ವೈಶಾಲಿ ಹೆಗ್ಡೆ
1.
ಹೊತ್ತೆಲ್ಲ ಹುತ್ತಗಟ್ಟಿ ಬಿಮ್ಮನೆ ಕೂತಿದೆ
ಪೂರ್ವ ಪಶ್ಚಿಮಕೆಲ್ಲ ಗೋಜಲು ದಿಕ್ಕೇ ಹಾರಿ ಹೋಗಿದೆ
ಕ್ಷಿತಿಜ ಕೆಂಪಾಗುವುದ ಮರೆತು ಕೆದರುತ್ತ ಕಾದಿದೆ
ಊರಾಚೆ ರೈಲುಹಳಿ ನಿಂತಲ್ಲೇ ಓಡಿದೆ
ಕಳೆದುಹೋಗಿದೆ ಕಣ್ಣು ಒಣ ಒಣ ಚಳಿಯಲ್ಲಿ
ಕೈಬಿರುಕುಗಳ ಕೊರಕಲಿನಲ್ಲಿ
ಎದೆಯ ಹರಿವಾಣದ ತುಂಬ ಒದ್ದೆಜೇನು
ತುಳುಕಿ ತೊಟ್ಟಿಕ್ಕುವ ಹನಿಹನಿಯಲ್ಲಿ
ಹೊರಳಿ ಜಿಗುಟೆದ್ದು ಜಗ್ಗುವ ಸಿಹಿ
ನೆನಪಿಗಂಟಿ ಮುತ್ತುವ ಇರುವೆಸಾಲು
ಇಳಿದುಹೋಗಿದೆ ಅಲ್ಲೇ ಜೇನುರಟ್ಟಿನ ಬದಿಯಲ್ಲೇ
ಜೇನುಹೂಗಳ ಹೊಟ್ಟೆಯಲ್ಲೇ
2.
ಇರಬೇಕು ಒಬ್ಬಳೇ
ಕೂಗಿ ಕೂಗಿ ಕುಸಿದರೂ ಓಗೊಡುವರು ಇಲ್ಲದಂತೆ
ಮೌನ ಅನುರಣಿಸಿ ಮತ್ತೆ ಮತ್ತೆ ಕೇಳುವಂತೆ
ಹಗಲು ರಾತ್ರಿಗಳ ಲೆಕ್ಕ ತಪ್ಪಿ ಮಾಸ
ದ ನೆನಪೂ ಮಾಸುವಂತೆ
ನಾಳೆಗಳಿಗಾಗಿ ಇಂದೇ ಚಿಂತಿಸದಂತೆ
ಗೊತ್ತುಗುರಿಯ ಗಮನವಿಲ್ಲದದಂತೆ
ಹುಸಿನಿರೀಕ್ಷೆಯ ಹಂಗಿಲ್ಲದಂತೆ
ಇರಬೇಕು ಒಬ್ಬಳೇ
ಕಾನಮಧ್ಯೆಯ ಕೊಳದಲಿ ಕಲ್ಲೆಸೆದು ತೆರೆಯೆಬ್ಬಿಸಿ
ಕರಗಿ ಕಳೆದು ಹೋಗುವಂತೆ
ದರಕಿನೆಲೆಯ ಸರಗುಟ್ಟಿಸಿದರೂ ಇನ್ನಾರಿಗೂ ಕೇಳಿಸದಂತೆ
ಸುಳ್ಳು ಹೇಳುವ ಸುಳಿಗಾಳಿಗೂ ಸೊಪ್ಪು ಹಾಕದಂತೆ
ಚಿಗುರು ಟಿಸಿಲೊಡೆವ ಸದ್ದೂ ಗದ್ದಲವೆನಿಸುವಂತೆ
ಇರಬೇಕು ಒಬ್ಬಳೇ
ಮಾತೇ ಮರೆತು ಹೋಗುವಂತೆ
ಇರಬೇಕು ಒಬ್ಬಳೇ…





ಇರಬೇಕು ಒಬ್ಬಳೇ
ಮಾತೇ ಮರೆತು ಹೋಗುವಂತೆ
ಆಹಾ… ನಿಮ್ಮಷ್ಟೇ ಚೆಂದದ ಕವಿತೆ
ತುಂಬಾ ಚನ್ನಾಗಿದೆ. ಕವನ ಇನ್ನೊಮ್ಮೆ ಓದಬೇಕೆನಿಸುತ್ತದೆ.
Nanna manassige dhvani kottiri neevu!
Spellbounding
sakattaaagide…. thumba ishta aaytu.. irabeku obbale maathe maretu hoguvante -chandada saalu
ತುಂಬಾ ಚೆನ್ನಾಗಿದೆ….
ಎದೆಯ ಹರಿವಾಣದ ತುಂಬ ಒದ್ದೆಜೇನು….
ಇರಬೇಕು ಒಬ್ಬಳೇ
ಮಾತೇ ಮರೆತು ಹೋಗುವಂತೆ…
ತುಂಬಾ ಚೆನ್ನಾಗಿದೆ…