ಬೆಂಗಳೂರಿನ ಬಸವನಗುಡಿಯಲ್ಲಿ ನೆಲೆಸಿರುವ ಮಿತ್ರ, ಕಮಲಾ ನೆಹರು ಪ್ರೌಢಶಾಲೆಯಲ್ಲಿ 35 ವರ್ಷ ಸಸ್ಯಶಾಸ್ತ್ರ ಪಾಠಮಾಡಿದ ಮೇಷ್ಟ್ರು ಶೇಷಗಿರಿ ಜೋಡಿದಾರ್ Sheshagiri Jodidar ಮನೆಯಲ್ಲಿ ಇಂದು ಸಂಜೆ ನಾವೆಲ್ಲ ಕಲೆತಿದ್ದೆವು.
ಕನ್ನಡದ ಓದು ಮತ್ತು ಬರವಣಿಗೆಯಲ್ಲಿ ಆಸಕ್ತಿ ಇರುವ ಯುವಕ ಯುವತಿಯರ ಗುಂಪು, ಜಯಂತ ಕಾಯ್ಕಿಣಿ, ಪದ್ಮಪಾಣಿ ಮತ್ತು ನಾನು. We discussed almost everything under the sky. It was a great huddle, eventually turned hyde park !!

ಎಸ್ ಕೆ ಶಾಮಸುಂದರ್
ವಿಚಾರಗಳಿಗೆ ಕನ್ನಡ ಬರವಣಿಗೆಯ ವೇಷತೊಡಿಸುವ ಕೌಶಲ್ಯಗಳನ್ನು ಜಯಂತ ಕಾಯ್ಕಿಣಿ ಶನಿವಾರ ಸಂಜೆ ಬೆಂಗಳೂರಿನಲ್ಲಿ ಬಣ್ಣಿಸಿದರು. ಸ್ನೇಹಿತ ಶೇಷಗಿರಿ ಜೋಡಿದಾರ್ ಮನೆ ವರಾಂಡದಲ್ಲಿ ನಡೆದ ಅನೌಪಚಾರಿಕ ಕೂಟದಲ್ಲಿ ಮಾತಿನ ಉದ್ದಗಲಕ್ಕೂ ಹಾಸ್ಯ ಚಟಾಕಿಗಳನ್ನು ಸಿಡಿಸಿದ ಕಾಯ್ಕಿಣಿ, ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ವಿಷಯಗಳನ್ನು ಹೊರಚೆಲ್ಲಿದರು. ನಕ್ಕೂ ನಕ್ಕೂ ಸಾಕಾಯ್ತು. smile emoticon
ನವ್ಯದ ವಜ್ರಕವಚದಿಂದ ಕವಿತೆ ಬಿಡುಗಡೆಗೊಂಡ ಕಾಲಘಟ್ಟಗಳನ್ನು ಜಯಂತ ಹೇಳುತ್ತಾ ಹೋದರು. ಎ ಕೆ ರಾಮಾನುಜನ್, ಗಂಗಾಧರ ಚಿತ್ತಾಲ ಮತ್ತು ಕೆ ವಿ ತಿರುಮಲೇಶ್ ಅವರುಗಳ ಬರವಣಿಗೆ ತಮಗೆ ಸ್ಪೂರ್ತಿಯ ಸೆಲೆಯಾಯಿತೆಂದು ಉದಾಹರಣೆ ಸಮೇತ ವಿವರಿಸಿದರು. ಕುಮಟಾದ ಕಾಲೇಜಿನಲ್ಲಿ ಪಿಯೂಸಿ ಓದುವಾಗ ಹೀಗಾಯ್ತು ಎಂದರು. Hi, I love you so much ಎಂದು ಮಧ್ಯರಾತ್ರಿ ಎದ್ದು SMS ಕಳಿಸುವುದು ಕವನವಾಗಲಾರದು ಎಂದೂ ಅವರು ಅಭಿಪ್ರಾಯಪಟ್ಟರು.
ಶೇಷಗಿರಿ ಮತ್ತು ಜಯಂತ ಮತ್ತು ನಾನು ಲಾಗಾಯ್ತಿಂದ ಗೆಳೆಯರು. ಬಿಗುಮಾನ ಇಲ್ಲದ ಸಲಿಗೆ, ಎಗ್ಗಿಲ್ಲದ ನಗೆ. ಗೆಟ್ ಟುಗೆದರ್ ಗೆ ಹೋಗುವಾಗ ಬರಿಗೈಲಿ ಬಾರದ ಜಯಂತ ಇವತ್ತೂ ಕೂಡ ದಾರಿಮಧ್ಯೆ ಅಂಕಿತ ಪುಸ್ತಕ ಮಳಿಗೆಗೆ ಹೋಗಿ ಕೆವಿ ತಿರುಮಲೇಶ್ ಅವರ ಕವಿತೆಗಳ ಸಂಗ್ರಹ ಹಿಡಕೊಂಡು ಬಂದಿದ್ದರು.
ತಾವು ಬರೆದ ಪುಸ್ತಕಗಳು, ಬಯಸದೇ ಬಂದ ಕೀರ್ತಿ ಪತಾಕೆಗಳು, ಹಾಗೆ ಸುಮ್ಮನೆ ಒಲಿದು ಬಂದ ಬಿರುದು ಬಾವಲಿಗಳ ಬಗ್ಗೆ ಅಪ್ಪಿತಪ್ಪಿಯೂ, ಯಾವತ್ತೂ ಸೊಲ್ಲೆತ್ತದ ಕಾಯ್ಕಿಣಿ, ತಾವು ಮೆಚ್ಚಿದ ಕೃತಿಗಳು ಮತ್ತು ಉತ್ತಮ ಬರಹಗಾರರ ಬಗ್ಗೆ ಮುಕ್ತ ಗದ್ಯದಲ್ಲಿ ವಿವರಿಸಿದರು. ಸಾಹಿತಿಗೆ ಅಗತ್ಯವಾಗಿ ಬೇಕಾದದ್ದು ಬದುಕಿನೆಡೆಗಿನ ಗಮನ ಮತ್ತು ಮನುಷ್ಯ ಸ್ವಭಾವಗಳ ಅಧ್ಯಯನ ಎಂದರು.ಓದುಗರ ಜತೆ ಬೆರೆತರೆ ನೀರಿನಂತೆ ಬೆರೆಯಬೇಕು ಎಂದು ಅವರು ನುಡಿದರು.
ಈ ಮಧ್ಯೆ ಶೇಷಗಿರಿಯ ಪತ್ನಿ, ಲಕ್ಷ್ಮಿ ಟೀಚರ್ ಕೋಡುಬಳೆ, ತೇಂಗೋಳು, ಹಲ್ವ, ಕಾಫಿ ಸಮಾರಾಧನೆ ಮಾಡುವಲ್ಲಿ ತಲ್ಲೀರಾಗಿದ್ದರು. ಕೂಟದ ಸದಸ್ಯ ವೃಂದ ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮತ್ತು literary anecdotes ಗಳಿಗೆ ಕಿವಿ ನಿಮಿರಿಸಿಕೊಂಡು ಮರುಳಾಗಿದ್ದಾಗ ನಾನು ಕೋಡುಬಳೆ ಮತ್ತು ಕಾಫಿಗೆ ಮಾರುಹೋಗಿದ್ದೆ. ನಾನು ಹೀಗೆ. ಸಾಹಿತ್ಯದ ವಿದ್ಯಾರ್ಥಿ ಅಲ್ಲ. ಸಾಹಿತಿಯಂತೂ ಅಲ್ಲವೇ ಅಲ್ಲ.
ಯಾವುದೋ ಒಂದು ಸಂಘಟನೆ ಜಯಂತ್ ಅವರನ್ನು ಒಂದು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತಂತೆ. ಭಾಷಣ ಮುಗಿದ ನಂತರ ಸಂಘಟಕರು ಜಯಂತ್ ಅವರಿಗೆ ಒಂದು ಪ್ರಶ್ನೆ ಕೇಳಿದರಂತೆ. ” ಏನ್ ಸಾರ್ ನೀವು ತ್ರಿಕರಣಗಳ ಬಗ್ಗೆ ಮಾತಾಡಲೇ ಇಲ್ಲ, ನಿರಾಶೆ ಆಯ್ತು ” ಎಂದರಂತೆ.
ಅದಕ್ಕೆ ಜಯಂತ್ ಇದ್ದವರು ” ನೋಡ್ರಪ್ಪಾ, ಈ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನನಗೆ ಗೊತ್ತಿಲ್ರಪ್ಪ, ನನಗೆ ತಿಳಿದಿರುವುದೊಂದೆ, ಅದು ಗೋಕರ್ಣ” ಎಂದು ಉತ್ತರಿಸಿದರಂತೆ.
ಶೇಷಗಿರಿಯ ಹಳೇ ವಿದ್ಯಾರ್ಥಿ ವೃಂದ ತುಂಬಾ ದೊಡ್ಡದು. ಬೆಳೆದು ದೊಡ್ಡವರಾಗಿರುವ ಅವನ ಶಿಷ್ಯವೃಂದ ಪ್ರೀತಿಯ ಮೇಷ್ಟರಿಗೆ ತೋರಿಸುವ ಗೌರವ, ಆದರ, ಪ್ರೀತಿ ಕಂಡರೆ ನಂಗೆ ಹೊಟ್ಟೆ ಕಿಚ್ಚು ಇಣುಕಿ, ನಾನೂ ಮೇಷ್ಟರಾಗಿರಬಾರದಿತ್ತಾ ಅನಿಸತ್ತೆ, ಯಾಕೋ ಇಂದು. ಅದು ತಪ್ಪು.
ಎಲ್ಲರಿಗೆ ಎಲ್ಲವೂ ಒಲಿಯುವುದಿಲ್ಲ. ವಯೋಲಿನ್ ತಂತಿಗಳನ್ನು ಮಾತನಾಡಿಸುವ ಬೆರಳುಗಳೇ ಬೇರೆ, ಮೃದಂಗವನ್ನು ಬಡಿದೆಬ್ಬಿಸುವ ಬೆರಳು-ಅಂಗೈಗಳೇ ಬೇರೆ. ಕುರ್ಚಿ ಸಿಗದಿದ್ದರೆ ಜಮಖಾನದ ಮೇಲೆ ಕುಳಿತು ಕಚೇರಿಯನ್ನು ಆಸ್ವಾದಿಸುವುದಷ್ಟೇ ನನ್ನ ಕೆಲಸ.
ಇಲ್ಲಿ ಕೆಲವು ಚಿತ್ರಗಳನ್ನು ಅಂಟಿಸಿದ್ದೇನೆ. ಜತೆಗೆ, ಜಯಂತ್ ಓದಿದ ಕೆ ವಿ ತಿರುಮಲೇಶ್ ಅವರ ಒಂದು ಕವನವೂ ಇದೆ. ಇರ್ಲಿ. ಇವತ್ತು ನಾನು ಭೇಟಿ ಮಾಡಿದ ಹೊಸ ಜನರಿಗೆ ಹೊಸ ವರ್ಷದ ಶುಭಾಷಯಗಳು ಸಂದಾಯವಾಗುತ್ತಿದೆ. ಹೊಸಬರನ್ನೂ, ಹಳಬರನ್ನೂ ಸೇರಿಸುವ ಕೊಂಡಿಯಾಗಿರುವ Oneindia Kannada ಸೋಷಿಯಲ್ ಮೀಡಿಯ ಮಸಾಲಾ Raghavendra CV ಅವರಿಗೆ ಬಿಗ್ ಥ್ಯಾಂಕ್ಯು.
PS – ಜಯಂತ್ ಕಾಯ್ಕಿಣಿ ಫೇಸ್ ಬುಕ್ಕಿನಲ್ಲಿ ಸಿಗುವುದಿಲ್ಲ, ಮನೆಗೆ ವೃತ್ತ ಪತ್ರಿಕೆಗಳನ್ನೂ ತರಿಸುವುದಿಲ್ಲ. ಅವರ ಮಾನಸಿಕ ಆರೋಗ್ಯದ ಗುಟ್ಟು ರಟ್ಟು ಮಾಡಿದ್ದಕ್ಕೆ ನಂಗೆ ವಿಷಾದವಿಲ್ಲ smile emoticon





Sooper sir…
Awesome sir
Super programme sir, yuvapeelhigege olisi saahityada rasaayana unhisuvalli jayant kaikiniyavarige saadhya allaye? indu intaha karyakramagalha avashyakate ide.
inta programe ellarigu mind rifreshment sir…..