ದೇ. ಜವರೇಗೌಡ
ಇಂದು ದೇ.ಜ.ಗೌ ನಿಧನ
1918ರ ಜುಲೈ ೮ರಂದು ಈಗಿನ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕರೆಯಲ್ಲಿ ದೇವೇಗೌಡ-ಚನ್ನಮ್ಮ ದಂಪತಿಗಳ ಮಗನಾಗಿ ಹುಟ್ಟಿದರು. ಬಡತನವನ್ನು ಹಾಸಿಹೊದ್ದರೂ ವಿದ್ಯೆಯ ಕಡೆ ಅಪಾರವಾದ ಆಸಕ್ತಿ ಇದ್ದುದರಿಂದ ಶಾಲೆಗೆ ಸೇರಿ, ನಂತರದಲ್ಲಿ ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿ,ಮೈಸೂರಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. 1946ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ, ಕನ್ನಡ ಅಧ್ಯಾಪಕರಾದರು.
ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಕಟಣ ವಿಭಾಗದ ಕಾರ್ಯದರ್ಶಿ, ಸಹಾಯಕ ಪ್ರಾಧ್ಯಾಪಕ, ಪರೀಕ್ಷೆಗಳ ನಿಯಂತ್ರಣಾಧಿಕಾರಿ, ಪ್ರಾಧ್ಯಾಪಕರು, ವಿಭಾಗದ ಮುಖ್ಯಸ್ಥರು, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮುಂತಾದವು ಅವುಗಳಲ್ಲಿ ಕೆಲವು. 1969ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ತಮ್ಮ ಕನ್ನಡಪರವಾದ ರಚನಾತ್ಮಕ ಚಟುವಟಿಕೆಗಳನ್ನು ಆರು ವರ್ಷಗಳ ಕಾಲ ಮುಂದುವರೆಸಿದರು.(1975) ದೇ. ಜವರೇಗೌಡ ಅವರು ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದವರಲ್ಲಿ ಒಬ್ಬರು. ಸರಿಸುಮಾರು ಏಳು ದಶಕಗಳಿಂದ ವಿದ್ವತ್ತು, ಆಡಳಿತ ಮತ್ತು ಚಳುವಳಿಗಳೆಂಬ -ಮೂರು ನೆಲೆಗಳಲ್ಲಿ ಮಾಡಿರುವ ಕೆಲಸಗಳು ಅವರ ಕೊಡುಗೆಯ ಸ್ವರೂಪವನ್ನು ನಿರ್ಧರಿಸಿವೆ. ಜಾನಪದ, ಗ್ರಂಥಸಂಪಾದನೆ, ಸಾಹಿತ್ಯವಿಮರ್ಶೆ, ಭಾಷಾಂತರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗಾಗಿ ಹತ್ತಾರು ಮಹತ್ವದ ಯೋಜನೆಗಳನ್ನು ರೂಪಿಸಿದ, ಸಂಪನ್ಮೂಲಗಳನ್ನು ಸೃಷ್ಟಿಸಿ, ಅವನ್ನು ಯಶಸ್ವಿಯಾಗಿ ನಿರ್ವಹಿಸಿದ ದೇಜಗೌರ ಸಾಧನೆ ಅನುಪಮವಾದುದು.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ, ಅವರು ಕನ್ನಡದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಮಾಡಿದ್ದಾರೆ, ನಿವೃತ್ತಿಯ ನಂತರವೂ ಅಂತಹುದೇ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ದೇಜಗೌ ಅವರು ಪ್ರಾರಂಭಿಸಿದ ಮತ್ತು ಯಶಸ್ವಿಯಾಗಿ ನಿರ್ವಹಿಸಿದ ‘ಕನ್ನಡ ವಿಶ್ವಕೋಶ’, ‘ವಿಷಯ ವಿಶ್ವಕೋಶ-ಕರ್ನಾಟಕ’, ‘ಇಂಗ್ಲಿಷ್-ಕನ್ನಡ ನಿಘಂಟು’, ‘ಸಮಗ್ರ ಕನ್ನಡ ಸಾಹಿತ್ಯಚರಿತ್ರೆ ‘, ‘ಕನ್ನಡ ಛಂದಸ್ಸಿನ ಇತಿಹಾಸ’ ಮುಂತಾದ ಕೆಲವು ಮುಖ್ಯವಾದ ಯೋಜನೆಗಳನ್ನು ಇಲ್ಲಿ ಹೆಸರಿಸಬಹುದು. ಕರ್ನಾಟಕಲ್ಲೇ ಮೊದಲಬಾರಿಗೆ ‘ಜಾನಪದ ವಸ್ತುಸಂಗ್ರಹಾಲ’ಯವನ್ನು ಸ್ಥಾಪಿ¹ ಜಾನಪದ ಅಧ್ಯಯನಕ್ಕೆ ತಳಹದಿಯನ್ನು ರೂಪಿಸಿಕೊಟ್ಟಿದ್ದು ಅವರ ಮುಖ್ಯವಾದ ಸಾಧನೆಗಳಲ್ಲಿ ಒಂದು. ಅವರು ವಿಶ್ವವಿದ್ಯಾಲಯದಲ್ಲಿ ಅನೇಕ ಹೊಸ ವಿಭಾಗಗಳನ್ನು ಪ್ರಾರಂಭಿಸಿದರು. ಈಗಲೂ ‘ಕುವೆಂಪು ವಿದ್ಯಾವರ್ಧಕ ಟ್ರಸ್ಟ್’ ಮೂಲಕ ಕನ್ನಡಪರವಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಜವರೇಗೌಡರು, ವಿವಿಧ ಪ್ರಕಾರಗಳಲ್ಲಿ 135 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ.ಗ್ರಂಥಸಂಪಾದನೆ ಅ. ಹರಿಹರನ ‘ಗಿರಿಜಾಕಲ್ಯಾಣ ಮಹಾಪ್ರಬಂಧಂ’, 1951
ದೇ.ಜವರೇಗೌಡರು ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ೧೯೧೮, ಜುಲೈ ೮ರಂದು ದೇವೇಗೌಡ, ಚೆನ್ನಮ್ಮ ದಂಪತಿಗಳಿಗೆ ಜನಿಸಿದರು. ಇವರು ಕುವೆಂಪು ರವರ ಮಾರ್ಗದರ್ಶನದಿಂದ ಅವರ ಶಿಷ್ಯರಾಗಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿ ಕನ್ನಡದ ಹೆಸರಾಂತ ಗದ್ಯ ಪ್ರಕಾರ ಲೇಖಕರಲ್ಲಿ ಒಬ್ಬರೆನಿಸಿ ಕೊಂಡಿದ್ದಾರೆ. ದೇಜಗೌ ಎಂಬ ಸಂಕ್ಷಿಪ್ತ ನಾಮದಿಂದಲೇ ಸಾಹಿತ್ಯವಲಯದಲ್ಲಿ ಪ್ರಖ್ಯಾತರಾಗಿದ್ದಾರೆ. ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನವನ್ನು ದೊರಕಿಸಿಕೊಡುವ ಪ್ರಯತ್ನದಲ್ಲಿ ಇವರ ಪಾತ್ರ ಹಿರಿದು. ಕನ್ನಡ ಆಡಳಿತ ಭಾಷೆಯಾಗಬೇಕು, ಕನ್ನಡ ಮಾಧ್ಯಮವಾಗಬೇಕು, ಕನ್ನಡ ಸಂಸ್ಕೃತಿ ಇತಿಹಾಸ, ಕಾವ್ಯ ಪರಂಪರೆಯಿಂದ ಕನ್ನಡಿಗರು ಚೈತನ್ಯ ತುಂಬಿಕೊಂಡು ರಾಷ್ಟ್ರದಲ್ಲಿ ತಲೆಯೆತ್ತಿ ಮೆರೆಯಬೇಕು, ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು.
ಇವರು ಸ್ಥಾಪಿಸಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಇವರ ಕನಸಿನ ಕುಡಿ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳೆರಡರಲೂ ಕೃತಿ ರಚನೆ ಮಾಡಿದ್ದಾರೆ. ಕುವೆಂಪು ಅವರ ಮಾನಸ ಪುತ್ರರೆಂದು ಇವರನ್ನು ಕರೆಯುತ್ತಾರೆ.ಇವರು ಸುಮಾರು ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರು ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. ಇವರ ಭಾಷಾಂತರಗಳಲ್ಲಿ ‘ಪುನರುತ್ಥಾನ’ ಪ್ರಮುಖವಾದುದು. ಇದಕ್ಕೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ ದೊರಕಿದೆ. ಟಾಲ್ ಸ್ಟಾಯ್ ಅವರ ‘ವಾರ್ ಅಂಡ್ ಪೀಸ್’ ಕೃತಿಯನ್ನು ‘ಯುದ್ದ ಮತ್ತು ಶಾಂತಿ’ ಎಂಬ ಹೆಸರಿನಲ್ಲಿ ತರ್ಜುಮೆ ಮಾಡಿದ್ದಾರೆ. ಅಲ್ಲದೆ ಇವರು ‘ಕಬ್ಬಿಗರ ಕಾವ’, ‘ನಳಚರಿತ್ರೆ’, ‘ರಾಮನಾಥ ಚರಿತೆ’, ‘ಲೀಲಾವತಿ ಪ್ರಬಂಧಂ’ ಮೊದಲಾದ ಗ್ರಂಥಗಳನ್ನು ಶಾಸ್ತ್ರೀಯವಾಗಿ
ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ಹತ್ತಕ್ಕೂ ಹೆಚ್ಚು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ ‘ಕುಲಪತಿಯ ಭಾಷಣಗಳು’, ‘ಕುಲಪತಿಯ ಪತ್ರಗಳು’ ಮುಂತಾದ ಆರು ಸಂಪುಟಗಳ ಬರಹವನ್ನು ಹೊರತಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬೆಳವಣಿಗೆಯಲ್ಲಿ ಇವರ ಪಾತ್ರ ತುಂಬಾ ಹಿರಿದಾದುದು. ೧೯೬೬ರಲ್ಲಿ ಜಾನಪದವನ್ನು ಕನ್ನಡತರಗತಿಗಳಲ್ಲಿ ವಿಶೇಷ ಅಧ್ಯಯನವಾಗಿ ಅಳವಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ಜಾನಪದ ವಸ್ತು ಸಂಗ್ರಹಾಲಯದ ಅಭಿವೃದ್ದಿಗೆ ನೆರವಾದವರು. ಇವರ ಜಾನಪದ ಸೇವೆ ಗಮನಿಸಿ ಕರ್ನಾಟಕ ವಿಶ್ವವಿದ್ಯಾನಿಲಯದ ಮೂರನೇ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಿತು. ಕನ್ನಡಕ್ಕೆ ಎಲ್ಲೆ ಸಮಸ್ಯೆಗಳು ಉದ್ಬವಿಸಿದರೂ ಈ ಇಳಿವಯಸ್ಸಿನಲ್ಲೂ ಹಾಜರಾಗುತ್ತಾರೆ. ಅವರ ಕನ್ನಡ ಪ್ರೇಮ, ಪುಸ್ತಕ ಪ್ರೀತಿ ಅನನ್ಯ, ಅವರ್ಣನೀಯ.
ಕೃತಿಗಳು
- ಸಾಹಿತ್ಯ
- ನಯಸೇನನ ‘ಧರ್ಮಾಮೃತ ಸಂಗ್ರಹ’, 1957
- ಲಕ್ಷ್ಮೀಶನ ‘ಜೈಮಿನೀ ಭಾರತ’, 1959
- ಕನಕದಾಸರ ‘ನಳಚರಿತ್ರೆ’, 1965
- ಆಂಡಯ್ಯನ ‘ಕಬ್ಬಿಗರ ಕಾವ’, 1964
- ಚಿಕ್ಕುಪಾಧ್ಯಾಯನ ‘ರುಕ್ಮಾಂಗದ ಚರಿತ್ರೆ’, 1982
- ನೇಮಿಚಂದ್ರನ ‘ಲೀಲಾವತೀ ಪ್ರಬಂಧ’, (ಕೆ.ವೆಂಕಟರಾಮಪ್ಪನವರೊಂದಿಗೆ)
- ಜಾನಪದ:
- ‘ಜಾನಪದ ಅಧ್ಯಯನ’, 1976
- ‘ಜಾನಪದ ಸೌಂದರ್ಯ’, 1977
- ‘ಜಾನಪದ ವಾಹಿನಿ’, 1983
- ‘ಜನಪದ ಗೀತಾಂಜಲಿ’, 1978, (ಸಂಪಾದಿತ ಕೃತಿ)
- ಭಾಷಾಂತರಗಳು
- ‘ಹಮ್ಮು ಮತ್ತು ಬಿಮ್ಮು,’ (ಜೇನ್ ಆಸ್ಟಿನ್ ಅವರ ಪ್ರೈಡ್ ಅಂಡ್ ಪ್ರಿಜುಡೀಸ್)
- ‘ನೆನಪು ಕಹಿಯಲ್ಲ’, (ಕೃಷ್ಣಾ ಹಥೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್)
- ‘ಆನಾ ಕೆರಿನಿನಾ’ (ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿ)
- ‘ಯುದ್ಧ ಮತ್ತು ಶಾಂತಿ’, (ಲಿಯೋ ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್)
- ‘ಪುನರುತ್ಥಾನ’ (ಲಿಯೋ ಟಾಲ್ ಸ್ಟಾಯ್ ಅವರ ರಿಸರೆಕ್ಷನ್)
- ಸಾಹಿತಿಗಳ ಸಂಗದಲ್ಲಿ
- ಹೋರಾಟದ ಬದುಕು (ಆತ್ಮಕಥೆ)
- ಮೋತಿಲಾಲ್ ನೆಹರೂ
- ರಾಷ್ಟ್ರಕವಿ ಕುವೆಂಪು
- ತೀನಂಶ್ರೀ
- ರಾಮಾಯಣ ದರ್ಶನಂ ವಚನ ಚಂದ್ರಿಕೆ
- ಕುವೆಂಪು ಸಾಹಿತ್ಯದ ಮೇಲೆ ಹೆಚ್ಚು ಲೇಖನಗಳನ್ನು, ಕೃತಿಗಳನ್ನು ಬರೆದಿದ್ದಾರೆ.
- ಜಾನಪದ ಅಧ್ಯಯನ
- ಶ್ರೀ ಬಸವೇಶ್ವರರು
ಪ್ರಶಸ್ತಿ/ಪುರಸ್ಕಾರಗಳು
- ದೇ. ಜ. ಗೌ. ಅವರು ಸರ್ಕಾರ ಮತ್ತು ಸಾರ್ವಜನಿಕರಿಂದ ಅನೇಕ ಪ್ರಶಸ್ತಿಗಳನ್ನೂ ಸನ್ಮಾನಗಳನ್ನೂ ಪಡೆದಿದ್ದಾರೆ.
- ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,
- ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,
- ತಿರುವನಂತಪುರದ ‘ದ್ರವಿಡಿಯನ್ ಲಿಂಗ್ವಿಸ್ಟಿಕ್ಸ್ ಅಸೋಷಿಯೇಶನ್’ನ ಸೀನಿಯರ್ ಫೆಲೋ ಪ್ರಶಸ್ತಿ,
- ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ
- ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ
- ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ
- ೨೦೦೮ರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ೨೦೧೦ರಲ್ಲಿ ಘೋಷಿಸಿದೆ.
- ಅವರು 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ‘ಅಂತಃಕರಣ’, ‘ರಸಷಷ್ಠಿ’, ‘ದೇಜಗೌ-ವ್ಯಕ್ತಿ ಮತ್ತು ಸಾಹಿತ್ಯ’, ‘ಅಪೂರ್ವ’ ಮತ್ತು ‘ನಮ್ಮ ನಾಡೋಜ’ಗಳು ಅವರಿಗೆ ಸಂದಿರುವ ಅಭಿನಂದನ ಗ್ರಂಥಗಳು.
- ಕರ್ನಾಟಕ ವಿಶ್ವವಿದ್ಯಾನಿಲಯ ೧೯೭೫ ರಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿತು.
- ಕರ್ನಾಟಕ ಸರ್ಕಾರ ೨೦೧೦ ರಲ್ಲಿ ೨೦೦೮ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಕೃಪೆ: ವಿಕಿಪೀಡಿಯ
ಪ್ರೊ. ದೇ.ಜ.ಗೌ. ಇನ್ನಿಲ್ಲವೆಂದು ತಿಳಿದು ತುಂಬಾ ದುಃಖವಾಯಿತು. ಕನ್ನಡ ರಿನೇಸೆನ್ಸ್-ನ ಒಂದು ಕೊಂಡಿಯಂತೆ ಇದ್ದವರು ಅವರು. ಒಂದು ಸಂಸ್ಥೆ ಮಾಡಬಹುದಾದ ಕೆಲಸಗಳನ್ನು ಒಬ್ಬರೇ ಮಾಡಿದರು–ಸಂಸ್ಥೆಗಳನ್ನು ಕಟ್ಟಿದರು, ಬೆಳೆಸಿದರು. ಯಾವುದನ್ನೂ ಮುರಿದವರಲ್ಲ. ಟಾಲ್-ಸ್ಟಾಯಿಯ ಮೂರು ಮಹಾ ಕಾದಂಬರಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದರು ಎಂಬುದು ನನಗೆ ಗೊತ್ತಿರಲಿಲ್ಲ. ನಾವೆಲ್ಲ ಚೂರು ಪಾರು ಅನುವಾದಿಸಿ ಬೀಗಿಕೊಳ್ಳುತ್ತೇವೆ. ದೇ.ಜ.ಗೌ. ಸದ್ದುಗದ್ದಲವಿಲ್ಲದೆ ಕೆಲಸ ಮಾಡುತ್ತ ಇದ್ದರು. ನನಗೆ ಅವರ ಹತ್ತಿರದ ಪರಿಚಯ ಇಲ್ಲದೆ ಇದ್ದರೂ, ಅವರ ಕುರಿತು ಸದಾ ಗೌರವ ಇಟ್ಟುಕೊಂಡಿದ್ದವನು ನಾನು. ಸದಾ ಹಸನ್ಮುಖಿಯಾದ ಅವರನ್ನು ಒಮ್ಮೆ ಕಂಡವರು ಮರೆಯಲಾರರು ಎನ್ನುವುದು ನನ್ನ ನೆನಪಿನಲ್ಲಿದೆ. ಅವರ ಬದುಕು ಇತರ ಕನ್ನಡಿಗರಿಗೆ ಮಾದರಿಯಾಗಲಿ ಎಂದು ಆಶಿಸುತ್ತೇನೆ.
ಕೆ.ವಿ.ತಿರುಮಲೇಶ್
ನಾನು ಮೈಸೂರಿನಲ್ಲಿ ಎಂಎ ಕನ್ನಡ ತರಗತಿಗೆ ಸೇರಿ ಕೊಂಡಾಗ ಅವರಾಗಲೇ ನಿವೃತ್ತಿ ಯಾಗಿದ್ದರು. ಅಲ್ಲಲ್ಲಿ ಸಬೆ ಸಮಾರಂಭಗಳಲ್ಲಿ ಅವರನ್ನು ನೋಡಿದ ನೆನಪು.ನಾನು ಡಿ.ಕೆ.ಭೀಮಸೇನರಾಯರ ಸ್ಮರಣ ಸಂಚಿಕೆ ಪಾದಿಸುತ್ತಿದ್ದಾಗ ಲೇಖನ ಕೇಳಿದರ ತಕ್ಷಣ ಕಳಸಿದ ಸಹೃದಯ ಅವರದು.
ಅವರಿಲ್ಲವೆನ್ನುವದು ವಿಷಾದ ತಂದರೂ,ಅವರ ಬದುಕು ಬರಹ ಅಮರ ಮತ್ತು ಅನುಕರಣೀಯ.