ಡಾ. ಅನಿಲ್ ಎಮ್ ಚಟ್ನಳ್ಳಿ
ಆಗೆಲ್ಲ ಹಿಂದೆ
ತಾನಸೇನ ಎಂಬುವವನೊಬ್ಬ
ದೀಪಕ ರಾಗ ಹಾಡಿದರೆ
ದೀಪ ಹೊತ್ತಿಕೊಳ್ಳುತ್ತಿದ್ದವಂತೆ
ಮಲ್ಹಾರ ರಾಗ ಹಾಡಿದರೆ
ಮಳೆ ಸುರಿಯುತ್ತಿತ್ತಂತೆ
ಅಯ್ಯೋ ಬೇಗ
ಅವನನ್ನು ಹುಡುಕಿ,
ಸಿಕ್ಕಾನು ಕರೆದುಕೊಂಡು ಬನ್ನಿ

ಇಲ್ಲಿ ನಮ್ಮ ನಾಯಕರೆಲ್ಲ
ಕೈಚೆಲ್ಲುತ್ತಿದ್ದಾರೆ
ಡಾಕ್ಟರುಗಳೆಲ್ಲ ಬೆವರು ಸುರಿಸಿ
ಬಸವಳಿಯುತ್ತಿದ್ದಾರೆ
ಸಾಮಾನ್ಯರೆಲ್ಲ ಹೊಟ್ಟೆ ಹೊರೆಯಲಾರದೆ
ಒದ್ದಾಡುತ್ತಿದ್ದಾರೆ
ಅವನು ಮನದುಂಬಿ ಹಾಡಲಿ
ಆರುತಿರುವ ಜೀವಜ್ಯೋತಿ ಆರಿ ಹೋಗದಂತೆ
ಪ್ರಾಣವಾಯು ಗಾಳಿಯಲೆಲ್ಲ ಹರಡುವಂತೆ
ಗುರುವೆ ನನ್ನೊಡಲ ಸಂಕಟ
ಕಡಿಮೆ ಮಾಡೆಂದು
ಅವನ ಕಾಲು ಹಿಡಿದು
ಕೇಳಿಕೊಳ್ಳುವೆ.






0 Comments