ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿ ಕಾಕಾ ಇನ್ನಿಲ್ಲ: ಯಾಕೋ ಗೊತ್ತಿಲ್ಲ

ಇವರು ಗೋಪಾಲ ವಾಜಪೇಯಿ
-ಜಿ ಎನ್ ಮೋಹನ್

ಇವರು ಗೋಪಾಲ  ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು  ಬೆಳೆದವನು ನಾನು. ಗೋಪಾಲ ವಾಜಪೇಯಿ ‘ದೊಡ್ಡಪ್ಪ’ ಬರೆದಾಗ, ‘ಸಂತ್ಯಾಗ ನಿಂತಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ..’ ಹೀಗೆ ನಾಟಕಗಳನ್ನು  ಅನುವಾದಿಸುತ್ತಾ ಹೋದಾಗ ಅವರನ್ನು ಬೆರಗಿನಿಂದ ನೋಡಿದವನು ನಾನು. ಅಂತಹ ವಾಜಪೇಯಿಯವರೊಡನೆ ಕೆಲಸ ಮಾಡುವ ಅವಕಾಶ ಕೂಡಿಬಂದಾಗ ನಾನು ಸಂತಸಗೊಂಡಿದ್ದೆ. ಈಟಿವಿ ಚಾನಲ್ ನ ನ್ಯೂಸ್ ವಿಭಾಗದ ಮುಖ್ಯಸ್ಥನಾಗಿ ನಾನು ರಾಮೋಜಿ ಫಿಲಂ ಸಿಟಿಗೆ ಹೋದಾಗ ಅಲ್ಲಿ ಮನರಂಜನಾ ವಿಭಾಗದಲ್ಲಿ ವಾಜಪೇಯಿ ಅವರು ಇದ್ದರು. ಎಷ್ಟು ಸರಳ ಬದುಕಿನ, ಮೆಲು ಮಾತಿನ, ಕಾಳಜಿಯ ಹೃದಯದ ವಾಜಪೇಯಿ ಅವರ ಸನಿಹದಲ್ಲಿದ್ದೆ ಎಂಬುದು ನನಗೆ ಖುಷಿಯ ವಿಷಯವೇ.

ಅಲ್ಲಿದ್ದಾಗ ನಾನು ಓದಿದ ಪುಸ್ತಕಗಳು ಅವರ ಕೈಗೂ, ಅವರ ಭಂಡಾರದಲ್ಲಿದ್ದ ಪುಸ್ತಕಗಳು ನನಗೂ, ನಾನು ಮಾಡಿದ ಕಾರ್ಯಕ್ರಮಗಳನ್ನು ಮೆಚ್ಚುತ್ತ ಅವರೂ, ಅವರು ‘ನಾಗಮಂಡಲ’ಕ್ಕೆ ಬರೆದ ಹಾಡುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾ ಬದುಕು ಸಾಗಿಸಿದೆವು.

ಅಂತಹ ವಾಜಪೇಯಿ ಅವರು ಒಮ್ಮೆ ಫೋನ್ ಮಾಡಿ ನನ್ನ ಪುಸ್ತಕವೊಂದು ಮುದ್ರಣವಾಗಬೇಕು ಎಂದರು. ರಂಗಭೂಮಿಯಲ್ಲಿ ಸುದ್ದಿ ಮಾಡಿದ ಭೀಷಂ ಸಹಾನಿ ಅವರ ‘ಕಬೀರ ಖಡಾ ಬಜಾರ್ ಮೇ’ ನಾಟಕ  ‘ಸಂತ್ಯಾಗ ನಿಂತ್ಯಾನ ಕಬೀರ’ ಆಗಿ ಅನುವಾದಗೊಂಡಿತ್ತು. ನಾಟಕದ ಸ್ಕ್ರಿಪ್ಟ್ ಅನ್ನು ಅವರು ಥೇಟ್ ಆ ಕಬೀರನಂತೆಯೇ ೨೨ ವರ್ಷಗಳ ಕಾಲ ಕೈನಲ್ಲಿ ಹಿಡಿದು ಪ್ರಕಾಶನದ ಸಂತೆಯಲ್ಲಿ ಮಾರ್ಗ ತಿಳಿಯದೆ ನಿಂತಿದ್ದರು.

ಅದು ಗೊತ್ತಾಗಿ ನಾನೂ ಅವರೂ ಸೇರಿ ನವಕರ್ನಾಟಕವನ್ನು ಸಂಪರ್ಕಿಸಿದೆವು. ಆ ವೇಳೆಗಾಗಲೇ ಟಿ ಎಸ್ ಲೋಹಿತಾಶ್ವ ಅವರು ನಾಟಕವನ್ನು ಅನುವಾದಿಸಿ ಪ್ರಕಟಿಸಿದ್ದರು. ಹಾಗಾಗಿ ನವಕರ್ನಾಟಕ ಅಷ್ಟೇನೂ ಉತ್ಸಾಹ ತೋರಿಸಲಿಲ್ಲ. ನಂತರ ನಾವಿಬ್ಬರೂ ಆ ವೇಳೆಗೆ ಪರಿಚಿತರಾಗಿದ್ದ ಎಂ ಬೈರೇಗೌಡರ ಬೆನ್ನು ಬಿದ್ದೆವು. ಈಗ ಆ ಪುಸ್ತಕವೂ ಅದರೊಂದಿಗೆ ಬ್ರೆಕ್ಟ್ ನ ‘ಕಕೇಷಿಯನ್ ಚಾಕ್ ಸರ್ಕಲ್ ‘ ಆಧರಿಸಿದ ‘ಧರ್ಮಪುರಿಯ ಶ್ವೇತ ವೃತ್ತಾಂತ’ವೂ ಪ್ರಕಟವಾಗುತ್ತಿದೆ.

ಈ ಸಂತಸದ ಘಳಿಗೆ ಇಲ್ಲಿದೆ. ಟಿ ಎಸ್ ನಾಗಾಭರಣ, ಗುಡಿಹಳ್ಳಿ ನಾಗರಾಜು ಇಬ್ಬರೂ ವೇದಿಕೆಯಲ್ಲಿದ್ದರು. ಯಾಕೋ ಗೊತ್ತಿಲ್ಲ್ಲ ಅವರು ನನ್ನನ್ನೂ ಜೊತೆಗೆ ಸೇರಿಸಿಕೊಂಡರು.

‍ಲೇಖಕರು Admin

20 September, 2016

3 Comments

  1. samyuktha

    🙁

  2. Anonymous

    beLiggeene patrikeylli suddi nodi aatmiyarobbarnnu kLedukonda anubhava..devaru avara aatmakke shanti nidali..

  3. Sudha ChidanandGowd

    ಕೆಲವು ದಿನಗಳಿಂದ ನನ್ನದೇ ಬರವಣಿಗೆಯಲ್ಲಿ ಮುಳುಗಿ ಅಂತರ್ಜಾಲ, ಸುದ್ದಿಮಾಧ್ಯಮ ಎಲ್ಲದರಿಂದ ದೂರ ಉಳಿದಿದ್ದೇನೆ.
    ಆ ಕಾರಣಕ್ಕಾಗಿ ಅವರ ಸಾವಿನ ಸುದ್ದಿ ಕೂಡಾ ನನಗೆ ತಡವಾಗಿ ತಿಳಿಯುವಂತಾಯಿತಲ್ಲಾ…
    ಅಯ್ಯೋ, ದುಃಖ ಉಮ್ಮಳಿಸುತ್ತಿದೆ..
    ವಾಟ್ಸ್ಯಾಪ್ ನಾದರೂ ತೆರೆಯಬಾರದಿತ್ತೇ ನಾನು..
    ಅಲ್ಲಿ ನಡುರಾತ್ರಿಯಿಂದಲೇ ಬಂದ ಮೆಸೇಜುಗಳಿದ್ದವು..
    ಫೇಸ್ ಬುಕ್ ತುಂಬಾ ಸ್ಟೇಟಸ್ ಗಳು..
    ಯಾವುದನ್ನೂ ನೋಡದೆ ಬರವಣಿಗೆಯಲ್ಲಿ ಮುಳುಗಿದೆನಲ್ಲಾ..
    ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಬರವಣಿಗೆ ಕುರಿತೇ ಬೇಸರವಾಗುತ್ತಿದೆ ನನಗೆ..
    ಪ್ರಾಯಷಃ ನೀವಿಲ್ಲವಾದ ಸುದ್ದಿ ತಿಳಿದುಕೊಂಡ ಕೊನೆಯವಳು ನಾನು..
    ಕ್ಷಮೆಯಿರಲಿ ಸರ್..
    ನೀವೆಲ್ಲೂ ಹೋಗಿಲ್ಲ ಗೋವಾ ಸರ್..
    ನೀವಿದ್ದೀರಿ .. ಶೇಕ್ಸಪಿಯರನ ಕನ್ನಡದ ಕನಸಿನಲ್ಲಿ..
    ಬ್ರೆಕ್ಟ್ ಬರಹದ ಬೆಳಕಿನಲ್ಲಿ..
    ನಾನೇ ಟೈಪಿಸಿದ ನಿಮ್ಮ ಸ್ಕ್ರಿಪ್ಟುಗಳಲ್ಲಿ..
    ನಿಮ್ಮ ಪುಸ್ತಕಗಳನ್ನು ಪ್ರಕಟಿಸಿದ ಮೊದಲನೆಯವಳು ನಾನು ಎಂಬ ಹೆಮ್ಮೆಯಲ್ಲಿ
    ನಿಮ್ಮ ನಗುವಿನಲ್ಲಿ, ವಯಸಿಗೆ ಮೀರಿದ ಸ್ನೇಹದಲ್ಲಿ..
    ನೀವಿದ್ದೀರಿ ಸರ್.. ನೀವೆಲ್ಲೂ ಹೋಗಿಲ್ಲ..
    ಕಂಬನಿಗಳು ನಿಮಗೆ ಗೋವಾ ಸರ್..
    ಅತಿ ಭಾರವಾದ ಹೃದಯದಿಂದ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading