ಒಂದು ಸಮ್ಮೇಳನ ಹೇಗಿರಬೇಕು? ಎನ್ನುವುದಕ್ಕೆ ಒಂದು ಸಮ್ಮೇಳನ ಹೇಗಿರಲಿಲ್ಲ ಎನ್ನುವುದೇ ಮಾನದಂಡ. ೩೩ ಸಮ್ಮೇಳನಗಳನ್ನು ಕಂಡ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸುಧೀರ್ಘ ಇತಿಹಾಸವೇ ಇದೆ. ಕಳೆದ ೩೩ ವರ್ಷಗಳ ಎಲ್ಲಾ ಸಮ್ಮೇಳನಗಳನ್ನು ಕಂಡವರು ಇಲ್ಲ. ಆದರೆ ೩೪ನೆಯ ಸಮ್ಮೇಳನ ಮಾತ್ರ ಅದು ಜರುಗುವ ಮುನ್ನವೇ ಸಾಕಷ್ಟು ಸುದ್ದಿಯಾಗಿದೆ. ಅಷ್ಟೇ ಅಲ್ಲ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸಮ್ಮೇಳನ ಎಂದರೆ ಹೀಗಿರಬೇಕು ಎನ್ನುವ ಮೆಚ್ಚುಗೆ ಆ ಕಾರ್ಯಕ್ರಮದಲ್ಲಿ ಇರುವ ಹೂರಣದಿಂದಲೇ ಗೊತ್ತಾಗಿದೆ ಎನ್ನುವ ಮೆಚ್ಚುಗೆ ಮಾಧ್ಯಮ ಹಾಗೂ ಮಾಧ್ಯಮದಲ್ಲಾದವರಿಂದಲೂ ಸಮಾನವಾಗಿ ಬರುತ್ತಿದೆ.
ಯಾವುದೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಧರ್ಮಸ್ಥಳದಲ್ಲಿ ಜರುಗುವ ಅಖಿಲ ಭಾರತ ಸಾಹಿತ್ಯ ಹಾಗೂ ಧಾರ್ಮಿಕ ಸಮ್ಮೇಳನ, ವಿಶ್ವ ಬಂಟರ ಸಮ್ಮೇಳನ, ತುಳುವರು ಪ್ರತೀ ವರ್ಷ ಏರ್ಪಡಿಸುವ ತುಳು ಪರ್ಬ, ನಮ್ಮೂರ ಹಬ್ಬಕ್ಕೆ ಸರಿಸಾಟಿಯಾಗಿ ಈ ಬಾರಿ ಪತ್ರಕರ್ತರ ರಾಜ್ಯ ಸಮ್ಮೇಳನ ಜರುಗುತ್ತಿದೆ.
ಅತ್ಯಂತ ಅಚ್ಚುಕಟ್ಟಾದ ಸಮ್ಮೇಳನವನ್ನು ಪತ್ರಕರ್ತರು ಕಂಡು ಸಾಕಷ್ಟು ಕಾಲವಾಗಿದೆ. ಇತ್ತೀಚಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭವಂತೂ ಅಚ್ಚುಕಟ್ಟಾಗಿ ಆರಂಭವಾಗಿ ಕೊನೆಗೆ ಬೆಂಗಳೂರು ಮಹಾನಗರಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದ ನೆಲೆಗೆ ಹೋಗಿ ನಿಂತುಬಿಟ್ಟಿತು.
ಇಂತಹ ಸಮಯದಲ್ಲಿ ಪ್ರಸ್ತುತ ಮಾಧ್ಯಮ ಎದುರಿಸುತ್ತಿರುವ ಪ್ರಸ್ತುತ ಸವಾಲುಗಳನ್ನು ಎದುರಿಗಿಟ್ಟುಕೊಂಡು ಸಮ್ಮೇಳನ ಜರುಗುತ್ತಿರುವುದು ವಿಶೇಷ. ಇದರಲ್ಲಿ ಅಷ್ಟೇ ಗಂಭೀರವಾದ ವಿಷಯಗಳೂ ಹಾಗೂ ಅದನ್ನು ಮಂಡಿಸಲು ಆಯಾ ಕ್ಷೇತ್ರದ ತಜ್ಞರನ್ನು ಒಂದುಗೂಡಿಸಿರುವುದು ಸಮ್ಮೇಳನದ ಆಯೋಜಕರ ಕಾಳಜಿಯನ್ನು ತೋರಿಸುತ್ತದೆ.
ಇಷ್ಟೇ ಅಲ್ಲದೆ ಪತ್ರಿಕಾ ಸಂಪಾದಕರ ಸಮ್ಮಿಲನ , ದೃಶ್ಯ ಮಾಧ್ಯಮದವರ ಎದುರಿನ ಸಂಕಷ್ಟಗಳು ಎಲ್ಲವೂ ಈ ಅಂಗಳದಲ್ಲಿವೆ. ಡಿಜಿಟಲ್ ಮಾಧ್ಯಮ ಸಾಂಪ್ರದಾಯಿಕ ಮಾಧ್ಯಮಗಳಿಗೆ ಒಡ್ಡಿರುವ ಸವಾಲು ಅದೂ ಚರ್ಚೆಯಾಗುತ್ತಿದೆ.
ಸಮಾನಾಂತರ ವೇದಿಕೆಯನ್ನೂ ಈ ಸಮ್ಮೇಳನ ಹೊಂದಿದ್ದು ವಿಚಾರ ಮಂಥನಕ್ಕೆ ದಾರಿ ಮಾಡಿಕೊಟ್ಟಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಈಗಾಗಲೇ ‘ಮೀಡಿಯಾ ಫ್ರೆಂಡ್ಸ್’ ಎನ್ನುವ ವಾಟ್ಸ್ ಅಪ್ ಗ್ರೂಪ್ ಮೂಲಕ ಎಲ್ಲರನ್ನೂ ಚರ್ಚೆಗೆ ಕರೆತಂದಿರುವ, ಮಾಧ್ಯಮವಷ್ಟೇ ಅಲ್ಲದೆ ಸಮಕಾಲೀನ ವಿಚಾರಗಳ ಚರ್ಚೆಗೂ ದಾರಿ ಮಾಡಿಕೊಟ್ಟಿರುವ ಶಿವಾನಂದ ತಗಡೂರು ಅವರು ಈ ಸಮ್ಮೇಳನ ಭಿನ್ನವಾಗಿ ಮೂಡಲು ಮುಖ್ಯ ಕಾರಣ. ‘ಇಂತಹ ಸಮ್ಮೇಳನ ಆಯೋಜನೆಗೆ ಸಂಘದ ಎಲ್ಲಾ ಪದಾಧಿಕಾರಿಗಳ, ರಾಜ್ಯದ ಪತ್ರಕರ್ತರ ಕಾಣ್ಕೆಯೇ ಕಾರಣ’ ಎಂದು ಶಿವಾನಂದ ತಗಡೂರು ಬಣ್ಣಿಸುತ್ತಾರಾದರೂ ಅವರ ಕಣ್ಣೋಟ ಸಮ್ಮೇಳನಕ್ಕೆ ಹೊಸ ತಿರುವು ನೀಡಿದೆ.
ಈ ಮೊದಲಿನಿಂದಲೂ ಅಚ್ಚುಕಟ್ಟುತನಕ್ಕೆ ಹಾಗೂ ವೈಚಾರಿಕ ಮಂಥನಕ್ಕೆ ಹೆಸರಾಗಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಈ ಸಮ್ಮೇಳನಕ್ಕೆ ಹೊಸ ಹುರುಪು ತಂದಿತ್ತಿದೆ.
0 ಪ್ರತಿಕ್ರಿಯೆಗಳು