ಜನರ ಆಹಾರ, ಆರೋಗ್ಯ ಹಾಗೂ ನೆಮ್ಮದಿಗಳನ್ನು ಕಾಪಾಡುವುದಕ್ಕೆ ಆದ್ಯತೆ ನೀಡಿ
ಡಾ| ಶ್ರೀನಿವಾಸ ಕಕ್ಕಿಲ್ಲಾಯ
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರೇ,
ಕರ್ನಾಟಕದ ಪ್ರಜ್ಞಾವಂತ ಮತದಾರರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ, ತಾವು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ನಾಡಿನೆಲ್ಲೆಡೆ ಸಂಭ್ರಮವಿದೆ. ತಮಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ, ನಾಡಿನ ಜನತೆಯ, ಅದರಲ್ಲೂ ಮಕ್ಕಳ, ಪರವಾಗಿ ಕೆಲವೊಂದು ನಿವೇದನೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಕಳೆದ ಏಳು ವರ್ಷಗಳಿಂದ ರಾಜ್ಯವನ್ನಾಳುತ್ತಿದ್ದವರು ಯಾವುದೋ ಲೆಕ್ಕಾಚಾರಗಳಿಂದಾಗಿ ಇವನ್ನೆಲ್ಲ ಕಡೆಗಣಿಸಿದ್ದರು. ತಾವು ಇವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರವನ್ನು ಒದಗಿಸಬಹುದೆಂದು ಆಶಿಸುತ್ತೇನೆ. ಫೆಬ್ರವರಿ 3, 2006ರಂದು ಸಮ್ಮಿಶ್ರ ಸರಕಾರವು ಅಧಿಕಾರ ಹಿಡಿದಂದಿನಿಂದ ಸಂಪ್ರದಾಯವಾದ, ಅವೈಚಾರಿಕತೆ, ಸಾಮಾಜಿಕ ಅಸಮಾನತೆ ಹಾಗೂ ಭ್ರಷ್ಟಾಚಾರಗಳೆಲ್ಲವೂ ಮಕ್ಕಳ ಬಿಸಿಯೂಟದಲ್ಲಿ ಮೇಳೈಸಿದ್ದು ದೊಡ್ಡ ದುರಂತವೆಂದೇ ಹೇಳಬೇಕು.
ಆ ದಿನಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಕಲಿಯುತ್ತಿದ್ದ ಸುಮಾರು 58 ಲಕ್ಷ ಮಕ್ಕಳು ಏನನ್ನು ತಿನ್ನಬಯಸುತ್ತಾರೆನ್ನುವ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗಿತ್ತು. ಅವರಲ್ಲಿ 50 ಲಕ್ಷ ಮಕ್ಕಳು ತಮಗೆ ಮೊಟ್ಟೆ ಬೇಕೆಂದರೆ ಇನ್ನುಳಿದವರು ಬಾಳೆಹಣ್ಣಿನತ್ತ ಒಲವು ವ್ಯಕ್ತ ಪಡಿಸಿದ್ದರು. ಆದರೆ ಮಕ್ಕಳ ಬಯಕೆಯು ಕೆಲವು ಮಠಾಧಿಪತಿಗಳಿಗೂ, ಅವರ ಬಾಲಂಗೋಚಿ ರಾಜಕಾರಣಿಗಳಿಗೂ ಪಥ್ಯವಾಗಲಿಲ್ಲ. ಮೊಟ್ಟೆಯು ತಾಮಸ ಆಹಾರವೆಂದೂ, ಮಕ್ಕಳಲ್ಲಿ ರಾಕ್ಷಸೀ ಗುಣಗಳಿಗೆ ಕಾರಣಾವಾಗುತ್ತದೆಂದೂ ಹುಯಿಲೆಬ್ಬಿಸಲಾಯಿತು. ಈ ಒತ್ತಡಗಳಿಗೆ ಮಣಿದು ಜನವರಿ 20, 2007 ರ ಸಚಿವ ಸಂಪುಟದ ಸಭೆಯು ಮಕ್ಕಳಿಗೆ ಮೊಟ್ಟೆ ನೀಡಬಾರದೆಂದು ನಿರ್ಧರಿಸಿತು, ಇಂದಿನವರೆಗೆ ಬಿಸಿಯೂಟದಲ್ಲಿ ಮೊಟ್ಟೆ ಇಲ್ಲವಾಯಿತು. ಅತ್ತ ಹಾಲನ್ನು ಕೊಡುವುದು ಕಷ್ಟಕರವೆಂದು ಶಿಕ್ಷಣ ಇಲಾಖೆಯು ಹಿಮ್ಮೆಟ್ಟಿತು. ಹೀಗಾಗಿ ಬಿಸಿಯೂಟದಲ್ಲಿ ಅನ್ನ ಮತ್ತು ಸಾಂಬಾರು, ವಾರಕ್ಕೊಮ್ಮೆ ಬಿಸಿ ಬೇಳೆ ಬಾತ್, ಉಪ್ಪಿಟ್ಟು ಮತ್ತು ಸ್ವಲ್ಪ ತರಕಾರಿ ಅಷ್ಟೇ ಉಳಿದುಕೊಂಡವು. ಈ ಅನ್ನ-ಸಾರಿನ ಊಟವೂ ಮಠಗಳು ಹಾಗೂ ಇಸ್ಕಾನ್ ನಂತಹ ಸಂಸ್ಥೆಗಳ ಕೃಪೆಗೆ ಸೇರಿ ಮೊಟ್ಟೆ ಕೇವಲ ಕನಸಾಯಿತು.
ರಾಜ್ಯದ ಅರ್ಧ ಕೋಟಿ ಮಕ್ಕಳಿಗಾದ ಈ ಅನ್ಯಾಯದ ವಿರುದ್ಧವಾಗಿ ದೊಡ್ಡ ಕೂಗೆದ್ದರೂ ಅದು ಅರಣ್ಯರೋದನವಾಯಿತು, ಧಾರ್ಮಿಕ-ರಾಜಕೀಯ ತಂತ್ರಗಾರಿಕೆಯಲ್ಲಿ ಬಡ ಮಕ್ಕಳ ಆರೋಗ್ಯ ಸೊರಗಿತು. ಜೊತೆಗೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳು ಪುಟ್ಟ ಮಕ್ಕಳಿಗೆ ಕಳಪೆ ಆಹಾರವನ್ನು ಪೂರೈಸಿ, ಕೋಟಿಗಟ್ಟಲೆ ನುಂಗಿ ಲೋಕಾಯುಕ್ತರ ಬಲೆಗೆ ಬಿದ್ದರು. ಅರ್ಧದಷ್ಟು ಅಂಗನವಾಡಿಗಳಲ್ಲಿ ಅಡುಗೆ ಅನಿಲಕ್ಕೂ ವ್ಯವಸ್ಥೆ ಇಲ್ಲದಾಯಿತು. ಇಂದು ರಾಜ್ಯದ 38% ಮಕ್ಕಳು ನ್ಯೂನಪೋಷಣೆಯಿಂದ ನರಳುತ್ತಿದ್ದಾರೆ, ರಾಯಚೂರು ಜಿಲ್ಲೆಯಂತಹಾ ಹಿಂದುಳಿದ ಪ್ರದೇಶಗಳಲ್ಲಿ ನೂರಾರು ಮಕ್ಕಳು ಊಟಕ್ಕಿಲ್ಲದೆ ಸಾಯುತ್ತಿದ್ದಾರೆ. ಈ ಬಗ್ಗೆ ರಾಜ್ಯ ಮುಖ್ಯ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಸರಕಾರವು ಅಂಗನವಾಡಿಗಳಲ್ಲಿರುವ ಮಕ್ಕಳಿಗೆ ಮೊಟ್ಟೆಯನ್ನು ನೀಡುವ ಭರವಸೆಯಿತ್ತು ಒಂದು ವರ್ಷ ಕಳೆದರೂ ವಸ್ತು ಸ್ಥಿತಿ ಬದಲಾದಂತಿಲ್ಲ.
ನಮ್ಮ ರಾಜ್ಯದ ಬಡ ಹಾಗೂ ಹಿಂದುಳಿದ ಮಕ್ಕಳಿಗಾಗುತ್ತಿರುವ ಈ ಅನ್ಯಾಯವನ್ನು ಸರಿಪಡಿಸಿ, ಅವರ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಪೋಷಿಸುವುದು ಮಾನ್ಯ ಮುಖ್ಯಮಂತ್ರಿಗಳು ಕೈಗೊಳ್ಳಬೇಕಾದ ಮೊತ್ತಮೊದಲ ಕ್ರಮವಾಗಬೇಕು. ಬಿಸಿಯೂಟದಲ್ಲಿ ಪ್ರತಿ ನಿತ್ಯವೂ ಮೊಟ್ಟೆಯನ್ನು ನೀಡಲಾಗುವ ತಮಿಳುನಾಡಿನಲ್ಲೂ, ವಾರಕ್ಕೆ ಮೂರು ಸಲ ನೀಡಲಾಗುವ ಕೇರಳದಲ್ಲೂ ಮಕ್ಕಳ ಆರೋಗ್ಯದ ಸ್ಥಿತಿಯು ಉತ್ತಮವಾಗಿದ್ದು, ನ್ಯೂನ ಪೋಷಣೆಯ ಪ್ರಮಾಣವು ನಮ್ಮಲ್ಲಿಗಿಂತ ಮೂರು ಪಾಲು ಕಡಿಮೆಯಿರುವುದನ್ನು ಗಮನಿಸಿ, ನಮ್ಮಲ್ಲೂ ಬಿಸಿಯೂಟದ ಜೊತೆ ಪ್ರತಿ ನಿತ್ಯವೂ ಮೊಟ್ಟೆಯನ್ನು ಒದಗಿಸಬೇಕು. ಮೊಟ್ಟೆಯನ್ನು ತಿನ್ನಬಯಸದ ಮಕ್ಕಳಿಗೆ ಬದಲಿಯಾಗಿ ದ್ವಿದಳ ಧಾನ್ಯಗಳನ್ನು ನೀಡಬಹುದು. ಬಿಸಿಯೂಟ ವಿತರಣೆಯಲ್ಲಿ ಮಠಗಳು ಹಾಗೂ ಇಸ್ಕಾನ್ ನಂತಹ ಸಂಸ್ಥೆಗಳ ಪಾತ್ರವನ್ನು ತನಿಖೆಗೊಳಪಡಿಸಿ, ಲೋಪಗಳಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಶಾಲೆಗಳಲ್ಲೂ, ಅಂಗನವಾಡಿಗಳಲ್ಲೂ ಮಕ್ಕಳಿಗೆ ಅತ್ಯುತ್ತಮ ಪೌಷ್ಠಿಕ ಆಹಾರವನ್ನು ಒದಗಿಸುವುದಕ್ಕೆ ಸಕಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಅಂತಲ್ಲಿ ನುಸುಳುವ ಜಾತಿಬೇಧದ ಪಿಡುಗನ್ನು ನಿರ್ದಾಕ್ಷಿಣ್ಯವಾಗಿ ತಡೆಯಬೇಕು.
ಜೊತೆಗೆ, ಮಕ್ಕಳಲ್ಲಿ ಬೊಜ್ಜು ಬೆಳೆಯುವುದಕ್ಕೆ ಕಾರಣವಾಗುತ್ತಿರುವ ಸಿಹಿತಿಂಡಿಗಳು, ಶೀಘ್ರ ತಿನಿಸುಗಳು, ಲಘು ಪೇಯಗಳು ಮುಂತಾದವನ್ನು ಶಾಲೆಗಳ ಬಳಿ ಮಾರಾಟ ಮಾಡದಂತೆ ನಿರ್ಬಂಧಿಸಬೇಕು ಮತ್ತು ಇವುಗಳಿಂದ ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಜನಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕು.ಒಂದರಿಂದ ಹತ್ತನೇ ತರಗತಿಯ ಎಲ್ಲ ಮಕ್ಕಳಿಗೂ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿ ನಾಲ್ಕು ವರ್ಷಗಳಾದವು. ವೈದ್ಯಕೀಯ, ಶಿಕ್ಷಣ ಹಾಗೂ ಯೋಗ ಕ್ಷೇತ್ರಗಳ ತಜ್ಞರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಇದನ್ನು ವಿರೋಧಿಸಿದ್ದರೂ ಸರಕಾರವು ಲೆಕ್ಕಿಸಲಿಲ್ಲ. ಅದಕ್ಕಾಗಿ ಕೋಟಿಗಟ್ಟಲೆ ವೆಚ್ಚದಲ್ಲಿ 65000ಕ್ಕೂ ಮಿಕ್ಕಿ ಯೋಗ ಶಿಕ್ಷಕರನ್ನು ನಿಯುಕ್ತಿಗೊಳಿಸಲಾಯಿತು. ಸಾಮಾಜಿಕ ಚಟುವಟಿಕೆಗಳಿಗಾಗಿ ಅಥವಾ ಆಟೋಟಗಳಿಗಾಗಿ ಮೀಸಲಿಟ್ಟಿದ್ದ ಸಮಯವನ್ನು ಯೋಗಾಭ್ಯಾಸಕ್ಕೆ ನೀಡಲಾಯಿತು. ಆದರೆ ಯೋಗಾಭ್ಯಾಸವು ಮಕ್ಕಳಿಗೆ ಉಪಯುಕ್ತ ಅಥವಾ ಸುರಕ್ಷಿತವೆನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ, ಮಾತ್ರವಲ್ಲ, ಇನ್ನಿತರ ಆಟೋಟಗಳಿಗೆ ಸಮನಾದ ವ್ಯಾಯಾಮವನ್ನೂ ಅದು ಒದಗಿಸುವುದಿಲ್ಲ. ಮಕ್ಕಳಿಗೆ, ಅದರಲ್ಲೂ ಹುಡುಗಿಯರಿಗೆ, ಯೋಗಾಭ್ಯಾಸದ ಕಟ್ಟುಪಾಡುಗಳನ್ನು ಪಾಲಿಸಲಾಗದೆ ತೀವ್ರವಾದ ಮುಜುಗರಕ್ಕೂ ಕಾರಣವಾಗಬಹುದು. ಆದ್ದರಿಂದ ಕಡ್ಡಾಯ ಯೋಗಶಿಕ್ಷಣವನ್ನು ಈ ಕೂಡಲೇ ನಿಲ್ಲಿಸಿ, ಮಕ್ಕಳ ಮನೋದೈಹಿಕ ವಿಕಾಸವನ್ನು ಪ್ರಚೋದಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡುವ ಬಗ್ಗೆ ಹೊಸ ಸರಕಾರವು ಚಿಂತಿಸಬೇಕು.
ಹಿಂದಿನ ಸರಕಾರವು ಜನರ ಊಟವನ್ನೂ ನಿಯಂತ್ರಿಸಲೆತ್ನಿಸಿತು. ಮಾಂಸಾಹಾರವನ್ನು ಅವಹೇಳನ ಮಾಡಿ, ಮಾಂಸಾಹಾರಿಗಳೆಲ್ಲ ಕ್ರೂರಿಗಳೆಂದು ಹೀಯಾಳಿಸಲಾಯಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆಗಳನ್ನೂ ಲೆಕ್ಕಿಸದೆ ಗೋಹತ್ಯೆಯನ್ನು ನಿಷೇಧಿಸಿ ಪಶುಗಳ ಮಾಂಸದ ಮಾರಾಟವನ್ನು ತಡೆಯುವ ಪ್ರಯತ್ನಗಳಾದವು. ವಿರೋಧ ಪಕ್ಷದ ನಾಯಕರಾಗಿ ಇದನ್ನು ವಿರೋಧಿಸಿದ್ದ ಈಗಿನ ಮುಖ್ಯಮಂತ್ರಿಗಳು ಜನರ ಊಟದ ಹಕ್ಕನ್ನು ಮರಳಿಸುವುದಕ್ಕೆ ಆದ್ಯತೆ ನೀಡಬೇಕು. ಪಶು ಮಾಂಸ ಸೇವನೆಯ ಬಗ್ಗೆ ಮನುಸ್ಮೃತಿ, ಶತಪಥ ಬ್ರಾಹ್ಮಣಗಳಲ್ಲಿರುವ ಪ್ರಸ್ತಾಪಗಳು, ಎತ್ತಿನ ಮಾಂಸ ಸೇವನೆಯ ಲಾಭಗಳ ಬಗ್ಗೆ ಆದಿ ಶಂಕರಾಚಾರ್ಯರ ಟಿಪ್ಪಣಿ, (ಬೃಹದಾರಣ್ಯಕ ಉಪನಿಷತ್ತಿನ ಭಾಷ್ಯ, 6:4:18), ಹಿಂದುಗಳು, ಅದರಲ್ಲೂ ಬ್ರಾಹ್ಮಣರು, ಗೋಮಾಂಸ ಸೇವಿಸುವ ಬಗ್ಗೆ ಸ್ವಾಮಿ ವಿವೇಕಾನಂದರ ನಿಲುವುಗಳು (ಸಂಪೂರ್ಣ ಕೃತಿಗಳು, 3:174, 536), ರಾಮಾಯಣ, ಭಗವದ್ಗೀತೆ, ಚರಕ ಸಂಹಿತೆಗಳಲ್ಲಿ ಮಾಂಸ ಸೇವನೆಗೆ ನೀಡಲಾಗಿರುವ ಸಮರ್ಥನೆಗಳು ಮಾಂಸಾಹಾರವನ್ನು ಬಲವಾಗಿ ಬೆಂಬಲಿಸುತ್ತವೆ. ಅಡ್ಡಾಡಿ ಹುಲ್ಲು ಮೇಯ್ದು ಒಳ್ಳೆಯ ಕಸುವುಳ್ಳ ಪಶುಗಳ ಮಾಂಸವು ಹೆಚ್ಚು ಆರೋಗ್ಯಕರವೆನ್ನುವುದೂ ಇದಕ್ಕೆ ಪೂರಕವಾಗಿದೆ.
ಹಿಂದಿನ ಸರಕಾರವು ಜಾತಿ-ಜಾತಿಯ ಮಠ-ಮಂದಿರಗಳಿಗೆ ಕೋಟಿಗಟ್ಟಲೆ ಹಣವನ್ನು ಹಂಚಿತು. ಸರಕಾರಿ ವೆಚ್ಚದಲ್ಲಿ ಗಂಗೆಯ ನೀರು, ತಿಮ್ಮಪ್ಪನ ಲಡ್ಡು ಹಂಚಿದ್ದಲ್ಲದೆ ಪಂಚತೈಲದ ದೀಪಾರಾಧನೆಯನ್ನೂ ನಡೆಸಲಾಯಿತು. ಮಂತ್ರಿಗಳ ಕಛೇರಿಗಳಲ್ಲೂ, ಸರಕಾರಿ ನಿವಾಸಗಳಲ್ಲೂ ವಾಸ್ತು ದೋಷ ಪರಿಹಾರಕ್ಕೆ ಇನ್ನಷ್ಟು ಕೋಟಿಗಳಾದವು. ಮುಖ್ಯಮಂತ್ರಿಯಾದಿಯಾಗಿ ಸಚಿವ ಗಡಣವೆಲ್ಲ ಮಾಟ-ಮಂತ್ರ-ಜ್ಯೋತಿಷ್ಯಗಳ ಮೊರೆ ಹೋಯಿತು. ಹಾಗಿದ್ದರೂ ಸೋತು ಅಧಿಕಾರ ನಷ್ಟವಾಯಿತು, ಕೆಲವರಿಗೆ ಜೈಲೇ ಗತಿಯಾಯಿತು. ಪ್ರಖರ ಚಿಂತನೆಗೂ, ವೈಚಾರಿಕತೆಗೂ ಹೆಸರುಳ್ಳವರಾದ ತಾವು ಇನ್ನು ರಾಜ್ಯದ ಆಡಳಿತದಲ್ಲೂ ಅದೇ ವೈಚಾರಿಕತೆಯನ್ನು ಅಳವಡಿಸಿ ಜ್ಯೋತಿಷ್ಯ-ವಾಸ್ತು-ಹೋಮಗಳನ್ನೆಲ್ಲ ದೂರವಿರಿಸುತ್ತೀರೆಂದು ಆಶಿಸುತ್ತಿದ್ದೇವೆ.
ಹಾಗೆಯೇ, ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಯಾ ಮಠಗಳಿಗೆ ವಹಿಸಿದರೆ ಮತ್ತು ಪ್ರಾಚೀನ ಪರಂಪರೆಯನ್ನು ರಕ್ಷಿಸುವ ಹೆಸರಲ್ಲಿ ಬದಲಿ ಚಿಕಿತ್ಸಾಲಯಗಳನ್ನು ಉತ್ತೇಜಿಸಿದರೆ ಹಿಂದುಳಿದ ಪ್ರದೇಶಗಳ ಜನರನ್ನು ಅತ್ಯಾಧುನಿಕ ಚಿಕಿತ್ಸೆಯಿಂದ ವಂಚಿಸಿದಂತಾಗುತ್ತದೆ ಮತ್ತು ಚಿಕಿತ್ಸೆಯಲ್ಲಿ ಗೊಂದಲಕ್ಕೂ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಬಲಪಡಿಸಿ, ಅಲ್ಲಿ ನುರಿತ ವೈದ್ಯರ ಸೇವೆಯನ್ನು ಪ್ರೋತ್ಸಾಹಿಸುವ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದ ಕೆಲ ಭಾಗಗಳಲ್ಲಿ ನೈತಿಕತೆಯ ಹೆಸರಲ್ಲಿ ಯುವಜನರ ಮೇಲೆ ಅನೇಕ ದಾಳಿಗಳಾಗಿವೆ ಹಾಗೂ ಪೋಲೀಸರು ದಾಳಿಗೊಳಗಾದವರನ್ನೇ ಪೀಡಿಸಿದ ಪ್ರಕರಣಗಳು ವರದಿಯಾಗಿವೆ. ಇಂತಹಾ ಘಟನೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವುದರ ಜೊತೆಗೆ ಯುವಜನರ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುವುದರಿಂದ ಅವನ್ನು ಮಟ್ಟ ಹಾಕಿ, ದಾಳಿಕೋರರನ್ನು ಶಿಕ್ಷೆಗೊಳಪಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ರಾಜ್ಯದ ಜನತೆ, ವಿಶೇಷವಾಗಿ ಮಕ್ಕಳು ಹಾಗೂ ಯುವಜನರು, ತಮ್ಮನ್ನು ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ರಾಜ್ಯದ ಸುಖ-ಸಮೃದ್ಧಿಯನ್ನು ಕಾಯುವ ತಮ್ಮ ಪ್ರಯತ್ನಗಳಿಗೆ ಏಳು ಕೋಟಿ ಕನ್ನಡಿಗರ ಬೆಂಬಲ ಇದ್ದೇ ಇರುತ್ತದೆ.







ಡಾ. ಶ್ರೀನಿವಾಸ ಕಕ್ಕಿಲ್ಲಾಯರ ಅಭಿಪ್ರಾಯಕ್ಕೆ ನನ್ನದೊಂದಿಷ್ಟೂ ಸೇರಿಸುವುದಾದರೆ ಬಿಸಿಯೂಟ ಸ್ವಾದಿಷ್ಟವಾಗಿರಬೇಕು. ಎಷ್ಟೋ ಶಾಲೆಗಳಲ್ಲಿ ಉಣ್ಣಲಾಗದ ಕಳಪೆ ಊಟವನ್ನು ಕೊಟ್ಟು ಮಕ್ಕಳು ಊಟ ಮಾಡದಿರುವಾಗ ಬಲಾತ್ಕಾರವಾಗಿ ಉಣ್ಣುವಂತೆ ಒತ್ತಾಯಿಸಲಾಗುತ್ತದೆ. ಎಷ್ಟೋ ವಿದ್ಯಾರ್ಥಿಗಳು ಉಣ್ಣಲಾಗದೆ ಶಾಲೆ ಬಿಟ್ಟದ್ದುಂಟು. ಆದ್ದರಿಂದ ನನ್ನ ಕಳಕಳಿಯ ವಿನಂತಿಯೇನೆಂದರೆ ಶಾಲೆಯ ಮುಖ್ಯೋಪಾಧ್ಯಾಯರು ಒಮ್ಮೆ ಆಬಿಸಿಯೂಟದ ರುಚಿ ನೋಡಿದ ಮೇಲೆ ಅದು ತಿನ್ನಲು ಯೋಗ್ಯ ಎಂದು ಪರೀಕ್ಷಿಸಿದ ಮೇಲೆ ಅದನ್ನು ಮಕ್ಕಳ ಮೇಲೆ ಪ್ರಯೋಗಿಸಬಹುದಾಗಿದೆ. ಗುಣಮಟ್ಟದ ಊಟಕ್ಕೆ ಪ್ರಾಶಸ್ತ್ಯ ನೀಡಬೇಕು. ಮೊಟ್ಟೆ ಊಟವನ್ನು ಇಷ್ಟವಾದವರಿಗೆ ಕೊಡಲೇಬೇಕು. ರುಚಿ, ಶುಚಿಯಾದ ಊಟಕ್ಕೆ ಪ್ರಥಮ ಆದ್ಯತೆ ನೀಡಬೇಕು. ಮತ್ತು ಹದಿಹರೆಯದವರು ಹಾದಿ ತಪ್ಪುವುದು ಇತ್ತೀಚಿಗೆ ಹೆಚ್ಚಾಗಿದೆ. ಆವರಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ದಯವಿಟ್ಟು ಇಂದಿನ ಸರಕಾರವು ಹದಿರೆಯದವರ ಕುರಿತಾಗಿ ಹೆಚ್ಚಿನ ಕಾಳಜಿವಹಿಸಲು ಅವರಿಗೆ ವಿಶೇಷವಾದ ಕೌನ್ಸೆಲಿಂಗ್ ನ ಅವಶ್ಯಕತೆ ಇದೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ