
ಚಂದ್ರಶೇಖರ ಮಂಡೆಕೋಲು
ಇದು ಈಗಷ್ಟೇ ಬೆಂಗಳೂರಿನ ಟೌನ್ಹಾಲ್ ಹಿಂದೆ ಕಂಡು ಬಂದ ಚಿತ್ರ..
ಅರೆಬರೆ ಬಟ್ಟೆ ತೊಟ್ಟ, ಕುರುಚಲು ಗಡ್ಡದ ಆತ ನಿನ್ನೆ ಅಂಬೇಡ್ಕರ್ ಜಯಂತಿ ಆಚರಿಸಿದವರು ಉಂಡು ಬಿಸುಟಿದ್ದ ಅಳಿದುಳಿದ ಅಗುಳನ್ನು ಆರಿಸಿ ತಿನ್ನುತ್ತಿದ್ದ…
ಟೌನ್ಹಾಲ್ ಹಿಂಭಾಗ ಚೆಲ್ಲಿದ್ದ ಕಂಗಿನ ತಟ್ಟೆಯ ರಾಶಿಯಲ್ಲಿ ಒಂದು ತಟ್ಟೆಯನ್ನು ಆಯ್ದು ಅದರ ತುಂಬ ನಿನ್ನೆ ಮಿಕ್ಕ ಅಗುಳನ್ನು ಆರಿಸಿ ತಿನ್ನುತ್ತಿದ್ದ.
ಮೈನ್ ರೋಡಲ್ಲಿ ನಿಂತು ನೋಡುತ್ತಿದ್ದ ನನಗೆ ಆತನ ಮುಖದಲ್ಲಿ ಮಹಾ ಹಸಿವು, ಮಹಾ ದಾಹ ಎದ್ದು ಕಾಣುತ್ತಿತ್ತು…
ನಿನ್ನೆ ಇದೇ ಹೊತ್ತಿಗೆ ಅದೇ ಜಾಗದಲ್ಲಿ ದಲಿತ ಸಂಘಟನೆಗಳು, ಬಿಬಿಎಂಪಿ ಸೇರಿ ಅಂಬೇಡ್ಕರ್ ಜಯಂತಿ ಆಚರಿಸಿದ್ರು…
ಬಹುಶಃ ಈ ದೇಶದ ಕೋಟ್ಯಂತರ ಜನ ನಿನ್ನೆ ಸರ್ಕಾರಿ ರಜೆಯೆಂದು ಬಾಡೂಟವೋ, ತುಪ್ಪದೂಟವೋ ಸವಿಯುತ್ತಿದ್ದ ಹೊತ್ತಲ್ಲಿ ಆತ ಎಲ್ಲಿದ್ದನೋ…?
ಆತ ಇಂದು ಕುಳಿತ ಜಾಗದ ಸರೀ ಎದುರು ಈ ದೇಶದ ಮುಖ್ಯ ಬ್ಯಾಂಕ್ ಕೆನರಾ ಬ್ಯಾಂಕ್ನ ಪ್ರಧಾನ ಕಚೇರಿಯಿದೆ…
ಇನ್ನೊಂದು ಮಗ್ಗುಲಿಗೆ ಕೋಟಿ ಜೀವಗಳಿಗೆ ವಿಮೆ ಮಾಡಿಸುವ ಎಲ್ಐಸಿ ಮುಖ್ಯ ಕಚೇರಿ…
ಆಚೆ ಬದಿ ಎಷ್ಟೋ ಚಳವಳಿಗೆ ಸಾಕ್ಷಿಯಾದ ಟೌನ್ಹಾಲ್ನ ಅಂಗಳ….
ಅಲ್ಲೇ ಪಕ್ಕದಲ್ಲಿ ನಿತ್ಯ ದಮನಿತರ, ಶೋಷಿತರ ಪರ ಎಂದೆಲ್ಲ ದನಿ ಕೇಳಿಸುವ ರವೀಂದ್ರ ಕಲಾಕ್ಷೇತ್ರ, ಸಂಸ…
ಇದಾವುದರ ಪರಿವೆಯೂ ಇಲ್ಲದ ಜಾತಿ, ಧರ್ಮ, ಮತ ಅರಿಯದ ಆತ ಆ ಕ್ಷಣದ ಹಸಿವು ಇಂಗಿಸುವ ತರಾತುರಿಯಲ್ಲಿದ್ದ.
ಇಂದು ಈಗಷ್ಟೇ ನಾನು ಕಂಡು ಬಂದ ಚಿತ್ರ ನಾವು ಆಚರಿಸಿದ ಮಹಾನುಭಾವನ ಜಯಂತಿಗೇ ಒಂದು ರೂಪಕದಂತೆ ಕಾಣಿಸಿತು…. ಮ್ಚ್…!!!





0 Comments