ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಗಿನ ಮೇಲೆ ಬೆರಳಿಟ್ಟುಕೊಂಡು..

ಅನಾಮಿಕತೆ ಎಂಬುದನ್ನೂ ಹೀಗೆಲ್ಲಾ ಹೇಳಬಹುದೇ ಎಂದು ಬೆರಗಿನಿಂದ
ಮೂಗಿನ ಮೇಲೆ ಬೆರಳಿಟ್ಟುಕೊಂಡು ‘ಎನಿಗ್ಮಾ’ದ ಬರಹ ಕೊಡುತ್ತಿದ್ದೇವೆ.
 
“ಸದ್ಯಕ್ಕೆ ಎನಿಗ್ಮಾ ಅನಾನಿಮಸ್” ಎಂದಿದೆ ಅವಧಿ. ಬಹುಶಃ ಯಾವತ್ತೂ ಅನಾಮಿಕವಾಗೇ ಇರಲು ಎನಿಗ್ಮಾಕ್ಕೆ ಇಷ್ಟ. ಈ ಇಷ್ಟವನ್ನು ಕಾಯುವ ಭಾರ ಜಗತ್ತಿಗಿರಲಿ.
ಯೆಂಡ್ಕುಡ್ಕ ರತ್ನನ ಅದ್ಭುತ ಸಾಲುಗಳು ನೆನಪಾಗುತ್ತವೆ:
ಬೆಳದಿಂಗಳ ರಾತ್ರೀಲಿ ಈ ಚೋರಿ ಬತ್ತಂದ್ರೆ
ಈಚ್ಲೆಂಡ ಕುಡ್ದಂಗೆ ನೆಪ್ಪಾಯ್ತದೆ
ಆಕಾಸದ ಚಂದ್ರನ್ನ ಪಡಖಾನೆ ದೀಪಕ್ಕೆ
ವೋಲಿಸ್ದೆ ವೋಯ್ತಂದ್ರೆ ತೆಪ್ಪಾಯ್ತದೆ.
ಅನಾಮಿಕನ ಸುಖ ಮತ್ತು ಸ್ವಾತಂತ್ರ್ಯ ಇದು. ಪರಿಚಿತರ ಲೋಕದಲ್ಲಿ ಸಂಕೋಚದ ಮುದ್ದೆಯಾಗುವುದಕ್ಕಿಂತ ಹೌದೊ ಅಲ್ಲವೊ ಅನ್ನುವಂಥ ಸಣ್ಣ ಹ್ಯಾಂಗೋವರ್ ಸ್ಥಿತಿಯಲ್ಲಿ ದಕ್ಕುವ ನಿರ್ಭಿಡೆ ಬೇಕು. ಕೈಗೆಟುಕದ ಚಂದ್ರನನ್ನು ಜಗುಲಿಯಲ್ಲೇ ತಂದಿಟ್ಟು ನೋಡುವ ಛಾತಿಗಿಂತ ದೊಡ್ಡ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದಿದೆ ಹೇಳಿ? ಹೆಜ್ಜೆ ಹೆಜ್ಜೆಗೂ ಹಂಗಿನರಮನೆಯ ಹುನ್ನಾರಗಳನ್ನೇ ಕಾಣುತ್ತೇವೆ. ಇಂಥಲ್ಲಿ ಮುಲಾಜುಗಳ ಮುಳ್ಳುಬೇಲಿಗಿಂತ ನಿರ್ದಾಕ್ಷಿಣ್ಯವೇ ಕಣ್ಣಿಗೆ ರಾಚುವಂತೆ ಉದ್ದಕ್ಕೂ ಹಾಸಿಕೊಂಡಿರುವ ಬಟಾ ಬಯಲು ಇರಲಿ ಎನ್ನಿಸುತ್ತದೆ.
ಅನಾಮಿಕತೆಗೆ ಬಹುಶಃ ಇಂಥದ್ದೊಂದು ಶಕ್ತಿಯಿದೆ ಎಂದುಕೊಳ್ಳುವಾಗಲೂ ಯಾಕೊ ಅನುಮಾನಗಳೂ ಕಾಡುತ್ತವೆ. ಇದು ಮರೆಯಲ್ಲಿ ನಿಂತು ಬಾಣ ಬಿಡುವ ರೀತಿಯೇ ಎಂಬ ಪ್ರಶ್ನೆ ಕಾಡುತ್ತದೆ. ನಮ್ಮಲ್ಲಿ ಎಷ್ಟೋ ಮಂದಿಗೆ ಕಟುಸತ್ಯ ಹೇಳಲು ಸುಳ್ಳು ಹೆಸರು ಬೇಕು. ಆದರೆ ಅದನ್ನೇ ಕಥೆ ಮಾಡಿ disclaimer ಹಣೆಪಟ್ಟಿ ಹಚ್ಚಿ ಕೊಡುವಾಗ ನಿಜವಾದ ಹೆಸರೇ ಆಗಬೇಕು. ಅಪ್ರಿಯ ಸತ್ಯವನ್ನು ಹೇಳಬಾರದು ಎಂಬುದು ಡಿಪ್ಲೊಮ್ಯಾಟಿಕ್ ಥಿಯರಿ. ಹಾಗಾಗಿ ಅಪ್ರಿಯ ಸತ್ಯವೆಂಬುದು ಬಹಳಷ್ಟು ಸಲ ಅನಾಥ ಶಿಶು.
ಅನಾಮಿಕತೆಯ ಬಗ್ಗೆ ಹೀಗೆ ನಂಬಿಕೆ ಮತ್ತು ಅಪನಂಬಿಕೆ ಎರಡನ್ನೂ ಇಟ್ಟುಕೊಂಡೇ ಹೊರಟ ಪ್ರಯಾಣ ಎನಿಗ್ಮಾದ್ದು. ಆದರೆ ನಮ್ಮ ಅಂಗಳದ ಸಹಜ ಸಾಹಚರ್ಯದಲ್ಲಿ ಸಿಗುವ ಭಾಗ್ಯದ ಬಗೆಗೇ ಎನಿಗ್ಮಾ ಲಕ್ಷ್ಯ. ಅನಂತಮೂರ್ತಿಯವರ ಲೇಖನವೊಂದರಲ್ಲಿ ಎಳುತ್ತಚ್ಚನ್ (ತುಲಸೀದಾಸ) ಕುರಿತು ಬರುವ ಒಂದು ಪ್ರಸ್ತಾಪ ಹೀಗಿದೆ:
“ಎಳುತ್ತಚ್ಚನ್ ಕುರಿತು ಕೇರಳದಲ್ಲಿ ಬೇಕಾದಷ್ಟು ಕಥೆಗಳಿವೆ. ಮೈನವಿರೇಳಿಸುವಂಥ ಕಥೆಗಳು. ಅವುಗಳಲ್ಲೊಂದು ಸಂಸ್ಕೃತದಲ್ಲಿ ಬರೆಯುವ ಶ್ರೇಷ್ಠ ನಂಬೂದರಿ ಕವಿ ಭಟ್ಟತ್ತಿರಿಪ್ಪಾಡ್ ನೊಂದಿಗಿನ ಆತನ ಭೇಟಿ. ಸಂಸ್ಕೃತದ ಆ ದೊಡ್ಡ ಕವಿಗೆ ತನ್ನ ಭಾಗವತವನ್ನು ಹೇಗೆ ಆರಂಭಿಸಬೇಕೆನ್ನುವುದು ಗೊತ್ತಿರಲಿಲ್ಲ. ಮಲಯಾಳಿಗಳು ಈ ಕಥೆಯನ್ನು ನಿರೂಪಿಸುವುದು ಬಹಳ ಚೆನ್ನಾಗಿದೆ. ಕೇರಳದ ಪ್ರತಿಯೋರ್ವನೂ ಊಟವನ್ನು ಮೀನು ತಿನ್ನುವುದರೊಂದಿಗೆ ಆರಂಭಿಸುತ್ತಾನೆ. ಭಟ್ಟತ್ತಿರಿಪ್ಪಾಡ್ ತನ್ನ ಭಾಗವತವನ್ನು ಹೇಗೆ ಆರಂಭಿಸುವುದೆಂದು ತಿಳಿಯದೆ ನಿರ್ವಿಣ್ಣನಾಗಿ ಕುಳಿತಾಗ ಎದುರಾದ ಶೂದ್ರ ಕವಿ ಎಳುತ್ತಚ್ಚನ್ ನನ್ನು ಭಾಗವತವನ್ನು ಹೇಗೆ ಆರಂಭಿಸಲಿ ಎಂದು ಕೇಳುತ್ತಾನೆ. ಆಗ ಎಳುತ್ತಚ್ಚನ್, ಶುರುವಾಗುವುದೆಲ್ಲ ಮೀನಿನಿಂದಲ್ಲವೇ ಎಂದು ನಗುತ್ತಾನೆ. ಬ್ರಾಹ್ಮಣ ಭಟ್ಟತ್ತಿರಿಗೆ ಥಟ್ಟನೆ ಹೊಳೆಯುತ್ತದೆ: ಮತ್ಸ್ಯಾವತಾರದೊಂದಿಗೆ ಆರಂಭಿಸು ಎಂಬ ಸೂಚನೆ.”
ಇಂಥ ಮಿಂಚಿನ ಸೆಳಕುಗಳ ಮುಂದೆ ತನ್ಮಯಿಯಾಗಬೇಕೆಂಬುದು ಎನಿಗ್ಮಾ ಆಸೆ. ಬಾನಿಗೊಂದು ಬೊಗಸೆ. ಇದಕ್ಕೇಕೆ ಹೆಸರಿನ ಹಂಗು?
ಕಡೆಗೂ, ಹೆಸರಿರಲಿ ಇಲ್ಲದಿರಲಿ ಎಲ್ಲರ ಪಾಡೂ ಅಡಿಗರು ಹೇಳುವ ಹಾಗೆ-
“ಆಸೆಯೆಂಬ ತಳ ಒಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೊ ಯಾರೊ ಏನೊ ಗುರಿಯಿರದೆ ಬಿಟ್ಟ ಬಾಣ.”

‍ಲೇಖಕರು avadhi

19 September, 2008

1 Comment

  1. sughosh nigale

    ನೈಸ್ ರೈಟ್ ಅಪ್. ಆದರೆ ರನ್ನನ ಸಾಲುಗಳಲ್ಲಿ ಈಚ್ಲೆಂಡ ಕುಡ್ದಂಗೆ ನೆಪ್ಪಾಯ್ತದೆ ಸರಿಯೋ ಅಥವಾ ಈಚ್ಲೆಂಡ ಚೆಲ್ದಂಗೆ ನೆಪ್ಪಾಯ್ತದೆ ಸರಿಯೋ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading