ದೇವರು ಋಜು ಹಾಕಿದ
ಆನಂದ ಕುಂಚನೂರ
ಕ್ಷಮಿಸು,
ನಿನ್ನ ಹಚ್ಚಿಕೊಳ್ಳುವ ಉಮೇದು ನನಗೂ ಇರಲಿಲ್ಲ
ಮನಸಿಗೆ ಅಂಥ ದರ್ದು ಬೇಕಿರಲಿಲ್ಲ
ಅರೆಪಾವು ಗುಂಡಿಗೆಯಲಿ ನಾಕಾಣೆ ಕನಸುಗಳ ಧ್ಯಾನದಲಿ
ಬೇಷರತ್ ನನ್ನದೇ ಖಯಾಲಿನಲಿ ಬದುಕುತ್ತಿದ್ದೆ
ತೆರೆದ ನಸೀಬಿಗೆ ರಂಗಿನ ಇಮಾರತಿಗಳ ಬರೆದೆ
ಬರೆದೆ, ಮತ್ತೂ ಬರೆದೆ
ಅನಾಮತ್ ಯಾವುದೋ ಕರೆಗೆ ಹೋದೆಯಲ್ಲ
ಏನಿತ್ತು ಜರೂರು?

ಮೊಹಬ್ಬತಿನ ಮೆಹಫಿಲ್ ನಲಿ ಮುಳುಗಿದವಗೆ
ಬ್ಯಾಚುಲರ್ ಬವಣೆಯ
ಬೆಂಗಾಡು ದಿಲ್, ಮನಸಿನ ಮಕಾನ್ ಕೂಡ
ತೆಳು ಚಾಂದಿನಿಯ ರಾತ್ರಿ. ಅಂದೇ
ಹೂಬಿಟ್ಟ ಕಲರ್ ಕಲರ್ ಗುಲ್ ಮೊಹರ್
ಖುದಾ ಕಸಮ್!
ಅದಕ್ಕೆ ಸಬೂಬು ಹೇಳಿದೆನಾದರೆ
ನಿನ್ನ ಹೆಜ್ಜೆಯ ಮೊಹರಿಗೊಂದರಂತೆ ಇಲ್ಲಿ
ಮಿನಾರು ಮಹಲ್ ಗಳು ಮೂಡಿವೆ
ಬಲು ಜೋರಿನ ಜೋಡು ಗುಂಬಜ್ ಕಣ್ದೆರೆದಿವೆ
ಗುಡಿಯ ಕುರಾನ್ ತಾನೇ ಮೊಳಗುತಿವೆ
ಭವ್ಯ ಭಗವದ್ಗೀತೆ ಗಜಲ್ ಹಾಡುತಿವೆ
ಚರ್ಚ್ ನ ಸ್ಪೀಕರ್ ಸಲಾಂ-ಎ-ಇಷ್ಕ್ ಗುನುಗುತಿವೆ
ಥಂಡೀ ಸಡಕ್ ನ ಈ ಶರ್ಮೀಲಿ ಹವಾ
ನಿನ್ನ ಷರಾ ಒತ್ತಿಸಿಕೊಂಡು ಬೆಚ್ಚಗಾಗಿದೆ
ಮೆತ್ತಗಾಗಿದೆ ಬಂಡೆ ಬಡಾಯಿ
ಮುತ್ತಾಗಿವೆ ಜಿಹಾದ್ ಲಡಾಯಿ
ಅಲ್ಲೊಬ್ಬ ಕಬೀರ ಇಲ್ಲೊಬ್ಬ ಫಕೀರ
ಎಲ್ಲರೆದೆಗೂ ನಿನ್ನದೇ ದುವಾ
ನಾನೋ ನನ್ನದೆ ಫರ್ಮಾಯಿಷಿಯ ಬುವಾ
ಯಾವ ಫಿರ್ಯಾದುಗಳ ಗೋಜಲು ಗೋಜಿಲ್ಲದ
ಫರ್ಮಾನು ಮೇಜವಾನಿಕೆಯ ಹೊರತಾದ
ಜಾತಿ ಸಂಪತ್ತಿಗಳ ಸವಾಲುಗಳಿಲ್ಲದ
ನಮ್ಮ ಪ್ರೀತಿ ಕನ್ನಡಿಗೆ
ವಿಷದ ಕಲ್ಲೆಸೆದವರಾರೋ…
ಸಾಲಾ!
ಹೆಚ್ಚಾಗಿ ಹಚ್ಚಿಕೊಂಡಿದ್ದ ಚೂರುಗಳನೀಗ ಹೆಕ್ಕಿ
ಕಟ್ಟಬೇಕು ನಮ್ಮ ಸಫೇದಿ ತಾಜ್ಮಹಲ್
ಈ ಅವಾಜ್ ನಿನಗೆ ಕೇಳಿಸಿದ ಕ್ಷಣವೇ ದೌಡು
ಈ ಜಿಂದಗಿ ಮುಗಿಯುವುದರೊಳಗೆ
ಈ ಕಹಾನಿ ಪೂರ್ತಿಗೊಳಿಸಲು…






Good try dear Anand(Bgm), looking forward to see more in avadhimag:)
Nice fusion poetry!