ಪಿ ಬಿ ಪ್ರಸನ್ನ
ಪ್ರಭುಸಮ್ಮಿತ
ಓಲಗದಲ್ಲಿ ವಿರಾಜಮಾನ
ರಾಜ
ಬಗೆ ಬಗೆಯ ಬಿರುದು ಬಾವಲಿಗಳ ಸಹಿತ
ಸಾಲುಗಟ್ಟಿದ್ದಾರೆ ಜನ
ಹೂ ಹಣ್ಣು ಅಹವಾಲುಗಳ ಜೊತೆಗೆ
ಅವನೋ ಅನಾ
ಮತ್ತಾಗಿ ಅವರು ತಂದ
ಅರೆಬಿರಿದ ಹೂಗಳ ಹಿಸುಕಿ
ಇದು ಗಂಧ
ಮಿಡಿ ಕಾಯಿ ದೋರುಗಾಯಿಗಳ ಹಿಂಡಿ
ಇದೇ ರಸವೆನುವ
ಮರುದಿನದಿಂದ ಅದೇ ಶಾಸನ
ಸಂಗೀತ ಸೇವಾ ಅವಧಾರಯ
ಎಂದಾಗ ಇದ್ದೆಲ್ಲ ಕವಿಗಳು
ಗಾಯಕರು ಸಿದ್ಧ
ನೀವೆಲ್ಲ ನನ್ನ ಶ್ರುತಿಗೇ ಬದ್ಧ
ರಾಗಿ ಎಂದಾಗ ಅವರು ಕಂಗಾಲು
ಕವಿಯೋ
ಸ್ವಚ್ಛಂದ ಛಂದ ವಿಹಾರಿ
ಗಾಯಕನೋ
ಮಿಡಿದಂತೆ ಏಕತಾರಿ
ಕುಕಿಲಿರಿವ ಕೋಗಿಲೆಯ ಕುಣಿವ ನವಿಲಿನ
ಹರಿವ ನೀರಿನ ಶ್ರುತಿಯ ಹಿಡಿಯುವ
ಮಸಿಯು ಇಳಿಯದು ಎಂದ ಕವಿ
ಶ್ರುತಿಯು ಸೇರದು ಎಂದ ಗಾಯಕ
ಓಲಗದಲ್ಲೀಗ ಗದ್ದಲವೋ ಗದ್ದಲ
ನಾನೆ ಬರೆಯುವೆ ನಾನೆ ಹಾಡುವೆ
ಹೊಟ್ಟೆ ಹೊರೆಯಲೆಂದೇ ಇರುವ ನೀವುಗಳು
ನನ್ನ ಅನುಸರಿಸಿ ಎಂದ
ಈಗ
ರಾಜ್ಯದ ತುಂಬ ಅವನ ಶಾಸನವೇ ಕವಿತೆ
ಅದರದ್ದೇ ಪಾಡು
ಅಗೆಯುವವರು
ಅವರು ನಿತ್ಯವೂ
ಅಗೆಯುವರು ಚತುರಂಗ ಬಲ
ಭೇರಿ ಕೊಂಬು ಕಹಳೆಯೊಂದಿಗೆ
ಹೂವುಗಳ ಕತ್ತರಿಸಿ
ಮುಳ್ಳ ಹಂಚುವರು
ಶರಣು ಎಂದವರನೂ ಬಾಗಿಸಿ
ರುಂಡ ಚೆಂಡಾಡುವರು
ಕೋಡಿ ಕೋಡಿ ನೆತ್ತರಲಿ
ಬಣ್ಣ ರುಚಿ ಶಕ್ತಿಗಳ ಅರಸಿ
ಖಚಿತ ಗಂಧ ಬೆರೆಸುವರು
ಗೋರಿಗಳ ಅಗೆದು
ಸಿಕ್ಕ ಮೂಳೆಗಳ
ಮಹಿಮೆಯ ಹಾಡುವರು
ಬೇತಾಳಗಳಿಗೆ ಬಣ್ಣ ಬಳಿದು
ಗಾಳಿ ತುಂಬಲೆಳಸುವರು
ಸನಾತನದ ಚೂರುಗಳ
ಮರು ಜೋಡಿಸಿ ಚೌಕಟ್ಟಿನೊಳಗಿಟ್ಟು
ಸಂಭ್ರಮಿಸುವರು
ಅಗೆಯುವರು
ಅಗೆದಂತೆ ಗೋರಿಗಳೇ ಆಗುವರು
ಅವರು ಹರಿಸಿದ ನೆತ್ತರು
ಕಾಲ ಬುಡಕ್ಕೇ ಬಂದು
ಮಣ್ಣು ಸಡಿಲವಾಗಿ
ಅವರೇ ಸಮಾಧಿಯಾದರೂ ಸಂಭ್ರಮಿಸುವರು !





0 Comments