ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಫ್ಸಾಲಿ ಸಾಹೇಬರ ಎರಡನೇ ಮಗಳು

manjunath kamath

ಮಂಜುನಾಥ್ ಕಾಮತ್

ಅಫ್ಸಾಲಿ ಸಾಹೇಬರ ಎರಡನೇ ಮಗಳು ಹೆರಿಗೆಗೆಂದು ತವರಿಗೆ ಬಂದವಳು. ಕೊಲ್ಲಿ ಕಿಲ್ಲೂರು ದಿಡುಪೆಯಲ್ಲೆಲ್ಲ ಹೆರಿಗೆಗೆ ಆಸ್ಪತ್ರೆಗೆ ಹೋಗೋದು ತುಂಬಾನೇ ಅಪರೂಪ. ಊರಲ್ಲಿ ಅದೆಷ್ಟೋ ಜನ ಸೂಲಗಿತ್ತಿಯರಿದ್ದಾರೆ. ಡಾಕ್ಟ್ರುಗಳಿಗಿಂತಲೂ ಹೆಚ್ಚು ಬಲ್ಲವರಿದ್ದಾರಂತೆ. ಆದರೆ 2007ರಲ್ಲಿ ನಡೆದ ಆ ಘಟನೆಯ ನಂತರ ಇಡೀ ಊರೇ ಹೆದರಿತು. ಅದೆಷ್ಟೇ ಕಷ್ಟವಾದರೂ ಸರಿ ಆ ನಂತರ ಆಸ್ಪತ್ರೆಯಲ್ಲೇ ಡೆಲಿವರಿ.

ಅಫ್ಸಾಲಿ ಸಾಹೇಬರು ಹಸುಗೂಸು ಮೊಮ್ಮಗಳನ್ನು ಕಳೆದುಕೊಂಡಿರೋದರಲ್ಲಿ ಯಾರ ತಪ್ಪನ್ನು ಹುಡುಕೋದು. ಎಂಟೇ ತಿಂಗಳಿಗೆ ಹೊರಬಂದ ಮಗುವನ್ನೇ ದೂರಬೇಕೇ?

afgali sab2ಬೆಳಿಗ್ಗೆ ಹೆರಿಗೆಯಾಗಿತ್ತು. ಸೂಲಗಿತ್ತಿ ಸುಶೀಲಕ್ಕ ಬಲು ಚಾಣಾಕ್ಷೆ. ಮುಸಲ್ಮಾನರಲ್ಲೂ ಹೆರಿಗೆ ಮಾಡಿಸೋ ಹೆಂಗಸರು ತುಂಬಾ ಜನ ಇದ್ದಾರೆ. ಹೆರಿಗೆಗೇನೂ ಕಷ್ಟವಾಗಲಿಲ್ಲ. ಲಕ್ಷಣವಾದ ಮಗು. ಆದರೆ ಅಳು, ಚಟುವಟಿಕೆಗಳೆಲ್ಲ ಕಡಿಮೆ . ಅಥವಾ ಇಲ್ಲವೇ ಇಲ್ಲವೆನ್ನುಷ್ಟು. ಮನೆಯವರು ಹೆದರಲಿಲ್ಲ. ಎಂಟು ತಿಂಗಳ ಮಗು ಹಾಗೇನೇ. ಇನ್ನೂ ಒಂದು ತಿಂಗಳು ಹೊಟ್ಟೆಯಲ್ಲೇ ಬೆಳೆಯಬೇಕಿತ್ತು. ಆಸ್ಪತ್ರೆಯಲ್ಲಿ ಐಸಿನಲ್ಲಿಟ್ಟು (ಐ.ಸಿ.ಯು) ಬೆಳೆಸುತ್ತಾರಂತಲ್ವಾ. ಆ ಸಂಜೆಯೇ ಮಗುವನ್ನು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಡಾಕ್ಟ್ರು ಅಫ್ಸಾಲಿ ಸಾಹೇಬರ ಬಹಳ ಪರಿಚಯದವರು. ಮಿನಿಮಮ್ ಹದಿನೈದು ದಿನವಾದ್ರೂ ಆಸ್ಪತ್ರೆಯಲ್ಲಿರಬೇಕು. ಮಗು ತಾಯಿ ಇಬ್ಬರೂ. ತುಂಬಾ ಖರ್ಚಾಗುತ್ತಲ್ವಾ ಅಫ್ಸಾನು. ಮಂಗ್ಳೂರು ಲೇಡಿಗೋಷನ್ ಆಸ್ಪತ್ರೆಗೆ ಹೋಗಿಬಿಡಿ. ಖರ್ಚು ಉಳಿಯುತ್ತಲ್ವ. ಮಗು ತಾಯೀನಾ ಚೆನ್ನಾಗಿ ನೋಡ್ಕೋತ್ತಾರೆ ಅಲ್ಲಿ.

ಅಫ್ಸಾಲಿ ಸಾಹೇಬರದು ಬಡತನದ ಬದುಕು. ಮೂರು ಹೆಣ್ಣು, ಒಂದು ಗಂಡು. ಸಣ್ಣ ಭೂಮಿ. ಅದ್ರಲ್ಲೇ ತೆಂಗು ಕಂಗು ಭತ್ತದ ಗದ್ದೆ. ಅಷ್ಟೆ. ಕುದುರೇ ಮುಖ ಕಂಪನಿ ಆರಂಭವಾದ ಶುರಿವಿನ ಏಳೆಂಟು ವರುಷಗಳ ಕಾಲ ಕಂಪನಿಯವರಿಗೆ ಬಿದಿರಿನ ಬುಟ್ಟಿಯನ್ನು ನಿರಂತರವಾಗಿ ಸಪ್ಲೈ ಮಾಡ್ತಿದ್ರಂತೆ. ದಿಡುಪೆ, ಸಂಸೆಯ ಕಾಡು ಗುಡ್ಡದ ಮಾರ್ಗದಲ್ಲಿ ನಡೆದು ಬುಟ್ಟಿಗಳನ್ನು ಹೊತ್ತುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದರಂತೆ. 1980ರ ನಂತರ ರಬ್ಬರ್ರಿನ ಬುಟ್ಟಿಗಳು ಹೆಚ್ಚು ಚಾಲ್ತಿಗೆ ಬಂದ ಮೇಲೆ ಇವರ ಕಸುಬಿಗೆ ಹೊಡೆತ.

ಶಾಲೆಯ ಹಿಂದೆಯೇ ಮನೆಯಾದ್ದರಿಂದ ಮಕ್ಕಳೆಲ್ಲರಿಗೂ ಪ್ರೈಮರಿ ಶಿಕ್ಷಣವಿದೆ. ಮಗ ದುಬೈಯಲ್ಲಿದ್ದಾನೆ. ಹಾಗೆಂದ ಮಾತ್ರಕ್ಕೆ ಲಕ್ಷದ ಮಾತು ಬೇಡ. ಮೇಸ್ತ್ರಿ ಕೆಲಸಕ್ಕೆಂದು ಹೋದವನು ಈಗ ಡ್ರೈವಿಂಗ್ ಕಲಿತು ಡ್ರೈವರ್ ಆಗಿದ್ದಾನೆ. ಅಷ್ಟೆ. ಆದರೂ ತಂಗಿಯರ ಮದುವೆ, ಮನೆಯ ಖರ್ಚುಗಳನ್ನೆಲ್ಲಾ ಅವನೇ ನೋಡ್ಕೋತ್ತಾನೆ. ಅವನಿಗೂ ಮದುವೆಯಾಗಿದೆ. ಇಬ್ಬರು ಮಕ್ಕಳು ಬೇರೆ. ಬದುಕೇನೋ ನಡೆಯುತ್ತಿತ್ತು, ಇದ್ದುದ್ದರಲ್ಲೇ ಸುಖವಾಗಿ, ಈ ಘಟನೆಯೊಂದು ನಡೆಯದೇ ಇರುತ್ತಿದ್ದರೆ.

ಮಂಗ್ಳೂರು ಆಸ್ಪತ್ರೆಗೆ ಹೋಗ್ಬೇಕಿತ್ತಲ್ವ. ಓಮ್ನಿಯೊಂದರಲ್ಲಿ ಹೋಗಿದ್ದು. ಆಸ್ಪತ್ರೆಗೆ ಹೋಗಿದ್ದಾರೆ. ಮಗುವನ್ನು ತೋರಿಸಿದ್ದಾರೆ. ಆದರೆ ಮಗು ಸತ್ತಿದೆ ಅಂದಾಗ ಮನೆಯವರೇ ಏಕೆ, ಸಲಹೆಕೊಟ್ಟ ಬೆಳ್ತಂಗಡಿಯ ಡಾಕ್ಟ್ರೂ ಅತ್ತಿದ್ದಾರೆ. ಚೆ, ನನ್ನಿಂದಲೇ ಆ ಮಗು ಸತ್ತಿತು. ಇಲ್ಲಿ ಹೆಚ್ಚಂದ್ರೆ ಹತ್ತು ಸಾವಿರ ಆಗ್ತಿತ್ತು. ಅದನ್ನು ಉಳಿಸೋಕಂತೆ ಅಲ್ಲಿ ಕಳಿಸಿದೆ. ಆದ್ರೆ ಮಗುವಿನ ಜೀವವೇ ಉಳಿಯಲಿಲ್ಲ. ಮಾರ್ಗ ಮಧ್ಯವೇ ತೀರಿಕೊಂಡಿತು ಎಂದು ಕಣ್ಣೀರು ಹಾಕುವಾಗ ಅಫ್ಸಾನ್ ಸಾಹೇಬರೇ ಸಮಾಧಾನ ಮಾಡಿದ್ದಾರೆ. ಎಂಟೇ ತಿಂಗಳಿಗೆ ಹುಟ್ಟಿದ ಆ ಮಗುವನ್ನೇ ದೂರಿದ್ದಾರೆ.

ದುರಂತ ಆ ಮಗು ಸತ್ತದ್ದು ಒಂದೇ ಅಲ್ಲ. ಈಗ ಇನ್ನೊಂದಿದೆ. ಮಂಗ್ಳೂರಿನಿಂದ ಮರಳುವಾಗ ಕತ್ತಲು. ಕೈಯಲ್ಲಿ ಮಗುವಿನ ಹೆಣ. ಓಮ್ನಿಯ ಡ್ರೈವರ್ ನಡುವೆ ಎಲ್ಲೋ ನಿಲ್ಲಿಸಿ ಊಟ ಮಾಡಲೇಬೇಕು ಅಂದವನು ಕುಡಿದೂ ಬಂದನಾ? ಬೆಳ್ತಂಗಡಿ ದಾಟಿ ಕಿಲ್ಲೂರು ರಸ್ತೆಯನ್ನು ಹಿಡಿದಿದ್ದಾನೆ ಮನೆಗಿನ್ನೆಷ್ಟು, ಹತ್ತು ಹದಿನೈದು ಕಿ.ಮೀ ಎನ್ನುವಾಗ ರಸ್ತೆ ಬದಿಯ ಮರವೊಂದಕ್ಕೆ ಓಮ್ನಿ ಗುದ್ದಿ ಬಿಟ್ಟಿದೆ. ಭೀಕರ ಅಪಘಾತ.

ಎದುರಿಗಿದ್ದ ಅಫ್ಸಾಲಿ ಸಾಹೇಬರಿಗೆ ತಲೆಗೆ ಏಟು. ಒಂದು ಕಣ್ಣನ್ನೂ ಕಳೆದುಕೊಂಡಿದ್ದಾರೆ. ಹೆಂಡತಿಯ ಒಂದು ತೋಳಿನ ಎಲುಬೇ ಜಾರಿಬಿಟ್ಟಿತ್ತಂತೆ. ಮಗಳಿಗೆ ಸಣ್ಣ ಪುಟ್ಟ ಏಟೇ ಆದರೂ ಬಾಣಂತಿ. ಮಗು ಸತ್ತ ಆಘಾತದೊಂದಿಗೆ ಇಡೀ ಕುಟುಂಬವೇ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಆ ನಡುರಾತ್ರಿ ಹೊತ್ತಲ್ಲಿ ಬಿದ್ದಿತ್ತು.
****

riverಈ ಕತೆ ಅಫ್ಸಾಲಿ ಸಾಹೇಬರು ನನಗೆ ಹೇಳುವವರಲ್ಲ. ಅಝೀಝ್ ಬಾಯಿ ನದಿ ದಾಟಿ ಸುರಕ್ಷಿತವಾಗಿ ದಡ ತಲುಪಿದ್ದು ಕಂಡು ಇವರು ತನ್ನ ಮನೆಯತ್ತ ಹೊರಟರು. ಅಝೀಝಣ್ಣನ ಫೋಟೋ ತೆಗೀತಿದ್ದ ನಾನೂ ಮೊಬೈಲ್ ಕಿಸೆಯಲ್ಲಿಟ್ಟು ಹೊರಟೆ. ಬರ್ತೀರಾ ಕೇಳಿದೆ. ಇಲ್ಲ ಅಂದ್ರು. ಅಪರಿಚಿತ ಅಂತ ಬೇಡ ಅಂತಿದ್ದಾರೇನೋ. ಆತ್ಮೀಯವಾಗಿ ಮಾತನಾಡಿದೆ. ಅವರೂ ಆತ್ಮೀಯರಾದರು. 2007ರ ನಂತ್ರ ನಾನು ಯಾವ ಗಾಡೀಲೂ ಕೂತ್ಕೊಳ್ಳಲ್ಲ ಅಂದವರು ಇಷ್ಟೆಲ್ಲ ಕತೆ ಹೇಳಿದರು.

ಆ ಘಟನೆ ನಡೆದು ಒಂಬತ್ತು ವರುಷಗಳಾಗಿವೆ. ಅಪಘಾತವಾದದ್ದಕ್ಕೆ ಪರಿಹಾರದ ಮೊತ್ತವನ್ನೂ ಕೋರ್ಟು ತೀರ್ಮಾನಿಸಿದೆಯಂತೆ. ಆದರೆ ದಶಕ ಮುಟ್ಟಿದರೂ ಅದು ಸಿಗಲೇ ಇಲ್ಲ. ಕೋರ್ಟು ಲಾಯರ್ರು ಎಂದು ಅಲೆದಿದ್ದೇ ಬಂತು. ಓಮ್ನಿಗೆ ಇನ್ಷೂರೆನ್ಸೇ ಇರಲಿಲ್ಲ ವೆನ್ನುತ್ತಾರಂತೆ. ಪ್ರಯತ್ನವನ್ನೂ ಇನ್ನೂ ಬಿಟ್ಟಿಲ್ಲ. ಆ ಆಘಾತ ಕಷ್ಟಗಳಿಂದ ಹೇಗೋ ಸುಧಾರಿಸಿಕೊಂಡು, ಮನೆಯಲ್ಲೀಗ ಆಡುತ್ತಿರೋ ಮಕ್ಕಳೊಂದಿಗೇ ಬೆರೆತುಕೊಂಡು ಅಫ್ಸಾಲಿ ಸಾಹೇಬರು ಮತ್ತೆ ಖುಷಿಯ ಕನಸುಗಳನ್ನು ಕಾಣುತ್ತಿದ್ದಾರೆ. ಕಿಲ್ಲೂರಿನ ಜಗತ್ತನ್ನು ಮತ್ತು ಇನ್ನುಳಿದ ಕಾಲವನ್ನು ಒಂಟಿ ಕಣ್ಣಲ್ಲೇ ಕಳೆಯುತ್ತಿದ್ದಾರೆ.

ಅಫ್ಸಾಲಿ ಸಾಹೇಬರಿಗೆ, ಅಝೀಝ್ ಭಾಯೀಗೆ ಮತ್ತು ಎಲ್ಲಾ ಮುಸ್ಲಿಂ ಬಾಂಧವರಿಗೂ ರಂಜಾನ್ ಹಬ್ಬದ ಶುಭಾಶಯಗಳು. ಹಬ್ಬಗಳೆಂದರೆ ಸಂಭ್ರಮ. ಆ ಸಂಭ್ರಮ ಜೀವನ ಪೂರ್ತಿ ತುಂಬಿರಲಿ. ಕೆಟ್ಟ ಘಟನೆಗಳು ನಡೆಯದಿರಲಿ.

[fbvideo link=”https://www.facebook.com/borgalgudde.manjunath/videos/1130693030326425/” width=”500″ height=”400″ onlyvideo=”1″]

‍ಲೇಖಕರು Admin

7 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading