ಒಂದು ದಿನಚರಿ
ರಶ್ಮಿ ಕಾಸರಗೋಡು
ಚೌಕಟ್ಟುಗಳ ಭದ್ರಕೋಟೆ
ಯೊಳಗೊಂದು ಒಂಟಿ ಜೀವ
ಮೂಕ ಮನಸಿನ ಮೌನ
ವೇದನೆಗಳು
ನಗ್ನತೆಯ ಲಾಂಛನವಿರುವ
ನಾಲ್ಕು ಕೋಣೆಯೊಳೆಗೆ
ಡಿಕ್ಕಿ ಹೊಡೆದು
ಮಾರ್ದನಿಸುತ್ತಿವೆ
ಅವನು, ಮಕ್ಕಳು ಎಲ್ಲರೂ
ಹೊರಟು ಹೋದ ಮೇಲೆ
ಪಾತ್ರೆ ಬೆಳಗಿ, ನೆಲ ಒರೆಸಿ
ಶುಭ್ರವಸನಳಾಗಿ ಕಾದು ಕುಳಿತಿದ್ದಾಳೆ
ಅವಳು
ಬಾಗಿಲು ಮುಚ್ಚದೆ
ತನ್ನ ಶಯನ ಕೋಣೆಯೊಳಗೆ
ಹೆಜ್ಜೆ ಸಪ್ಪಳಗಳಿಲ್ಲ
ಎದೆ ಬಡಿತದ ಸದ್ದಿಲ್ಲ
ಎಲ್ಲವೂ ಮೌನ
ಪರಕೀಯ ಪ್ರವೇಶವಾಗುತ್ತಿದೆ
ಅವಳಿಗರಿವಿಲ್ಲದಂತೆ

ಅವಳು ನುಡಿಯುತ್ತಾಳೆ
ನನ್ನಿಂದಲೇ ಈ ಜಗತ್ತು ಸೃಷ್ಟಿಯಾಯ್ತು
ಕೇಳುತ್ತಿಲ್ಲವೇ ನಿಮಗೆ
ಈ ಸದ್ದು…
ಬೀದಿ ನಾಟಕದಲ್ಲಿ ಕೂಗಿದಂತೆ
ಮಧ್ಯಾಹ್ನ ಹಸಿವಿನ ಹೊತ್ತು
ನಾನು ನಿನಗೊಂದು ಖಾಲಿ
ತಟ್ಟೆಯನ್ನು ಕೊಡಬಲ್ಲೆ
ನೀನು ಹೊಟ್ಟೆ ತುಂಬಾ ಉಣಬೇಕು
ನಿನಗೆ ಇಷ್ಟವಾದುದನ್ನೆಲ್ಲಾ
ಬಡಿಸಿಕೋ
ಅತೃಪ್ತ ಬಯಕೆಯ ಬೇಗುದಿ
ಇಂಗಿ ಹೋಗಲಿ
ಸತ್ತು ಹೋದ ವ್ಯಕ್ತಿಯ
ಆತ್ಮಗಳು ಮಾತಾಡಿವೆಯೇ?
ಇನ್ನು ಮುತ್ತುಗಳನ್ನು ಕೊಡಲಾರೆ ಕೃಷ್ಣಾ
ಎಂದು ಗೋಪಿಕೆಯರು ಮುನಿಸಿಕೊಂಡಿರುವರು
ಸಲ್ಲಾಪಗಳು ರಂಗೇರುತ್ತಿವೆ
ಮಕ್ಕಳು ಬಂದಾಯ್ತು
ಅವಳು,
ಚದುರಿದ ಕೂದಲು ಹೆಣೆದು
ನನಗೇನೂ ಗೊತ್ತಿಲ್ಲ ಎಂಬಂತೆ
ನಡೆದಿಹಳು
ಅಡುಗೆ ಮನೆಯತ್ತ
ಅವನು ಕಾಲಿಂಗ್ ಬೆಲ್
ಅದುಮಿದಾಗ
ನಿಮಗೆ ಕೇಳಿಸುತ್ತಿದೆಯೇ?
ಕಡಲ ಅಲೆಗಳ ಅಬ್ಬರ?
ಮೀನೊಂದು ನೀರಲ್ಲಿ ಚಡಪಡಿಸಿದ್ದು?
ತನ್ನ ರೆಕ್ಕೆಗಳನ್ನು ಕೊಡವಿ
ಹಕ್ಕಿ ಹಾರಿದ್ದು?
ಮನಸ್ಸಿನ ಪಿಸು ಮಾತು
ಕನಸಾಗಿ ಉಳಿದಿದ್ದು…






nice..very nice..
ತುಂಬಾ ತುಂಬಾ ಚೆನ್ನಾಗಿದೆ – ಒಂಟಿ ಜೀವದ ಮೂಕ ಮನಸಿನ ಮೌನ ಒಡೆದು ತಮ್ಮ ಸಾಮಾನು-ಸರಂಜಾಮು ಮಾರಲು ಬಯಸುವ ದೊಡ್ಡ ಉದ್ಯಮವೆ ಕಾದು ಕುಳಿತಿವೆ -ಸ್ವಲ್ಪ ಹುಶಾರಾಗಿರಬೇಕು ಈ ಕಾಲದಲ್ಲಿ.
-ಅನಿಲ ತಾಳಿಕೋಟಿ
Loved it …
very nice dear…
Nice Poem
Thanks to all