ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರೆದಂತೆ ‘ಜೀವಯಾನ’

ಸಾವಯವ ಕಾವ್ಯಕೃಷಿಕ

ಅಗಲಿದ ಕವಿ ಎಸ್ ಮಂಜುನಾಥ್ ಅವರು

ಒಂದು ಗುಂಗಾಗಿ ಕಾಡಿದ್ದರ ಫಲ ಈ ಕವಿತೆ

ಸತ್ಯಕಾಮ ಶರ್ಮ ಕಾಸರಗೋಡು

 

ಕಾವ್ಯ ಮಳೆಗರೆವಲ್ಲಿ ತಪ್ಪದೇ
ಕೊಡೆ ಹಿಡಿಯಲು ಮರೆತು ನಡೆದವರು
ಮರೆಯಾದರು
ಬರೆಯಲಿಲ್ಲ ಕವಿತೆ ಅವರು

ಜೀವಿಸಿದರು ಅದನು
ಅದವರ ಬೆವರುಸಿರು ನೆತ್ತರು

ಬಳಲಿ ಬಂದ ಗಾವಿಲರಿಗೆ ನೆರಳು
ಅವರು ಅಕ್ಕರೆಯಲಿ ನೆಟ್ಟ ಅಕ್ಷರ ಸಾಲ್ಮರಗಳು
ಕೆನೆಗಟ್ಟಿದ ಅನುಭವವದು
ಮಣ್ಗೆ ಋಣಿಯಾದ ಧನ್ಯ ತೆನೆ
ಸಾವಯವ ಕಾವ್ಯ ಕೃಷಿಗೆ ಮಾತ್ರ ಮಣೆ

ನೆತ್ತರು ಪರೀಕ್ಷೆ ತಂದ ಅಚ್ಚರಿ
ತೆರೆದ ಹೃದಯ ಶಸ್ತ್ರ ಚಿಕಿತ್ಸೆಯಲಿ ಕತ್ತರಿ
ಸೋಕದ ಹೃದ್ಯ ಬೆರಗು
ದಕ್ಕಿದ್ದವರಿಗಿದುವರೆಗು
ಸಹೃದಯ ಕಾವ್ಯ ಒಳಗೂ ಹೊರಗು

ಭರತ ಇಳಿತ ನಡುವೆ
ಸಮರಸ ಸಾಧಿಸುತ ಕವಿತ
ಬರೆದಂತೆ ‘ಜೀವಯಾನ’
ಆಗದಂತೆ ಅಂತೂ ಡೋಲಾಯಮಾನ

ಅರ್ಚಕನಗಲಿದ ಕಾವ್ಯಾ ಲಯದ ಹೊರಗೆ
ಭಕ್ತರು ಕಾದಿರುವರು ದೇವನ ಕರೆಗೆ
ಮುರಳಿ ಕರೆಯಿತೆಂದು ತೆರಳಿದರವರಂದು
ಇದ್ದಾನಲ್ಲ ಈ ಹುಡುಗ ಆಗಬಲ್ಲ ಹೂವಾಡಿಗ
ಅಂದರೆ ಅವರಿಗೇಕಾಯಿತು ಹೊರಡುವವಸರ?

ಸರಸರ ಯಮನ ಪಾಶಕೆ ಸಿಲುಕಿದ್ದು ಅವರ ಶರೀರ
ಜೀವವಡಗಿದ ಅವರ ಕಾವ್ಯದೊಡಲು ನಿಗೂಢ
ಖಯಾಲಿಗೆ ತೆವಲಿಗೆ ತೀಟೆಗೆ ಬರೆದುದಲ್ಲ
ಅವರ ಕಾವ್ಯ

ಸುಲಭವಾಗಿ ದಕ್ಕುವುದಲ್ಲ
ದಕ್ಕಿದರದು ಸುಲಭವಾಗಿ ಬಿಡುವುದಿಲ್ಲ

 

‍ಲೇಖಕರು admin

25 June, 2017

2 Comments

  1. .ಮಹೇಶ್ವರಿ.ಯು

    ಕವಿತೆಗೆ ಅದರ ಕಟ್ಟುವಿಕೆಯ ಶ್ರಧ್ದೆಗೆ ಅಭಿನಂದನೆಗಳು.

    • Sathyakama Sharma K

      Thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading