ಕೆಂಪು ಗುಲ್ ಮೋಹರ್ ಮರದ
ಬುಡದಲ್ಲಿ ಕಪ್ಪು ನೆರಳ
ಪಕಳೆ ಚೆಲ್ಲಾಡಿದೆ
ಯಾರದೋ ಪಾದದಡಿ ನಲುಗಿದ
ಹೂವ ನೋವ ಘಮ
ಗಾಳಿಯಲ್ಲಿನ್ನೂ ಸರಿದಾಡಿದೆ
ಹೂವ ನೋವಿಗೆ
ಭಕ್ತಿ-ಮುಕ್ತಿಯ ಬಣ್ಣ ಬಳಿವ ಮಂದಿ
ಮೃದು ಉಸಿರುಗಳ
ಸಮಾಧಿಯ ಮೇಲೆಯೇ ಸಾಗಬೇಕೇ
ಭಕ್ತಿಯ ಹಾದಿ….!!??
ಅರಿವಿಗೆ ನಿಲುಕಿ ಉಳಿದ ಗತ
ಇಲ್ಲಿ ಈಗ ಇತಿಹಾಸ
ಮೌನ ಸಂಗತಿಗಳಿಗಿಲ್ಲ ಜಾಗ
ದೇವರಿದ್ದ ಜಾಗದಲ್ಲೇ ದೇವದೂತ
ಮಂದಿರ ಉರುಳಿ ಬಸ್ತಿಯಾಗಿ
ಬಸ್ತಿ ಕಳೆದು ವಿಲಾಸ ಮಂಟಪವಾಗಿ
ಕೊನೆಗೊಮ್ಮೆ ಸರಿವ ಕಾಲದಡಿ
ಪಾಳುಗುಡ್ಡೆಯಾಗಿ ಅನಾಥ
ಪರಮಾರ್ಥದ ಅರ್ಥ ಹೇಳುವ
ಸ್ವಯಂ ಪಂಡಿತರು
ವಿಪರೀತಾರ್ಥಗಳ ಸೃಷ್ಟಿಸುವ
ವಿಚಿತ್ರ ಸೋಜಿಗ ಜಗ
ಆರತಿಯ ಜ್ವಾಲೆ
ಹೂವ ಸುಡುವ ಬೆಂಕಿಯೂ….!!
ಎಲ್ಲ ತೊರೆದವರ ಹಿಂದೆ
ಕೊಡುವ ಜನರ ಸಾಲು ಸಾಲು
ಹನಿ ನೀರ ಸಿಂಚನಕೆ ಕಾಯ್ವ
ಎಳೆಗಿಡದ ಬಯಕೆಗಿಲ್ಲಿ
ಬೆಲೆಯಿಲ್ಲ, ಕೊಡಲು ಪುರುಸೊತ್ತಿಲ್ಲ
ಇಲ್ಲಿ ಎಲ್ಲವೂ ಹೀಗೇ..
ವಿಚಿತ್ರ, ಕಲಸುಮೇಲೊಗರದ ಚಿತ್ರ
ಇದ್ದುದೆಲ್ಲವ ಬಿಟ್ಟು ನೆಟ್ಟಗೆ ನಿಂತ
ಗೊಮ್ಮಟನಿಗೆ ನಿರಂತರ ಮಸ್ತಕಾಭಿಷೇಕ….!!
]]>
0 Comments