ಚೈತ್ರ ಶಿವಯೋಗಿಮಠ
ಪ್ರಣಾಮ ಚಂದ್ರಶೇಖರ ಎಂಬ ಯುವ ಕವಿಯ
ಆಂಗ್ಲ ಕವಿತೆ – “Of time and trees”ನ ಅನುವಾದ.
ಹೀಗೊಂದು ಸೊಗಸಾದ ಜಡ ಸಂಜೆ
ಆ ದುಮ್ಮಾನದ ಹಾಳುಸುರಿಯುವ ನನ್ನ ಊರು ಬಿಟ್ಟು
ತಿರುಗಾಡಲೆಂದು ಕಾಡಿನ ದಾರಿ ಹಿಡಿದು ಹೊರಟೆ
ಆ ಸುಂದರ ನೀರವತೆ ನನ್ನ ಸುತ್ತ ಮುತ್ತಿತು!
ರಸಮಯ ಕಾವ್ಯಕ್ಕಿಂತಲೂ ರಂಜನೀಯವೆನಿಸಿತು
ಮಸುಳಿಸುತ್ತಿರುವ ಸೂರ್ಯನ ಹೊಂಬಣ್ಣದ ಕಿರಣಗಳು,
ಕಡು ಕೇಸರಿಯ ಅವನು, ಅವರ್ಣೀಯ ವರ್ಣರಂಜಿತ ತೈಲಚಿತ್ರ!
ಹಸಿರೆಲೆಗಳು, ಛಾಯಾಗ್ರಾಹಕನಂತೆ ಸೂರ್ಯರಶ್ಮಿಯ ಸೆರೆಹಿಡಿದವು.
ಹೊನ್ನು-ಹಸಿರು, ಹಸಿರು-ಹೊನ್ನು; ಮಿಶ್ರಿತ ಹಲವಾರು
ಬಣ್ಣಗಳ ಹಬ್ಬದಂತಹ ವರ್ಣಪಟಲ!!
ಅಗಾಧ ಹೊಂಬಣ್ಣದ ನೀಲಾಗಸದ ಅಡಿ,
ಹಸಿರೆಲೆಗಳ ಮೇಲಾವರಣ ನವ ವಧುವಿನಂತೆ ಸಿಂಗರಿಸಿ, ಕಂಗೊಳಿಸಿತು
ಅರ್ಕನ ಆ ಕೊನೆಯ ದೀರ್ಘ ಓಜಸ್ಸಿನ ರೇಖೆಗಳು,
ಸತ್ಯಾನ್ವೇಷಕರು, ಪ್ರಕೃತಿಯ ಮರ್ಮದಲಿ ತಮ್ಮ ಮಾರ್ಗವನ್ನು ಅರಸುವದನ್ನು ಹೋಲುವಂತಿತ್ತು!
ಶರತ್ಕಾಲದ ಆ ಬಂಗಾರದ ಪರ್ಣಗಳು, ಸೂರ್ಯ ರಶ್ಮಿಯ ಚುಂಬನಕ್ಕೆ ಹಾಗೇ ನಾಚಿ ಕೆಂಪಗೆ ಹೊಳೆದವು!
ಮರದ ಕಾಂಡಗಳು, ನನ್ನ ಸ್ಮೃತಿಗಿಂತ ಹೆಚ್ಚು
ಬಲಾಢ್ಯವಾಗಿ ಬೆಳೆದು, ಸ್ವರ್ಗವನ್ನೇ ತಾಕುವಷ್ಟೆತ್ತರ!
ಆ ಪ್ರಕೃತಿ ಸೌಂದರ್ಯ, ಆ ಸುಂದರ ನೀರವ ಮೌನ ಆಹ್.. ಆಹ್ಲಾದಕರವಾಗಿತ್ತು
ಆದರೆ… ಈ ನಂದನದೊಳಗೂ ಮನ ಬಂಧನಗಳ
ಸಂಕೋಲೆಗೆ ಸಿಕ್ಕು ನಲುಗುತ್ತಿತ್ತು!
ಮುಳುಗುತ್ತಿರುವ ನೇಸರನಂತೆ, ಒಂದು ಅವ್ಯಕ್ತ ಭಯದ ಭಾವ, ಈ ಮನವನ್ನ ಮುಳುಗಿಸುವಂತೆ ಭಾಸವಾಯಿತು!
ಈ ನಂದನ ಹೀಗೇ ಉಳಿಯುವುದೆ??
ಉಳಿಯುವುದಾದರೆ ಅದೆಷ್ಟು ಕಾಲ?? ಕರ್ಕಶದೆದೆಯ ಮಾನವನ ಗರಗಸಕ್ಕೆ ಆಹಾರವಾಗುವವರೆಗೆ ಮಾತ್ರ!!
ಆಗಲೇ ಕೇಳಿತು, ತರಗೆಲೆಗಳ ಮರ್ಮರ ಸದ್ದು, ತಂಗಾಳಿಯ ಪಿಸುಮಾತು, ಗಿಡ-ಮರಗಳ ಮೆಲುನುಡಿ, ಹಕ್ಕಿ-ಪಿಕ್ಕಿಗಳಿಂಚರ!!
ಅರೆ!! ಇವೆಲ್ಲವೂ ಅನಾದಿಕಾಲದಿಂದಲೂ, ಮಾನವನಿಗೂ
ಮುಂದಿನಿಂದಲೂ ಇವೆಯಲ್ಲವೇ??
ಸಂದೇಹವೇ ಇಲ್ಲ! ಇವು ಅಜರಾಮರ, ಮನುಕುಲದ ನಂತರವೂ ಅಳಿಯದ ಸೌಂದರ್ಯವಿದು!!
ಮನ ನಿರಾಳವಾಯಿತು, ಒಮ್ಮೆಲೆ ಎಲ್ಲ
ದುಗುಡವೂ ಕರಗಿ ಹೋಯಿತು.
ಈ ನಂದನ, ತಿಳಿಸಿದ ಅಮೂಲ್ಯ ಪಾಠವದು.
ಕಾಲಗರ್ಭದಲಿ ಮನುಜನಳಿದರೂ, ನಿಸರ್ಗದ
ಸಗ್ಗ ಸಿರಿ ಅಳಿಯದೆ ಉಳಿಯುವುದು!!
ತುಂಬಾ ಚೆನ್ನಾಗಿದೆ