ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಎಚ್ ಎಲ್ ಕೇಶವಮೂರ್ತಿ ಇನ್ನಿಲ್ಲ

ಹಿರಿಯ ಸಾಹಿತಿ, ಪತ್ರಕರ್ತ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರು ಇಂದು ರಾತ್ರಿ 8.40ರಲ್ಲಿ ನಿಧನರಾದರು.ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಅಪಾರ ಬಂಧುಬಳಗ,ಸಾಹಿತ್ಯ ಅಭಿಮಾನಿಗಳನ್ನು ಅಗಲಿದ್ದಾರೆ

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12ಗಂಟೆ ಮಂಡ್ಯದ ಸ್ವರ್ಣಸಂದ್ರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವೈಚಾರಿಕ, ರಾಜಕೀಯ ವಿಡಂಬನೆಗಳಿಗೆ ಹೆಸರಾದ ಕೇಶವಮೂರ್ತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯಲ್ಲಿ ೧೯೩೯ರ ಡಿಸೆಂಬರ್ ೨೮ ರಂದು. ತಂದೆ ಎಚ್.ಎಂ. ಲಿಂಗೇಗೌಡ, ತಾಯಿ ಚೆನ್ನಮ್ಮ.

ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸ ಬೆಳ್ಳೂರು, ನಾಗಮಂಗಲ, ಮೇಲುಕೋಟೆಯಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿಎಸ್ಸಿ ಪದವಿ, ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಪಡೆದ ಎಂ.ಇ. ಪದವಿಗಳು.

ಓದಿದ್ದು ಎಂಜನಿಯರಿಂಗ್ ಆದರೂ ಹವ್ಯಾಸವಾಗಿ ರೂಢಿಸಿಕೊಂಡದ್ದು ವಿಡಂಬನೆ, ಹಾಸ್ಯ, ವ್ಯಂಗ್ಯ, ಅಣಕು. ನಾಡಿನ ಪ್ರಸಿದ್ಧ ಪತ್ರಿಕೆಗಳ ಮೂಲಕ ಯಾರ ಮನಸ್ಸಿಗೂ ನೋವಾಗದಂತೆ ಹಾಸ್ಯದ ಸವಿಯುಣಿಸಿದರು.

ಇವರು ಬರೆದ ಹಾಸ್ಯ ಬರೆಹಗಳೆಲ್ಲಾ ಹಲವಾರು ಸಂಕಲನಗಳಾಗಿ ಹೊರಬಂದಿವೆ. ನಿನ್ಯಾಕೋ ನಿನ್ನ ಹಂಗ್ಯಾಕೋ ಮಾವ?, ಎಂಗಾರ ಟಿಕೆಟ್ ಕೊಡಿ, ಹರಕುತುಟಿ ಮಹಾತ್ಮೆ, ಇಸ್ಪೀಟ್ ನ್ಯಾಯ, (ಅ) ನೀತಿಕಥೆಗಳು, ಹನುಮ ನಿನ್ನ ನಾಮ ಒಂದೇ, ಥೂ ! ಹಲ್ಕಾ!! ಮುಂತಾದ ನಗೆ ಬರೆಹ ಸಂಕಲನಗಳು; ಗೌರವಾನ್ವಿತ ದಗಾಕೋರರು, ಗಾಂಧಿ ಅವತ್ತು ಹುಟ್ಟಬಾರದಿತ್ತು! ದೇವರುಗಳ ಟೈಮೇ ಸರಿಯಿಲ್ಲ,

ಪಾತಕಿಯೇ ಪರಮಾತ್ಮ ಮುಂತಾದ ವೈಚಾರಿಕ ವಿಡಂಬನೆಗಳ ಜೊತೆಗೆ ೨೦೧೧ ರಲ್ಲಿ ಆಯ್ದ ಬರಹಗಳ ಸಂಕಲನ ‘ಟೆಸ್ಟ್ ಆಫ್.ಎಚ್.ಎಲ್. ಕೇಶವಮೂರ್ತಿ’ ಮತ್ತು ‘ಪುಗಸಟ್ಟೆ ಪಾರಾಯಣ’ ಕೃತಿಗಳು ಬಿಡುಗಡೆಗೊಂಡಿವೆ. ಬರೆದುದಷ್ಟೇ ಅಲ್ಲದೆ ಸಂಪಾದಿಸಿದ ಕೃತಿಗಳು- ‘ಕನ್ನಡದಲ್ಲಿ ವಿನೋದ ಸಾಹಿತ್ಯ’ (ಕಾಲು ಶತಮಾನದ ವಿನೋದ ಸಾಹಿತ್ಯ – ಪ್ರೊ.ಅ.ರಾ. ಮಿತ್ರ ಮತ್ತು ಪ್ರೊ. ಕೆ.ನ.ಶಿವತೀರ್ಥನ್‌ರೊಡನೆ), ‘ಹಾಸ್ಯಕಸ್ತೂರಿ’ (ನಾ. ಕಸ್ತೂರಿಯವರ ಬರೆಹಗಳು – ಪ್ರೊ. ಕೆ.ಬಿ. ಪ್ರಸಾದರೊಡನೆ) ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ‘ವಿನೋದ ಸಾಹಿತ್ಯ – ೧೯೯೬’. ವೈವಾವೋಸಿ (ನಾಟಕ), ಹಿತ್ತಲಗಿಡವೇ ಮದ್ದು, ಯಾರದು ತಪ್ಪು?, ಕರಿನಾಯಿ ಸತ್ತಾಗ ಮುಂತಾದ ೧೨ ಕೃತಿಗಳು – ನವಸಾಕ್ಷಕರಿಗಾಗಿ ರಚಿತವಾದವುಗಳು.

 

‍ಲೇಖಕರು avadhi

30 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading