ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಹೆಣ್ಣೆಂದರೆ ಪ್ರೀತಿಯ ಕಡಲು" ಎಂದು ಬರೆದದ್ದು ನೆನಪಾಯಿತು.

ಮಂಜನಾಥ್ ಸಿ ನೆಟ್ಕಲ್

ಮೊನ್ನೆ ಬಸ್ಸಿನಲ್ಲಿ ವಂಡರ್ ಲಾ ಗೆ ಪಿಯುಸಿ ವಿದ್ಯಾರ್ಥಿನಿಯರ ಜೊತೆ ಪಯಣಿಸುವಾಗ ನಡೆದ ಈ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲಾಗುತ್ತಿಲ್ಲ. ಇವತ್ತಿಗೂ ಅಪ್ಪ ಅಮ್ಮಂದಿರು ಹೆಣ್ಣು ಮಗುವೇ ಬೇಕೆಂದು ಯಾಕೆ ಅಪೇಕ್ಷೆ ಪಡುತ್ತಾರೆ ಎಂಬುದಕ್ಕೆ ಈ ಪ್ರಸಂಗ ಸಾಕು.

ವಂಡರ್ ಲಾ ದಿಂದ ವಾಪಸ್ ಬರುವಾಗ ನನ್ನ ಪಾಡಿಗೆ ನಾನು ಕಿವಿಗೆ ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಕುಳಿತ್ತಿದ್ದೆ. ನಾನು ಈಗ ಕೇವಲ ಡಿಗ್ರಿ ಮತ್ತು ಪಿ ಜಿ ತರಗತಿ ಪಾಠ ಮಾಡುವುದರಿಂದ ಪಿಯೂಸಿ ಮಕ್ಕಳ ಪರಿಚಯವಿರುವುದಿಲ್ಲ. ಹೀಗಾಗಿ ಮೌನವಾಗಿ ನನ್ನ ಲೋಕದಲ್ಲಿ ಇದ್ದೆ. ಪಕ್ಕದಲ್ಲಿ ಕುಳಿತಿದ್ದ ಪ್ರಥಮ ಪಿಯುಸಿ ಹುಡುಗಿಯೊಬ್ಬಳು ಮಾತಿಗೆಳೆದಳು. ನಾನು ಅವಳ ಓದಿನ ಬಗ್ಗೆ ವಿಚಾರಿಸಿದೆ.

ನಾನು ಎಂ ಬಿ ಎ ಮಾಡಬೇಕು ಅಂತಾ ಇದೀನಿ ಅಂದಳು. ಅವರ ತಂದೆ ತಾಯಿ ಬಗ್ಗೆ ಕೇಳಿದೆ. ಅವರ ತಂದೆ ಗಾರೆ ಕೆಲಸದ ಮೇಸ್ತ್ರಿ . ಅಮ್ಮ ಮನೆ ಕೆಲಸ ಮಾಡುತ್ತಾರೆ. ಅಣ್ಣ ಸಹ ಓದದೆ ಗಾರೆ ಕೆಲಸಕ್ಕೆ ಸೇರಿದ್ದಾನೆ. ಅಕ್ಕಂದಿರು ಪ್ರೇಮ ವಿವಾಹ ಮಾಡಿಕೊಂಡು ಮನೆ ಬಿಟ್ಟಿದ್ದಾರೆ. ಅವರ ಅಮ್ಮನಿಗೆ ಇದೇ ಯೋಚನೆಯಲ್ಲಿ ಬಿ.ಪಿ ಜಾಸ್ತಿಯಾಗಿದೆ. ಆರೋಗ್ಯ ಆಗಾಗ ಕೈ ಕೊಡುತ್ತದೆ. ಅಪ್ಪ ಸಹ ಈಗ ಅಷ್ಟಾಗಿ ದುಡಿಯಲು ಆಗುತ್ತಿಲ್ಲ .

ನನ್ನ ಅಕ್ಕಂದಿರು ಮಾಡಿದ ಹಾಗೆ ನಾನು ಮಾಡುವುದಿಲ್ಲ. ಚೆನ್ನಾಗಿ ಓದಿ ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಹೀಗೆ ಎಲ್ಲ ಹದಿ ಹರೆಯದ ಆದರ್ಶಗಳ ಬೆನ್ನು ಹತ್ತಿದ ಹುಡುಗಿಯ ಹಾಗೆ ಹೇಳುತ್ತಿದ್ದಳು. ನಾನು ಹೂಂ ಗುಡುತ್ತಿದ್ದೆ. ಎಲ್ಲರೂ ಓದುವ ಸಮಯದಲ್ಲಿ ಹೀಗೇ ಯೋಚನೆ ಮಾಡ್ತಾ ಇರ್ತಾರೆ. ಆಮೇಲೆ ಯಾವುದಾದರೂ ಹುಡುಗ ಮೋಹದ ಬಲೆ ಬೀಸಿದರೆ ಪ್ರೀತಿಯಲ್ಲಿ ಬಿದ್ದು ಅವಳ ಅಕ್ಕಂದಿರು ಮಾಡಿದಂತೆ ಇವಳೂ ಪರಾರಿಯಾಗುವುದು ಗ್ಯಾರಂಟಿ ಅಂದುಕೊಂಡು ಸುಮ್ಮನಿದ್ದೆ.

ಹಾಗಯೇ ನನ್ನ ಗಮನ ಅವಳು ಕೈಲಿ ಹಿಡಿದಿದ್ದ ಪ್ಲಾಸ್ಟಿಕ್ ಬ್ಯಾಗ್ ನತ್ತ ನನ್ನ ಗಮನ ಹರಿಯಿತು. ಏನಮ್ಮ ಅದರಲ್ಲಿ ಇರುವುದು ಎಂದೆ. “ಸರ್ ನಮ್ಮ ಅಮ್ಮ ವಂಡರ್ ಲಾ ಖರ್ಚಿಗೆ 200 ರೂಪಾಯಿ ಕೊಟ್ಟಿದ್ದರು. ನನ್ನ ಅಣ್ಣ 1000 ರೂಪಾಯಿ ಕೊಟ್ಟ. ನಾನು ಅಮ್ಮ ಕೊಟ್ಟ 200 ಅವನಿಗೆ ವಾಪಸ್ ಕೊಟ್ಟೆ. ಉಳಿದ 800 ರೂಪಾಯಿಯಲ್ಲಿ ನನ್ನ ಅಣ್ಣನಿಗೆ ಒಂದು ಟೀ ಶರ್ಟ್ , ಅಪ್ಪನ ಕಣ್ಣಿಗೆ ಒಂದು ಕೂಲಿಂಗ್ ಗ್ಲಾಸ್, ಹಾಗೂ ನಮ್ಮ ಅಮ್ಮನಿಗೆ ಬೊಂಬೆಗಳು ಅಂದರೆ ಇಷ್ಟ ಅಂತಾ ದೊಡ್ಡ ಕೋತಿಯ ಬೊಂಬೆ ತಗೊಂಡೆ” ಅಂದಳು.

ಅವಳ ಬ್ಯಾಗಿನಲ್ಲಿ ಇನ್ನೊಂದು ಚಿಕ್ಕ ಕೋತಿ ಬೊಂಬೆ ಇತ್ತು ” ಇದು ಯಾರಿಗಮ್ಮ ನಿನಗಾ “ಎಂದೆ. “ಇಲ್ಲ ಸರ್ ನಮ್ಮ ಸರ್ ಮಗಳದು ನಾಳೆ ಬರ್ತಡೆ ಅಂತೆ ಅವಳಿಗೆ ಈ ಬೊಂಬೆ” ಅಂದಳು. ಅವಳು ಹೇಳಿದ ಸರ್ ಮಗಳಿಗೆ ಈಗ ಸುಮಾರು 25 ವರ್ಷ ಆಗಿರಬಹುದು. ಅವಳನ್ನು ಇವಳೆಂದೂ ನೋಡಿರುವುದು ಕಾಣೆ. ಅವಳ ಸರ್ ನನ್ನ ಮಗಳಿಗೆ ಆ ಬೊಂಬೆ ಇಷ್ಟ ಅಂದರಂತೆ ಅಷ್ಟಕ್ಕೆ ಇವಳು ಅವಳಿಗೆ ಗಿಫ್ಟ್ ಖರೀದಿಸಿದ್ದಾಳೆ.

ನಿನಗೆ ಏನು ತಗೊಂಡೆಯಮ್ಮಾ ಎಂದು ಕೇಳಿದ್ದಕ್ಕೆ ನನಗೆ ಏನೂ ತಗೊಂಡಿಲ್ಲಾ ಸರ್. ನನ್ನನ್ನು ನನ್ನ ಅಪ್ಪ ಅಮ್ಮ ವಂಡರ್ ಲಾ ಗೆ ಕಳಿಸಿದ್ದೆ ದೊಡ್ಡದಲ್ವಾ ಸರ್. ಅದಕ್ಕೆ ನನಗೆ ಏನೂ ಬೇಡಾ ಸರ್. ಇದೆಲ್ಲಾ ಕೊಟ್ಟರೆ ಅವರಿಗೆಲ್ಲಾ ಖುಷಿಯಾಗುತ್ತಲ್ಲಾ ಅಷ್ಠೇ ಸಾಕು ಸರ್ ಎಂದಳು.. ನನ್ನ ಮನಸ್ಸು ತುಂಬಿ ಕಣ್ಣಲ್ಲಿ ನೀರು ಬಂತು .

ಯಾಕೆ ಹೆಣ್ಣು ಮಕ್ಕಳಿಗಾಗಿ ತಂದೆ ತಾಯಿ ಹಂಬಲಿಸುತ್ತಾರೆ ಎಂದು ಮತ್ತೊಮ್ಮೆ ಅರ್ಥವಾಯಿತು. ಟಿ ಕೆ ತ್ಯಾಗರಾಜ್ ಸರ್ ಮೊನ್ನೆ ಒಂದು ಕವನದಲ್ಲಿ “ಹೆಣ್ಣೆಂದರೆ ಪ್ರೀತಿಯ ಕಡಲು” ಎಂದು ಬರೆದದ್ದು ನೆನಪಾಯಿತು.

‍ಲೇಖಕರು admin

27 December, 2015

3 Comments

  1. ಶಮ, ನಂದಿಬೆಟ್ಟ

    ಹೆಣ್ಣೆಂದರೆ ಪ್ರೀತಿಯ ಕಡಲು ನಿಜ.. ಈಜುವ ಸಾಮರ್ಥ್ಯ ಇದ್ದವರಿಗಷ್ಟೇ ಅರ್ಥವಾಗುವ ಕಡಲು… ಬುದ್ಧಿ ಭಾವದಾಚೆಯ ಮಮತೆಯ ಮಡಿಲು

    • ಮಂಜುನಾಥ ಸಿ ನೆಟ್ಕಲ್

      ನಿಮ್ಮ ಮಾತು ಸತ್ಯ ಶಮ ರವರೆ ಹೆಣ್ಣು ಮಮತೆಯ ಮಡಿಲು ಸಿಡಿದರೆ ಸಿಡಿಲು

  2. Parimal

    hennu preetiya kadalu yembuvudu satya. adre aa satyana arta madkollo astralli ee jagattu avlige bahala novu nidirutte.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading