹುಷಹ ಇಂತಹ ರಾಜಕಾರಣಿಗಳಲ್ಲಿ ಕೆಲವರೇ ಕೆಲವರಾಗಿ ದೇಶದಲ್ಲಿ ಕಾಣಸಿಗುತ್ತಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಅವರ ಹಾದಿ ಸುದೀರ್ಘ ಕೂಡ. ಇಂದಿಗು ಪಾದಯಾತ್ರೆ, ಉಪವಾಸ, ಕಾರ್ಯಕರ್ತರ ಜೊತೆಗೆ ಒಡನಾಟ ಹೀಗೆ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಬಲ್ಲವರು ದೇವೇಗೌಡರು.
24 ಗಂಟೆ ರಾಜಕಾರಣಿ ಅಂತ ಕೆಲವರು ಕರೆದ್ರೆ ಅವರು ಉರುಳಿಸುವ ರಾಜಕೀಯ ದಾಳವನ್ನು ಊಹಿಸಲಸಾಧ್ಯವಾಗದ ಸ್ಥಿತಿಯು ಇರುತ್ತದೆ.
ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೃಷಿಗೆ ದೇವೇಗೌಡರು ನೀಡಿದ ಕೊಡುಗೆ ಅಪಾರ. ದಕ್ಷಿಣ ಭಾರತದ ಹಳ್ಳಿಯವನೊಬ್ಬ ಪ್ರಧಾನಿ ಹುದ್ದೆಗೇರೋದನ್ನು ಅರಗಿಸಿಕೊಳ್ಳಲಾಗದ ಉತ್ತರ ಭಾರತದ ಲಾಬಿಯ ಮಧ್ಯೆ ದೇವೇಗೌಡರು ಪ್ರಧಾನಿಯಾಗಿದ್ದರೆಂಬ ಹೆಮ್ಮೆ ನಮ್ಮದು.
ಇನ್ನು ನೆನಪಿದೆ. ಅದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ. ದೇವೇಗೌಡರ ಬಗ್ಗೆ ಅಲ್ಲಿ ಜೋಕ್ ಒಂದನ್ನು ಬರೆಯಲಾಗಿತ್ತು.
ಪ್ರಶ್ನೆ : ಆಪ್ ಕಾ ಮುದ್ದಾ ಕ್ಯಾ ಹೈ? ನಿಮ್ಮ ಗುರಿಯೇನು?
ದೇವಗೌಡ : ಮೇರಾ ಮುದ್ದಾ ರಾಗಿ ಮುದ್ದಾ ಹೈ . ನನ್ನ ಗುರಿ ರಾಗಿ ಮುದ್ದೆ.
ಪ್ರಧಾನಿಯೊಬ್ಬರಿಗೆ ಹಿಂದಿ ಬರುವುದಿಲ್ಲ ಅನ್ನೋದನ್ನು ಹೀಗೆ ಅಣಕ ಮಾಡಲಾಗಿತ್ತು. ಇಂತಹ ಅದೆಷ್ಟೋ ಜೋಕ್ ಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ದೇವೇಗೌಡರು ಈ ಬಗ್ಗೆ ಹೇಳಿದ್ದರು ಕೂಡ. ತಮಗಾದ ನೋವು ಅಪಮಾನಗಳ ಕುರಿತಂತೆ ನೋವನ್ನು ಹಂಚಿಕೊಂಡಿದ್ದರು. ನಿಜ ದೇಶದ ರಾಜಧಾನಿ ನವದೆಹಲಿಯಲ್ಲಿ ರಾಜಕಾರಣಿಗಳ ಕುರಿತಂತೆ ಲಾಬಿ ಮಾಡುವ ವರ್ಗವೇ ಇದೆ. ಹಳ್ಳಿಗಳಿಂದ ಹೋಗಿ ಪ್ರಮುಖ ಸ್ಥಾನವನ್ನು ಅಲಂಕರಿಸಿದ ದೇವೇಗೌಡರಂಥವರನ್ನು ಜೀರ್ಣಿಸಿಕೊಳ್ಳುವ ಸ್ಥಿತಿಯಲ್ಲಿ ಈ ವರ್ಗ ಇರೋದಿಲ್ಲ. ಹಾಗಾಗಿ ತಪ್ಪುಗಳನ್ನು ಹುಡುಕುವ ತಮಗಿಷ್ಟವಾದ ರೀತಿಯಲ್ಲಿ ಸುದ್ದಿ ಹಬ್ಬಿಸುವ ಪ್ರಯತ್ನವನ್ನು ಈ ವರ್ಗ ಮಾಡುತ್ತಲೇ ಇರುತ್ತದೆ.
ನಾನು ಕ್ಲಬ್ ಸಂಸ್ಕೃತಿಯವನಲ್ಲ. ನಂಗೆ ಅಲ್ಲಿ ಹೋಗಿ ಅವರ ತಾಳಕ್ಕೆ ಕುಣಿಯಲು ಆಗುತ್ತಿರಲಿಲ್ಲ. ನಾನು ಹೇಗಿರುತ್ತೇನೋ ಹಾಗಿರುತ್ತೇನೆ. ನಾನು ಇರೋದೆ ಹೀಗೆ ಎಂದು ಮೊನ್ನೆ ಮೊನ್ನೆ ದೇವೇಗೌಡರು ಮಾತಾಡಿದ್ರು. ನಿಜ ಇತ್ತೀಚೆಗಷ್ಟೇ ಪತ್ರಿಕಾಗೋಷ್ಟಿಗೆಂದು ಹೋದಾಗ ಪ್ರತ್ಯೇಕ ಕಪ್ ಒಂದರಲ್ಲಿ ಕಾಫಿ ತಂದುಕೊಡಲು ಹೋಟೇಲ್ ನವ ಹೆಣಗಾಡುತ್ತಿದ್ದ. ದೇವೇಗೌಡ್ರು ಯಾವುದಾದ್ರು ಕಪ್ ನಲ್ಲಿ ಕೊಡಪ್ಪ ಅದ್ಯಾಕೆ ಬೇರೆ ಕಪ್ ಅಂದ್ರು.
ಹಾಗೆ ಅವರ ಮನೆಯಲ್ಲಿ ಪತ್ರಿಕಾಗೋಷ್ಟಿ ನಂತರ ಜೂನಿಯರ್ ಸೀನಿಯರ್ ಅನ್ನದೆ ಎಲ್ಲರ ಹೆಗಲ ಮೇಲೆ ಕೈಯಿಟ್ಟು ಮಾತಾಡುತ್ತಾ ಮಧ್ಯೆ ಮಧ್ಯೆ ಗಂಭೀರರಾಗಿ ಮಾತಾಡುತ್ತಿದ್ರು. ಅಧಿಕಾರವಿರಲಿ ಇಲ್ಲದಿರಲಿ ದೇವೇಗೌಡರ ಪಂಚೆ ಬದಲಾಗಿಲ್ಲ. ಹಾಗೆ ಚಪ್ಪಲಿಯು ಕೂಡ. ರಾಜಕೀಯ ಲೆಕ್ಕಾಚಾರಗಳು ಇರಬಹುದು. ರಾಜಕಾರಣಿಯಾದವನು ಅದನ್ನು ಮಾಡಿಯೇ ಮಾಡುತ್ತಾನೆ.
ಆದರೆ ನೆಲ ಜಲದ ಮಧ್ಯೆ ಬದ್ಧತೆಯೆಂಬುದು ಎಷ್ಟು ಪ್ರಮುಖ ಅನ್ನೋದನ್ನು ದೇವೇಗೌಡರು ಕಲಿಸಕೊಟ್ಟಿದ್ದಾರೆ. ಹಾಗಾಗಿ ಅವರು ಮಾದರಿಯಾಗಿ ಎಂದಿಗೂ ನಿಲ್ಲುತ್ತಾರೆ. ಮತ್ತೆ ಮೊನ್ನೆ ಕೊಟ್ಟ ಸಂದರ್ಶನದ ವೇಳೆ ಜಾಸ್ತಿ ಹೊತ್ತು ಮಾತಾಡೋಕೆ ಆಗಿಲ್ಲ ಬೇಜಾರು ಮಾಡಿಕೊಂಡರೋ ಏನೋ ಎಂದು ದೇವೇಗೌಡರು ತಮ್ಮ ಆಪ್ತರ ಬಳಿ ಹೇಳಿದರಂತೆ.
ಇದು ಎಲ್ಲರನ್ನು ದೇವೇಗೌಡರು ನೋಡುವ ರೀತಿ. ಗಮನ ಹರಿಸುವ ರೀತಿ.
ಮುಂದಿನ ವಾರ ಮತ್ತೊಂದು ವರದಿಯ ನೆನಪಿನೊಂದಿಗೆ ಬರ್ತೀನಿ.
ಜ್ಯೋತಿ ….





reporters dairy bareha chennagide..avadhige vandanegalu
Karnataka da namma hemmeya Gowdru