ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ ಗಾಂವಕಾರ ಹೊಸ ಕವಿತೆ- ಹಿಂತಿರುಗಿ ಬಂದಳು…

ಉದಯ ಗಾಂವಕಾರ

ಮನೆಯೊಳಗೆ ಏಕೆ
ಬರುತ್ತಿಲ್ಲ ಎಂದದ್ದಕ್ಕೆ
ಅಪ್ಪನ ಅಡುಗೆ
ರುಚಿಯಾಗುತ್ತಿಲ್ಲವಾ?
ಅಮ್ಮನ ಪ್ರಶ್ನೆ.
ಮತ್ತೂ ಹಠ ಮಾಡಿದರೆ-
ಕಾಗೆ ಮುಟ್ಟಿತು ನನ್ನ,
ಸುಮ್ಮನಿರು ಎಂಬ ಗದರಿಕೆ.
ಅಪ್ಪನನ್ನೇಕೆ ಎಂದೂ
ಮುಟ್ಟುವುದಿಲ್ಲ
ಆ ಹಾಳಾದ ಕಾಗೆ!
-ನನ್ನ ಗೊಣಗಾಟಕ್ಕೆ
ಅಮ್ಮನದು ಮುಗುಳ್ನಗು.

ಆಕೆ ಭೂಮಿಯಂತೆ;
ಹುಟ್ಟಿನೊಂದಿಗೇ
ಅಷ್ಟೂ ಅಂಡಗಳನ್ನು
ಹೊತ್ತು ತಂದವಳು.
ಹುಟ್ಟಿಸುವ ಹಂಬಲ
ನೆತ್ತರಿನಲ್ಲಿ‌
ಕೊನೆಗೊಂಡರೇನಂತೆ
ತಿಂಗಳ ಸ್ರಾವವೂ
ತಿಂಗಳ-ಬೆಳಕಿನಂತೆ!
ಪೂರ್ಣಗೊಳ್ಳುವ
ಪ್ರಯತ್ನಕ್ಕೆ
ಕೊನೆ ಮೊದಲಿರುವುದಿಲ್ಲ.

ಸಾವಿರದ ಮನೆಯ
ಸಾಸಿವೆ ತರಲು ಹೋದ
ಕಿಸಾಗೋತಮಿ
ಹಿಂತಿರುಗಿ ಬಂದಳು.
ಮುಟ್ಟಿರದ ಯೋನಿಯಿಂದ
ಹುಟ್ಟಿರುವವನನ್ನು
ಹುಡುಕಿಕೊಡು ಎಂದಳು.

ಹುಟ್ಟು- ಸಾವುಗಳಿರದ
ದೇವಾನುದೇವತೆಗಳಿಗೆ
ಕಡ್ಡಾಯ ನಿವೃತ್ತಿ ಬೇಕು.
ಅವರೂ ನಮ್ಮ-ನಿಮ್ಮಂತೆ
ಮುಟ್ಟಾಗುವ ಮಾತೆಗೆ
ಮಗುವಾಗಿ ಹುಟ್ಟಬೇಕು.

ಮುಟ್ಟಬೇಡ ಮಗಾ
ಮೀಯಬೇಕಾಗುತ್ತದೆ
ಎಂಬ ಅಮ್ಮನ ಎಚ್ಚರಿಕೆಯನ್ನು
ಕಡೆಗಣಿಸಿ ಮುಟ್ಟಿಸಿಕೊಂಡ
ನೆನಪಾಯಿತು.
ಅಮ್ಮನ ಅಪ್ಪುಗೆಯ ಬಿಸಿಗಿಂತ
ಮುಟ್ಟಿನ ಮೈಲಿಗೆ ಹೆಚ್ಚಲ್ಲ
ಎಂದು ನಿರಾಳದಲ್ಲಿ ನಿದ್ದೆ
ಹೋದದ್ದಷ್ಟೇ ಗೊತ್ತು

ಮುಟ್ಟಾದ ಮಾತೆಯ
ಹೊಟ್ಟೆಯಲ್ಲಿ ಹುಟ್ಟಿಸಿದ್ದಕ್ಕೆ
ಆ ದೇವರಿಗೆ ಕೃತಜ್ಞತೆ
ಸಲ್ಲಿಸಬೇಕೆಂದುಕೊಂಡೆ
ಆ ಭಾಗ್ಯವಿರದ ದೇವರ
ಹೊಟ್ಟೆ ಉರಿಸುವುದೇಕೆಂದು
ಸುಮ್ಮನಿದ್ದುಬಿಟ್ಟೆ!

‍ಲೇಖಕರು Admin

22 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading