ಅಹಲ್ಯೆ ಆವರಿಸಿದಾಗ
ಜಮುನಾ ರಾಣಿ ಎಚ್. ಎಸ್
ಅವಳ ಅಂತರಂಗವ
ಓದಿ ಒಳಗಿಳಿಸಿಕೊಂಡಿತು ಮನ
ಅದರೊಳಗಿನ ನೂರು
ತೊಳಲಾಟವನು ಕೂಡ,
ಕಣ್ಣ ಬಿಂಬದ ಒಳಗೆ
ಚಿತ್ತಾರವ ಬಿಡಿಸಿಕೊ೦ಡೆ,
ಮನದ ಮೂಲೆ ಮೂಲೆಯಲೂ
ಅವಳ ಮಿಡಿತವ
ತಂದುಕೊಂಡೆ,
ಮಾತ್ಸರ್ಯದ ಹೊಗೆಯಾಡಿತು
ಧರ್ಮದ ವೃಕ್ಷದಡಿ ಕುಂತ
ದೇಹದಲಿನ ಮನಕೆ
ನೂರೊಂದು ಪಾಶ
ಕಾಡಿ ಓಡುತಿರುವ
ಆಕೃತಿಗಳದು ಅದ್ಯಾವ
ರೂಪವೋ…
ಗೌತಮರಿರಬಹುದು
ಅಥವಾ
ಆ ಇಂದ್ರನೇ ?
ಬಯಕೆ ಬಳಿ ಸಾರಿದಾಗ
ನಿಷ್ಟೆ ಅಂಚಲ ನೆಲ ಕಚ್ಚಿತೇ ?
ಆಸೆ ಆಕಾಂಕ್ಷೆಗಳ
ಅನುಭವಿಸುವ ಆತುರದಲಿ
ಆತ್ಮ ನಿಯಂತ್ರಣ
ಪಾತಾಳ ಸೇರಿತೆ ?
ಅಡಗಿ ಕುಂತ ವಿರಹದ
ಕೋಲಾಹಲದ ಬರಹ
ಕಪಟ ಹುಂಜವ ಕ೦ಡು
ನವಿಲಂತೆ ನರ್ತಿಸಿತೆ ?
ಅಥವಾ
ಗೌತಮರ ರೂಪ
ಮ೦ಕು ಬೂದಿ ಎರಚಿತೆ ?
ದ್ವ೦ದ್ವ ನಿಲ್ಲದ ದ್ವಂದ್ವ!
ಮೋಸದ ಹೆಣ್ಣಾದ ಮೇಲೆ
ಶಿಲೆಯಾಗು ಶಾಪದ ಆಲಿಂಗನ
ಸರಿಯೇ ಅಥವಾ ತಪ್ಪೇ?
ಮತ್ತೆ ಮತ್ತೆ ನೆನೆಯುತಾ
ದೂಡುತಿರುವ ದಿನಗಳಲಿ
ಉತ್ಸಾಹ ತುಂಬುತಿರುವುದು
ಆ ನೆನಪುಗಳ ಬುತ್ತಿಯೋ ?
ಅಥವಾ ರಾಮನ ಆಗಮನದಿಂದ
ಸಿಗುವ ಮುಕ್ತಿಯೋ?
ವಿಧಿಯಾಟದ೦ತೆ ಅವನಿಗೆ
ಅಹಲ್ಯೋದ್ದಾರಕನ ಪಟ್ಟ
ಸಿಗಬೇಕಿತ್ತೆನಿಸುತ್ತದೆ
ಬದುಕು ಕೊಡುವ ಹೊಸ ಹುಟ್ಟಿಗೆ
ನೆಪವಾಗುವ ಆಸೆ
ಅಹಲ್ಯೆ ಆವರಿಸಿದಾಗ !





Chennagide kavite
Sangeetha ravieaj
Thank u