
ಡಾ ಲಕ್ಷ್ಮಣ್ ವಿ ಅ
ಸರಳವಾಗಿ ಹೇಳಿದರಿಲ್ಲಿ
ಕವಿತೆಯಾಗುವುದಿಲ್ಲ, ಸ್ವಲ್ಪ ಒಗಟಾಗೇ
ಹೇಳಬೇಕು ಎಲ್ಲ
ಇಲ್ಲಿ ಸರಳವಾಗಿ ಸುಲಭವಾಗಿ
ಸಿಗುವ ಯಾವ ವಸ್ತುವಿಗೂ
ಅಂಥ ಆಸ್ಥೆಯಿಲ್ಲ ಬಿಡಿ.
ಕವಿತೆಗಳಲ್ಲಿ ಅನಿರೀಕ್ಷಿತ ತಿರುವು
ಬೇಕೆನ್ನುವರು
ನೀನು ಸಿಕ್ಕಿದ್ದೇ ಆ ತಿರುವಿನಲ್ಲಿ
ಅವರ ಅಮಾಯಕತೆಗೆ ಏನೆನ್ನಲಿ?
ಹೊಸ ಪದ, ಹೊಸ ನುಡಿಗಟ್ಟು ಕೇಳುತ್ತಾರೆ
ನಾನು ಅಷ್ಟಾಗಿ ಓದಿಕೊಂಡಿಲ್ಲ
ಮತ್ತೆ ಅವೇ ಸುತ್ತಿ ಬಳಸಿ
ಅವೇ ಬಳಸುವೆ
ಈ ಮಲ್ಲಿಗೆ, ಸಂಪಿಗೆ, ತಾರೆ, ನೀಹಾರಿಕೆ,
ಗುಲಾಬಿಯಿಲ್ಲದ ಯಾವ ಕವಿತೆಯೂ
ಇಲ್ಲವೆನ್ನಿ
ಕೊಂಚ ಕ್ಲೀಷೆಯೆನಿಸಿದರೆ ಕ್ಷಮಿಸಿ.
ಇನ್ನು ತುಟಿ, ಕಟಿ, ಜಘನ,
ಜಾಪತ್ರೆ
ನನ್ನ ವ್ಯಾಪ್ತಿ ಪ್ರದೇಶದ ಹೊರಗಿವೆ
ದಯವಿಟ್ಟು ಹುಡುಕದಿರಿ.
ಕವಿತೆ ಬೆಚ್ಚಿಬೀಳಿಸಬೇಕೆನ್ನುತ್ತಾರೆ
ಮೊನ್ನೆ ಮೂರ್ಛೆ
ಹೋಗಿದ್ದು ನೆನಪಿದೆ ಆ ಎಚ್ಚರದಲ್ಲೇ ಬರೆಯುತಿರುವೆ
ಮನೆಗೆ ಯಾರೋ ತಂದು ಬಿಟ್ಟಾಗ
ಭರ್ತಿ ಹನ್ನೆರಡು ಗಂಟೆ.
ಗೊಂದಲಕ್ಕೆ ಬೀಳಿಸುವುದು
ನಿಜವಾದ ಕವಿತೆಯಂತೆ
ನಿಜ
ನಾವಿಬ್ಬರೂ ದೊಡ್ಡವರಾದದ್ದರ ಬಗೆಗೆ
ನಮ್ಮ ನಮ್ಮಮನೆಗಳಲ್ಲೇ
ನಂಬಲಾಗುತಿಲ್ಲ
ಇದು ಅಂತಿಂಥ ಗೊಂದಲವೆ?
“ಪ್ಯಾರ ತೇರಿ ಪೆಹಲಿ ನಜರ್ ಕೋ ಸಲಾಮ್.”
ಹೊಸತನವಿಲ್ಲದ ಕವಿತೆ
ಜೀವಂತವಲ್ಲ ವೆನ್ನುವರು
ಹಾಂ! ಮೊನ್ನೆ ತಂದ ಪ್ಯಾಂಟು ಶರ್ಟು ಹೊಸದು.
ಕವಿತೆಯೊಂದು ಹರಿಯುವ
ನದಿಯಂತಿರಬೇಕು
ನಿತ್ಯ ಹೊಸ ನೀರು ಸೇರುತಿರಬೇಕು
ಈಗ ಇದಕ್ಕೇನು ಕಮ್ಮಿಯಿಲ್ಲ ಬಿಡಿ
ಮಲೆನಾಡಿನಲ್ಲೀಗ ಭರ್ತಿ ಮಳೆ.
ನಂಗೊತ್ತು ಇದ್ಯಾವುದೂ ಇಲ್ಲಿ
ಕವಿತೆಯಲ್ಲ
ಸರಳವಾಗಿ ಹೇಳುವುದನ್ನು
ಸುತ್ತು ಬಳಿಸಿ ಹೇಳಿದ್ದೇನೆ ಒಂದು ಮಾತು
ಮಾತ್ರ ಸತ್ಯ.
“ನಾನವಳನ್ನ ತುಂಬ ಪ್ರೀತಿಸ್ತಿನಿ ಕಣ್ರೀ”





ಕವಿತೆ ಒಕೆ . ಕೊನೆಯ ಸಾಲು ಮುಂಗಾರು ಮಳೆ ಸಿನಿಮಾದ ಗಣೇಶ್ ಡೈಲಾಗ್ ತರಹ ಇದೆ.
ಡಾಕ್ಟರ್ ಚನ್ನಾಗಿದೆ ಕವನ
ತಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು ನಾಗರಜ್ ಸರ್ ಹಾಗು ಜಯಶಂಕರ ಅಣ್ಣ