ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾವೇರಿಯಲ್ಲಿ ‘ತಪ್ತ’

ಸತೀಶ್ ಕುಲಕರ್ಣಿ

‘ತಪ್ತ’ ಎಂಬ ಅರ್ಧ ಗಂಟೆಯ ಏಕವ್ಯಕ್ತಿ ರಂಗ ನಾಟಕ ಹಾವೇರಿಯ ಹಂಚಿನಮನಿ ಆರ್ಟಗ್ಯಾಲರಿಯಲ್ಲಿ ಮನಮುಟ್ಟುವಂತೆ ಪ್ರದರ್ಶನವಾಯಿತು.
‘ಅಪ್ಪಾ, ನಾ ನಿಮ್ಮನ್ನ ಊರಾಚೆ ಬಿಟ್ಟ ಬಂದದ್ದು, ದೊಡ್ಡ ತಪ್ಪಾಯ್ತು’ – ನಾಟಕದ ನಾಯಕ ಹೇಳಿದಾಗ ಸೇರಿದ ಪ್ರೇಕ್ಷಕರ ಕಣ್ಣಂಚೆಗೆ ನೀರು ಬಂದವು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ವಿಶ್ವನಾಥಸ್ವಾಮಿ ಎಚ್.ಎಂ ಅಭಿನಯದ ತಪ್ತ ನಾಟಕ ಮನಗೆದ್ದಿತು.

ತಾಯಿಯ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಲೋಕಾರೂಢಿಗೆ ವ್ಯತಿರಿಕ್ತವಾಗಿ ತಂದೆಯನ್ನೇ ಕೇಂದ್ರಕ್ಕೆ ತಂದ ಪುಟ್ಟ ನಾಟಕವಿದು. ಬಾಲವಾಡಿಯಿಂದ ಮದುವೆಯಾಗಿ ಯಾವುದೋ ಒಂದು ವಿಷ ಘಳಿಗೆಯಲ್ಲಿ ತಂದೆ ತಾಯಿಯರನ್ನು ಮನೆಬಿಟ್ಟು ಹೊರಗಟ್ಟುವ ಪ್ರಸಂಗದ ವರೆಗೆ ಚಾಚಿಕೊಳ್ಳುವ ನಾಟಕ. ಮಗ ಡಾಕ್ಟರ್, ಇಂಜನೀಯರ್ ಆಗಬೇಕು ಎಂದು ತಂದೆಯ ಒತ್ತಾಯ, ತದ್ವಿರುದ್ಧವಾಗಿ ಮಗ ನಾಟಕದ ಗೀಳು ಹಚ್ಚಿಕೊಳ್ಳುತ್ತಾನೆ. ಒಟ್ಟಾರ ಭಿನ್ನಾಭಿಪ್ರಾಯಗಳು, ಪಶ್ಚಾತ್ತಾಪ ಮತ್ತು ಪ್ರಾಯಶ್ಚಿತದ ವರೆಗೆ ಒಯ್ಯುವುವು. ನಾಟಕ ಮುಗಿದಾಗ ಕಳವಳ ಸಂಕಟಗಳು ನೋಡುಗರನ್ನು ಬೆನ್ನಟ್ಟುವ ರೀತಿಯದು.

ಬಹಳ ಸರಳ, ಯಾವ ಅದ್ದೂರಿ ಸೆಟ್ಟ್ ಇಲ್ಲದ, ಹಿತ ಮಿತ ಹಿನ್ನಲೆ ಸಂಗೀತ, ಎಲ್ಲಿ ಬೇಕಲ್ಲಿ ಆಡಿಸಬಹುದಾದ ತಪ್ತ ನಾಟಕ ತಪ್ತ ಭಾವದಲ್ಲಿ ಮುಳುಗಿಸಿತು. ಶಿವು ರಚಿಸಿದ ನಾಟಕವನ್ನು ಎಂ. ಮಧು ನಿರ್ದೇಶಿಸಿದ್ದರು. ಜಗದೀಶ ಆರ್. ಸಂಗೀತ ನೀಡಿದ್ದರು. ಕೋವಿಡ್ ನಂತರ ರಂಗಭೂಮಿ ಒಂದು ರೀತಿಯಲ್ಲಿ ಹೊಸ ಮಗ್ಗಲು ಪಡೆಯುತ್ತಿರುವುದಕ್ಕೆ ತಪ್ತ ಸಾಕ್ಷಿಯಾಯಿತು. ೫೦ ರಿಂದ ೧೦೦ ಪ್ರೇಕ್ಷಕರ ನಡುವೆ, ಬಡಾವಣೆ, ಚಿಕ್ಕಚಿಕ್ಕ ಹಾಲ್ ಗಳಲ್ಲಿ ಪ್ರದರ್ಶನವಾಗುವ ಮಾರ್ಪಾಡಿಗೆ ರಂಗಭೂಮಿ ತಿರುಗುತ್ತಿದೆ. ನಾಟಕ ಒಂದು ಮಟ್ಟದಲ್ಲಿ ಪ್ರೇಕ್ಷಕರ ಹೃದಯಕ್ಕೆ ಮುಟ್ಟಿದರೂ, ಮಾನಸಿಕ ಘರ್ಷಣೆಗೆ ಕಾರಣವಾಗಲಿಲ್ಲ. ತಂದೆ ಮಕ್ಕಳ ಮುಖಾಮುಖಿ ಹೊಸ ಕಾಲದಲ್ಲಿ ಬೇರೆ ರೀತಿಯವೇಯಾಗಿವೆ. ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಕೌಟುಂಬಿಕ ಮನಸ್ಥಾಪಗಳು ಹೆಚ್ಚಾದದು ಪರೀಕ್ಷಾ ಕಾಲವೇ ಆಗಿತ್ತು. ಇಂತಹ ಸೂಕ್ಷ್ಮಗಳನ್ನು ತಪ್ತದಲ್ಲಿ ಕಾಣಲಿಲ್ಲ. ಒಂದಿಷ್ಟು ಕಣ್ಣಿಗೆ ಹೊಡೆಯುವ ವಸ್ತç ವಿನ್ಯಾಸ, ರೆಕಾರ್ಡೆಡ್ ಅಲ್ಲದ ಸಂಗೀತ ಬೇಕಿತ್ತು.

ಮಕ್ಕಳ ಇಚ್ಛೆಯಂತೆ ಅವರನ್ನು ಬೆಳೆಸಬೇಕು ಎಂಬ ಶ್ರೀಮತಿ ಹೇಮಾ ಸಜ್ಜನರ ಮಾತು, ಅಪ್ಪ ಆಕಾಶಕ್ಕೆ ಕೈ ಚಾಚುವ ಅವಕಾಶ ನೀಡುವವ ಎನ್ನುವ ಡಾ. ಗೀತಾ ಸುತ್ತಕೋಟೆ ಅವರ ನುಡಿ ಹಾಗೂ ಯುವ ಕಲಾವಿದ ಸೋಮು ಗುರಪ್ಪನವರ ಅವ್ವ ಟೊಂಕದಲ್ಲಿ ಮಕ್ಕಳನ್ನು ಕಾಪಾಡಿದರೆ, ಅಪ್ಪ ಹೆಗಲ ಮೇಲೆ ಹೊತ್ತು ಜೀವನದ ದೂರವನ್ನು ತೋರಿಸುತ್ತಾನೆ. – ಇವೆಲ್ಲ ಮಾತುಗಳು ನಾಟಕದ ಕೊನೆಯಲ್ಲಿ ಸಂವಾದದಲ್ಲಿ ಕೇಳಿ ಬಂದವು ಪ್ರಯೋಗಕ್ಕೆ ಪೂರಕವಾಗಬಲ್ಲ ಸಂವಾದ ನಡೆದದ್ದು ರಂಗಭೂಮಿಯ ಹಿತ ದೃಷ್ಠಿಯಿಂದ ಆರೋಗ್ಯ ಪೂರ್ಣವಾಗಿತ್ತು. ಈ ಸಂದರ್ಭದಲ್ಲಿ ಶೇಷಗಿರಿ ಕಲಾತಂಡದ ಪ್ರಭು ಗುರಪ್ಪನವರ ಹಾಗೂ ತಪ್ತ ನಾಟಕ ತಂಡಕ್ಕೆ ಸನ್ಮಾನ ಮಾಡಲಾಯಿತು.

ಪ್ರತಿ ತಿಂಗಳು ಆಪ್ತವಾದ ಏಕವ್ಯಕ್ತಿ ರಂಗಪ್ರಯೋಗಗಳಿಗೆ ಗ್ಯಾಲರಿಯಲ್ಲ ಮುಕ್ತ ಅವಕಾಶ ನೀಡಲಾಗುವುದೆಂದು ಗ್ಯಾಲರಿಯ ಮುಖ್ಯಸ್ಥ ಕರಿಯಪ್ಪ ಹಂಚಿನಮನಿ ಹೇಳಿದ್ದು ರಂಗಾಸಕ್ತರಿಗೆ ಉಮೇದು ತಂದಿತು.

‍ಲೇಖಕರು avadhi

10 February, 2023

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading