ಹನುಮಂತರೆಡ್ಡಿ ಶಿರೂರ್
ನನಗಿನ್ನೂ ಚೆನ್ನಾಗಿ ನೆನಪಿದೆ. ೨೦೦೧ ರ ಸೆಪ್ಟೆಂಬರ್ ೧೧ – ಆಗ ನಾನು ಮಿಲ್ಲಿಪೋರ್ ಅನ್ನೋ ಸಂಸ್ಥೆಯಲ್ಲಿ ಪರಿಸರ ವಿಜ್ಞಾನಿಯಾಗಿದ್ದೆ. ತುರ್ತು ಕೆಲಸದ ಮೇಲೆ ಬೆಳ್ಳಂಬೆಳಗ್ಗೆ ಹೊರಟು ಕೆಲಸದ ಒಂದು ಹಂತ ಮುಗಿಸಿ ಕೆಫೆಟೇರಿಯಾದಲ್ಲಿ ಕಾಫಿ ಕುಡಿಯುತ್ತ ಟಿವಿ ನೋಡುತ್ತಿದ್ದೆ.
ಇದ್ದಕ್ಕಿದ್ದಂತೆ ಬ್ರೇಕಿಂಗ್ ನ್ಯೂಸ್. ಟಿವಿ ಪರದೆಯ ಮೇಲೆ ಸಿನಿಮೀಯ ದೃಶ್ಯದಂತೆ ನೋಡಿದ ಆ ದುರಂತದಲ್ಲಿ ೯೦ ದೇಶಗಳಿಗೆ ಸೇರಿದ ೩೦೦೦ ಅಮಾಯಕರು ಬಲಿಯಾಗಿ ಹೋದರು. ಆ ನಂತರ ನಡೆದ ಘಟನಾವಳಿಗಳೆಲ್ಲ ಚರಿತ್ರೆ. ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಕಾರ್ಯಾಚರಣೆ ನಡೆಸಿದ ಅಮೆರಿಕದ ಬೊಕ್ಕಸಕ್ಕೆ ಒಂದು ಟ್ರಿಲಿಯ ಡಾಲರ್ ಖೋತಾ, ಅದರ ಜೊತೆ ಬೆಲೆ ಕಟ್ಟಲಾರದಷ್ಟು ಜೀವನಾಶ. ಅದರಲ್ಲಿ ಅಸು ನೀಗಿದ ಅಮೆರಿಕನ್ ಸೈನಿಕರು, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಮಕ್ಕಳು ಮುದುಕರೆನ್ನದೇ ವಿನಾಕಾರಣ ಸತ್ತ ಸಾವಿರಾರು ಜನ ಸೇರಿದ್ದಾರೆ.
ದುರಂತವೆಂದರೆ ಈ ೧೮ ವರ್ಷಗಳಲ್ಲಿ ಇರಾಕ್ ಮತ್ತು ಅಫ್ಘಾನಿಸ್ತಾನ ಉದ್ದಾರ ಆಗಿದ್ದು ಅಷ್ಟರಲ್ಲೇ ಇದೆ. ಜೊತೆಗೆ ಇಂದಿಗೂ ಅಮೆರಿಕನ್ ಸೈನಿಕರ ಹೆಣಗಳು ಈ ದೇಶಕ್ಕೆ ಮರಳುತ್ತಿವೆ. ನಿನ್ನೆ ತಾನೇ ೩೪ರ ಹರೆಯದ ಸಾರ್ಜೆಂಟ್ ಬರೆತೋ ಓರ್ಟಿಜನ ದೇಹವಿದ್ದ ಶವಪೆಟ್ಟಿಗೆ ಅಫ್ಘಾನಿಸ್ತಾನದಿಂದ ವಾಪಸಾಗಿದೆ. ತಾಲಿಬಾನಿಗಳ ಆತ್ಮಹತ್ಯಾ ಬಾಂಬ್ ಸ್ಫೋಟದಿಂದ ಸತ್ತ ಓರ್ಟಿಜನ ಪತ್ನಿ ಮತ್ತು ಮೂವರು ಮಕ್ಕಳು ಅನಾಥರಾಗಿದ್ದಾರೆ.
ಇದು ಇಲ್ಲಿಗೇ ಮುಗಿಯೋ ಹಾಗೆ ಕಾಣುತ್ತಿಲ್ಲ. ಒಂದು ಕಡೆ ಅಮೆರಿಕ ಟ್ರಂಪ್ ಆಡಳಿತದಲ್ಲಿ ಸ್ವಾರ್ಥಿಯಾಗುತ್ತಿದೆ. ಎಲ್ಲಕ್ಕಿಂತ ನಮ್ಮ ದೇಶದ ಒಳಿತು ಮುಖ್ಯ, ಅದಕ್ಕಾಗಿ ಏನು ಮಾಡಲೂ ಸಿದ್ಧ ಅನ್ನೋ ಟ್ರಂಪ್, ಒಂದು ದೇಶ .. ಒಂದು ಧರ್ಮ.. ಒಬ್ಬನೇ ನಾಯಕ ಅನ್ನೋ ಭಾರತ. ಈ ನಡುವೆ ತಾಲಿಬಾನ್ ಮತ್ತಿತರೇ ಅನಿಷ್ಟ ಜಿಹಾದಿಗಳ ಜೀವ ತಿನ್ನೋ ಮನಸ್ಸಿಗೆ ಮೂಲ ಕಾರಣಗಳಲ್ಲೊಂದಾದ ಪ್ಯಾಲೆಸ್ಟೈನ್ ಸಮಸ್ಯೆಗೆ ಮತ್ತೆ ಬೆಂಕಿ ಹಚ್ಚೋ ಮಾತಾಡುತ್ತಿರೋ ಇಸ್ರೇಲಿನ ಬೆಂಜಮಿನ್ ನೇತಾನ್ಯನು.
ಜಗತ್ತೇ ಬದಲಾಗುತ್ತಿದೆ ಮತ್ತು ಎಲ್ಲೆಲ್ಲೂ ಹಿಂಸೆ. ಅಂದ ಹಾಗೆ ೧೯೦೬ ರಲ್ಲಿ ಇದೇ ೯/೧೧ ರಂದು ಗಾಂಧಿ ತಮ್ಮ ಚೊಚ್ಚಲ “ಅಹಿಂಸಾತ್ಮಕ ಹೋರಾಟ” ಹಮ್ಮಿಕೊಂಡದ್ದು ನೆನಪಾಗುತ್ತಿದೆ.
ಒಳ್ಳೆಯ ಮಾಹಿತಿ ಪೂರ್ಣ ಲೇಖನ