ಚಿತ್ರ ಸಂತೆ’ ಕೇಳಿದ್ದೀವಿ, ಆದ್ರೆ ಸುದ್ದಿ ಸಂತೆ? ಕಳೆದ ಒಂದಷ್ಟು ದಿನಗಳಿಂದ ಪೇಪರ್, ಚಾನಲ್ ಗಳಿಗಂತೂ ಸುದ್ದಿಯ ಬರ ಇಲ್ಲ. ಎಷ್ಟೋ ಸಲ ಸಂಜೆ ಡೆಡ್ ಲೈನ್ ಹತ್ರ ಬರ್ತಾ ಇದ್ರೂ ಲೀಡ್ ಮಾಡೋದಿಕ್ಕೆ ಲಾಯಕ್ಕಾದ ಒಂದು ಐಟಂ ಸಿಗ್ಲಿಲ್ವಲ್ಲಪ್ಪ ಅಂತ ಒದ್ದಾಡೋ ಸ್ಥಿತಿ ಇರುತ್ತೆ. ಅಮೀರ್ ಖಾನ್ ಹೇಳಿದ ಹಾಗೇ ‘ಆಲ್ ಇಸ್ ವೆಲ್, ಆಲ್ ಇಸ್ ವೆಲ್, ಆಲ್ ಇಸ್ ವೆಲ್’ ಆಗೋಗಿ ಬಿಟ್ರೆ ಮೊದಲು ಬಾಗಿಲು ಹಾಕಿಕೊಂಡು ಮನೆಗೋಗಬೇಕಾದವರು ಪತ್ರಕರ್ತರೇ. ಹಾಗಾಗೀನೆ ಒಂದಷ್ಟು ಅರಾಜಕತೆ, ಒಂದು ಸ್ಕ್ಯಾಂಡಲ್, ಒಂದಷ್ಟು ಡೆತ್, ವಿ ಐ ಪಿಗಳ ಕೋಳಿ ಜಗಳ, ಬೇಕಾದ್ರೆ ಬಾಂಬ್ ದಾಳಿ ಎಲ್ಲಾನೂ ಇರಲಪ್ಪ ಅನ್ನೋ ಸ್ಥಿತಿ ಪತ್ರಕರ್ತರದ್ದು. ಶಾಂತಂ ಪಾಪಂ, ಶಾಂತಂ ಪಾಪಂ ಯಾರಾದ್ರೂ ಹಾಗೆ ಅಂದುಕೊಳ್ಳೋದು ಉಂಟಾ? ಆದ್ರೆ ಸುದ್ದಿಮನೆಯಲ್ಲಿ ಒಂದಿಷ್ಟು ಇಣುಕಿ ಹಾಕಿ, ಸಂಜೆಯವರೆಗೂ ದೇಶ ‘ಆಲ್ ಇಸ್ ವೆಲ್’ ಆಗಿದ್ದಾಗ ಶಿಫ್ಟ್ ಮುಖ್ಯಸ್ಥನ ಮುಖದಲ್ಲಿ ನಿರಿಗೆಗಳು ಮೂಡಿರುತ್ತೆ. ಸಂಜೆ ಅದೇ ತಲೆಬಿಸೀಲಿ ಕ್ಯಾಂಟೀನ್ ಗೆ ಹೋಗಿ ಒಂದೆರಡು ಸಿಗರೇಟು ಸುಟ್ಟು, ಎರಡು ಗುಟುಕು ಟೀ ಗಂಟಲಿಗೆ ಸುರಕೊಂಡು ಒಳಗೆ ಬರೋದ್ರಲ್ಲಿ ‘ಸಾರ್, ಬಾಗಲಕೋಟೆಯಲ್ಲಿ ಆಕ್ಸಿಡೆಂಟ್ ಅಂತೆ’ ಅಂತ ಅನ್ನಿ. ತಕ್ಷಣ ಮುಖದಲ್ಲಿ ನೂರು ವ್ಯಾಟ್ ಬಲ್ಬ್ ಹತ್ತಿಕೊಳ್ಳುತ್ತೆ. ‘ಎಷ್ತಂತೆ ಡೆತ್ತು?’ ಅನ್ನೋದೇ ಮೊದಲ ಮಾತು. ಸಂಖ್ಯೆ ಕಡಿಮೆ ಆಗಿ ಲೀಡ್ ಆಗದೇ ಹೋದ್ರೆ ಅನ್ನೋ ಆತಂಕ ಮಾತಲ್ಲಿ ಒದ್ದಾಡ್ತಾ ಇರುತ್ತೆ.

ಇನ್ನೇನು ಬುಲೆಟಿನ್ ಗೆ ಹತ್ತು ನಿಮಿಷ ಇದೆ. ಪೇಪರ್ ಪ್ರಿಂಟ್ ಗೆ ಹೋಗೋದಿಕ್ಕೆ ಅರ್ಧ ಘಂಟೆ ಇದೆ. ಆಗ ಆಕ್ಸಿಡೆಂಟ್ ಆಗಿದೆ ಎರಡು ಡೆತ್ತು ಅಂತ ಫೋನ್ ಮಾಡಿ ಆ ಕಡೆ ಫೋನ್ ನ ‘ಧಡ್’ ಅಂತ ಕುಕ್ಕಿದ ಶಬ್ದ ಕೇಳುತ್ತೆ. ಯಾಕಂದ್ರೆ ಡೆಡ್ ಲೈನ್ ಹತ್ತಿರ ಬಂದಿರೋ ಬುಲೆಟಿನ್, ಪೇಪರ್ ನ ಮೂಗುದಾರ ಎಳೆದು ಒಂದೆರಡು ಕ್ಷಣ ನಿಲ್ಲಿಸಬೇಕು ಅಂದ್ರೆ ಏನಿಲ್ಲಾಂದ್ರೂ ಡೆತ್ತು ನಿಮ್ಮ ಅಷ್ಟೂ ಕೈ ಬೆರಳುಗಳ ಸಂಖ್ಯೆಯನ್ನ ದಾಟಿರಬೇಕು.
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ನಿಮಗೆ ಇವೂ ಇಷ್ಟವಾಗಬಹುದು…




0 Comments