
ಕನ್ನಡವನ್ನ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಮಂತ್ರಿಗಳು ಮುಂದಿದ್ದಾರೆ. ಆದರೆ ಇವರಿಗೆ ಅಡ್ಡಿಯಾಗಿ ನಿಂತಿರುವವರು ವಿಧಾನ ಸೌಧ ಮತ್ತಿತರ ಕಡೆಗಳಲ್ಲಿ ಕುಳಿತಿರುವ ಆಂಗ್ಲ ಮೋಹೀ ಅಧಿಕಾರಿಗಳು ಅನ್ನುವ ಮಾತಿದೆ. ಇವರು ಕನ್ನಡದ ಪರವಾಗಿ ನಿಂತರೆ ಕನ್ನಡ ಖಂಡಿತ ಉದ್ದಾರವಾಗುತ್ತದೆ.
ಒಂದು ಉದಾಹರಣೆ ಬೆಂಗಳೂರಿನಲ್ಲಿ ಪ್ರತಿ ವರ್ಷ ಒಂದು ಪುಸ್ತಕ ಪ್ರದರ್ಶನ 10 ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಸಹಸ್ರ ಜನ ಬಂದು ಪುಸ್ತಕಗಳನ್ನ ಅಲ್ಲಿ ಕೊಳ್ಳುತ್ತಿದ್ದರು. ಈ ಬಾರಿ ಈ ಪ್ರದರ್ಶನಕ್ಕೆ ಕೇವಲ 3 ದಿನ ನೀಡಲಾಯಿತು. ಇಲ್ಲಿ ಪುಸ್ತಕ ಮಾರಾಟ ಲಾಭ ದಾಯಕ ಉದ್ಯಮ ಪುಸ್ತಕ ವ್ಯಾಪಾರಿಗಳು ಹಣ ಮಾಡುತ್ತಾರೆ ಅನ್ನುವ ಕಾರಣಕ್ಕೆ ಹೀಗೆ ಮಾಡಲಾಯಿತು ಅನ್ನುವ ಮಾತು ಕೇಳಿ ಬಂತು. ಪುಸ್ತಕ ವ್ಯಾಪಾರದಿಂದ ಹಣ ಮಾಡಬಹುದು ಅನ್ನುವುದು ಮೊದಲ ಬಾರಿ ನಾನು ಕೇಳಿದ ಮಾತು. ಪುಸ್ತಕ ಮಾರಾಟ ಒಂದು ಸಾಂಸ್ಕೃತಿಕ ಪ್ರಕ್ರಿಯೆ. ಸಾವಿರಾರು ಜನ ಬಂದು ತಮಗೆ ಬೇಕಾದ ಒಂದು ಪುಸ್ತಕವನ್ನ ಆಯ್ಕೆ ಮಾಡಿ ಕೊಂಡು ಹೋಗುತ್ತಾರೆ ಅಂದರೆ ಈ ನೆಲದಲ್ಲಿ ಒಂದು ಉತ್ತಮ ಕೆಲಸವಾಗುತ್ತಿದೆ ಎಂದು ತಿಳಿಯಬೇಕು. ಇದರ ಬದಲು ಲಾಭದ ಮಾತನ್ನ ಆಡುವುದು ಅಕ್ಷಮ್ಯ ಅಪರಾಧ. ಪುಸ್ತಕೋದ್ಯಮವೇ ಕಷ್ಟದಲ್ಲಿ ಇರುವಾಗ ಇಂತಹಾ ವರ್ತನೆ ಖಂಡನಾರ್ಹ. ಜೊತೆಗೆ ಮೂರು ವರ್ಷಗಳಿಂದ ಗ್ರಂಥಾಲಯ ಇಲಾಖೆ ಬಿಡುಗಡೆ ಮಾಡಬೇಕಾದ ಹಣವನ್ನ ಬಿಡುಗಡೆ ಮಾಡಿಲ್ಲವಂತೆ. ಇದು ಕೂಡ ಸರಕಾರ ಗಮನಿಸ ಬೇಕಾದ ವಿಷಯ.
ಸರಕಾರದಲ್ಲಿ ಇರುವ ನಮ್ಮ ಬಿಳಿಕಾಲರಿನ ಕೆಲವೇ ಕೆಲ ಜನ ಕನ್ನಡದ ವಿಷಯ ಬಂದಾಗ ತೊಂಚವಂಚ ಮಾಡುತ್ತಿದ್ದಾರೆ. ಕನ್ನಡಕ್ಕೆ ಆಗಬಹುದಾದ ಲಾಭವನ್ನ, ಸಿಗಬೇಕಾದ ಸೌಲಭ್ಯವನ್ನ ಕಾನೂನನ್ನ ತಿರುಚುವುದರ ಮೂಲಕ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕನ್ನಡಾಭಿಮಾನಿ ಅಧಿಕಾರಿಗಳು ಇದ್ದಾರೆ, ಆದರೆ ಇವರ ಸಂಖ್ಯೆ ಕಡಿಮೆ. ಕೆಲವರು ಉದ್ದೇಶ ಪೂರ್ವಕವಾಗಿ ಕನ್ನಡದ ಬೆಳವಣಿಗೆಗೆ ಆತಂಕವನ್ನ ತಂದೊಡ್ಡುತ್ತಿದ್ದಾರೆ ಎಂದು ಹೇಳಲಾಗಿದೆ. ನಮ್ಮ ಕನ್ನಢಾಭಿಮಾನ ಮಂತ್ರಿಗಳು ಇಂತಹವರ ಕಿವಿ ಹಿಂಡಿ ಕನ್ನಡದ ಹಿತವನ್ನ ಕಾಪಾಡ ಬೇಕಾಗಿದೆ.
'ಅಧಿಕಾರಿಗಳೇ, ಕನ್ನಡದ ಪರವಾಗಿ ನಿಲ್ಲಿ…’ ಅಂದ್ರು ನಾ ಡಿಸೋಜ
ನಿಮಗೆ ಇವೂ ಇಷ್ಟವಾಗಬಹುದು…

0 Comments