ಈ ವಾರ ‘ಈ ಹೊತ್ತಿಗೆ’ಯಲ್ಲಿ ಜಯಲಕ್ಷ್ಮಿ ಪಾಟೀಲ್ ಅವರ ಕಥಾ ಸಂಕಲನ ಮುಕ್ಕು ಚಿಕ್ಕಿಯ ಕಾಳು ಕುರಿತು ಸಂವಾದವಿದೆ.
ಈ ಹಿನ್ನೆಲೆಯಲ್ಲಿ ಖ್ಯಾತ ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು ಕೃತಿಯ ಬಗ್ಗೆ ತಮ್ಮ ನೋಟವನ್ನು ಇಲ್ಲಿ ದಾಖಲಿಸಿದ್ದಾರೆ..
-ಲಲಿತಾ ಸಿದ್ಧಬಸವಯ್ಯ
ಜಯಲಕ್ಷ್ಮಿಯವರೆ ಪುಸ್ತಕ ಕಳುಹಿಸಿದಿರಿ, ಒಳ್ಳೆಯ ಓದೊಂದು ಲಭಿಸಿತು. ನಿಮಗೆ ಕೃತಜ್ಞತೆಗಳು..
ಜಲ, ನಿಮ್ಮ ಗದ್ಯಕ್ಕೆ ಸರಾಗ ಓದಿಸಿಕೊಳ್ಳುವ ಶಕ್ತಿಯಿದೆ. ನಿಮಗೆ ಭಾಷೆಯೊಂದಿಗೆ ಅಯಾಚಿತ ಸಲೀಸು ಮತ್ತು ಬಿಗಿ ಏಕಕಾಲದಲ್ಲಿ ಸಾಧಿಸಿವೆ. ಕತೆ ಹೇಳುವ ಕಲೆ ಒಲಿದಿದೆ. ಸಾಕು, ನೀವೊಬ್ಬ ಯಶಸ್ವೀ ಕಾದಂಬರಿಗಾರ್ತಿಯಾಗಲು ಇವು ಬೇಕಾದಷ್ಟಾಯ್ತು. ಒಂದೇ ಕೂರಿಗೆ ನಿಮ್ಮ ಮೊದಲ ಕಾದಂಬರಿ ” ಮುಕ್ಕು ಚಿಕ್ಕಿಯ ಕಾಳು” ಓದಿ ಮುಗಿಸಿದೆ.
ಜೀವನದ ಕಷ್ಟಗಳ ನಡುವೆಯೂ ಅದರ ಸೊಬಗನ್ನು ಎತ್ತಿ ಹಿಡಿದು ಆಸ್ವಾದಿಸುವ ಶಕ್ತಿಯಿದೆ ನಿಮ್ಮೊಳಗೆ. ಅದು ಇಲ್ಲಿ ಪ್ರತಿಫಲಿಸಿದೆ. ಇದೇ ಕಾರಣದಿಂದ ಈ ಕಾದಂಬರಿಯ ಕೆಳಮಧ್ಯಮ ವರ್ಗದಲ್ಲಿ ಬದುಕುವ ಪಾತ್ರಗಳು ತಮ್ಮ ಸಂಕಷ್ಟಗಳಿಗೆ ಯಾರನ್ನೂ ದೂರದೆ ಬಂದದ್ದನ್ನು ತುಟಿ ಕಚ್ಚಿ ಅನುಭವಿಸುತ್ತಾರೆ. ಅವರಿಗೆ , ಕಾಣದ ದೇವರನ್ನು ಬೈಯುತ್ತಾ ಕೂರುವ ಚಟವಿಲ್ಲ. ಕಾಣುವ ನರಮನುಷ್ಯರೊಂದಿಗೆ ಹಗೆ ಸಾಗಿಸುವ ತಲುಬೂ ಇಲ್ಲ. ಯಾವ ನೋವೂ ಅವರ ಬದುಕುವ ಹುಮ್ಮಸ್ಸನ್ನು ಕುಗ್ಗಿಸದು. ಅದರಲ್ಲೂ ಇಲ್ಲಿನ ಕಾಳವ್ವ ಕಾಮಾಕ್ಷಿ, ಶೈಲೂ ಮೂವರು ಹೆಮ್ಮಕ್ಕಳ ಆಂತರಿಕ ಶಕ್ತಿಗೆ ಕೈ ಮುಗಿಯಬೇಕೆನಿಸುತ್ತದೆ. ಎಂತೆಂತಹ ಸಂದರ್ಭಗಳಲ್ಲೂ ಹೊಂದಿಕೊಳ್ಳುವ ಕಾಮಾಕ್ಷಮ್ಮ ನನಗೆ ವಂದನೀಯಳು ಅನಿಸಿದೆ. ವಾಸ್ತವವಾಗಿ ಮೌನೇಶನೆಂಬ ಪತ್ತಾರ ಕುಲದ ಕಲಾವಿದ ತನ್ನ ಊನತೆಯನ್ನು ಮೀರುವ ಹೋರಾಟದಲ್ಲಿ ಕಲಾವಿದನಾದ ಎಂದು ಕಾದಂಬರಿ ಹೇಳಿದರೂ , ನಿಜವಾಗಿ ಆತನ ಆ ತುಟಿಯೂನತೆಯನ್ನು ಗೆದ್ದು ನಿಲ್ಲುವವರು ಅವನ ತಾಯಿ ಮತ್ತು ಪತ್ನಿ!!. ಮೌನೇಶ – ಒಂದು ಮುಕ್ಕಿಲ್ಲದ ಪಾತ್ರ.
ನನಗೆ ಬಹಳ ಇಷ್ಟವಾದದ್ದು ನಿಮ್ಮ ದೃಷ್ಟಿ. ದೃಷ್ಟಿಯಂತೆ ಸೃಷ್ಟಿ. ಯಾರೋ ಒಬ್ಬ ವಿಲನ್ ಸೃಷ್ಟಿಸಿ ಸಕಲ ದುಃಖಕ್ಕೆ ಅವನನ್ನು ಕಾರಣಗೊಳಿಸುವ ಮಾಮೂಲಿ ತಂತ್ರ ಇಲ್ಲಿಲ್ಲ. ಕಿರುಚುವಿಕೆಯಂತೂ ನಾಸ್ತಿ. ಆವೇಶ ದೂರ.
ಕೊನೆಯಲ್ಲಿ ಇನ್ನೂ ಇರಬೇಕಿತ್ತು ಕತೆ ಅನಿಸಿತು. ನೀವು ಕತೆ ಕಾದಂಬರಿಯ ರಚನೆ ನಿಲ್ಲಿಸಲೆ ಬೇಡಿ. ಅವೇ ನಿಮ್ಮನ್ನು ಎಲ್ಲಿಗೊಯ್ಯಬೇಕೋ ಅಲ್ಲಿಗೊಯ್ಯುವವು.
ಧನ್ಯವಾದಗಳು ಲಲಿತಕ್ಕ. ಧನ್ಯವಾದಗಳು ಅವಧಿ.
ಓದಬೇಕೆನಿಸಿದೆ.