ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಿಡು:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ!


-ರಾಘವೇಂದ್ರ ಜೋಶಿ

ಬೆಳಗಿನ ಜಾವದ ಎರಡನೇ ಪ್ರಹರವಿರಬೇಕು.

ಭರ್ರೆನ್ನುವ ಗಾಳಿ.ಇತ್ತ ಗುಡಿಸಲೂ ಅನ್ನಲಾಗದ ಅತ್ತ ಅರಮನೆಯಂದೂ ಕರೆಯಲಾಗದಂಥ ಮನೆಯದು.

ಆ ಮನೆಯ ಪ್ರತಿಯೊಂದು ಕಿಟಕಿಗಳಿಗೆ ರೇಷ್ಮೆಯ ಪರದೆಗಳನ್ನು ಇಳಿಬಿಡಲಾಗಿದೆ.ಅವುಗಳ ಕೆಳಅಂಚಿಗೆ

ಚಿಕ್ಕ ಚಿಕ್ಕ ಬೆಳ್ಳಿ ಲೋಹದ ಗಂಟೆಗಳನ್ನು ಸೇರಿಸಿ ಕಸೂತಿ ಮಾಡಲಾಗಿದೆ.ಅದಕ್ಕೆ ಇರಬೇಕು:ಅವೆಲ್ಲ

ಗಾಳಿಯ ಹೊಡೆತಕ್ಕೆ ಪಟಪಟ ಅಂತ ಹೊಡೆದುಕೊಳ್ಳುತ್ತಿಲ್ಲ.ಬದಲಾಗಿ ರಾಜ ಗಾಂಭೀರ್ಯದಿಂದ ತಲೆ

ಅಲ್ಲಾಡಿಸುತ್ತಿವೆ.ಅಂಥದೊಂದು ಮನೆಯೊಡತಿಯಾದ ಆ ಸ್ಫುರದ್ರೂಪಿ ಹೆಂಗಸು ತನ್ನ ಶಯ್ಯಾಗೃಹದಲ್ಲಿ

ಒಂದೇ ಸಮ ಶತಪಥ ಹಾಕುತ್ತಿದ್ದಾಳೆ; ಅತೃಪ್ತ ಆತ್ಮದಂತೆ.

ಆಕೆ ಪಾಂಚಾಲಿ!

* * *

“ರಾಣೀ..ರಾಣೀ..”

ಏದುಸಿರಿನಿಂದ ಒಂದೇ ಸಮ ಕಿರುಚುತ್ತ ಓಡಿ ಬರುತ್ತಿದ್ದ ಚಿತ್ರಸೇನೆ ಎಂಬ ದಾಸಿಯ ಕೂಗು ಕೇಳುತ್ತಲೇ

ಪಾಂಚಾಲಿಯ ಕಾಲುಗಳು ಸ್ತಬ್ದಗೊಳ್ಳುತ್ತವೆ.ಎದೆಯೆಲ್ಲ ಡವಡವ.ಅದೆಂಥ ಸುದ್ದಿ ತಂದಿರಬಹುದು ಈ ಚಿತ್ರಸೇನೆ?

ಮಹಾಭಾರತ ಯುದ್ಧವಂತೂ ಮೊನ್ನೆಯೇ ಮುಗಿದುಹೋಗಿದೆ.ಕೌರವರ ಪೈಕಿ ಒಂದೇ ಒಂದು ನರಪಿಳ್ಳೆಯೂ ಕೂಡ

ಬದುಕಿಲ್ಲ.ಇನ್ನು ಬದುಕುಳಿದಿರಬಹುದಾದ ದುಷ್ಟ ದುರ್ಯೋಧನ ಯುದ್ಧರಂಗದಿಂದಲೇ ಓಡಿ ಹೋಗಿದ್ದಾನೆ.

ಇಲ್ಲದಿದ್ದರೆ ಇಷ್ಟೊತ್ತಿಗೆ ಆ ಕೆಟ್ಟ ಹುಳವನ್ನು ನನ್ನ ಭೀಮ ಯಾವಾಗಲೋ ನೊರೆದು ಹಾಕಿರುತ್ತಿದ್ದ.

“ರಾಣೀ..ರಾಣೀ..”

ಚಿತ್ರಸೇನೆಯ ಮತ್ತೊಂದು ಸುತ್ತಿನ ಕೂಗು ಪಾಂಚಾಲಿಯ ಯೋಚನಾ ಲಹರಿಯನ್ನು ಕತ್ತರಿಸುತ್ತದೆ.

ಆಕೆ ಅಸಹನೆಯಿಂದ ತಲೆ ಕೊಡವಿಕೊಳ್ಳುತ್ತ ದಾಸಿಯೆಡೆಗೆ ಏನು ಎಂಬಂತೆ ನೋಡುತ್ತಾಳೆ.

“ಘಾತವಾಯಿತು ರಾಣೀ..ಘಾತವಾಯಿತು.. ಯುದ್ಧರಂಗದಿಂದ ಓಡಿ ಹೋಗಿದ್ದ ದುರ್ಯೋಧನ ಮತ್ತು ಭೀಮಸೇನರ

ಮಧ್ಯೆ ಭೀಕರ ಯುದ್ಧವಾಗುತ್ತಿದೆ.ಕೃಷ್ಣ ಹಾಗೂ ಪಾಂಡವರ ಬೈಯ್ಗುಳ,ಹೀಯಾಳಿಕೆ ಸಹಿಸಲಾಗದೇ

ಆ ದುರ್ಯೋಧನ ವೈಶಂಪಾಯನ ಸರೋವರದಿಂದ ಮೇಲೆದ್ದು ಬಂದನಂತೆ. ಆತನ ಮುಖದಲ್ಲೀಗ ಸಾವಿನ

ಭೀತಿಯೇ ಕಾಣಿಸುತ್ತಿಲ್ಲ. ಹೊಡೆತ ಬಿದ್ದಷ್ಟೂ ಆತ ಹೆಚ್ಚೆಚ್ಚು ಉತ್ಸಾಹಿತನಾಗುತ್ತಿದ್ದಾನೆ. ಅವರಿಬ್ಬರ ಸುತ್ತಲೂ

ಕದನಧೂಳು ಆವರಿಸಿರುವದರಿಂದ ಏನೂ ಸರಿಯಾಗಿ ಕಾಣಿಸುತ್ತಿಲ್ಲ.ಭೀಮಸೇನರು ಯಾಕೋ ಕೊಂಚ

ಬಳಲಿದಂತೆ ಕಾಣಿಸುತ್ತಿದ್ದಾರೆ..”

ದಾಸಿಯ ಕೊನೆಯ ಮಾತು ಕೇಳುತ್ತಿದ್ದಂತೆಯೇ ಪಾಂಚಾಲಿ ಕ್ರೋಧಿತಳಾಗುತ್ತಾಳೆ. ಆಕೆಯ ಮಾತಿನಲ್ಲಿ

ದುರ್ಯೋಧನನ ಬಗ್ಗೆ ಕೊಂಚ ಒಲವಿರುವದನ್ನು ಸಹಿಸಲಾಗದೇ ರಪ್ಪಂತ ಚಿತ್ರಸೇನೆಯ ಕೆನ್ನೆಗೆ

ಬಾರಿಸುತ್ತಾಳೆ.

“ರಂಡೇ, ನನ್ನ ಮನೆಯ ಅನ್ನ ತಿಂದು ಶತ್ರುವಿನ ಸ್ತುತಿ ಮಾಡಲು ನಾಚಿಕೆಯಾಗುವದಿಲ್ಲವೇ? ತೊಲಗಾಚೆ

ಇಲ್ಲಿಂದ..”

ದಾಸಿ ಅಲ್ಲಿಂದ ಹೋದ ಬಳಿಕ ಪಾಂಚಾಲಿಗೆ ಅವಳ ಬಗ್ಗೆ ಪಿಚ್ಚೆನ್ನಿಸುತ್ತದೆ. ಛೇ,ಎಷ್ಟು ಒಳ್ಳೆಯ ಹುಡುಗಿ ಈ ಚಿತ್ರಸೇನೆ!

ಚಿಕ್ಕಂದಿನಿಂದ ನನ್ನೊಂದಿಗೇ ಬೆಳೆದವಳು. ಕೇವಲ ನನಗಾಗಿ ಅಪ್ಪ ದ್ರುಪದನ ಆಸ್ಥಾನದಿಂದ ಓಡೋಡಿ ಬಂದವಳು.

ಸುಖಾಸುಮ್ಮನೆ ಅವಳನ್ನು ಬೈದುಬಿಟ್ಟೆ. ಇನ್ನು ನನ್ನ ಭೀಮನಿಗೆಂಥ ಭಯ? ಆತನ ವೀರ್ಯ ಎಂಥದೆಂಬುದು

ನನಗೆ ಗೊತ್ತಿಲ್ಲವಾ?

ಓಹ್ ಭೀಮ..ನನ್ನ ಭೀಮ!

ಹಾಗಂತ ಯೋಚಿಸುತ್ತಿದ್ದ ಪಾಂಚಾಲಿಗೆ ಇದ್ದಕ್ಕಿದ್ದಂತೆ ಭೀಮನ ಮೇಲಿನ ಪ್ರೀತಿ ಇಮ್ಮಡಿ,ನೂರ್ಮಡಿಯಾಗುತ್ತಿರುವಂತೆ

ಭಾಸವಾಗುತ್ತದೆ. ಇಲ್ಲ,ಇಲ್ಲ.ಆತನಿಗೇನೂ ಆಗುವದಿಲ್ಲ.ಯಾಕೆಂದರೆ ಅವನೇ ತಾನೇ ನನ್ನ ನಿಜವಾದ ಗಂಡಸು?

ಉಳಿದವರೆಲ್ಲ ನನ್ನ ಪಾಲಿಗೆ ಕೇವಲ ಗಂಡಂದಿರು.ಆ ಮಾತನ್ನು ಕೃಷ್ಣನೆದುರಿಗೆ ಯಾವತ್ತೋ ಹೇಳಿದ್ದೆ:ಆವತ್ತು

ಈ ಕೃಷ್ಣ ಎಂಥದೋ ನಗೆ ಬೀರಿ ಹೊರಟು ಹೋಗಿದ್ದ. ಇಷ್ಟಕ್ಕೂ ನಾನು ಹಾಗೆ ಹೇಳಿದ್ದರಲ್ಲಿ ತಪ್ಪೇನಿದೆ?

ದಿನದ ಮೂರೂ ಹೊತ್ತು ಇಡೀ ಲೋಕಕ್ಕೆಲ್ಲ ಧರ್ಮಬೋಧನೆ ಮಾಡುವ ಈ ಧರ್ಮರಾಯನಿಗೆ ಜೂಜಾಟದಲ್ಲಿ

ಸ್ವಂತ ಹೆಂಡತಿಯನ್ನೇ ಪಣಕ್ಕಿಡುವದು ಶುದ್ಧ ಅಧರ್ಮವೆಂದು ಯಾಕೆ ಗೊತ್ತಾಗಲಿಲ್ಲ? ಕೌರವನ ತುಂಬಿದ

ಆಸ್ಥಾನದಲ್ಲಿ ಹಾಡುಹಗಲೇ ನನ್ನನ್ನು ವೇಶ್ಯೆಯನ್ನಾಗಿಸಲು ಕುಮ್ಮಕ್ಕು ನೀಡಿದ ಈ ಧರ್ಮರಾಯನನ್ನು ನಾನು ಅದ್ಯಾವ

ಮುಖದಿಂದ ಸ್ವಾಗತಿಸಬಹುದಿತ್ತು? ಆವತ್ತು ಅದೆಂಥ ಸಿಟ್ಟಿತ್ತು ಈ ಭೀಮನ ಕಣ್ಣುಗಳಲ್ಲಿ. ಅದುರುತ್ತಿದ್ದ ತುಟಿಗಳನ್ನು

ಕಚ್ಚಿಹಿಡಿದು ಸ್ವಂತ ಅಣ್ಣನ ಕೈಗಳನ್ನೇ ಕತ್ತರಿಸಲು ಮುಂದಾಗಿದ್ದ!

ಆದರೆ ಅರ್ಜುನ ಅಡ್ಡ ಬಂದಿದ್ದ.ಎಷ್ಟಾದರೂ ಧರ್ಮರಾಯನ ಪಡಿಯಚ್ಚು ತಾನೇ?ಯಾವಾಗ ನೋಡಿದರೂ ಕನ್ಯೆಯರ

ಹಿಂದೆ ಓಡುತ್ತಲೋ,ತನ್ನ ಶತ್ರುಗಳ ನೈಪುಣ್ಯತೆಯ ಬಗ್ಗೆ ಮತ್ಸರ ಕಾರುತ್ತಲೋ ಅರ್ಧಜೀವನ ಮುಗಿಸಿದ ಈ ಅರ್ಜುನ

ಯಾವತ್ತು ತನ್ನೊಂದಿಗೆ ಪ್ರೀತಿಯ ಮಾತುಗಳನ್ನಾಡಿದ್ದ?

ಇನ್ನು ನಕುಲ-ಸಹದೇವರೆಂಬ ಅವಳಿಗಳೋ:ಹೆಂಡತಿಯೊಂದಿಗೆ ಪ್ರೇಮಿಸಬೇಕೆಂದರೂ ಕೂಡ,

“ಅಣ್ಣ,ನಮಗೆ ಆಶೀರ್ವದಿಸು..” ಎಂದು ಬೇಡಿಕೊಳ್ಳುವಂಥ ಶೂರಾಗ್ರರು!

ಅದ್ಯಾವ ಪಾಪ ಮಾಡಿದ್ದೆನೋ, ಈ ಕುಂತಿಯೆಂಬ ಮಹಾತಾಯಿ ಇವರೆಲ್ಲರಿಗೂ ನನ್ನನ್ನು ಸೀರೆಯಂತೆ ಹರಿದು ಹಂಚಿಬಿಟ್ಟಳು.

ಆದರೆ ನನ್ನ ಪುಣ್ಯ,ಕೌರವರಂತೆ ಇವರೂ ನೂರು ಜನರಿದ್ದರೆ ಆ ಇಡೀ ಗುಂಪನ್ನೆಲ್ಲ ನನ್ನ ತಲೆಗೆ ಕಟ್ಟುತ್ತಿದ್ದಳೋ ಏನೋ..

ಆದರೆ ಒಂದಂತೂ ನಿಜ:ಇವತ್ತಿಗೂ ಇವರೆಲ್ಲರ ಪೈಕಿ ನಾನು ಅಷ್ಟಿಷ್ಟು ಗೌರವಿಸುವ ಮನುಷ್ಯನೆಂದರೆ ಅದು ಅರ್ಜುನ ಮಾತ್ರ.

ಯಾಕೆಂದರೆ ಆವತ್ತು ಇದೇ ಅರ್ಜುನ ಮತ್ಸ್ಯಯಂತ್ರ ಹೊಡೆದು ಉರುಳಿಸಿದ್ದರಿಂದಲೇ ತಾನೇ ಈವತ್ತು ಭೀಮನಂಥ ಗಂಡ ನನಗೆ

ದೊರಕಿದ್ದು?ಹಾಗೆಯೇ ಧರ್ಮರಾಯ,ನಕುಲ-ಸಹದೇವ ಮತ್ತು ಕುಂತಿಯರನ್ನು ಈ ರೀತಿಯ ಒಂದಿಲ್ಲೊಂದು ವಿಚಿತ್ರ

ಕಾರಣಗಳಿಗಾಗಿಯೇ ಪ್ರೀತಿಸುತ್ತಿದ್ದೇನೆ. ಆದರೆ ಸತ್ಯವಾಗಿಯೂ ಪ್ರೇಮಿಸಿದ್ದು ಮಾತ್ರ ಭೀಮನನ್ನೇ!

ಓಹ್ ಭೀಮ..ನನ್ನ ಭೀಮ!

ದೊರೆಯೇ,ನನಗಾಗಿ ನೀನು ಎಷ್ಟೆಲ್ಲ ಕಷ್ಟಪಟ್ಟೆ.ನನಗೋಸ್ಕರ ಯಾರನ್ನೆಲ್ಲ ಕೊಂದೆ.

ನಿಜ,ನೀನು ಒರಟ.ನೀನು ಹುಂಬ.ಆದರೆ ಅಷ್ಟೇ ಮುಗ್ಧ.ನಮ್ಮಿಬ್ಬರಲ್ಲಿ ಇದ್ದ ವಿಚಿತ್ರ ಸಲುಗೆಯಿಂದಲೇ ನನ್ನ ಕಷ್ಟಗಳನ್ನೆಲ್ಲ

ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ.ಪ್ರತೀ ಸಾರಿಯೂ ನನ್ನ ಶೀಲಕ್ಕೆ ನೀನೇ ರಕ್ಷಕನಾಗುತ್ತಿದ್ದೆ.ಜೀವನವಿಡೀ ನೀನೊಬ್ಬನೇ

ನನ್ನ ಸಂತೈಸಬಾರದೇಕೆ ಎಂದು ಎಷ್ಟೋ ಸಲ ಹಂಬಲಿಸಿದ್ದಿದೆ.

ಭೀಮಸೇನ,ನೀನೇ ನಿಜವಾದ ಗಂಡಸು.ಉಳಿದವರಂತೆ ನೀನು ಕೇವಲ ಅಣ್ಣನ ಆಜ್ಞಾವರ್ತಿಯಾಗಲಿಲ್ಲ.

ಉಳಿದವರಂತೆ ಕೇವಲ ತಾಯಿಯನ್ನು ಪೂಜಿಸುತ್ತ ಕೂರಲಿಲ್ಲ.ಬದಲಾಗಿ ನಿನ್ನದೇ ಆದ ಮೊಂಡುದಾರಿ ಹಿಡಿದೆ.

ತಾಯಿಯನ್ನು ತಲೆಯ ಮೇಲೆ ಹೊತ್ತುಕೊಂಡೆ;ನನ್ನನ್ನು ಎದೆಯೊಳಗೆ ಬಚ್ಚಿಟ್ಟುಕೊಂಡೆ!

ಕಳೆದ ಸಾರಿಯ ಹುಣ್ಣಿಮೆಯಿರಬೇಕು. ನನ್ನ ಬಿಚ್ಚಿದ ಕೂದಲಿನಲ್ಲಿ ಕೈಯಾಡಿಸುತ್ತ ಕುಳಿತಿದ್ದ ನೀನು ಇದ್ದಕ್ಕಿದ್ದಂತೆ

ಗದ್ಗದಿತನಾಗಿ “ಪಾಲೀ, ಬಿಚ್ಚಿದ ಕೂದಲಿಗೆ ಇದೋ ನನ್ನ ಕೊನೆ ಮುತ್ತು..!” ಎಂದು ಹೇಳಿ ಹೊರಟು ಹೋಗಿದ್ದೆ..

ಪಾಲೀ!

ಎಂಥ ವಿಚಿತ್ರ ಹೆಸರು.ನೀನು ಕರೆಯುತ್ತಿದ್ದುದೇ ಹಾಗಲ್ಲವೇ?ಅದೇಕೋ ನಿನ್ನ ಆ ಕೊನೆಯ ಮುತ್ತು ಎನ್ನುವ ಮಾತು

ನನ್ನಲ್ಲಿ ಭಯ ಹುಟ್ಟಿಸುತ್ತಿದೆ.ನೀನಲ್ಲಿ ದುರ್ಯೋಧನನೊಂದಿಗೆ ಕಾದಾಡುತ್ತಿರುವೆ.ನಾನಿಲ್ಲಿ ಹೇಳಿಕೊಳ್ಳಲಾಗದಂಥ

ತಳಮಳ ಭರಿಸುತ್ತಿದ್ದೇನೆ. ನೆನಪಿಸಿಕೋ:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ.ನೆನಪಿಡು:ಅಲ್ಲಿ ನಿನಗೇನಾದರೂ

ಆಗಿದ್ದೇ ಆದಲ್ಲಿ ನಾನು ದ್ರುಪದನ ಮಗಳೇ ಅಲ್ಲ..

* * *

ಹಾಗಂತ ಸ್ವಗತದಲ್ಲಿ ಹೇಳಿಕೊಳ್ಳುತ್ತಿರುವಾಗಲೇ ರಪ್ಪೆಂದು ಹೊಡೆದ ಗಾಳಿಯ ಹೊಡೆತಕ್ಕೆ ಪಾಂಚಾಲಿಯ ಬಿಚ್ಚಿದ

ಕೂದಲು ಆಕೆಯ ಕಿವಿಯಲ್ಲಿನ ಆಭರಣಕ್ಕೆ ಸಿಕ್ಕಿಕೊಳ್ಳುತ್ತದೆ. ನೋವಾಗದಂತೆ ಹುಷಾರಾಗಿ ಅದನ್ನು ಬಿಡಿಸಿಕೊಳ್ಳುತ್ತಿರುವಾಗಲೇ

ಮುಂಬಾಗಿಲಿನಲ್ಲಿ ಬಳಲಿ ಬೆಂಡಾಗಿರುವ ಭೀಮನ ಮುಖ ಕಾಣಿಸುತ್ತದೆ.ಆತನ ಬೊಗಸೆ ತುಂಬ ದುರ್ಯೋಧನನ

ಹಸೀ ರಕ್ತ!

ಪಾಂಚಾಲಿ ಆನಂದಭಾಷ್ಪ ಸ್ಫುರಿಸುತ್ತಲೇ ಕನವರಿಸತೊಡಗುತ್ತಾಳೆ:

ಓಹ್ ಭೀಮ..ನನ್ನ ಭೀಮ!

***

 

‍ಲೇಖಕರು G

4 May, 2011

10 Comments

  1. ssrao

    Hosa tarahada kanasu. Sogasaagide.
    Rao.

  2. ರಾಕೇಶ ಜೋಷಿ

    ರಾಘವೇಂದ್ರ ಅವರೇ..
    ತುಂಬಾನೇ ಸೊಗಸಾಗಿ ಬರದಿದ್ದಿರ . ಪಾಲಿಯ ಮನಸ್ಸಿನ ತಳಮಳ ಚೆನ್ನಾಗಿ ಸೆರೆ ಹಿಡಿದಿದ್ದಿರ. ಇಷ್ಟ ಆಯಿತು.

  3. Sushrutha

    ಸಖತ್! 🙂

  4. dattathri

    nice one

  5. ಕನಸು-ಕನವರಿಕೆ

    ಓದಿ ಮೆಚ್ಚಿಕೊಂಡವರಿಗೆ,
    ಮೆಚ್ಚಿ ಕಮೆಂಟಿಸಿದವರಿಗೆ
    ಮತ್ತು ಅವಧಿಗೆ-
    ಪ್ರೀತಿಯಿಂದ ಥಮ್ಸ್ ಅಪ್!
    🙂
    -RJ

  6. Tejaswini Hegde

    Superb!… ಇಷ್ಟವಾಯಿತು.

  7. Siddu

    Good one joshi

  8. Hema

    Excellent RJ avre….Heege saagali tamma baravanige…Dont gv up any time

  9. Vivek Nagaraj

    Nice one

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading