ಹಾಗಾದರೆ, ದೀಪಿಕಾ ಹೇಗೆ ದಿಟ್ಟವಾಗಿ ಪ್ರಕಟವಾಗಲು ಸಾಧ್ಯವಾಯಿತು?

ದೀಪಿಕಾ ಪಡುಕೋಣೆ ನಿಲುವಿನ ಹಿಂದಿನ ಆಯಾಮಗಳು

ಕೇಸರಿ ಹರವೂ

ಹೆಚ್ಚೂ ಕಡಿಮೆ ಇಡೀ ಬಾಲಿವುಡ್ ಅಡ್ಡಗೋಡೆಯ ಮೇಲೆ ಕೂತಿರುವಾಗ ದೀಪಿಕಾರ ನಿಲುವು ಪ್ರಾಶಸ್ತ್ಯ ಪಡೆಯುತ್ತದೆ. ದೀಪಿಕಾರ ನಿಲುವಿನ ಹಿಂದಿನ ಪ್ರಾಮಾಣಿಕತೆಯನ್ನು ನಾನು ಖಂಡಿತಾ ಅನುಮಾನಿಸುತ್ತಿಲ್ಲ. ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಉದಾತ್ತ ಆದರ್ಶವನ್ನು ನಾವೆಲ್ಲರೂ ಹೆಮ್ಮೆಯಿಂದ ಪಾಲಿಸುತ್ತಿದ್ದ ಎಂಭತ್ತು ತೊಂಭತ್ತರ ದಶಕದ ಕರ್ನಾಟಕದಲ್ಲಿ ಬೆಳೆದ ಪರಿಸರದಲ್ಲೇ ಆಕೆಯೂ ಬೆಳೆದವರು. ಈಗ ನಮ್ಮಲ್ಲೇ ಕೆಲವರು ಮೋಡಿಗೊಳಗಾಗಿ ಒಡಕು ಮೂಡಿಸಿಕೊಂಡಿದ್ದಾರೆ. ಆದರೂ ನಾವು ಬಹುತೇಕರು ಹಾಗೇ ಇದ್ದೇವೆ ಎನ್ನುವುದು ನಿರ್ವಿವಾದ. ಅದನ್ನು ಈ ಕ್ಷಣದ ಮಟ್ಟಿಗೆ ಬದಿಗಿಡೋಣ.

ಮೊದಲ ಪ್ರಶ್ನೆ ಏಳುವುದು ನಾಸಿರುದ್ದೀನ್ ಷಾ, ಶಬನಾ ಅಜ್ಮಿ, ಜಾವೇದ್ ಅಖ್ತರ್, ಇನ್ನೂ ಅನೇಕರು ದೀಪಿಕಾಳಂತೆಯೇ, ಆಕೆ ಪ್ರಟಕವಾಗುವುದಕ್ಕಿಂತ ತುಂಬಾ ಮೊದಲಿಂದಲೇ ಈ ನಿಲುವನ್ನು ಹೊಂದಿದ್ದಾರೆ. ಇನ್ನೂ ಹಲವಾರು ಬಾಲಿವುಡ್ ಪ್ರಮುಖರು ಇವರುಗಳಂತೆಯೇ ನಮ್ಮ ದೇಶದ ಸಂವಿಧಾನವೇ ಮೊದಲು ಮತ್ತು ಅಂತಿಮ, ನಮ್ಮ ಜಾತ್ಯತೀತ ನಿಲುವೇ ನನ್ನದು ಎನ್ನುವಂತಾ ನಿಲುವನ್ನೇ ಹೊಂದಿರಬಹುದು. ಆದರೂ ಏಕೆ ತಮ್ಮ ನಿಲುವನ್ನು ನೇರವಾಗಿ ಪ್ರಕಟಿಸುವುದಕ್ಕೆ ಹಿಂಜರಿಯುತ್ತಿದ್ದಾರೆ? ದೀಪಿಕಾ ಕೂಡಾ ಈ ಮಾತುಗಳನ್ನು ನೇರವಾಗಿ ಹೇಳಿಲ್ಲ, ನಮ್ಮ ಯುವಜನರ ಧೈರ್ಯವನ್ನು ಮೆಚ್ಚಿಕೊಂಡತಹ ಮಾತುಗಳಲ್ಲಿ ಆ ಅರ್ಥ ಬರುವಂತೆ ಹೇಳಿದ್ದಾರೆ ಎನ್ನುವುದನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕು.

ಬಾಲಿವುಡ್ ಎಷ್ಟೇ ಆಧುನಿಕತೆಯನ್ನು ಅಪ್ಪಿಕೊಳ್ಳುತ್ತಿದ್ದರೂ, ಅದು ಮೊದಲಿಂದಲೂ ಸಂಪ್ರದಾಯವಾದಿ ಎನ್ನುವುದು ಸ್ಪಷ್ಟ. ಹಿಂದೂಯೇತರ ತಾರೆಯರು ಅಲ್ಲಿ ಮಿಂಚುವುದೂ ಬಹುತೇಕ ಹಿಂದೂ ಪ್ರೊಟಾಗೋನಿಸ್ಟುಗಳಾಗಿಯೇ. ಅಮರ್, ಅಕ್ಬರ್ ಮತ್ತು ಆಂಟೊನೀ ಮೂವರೂ ಒಬ್ಬ ಹಿಂದೂ ತಾಯಿಯ ಹೊಟ್ಟೆಯಲ್ಲೇ ಹುಟ್ಟಿ ಬೇರೆಬೇರೇ ಧರ್ಮಗಳಲ್ಲಿ ಬೆಳೆದು ನಂತರ ಮತ್ತೆ ತಮ್ಮ ಹಿಂದೂ ತಾಯಿಯನ್ನೇ ಸೇರಿದವರು ಎನ್ನುವುದನ್ನು ನೆನಪಿಸಿಕೊಳ್ಳಿ. ಇದನ್ನು ಬಾಲಿವುಡ್ ಎಂದಿಗೂ ಪಾಲಿಸುತ್ತಲೇ ಬಂದಿರುವ ಸಂಪ್ರದಾಯ. ಹಿಂದೂಯೇತರ ಪ್ರೇಕ್ಷಕ ವರ್ಗ ಇಡೀ ಭಾರತದಲ್ಲಿ ಗಣನೀಯವಾಗಿ ಇದ್ದರೂ ಬಾಲಿವುಡ್ ಬಹುತೇಕವಾಗಿ ಓಲೈಸುವುದು ಬಹುಸಂಖ್ಯಾತ ವರ್ಗವನ್ನೇ.

ಈ ಬಾಲಿವುಡ್ಡಿನ ಜನ ತಮ್ಮ ಸಂವಿಧಾನ ಬದ್ಧತೆ, ಜಾತ್ಯತೀತ ನಿಲುವುಗಳನ್ನು ಪ್ರಕಟಿಸಲು ಹಿಂಜರಿಯುವುದು ಈ ಕಾರಣಕ್ಕೇ. ನಾಳೆ ತಮ್ಮ ಚಿತ್ರಗಳನ್ನು ಈ ಬಹುಸಂಖ್ಯಾತರು ಎಲ್ಲಿ ಬಹಿಷ್ಕರಿಸುತ್ತಾರೋ ಎನ್ನುವ ಭಯ ಅಲ್ಲಿನ ಅನೇಕ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರಿಗೆ ಖಂಡಿತಾ ಇದೆ. ಹಾಗೆಂದು ಅಲ್ಲಿ ಎಲ್ಲರೂ ಇಂಥಾ ನಿಲುವನ್ನೇ ಹೊಂದಿದ್ದಾರೆ ಎನ್ನಲೂ ಆಗುವುದಿಲ್ಲ. ಬಹುತೇಕರು ಹಿಂದುತ್ವ ಪರ ನಿಲುವುಗಳನ್ನೇ ಹೊಂದಿದ್ದಾರೆ ಎನ್ನುವುದೇ ನನ್ನ ಗುಮಾನಿ.

ಇವರುಗಳ ಆತಂಕಕ್ಕೆ ಇನ್ನೊಂದು ಮುಖ್ಯ ಕಾರಣ ಫೈನಾನ್ಸ್, ಹಂಚಿಕೆ ಮತ್ತು ಪ್ರದರ್ಶನ ವಲಯಗಳು. ಬಾಲಿವುಡ್ಡಿನ ಮೂರೂ ವಲಯಗಳಿಗೂ ಫೈನಾನ್ಸ್ ಮಾಡುವ ಬಹುತೇಕರು ಗುಜರಾತಿಗಳು ಮತ್ತು ಮಾರ್ವಾಡಿಯರು. ಇಂದು ಧರ್ಮಾತೀತವಾಗಿ ಮೌನ ವಹಿಸಿರುವ ಬಹುತೇಕರು ಹಿಂದುತ್ವಕ್ಕೆ ಭಯಪಟ್ಟು ಮೌನ ವಹಿಸಿರುವುದು ಹೌದಾದರೂ, ಅವರ ಮೂಲ ಭಯ ಇರುವುದು ಈ ಮೇಲಿನ ಕಾರಣಕ್ಕೆ. ಆದರೆ, ಈ ಫೈನಾನ್ಷಿಯರುಗಳು ಕೂಡಾ ಎಂದಿಗೂ ಹೀಗೇ ಇರುತ್ತಾರೆಂದು ಹೇಳಲು ಬರುವುದಿಲ್ಲ. ಭಾರತ ನಿಜಕ್ಕೂ ಜಾತ್ಯತೀತತೆಯೆಡೆಗೆ ಹೆಜ್ಜೆ ಇಡುತ್ತಿದ್ದ ಕಾಲದಲ್ಲಿ ಅವರುಗಳು ಹಾಗೇ ನಡೆದುಕೊಂಡರು. ಇಂದು ಬಲಪಂಥೀಯ ಆಳ್ವಿಕೆಯಲ್ಲಿ ಅವರು ಹೀಗೆ ನಡೆದುಕೊಳ್ಳುತ್ತಾರೆ. ನಾಳೆ ಇನ್ನೊಂದು ರೀತಿಯಾದರೆ ಆಗ ಅವರೂ ಹಾಗೇ. ಟ್ರೆಂಡ್ ಅನುಸರಿಸಿ ಬಂಡವಾಳದ ಸೇವೆ ಮಾಡುವುದೇ ಅವರ ಧರ್ಮ. ಹೀಗಾಗಿ, ಇಂದು ಹೀಗೆ, ನಾಳೆ ಹೇಗೋ ಎಂದು ಮೌನ ವಹಿಸಿರುವವರು ಮೌನ ವಹಿಸಿದ್ದಾರೆ.

ಹಾಗಾದರೆ, ದೀಪಿಕಾ ಹೇಗೆ ದಿಟ್ಟವಾಗಿ ಪ್ರಕಟವಾಗಲು ಸಾಧ್ಯವಾಯಿತು? ಯಾವ ಭಯಗಳು ಕೆಲವರನ್ನು ಮೌನ ವಹಿಸುವಂತೆ ಮಾಡಿದವೋ, ಆ ಭಯಗಳನ್ನು ದಾಟಿ ಅನುಪಮ್ ಖೇರ್, ಪರೇಶ ರಾವಲ್ ಮುಂತಾದವರು ನಾವು ‘ಬಲಪಂಥೀಯರು’ ಎಂದು ಘೋಷಿಸಿಕೊಂಡರು. ಅದು ಒಂದು ರೀತಿಯಲ್ಲಿ ಅವರುಗಳು ತೆಗೆದುಕೊಂಡ ರಿಸ್ಕ್. ಅವರ ಪ್ರೇಕ್ಷಕವರ್ಗದಲ್ಲಿ ಒಂದು ಪಾಲು ಅವರನ್ನು ಖಂಡಿಸಿತು. ಹಾಗೆಯೇ, ದೀಪಿಕಾ ಕೂಡಾ ಆ ರಿಸ್ಕಿಗೆ ತದ್ವಿರುದ್ಧವಾದ ರಿಸ್ಕ್ ಒಂದನ್ನು ಈಗ ತೆಗೆದುಕೊಂಡಿದ್ದಾರೆ. ಈಕೆಯನ್ನೂ ಒಂದು ವರ್ಗ ಈಗ ಖಂಡಿಸುತ್ತಿದೆ, ಆಕೆಯ ಫಿಲ್ಮ್ ಬಹಷ್ಕರಿಸಿ ಎನ್ನುತ್ತಿದೆ. ಈ ರಿಸ್ಕ್ ತಿಳಿದಿದ್ದರೂ ಸಹ ಆಕೆ ತನ್ನನ್ನು ಪ್ರಕಟಿಸಿಕೊಂಡಿದ್ದಾರೆ. ಸಧ್ಯ ಈ ದಿನಗಳ CAA ಮತ್ತು NRC ವಿರೋಧೀ ಹೋರಾಟಗಳ ಟ್ರೆಂಡಿನಲ್ಲಿ ಈ ರಿಸ್ಕ್ ಒಂದು ಅಡ್ವಾಂಟೇಜ್ ಆದರೂ ಆಗಬಹುದು ಎನ್ನುವುದು ಆಕೆಯ ಆಶಯ ಇರಬಹುದು. ಆದರೆ, ಈ ಆಶಯ ತೀರ ತಾತ್ಕಾಲಿಕ ಎಂದೇನೂ ನನಗೆ ಎನಿಸುವುದಿಲ್ಲ. ಏಕೆಂದರೆ ‘ಬದಲಾವಣೆ ತರಲು ನಾವು ಧೈರ್ಯವಾಗಿ, ಮುಕ್ತವಾಗಿ ಪ್ರಕಟಿಸಿಕೊಳ್ಳಬೇಕು’ ಎನ್ನುವ ಮಾತನ್ನು ಆಕೆ ಆಡಿದ್ದಾರೆ. ಸಾಂಪ್ರದಾಯಿಕ ಬಂಡವಾಳಶಾಹಿಗಳ ಮೂಗಿನ ನೇರಕ್ಕೇ ಬಾಲಿವುಡ್ ಏಕೆ ನಡೆದುಕೊಳ್ಳಬೇಕು? ಎನ್ನುವ ಆಧುನಿಕ ಪ್ರಶ್ನೆಯೊಂದನ್ನು ತನ್ನ ಮಿತಿಯೊಳಗೇ ದೀಪಿಕಾ ಹುಟ್ಟಿಹಾಕಿದ್ದಾರೆ. ಈ ಪ್ರಶ್ನೆ ಬಾಲಿವುಡ್ಡನ್ನೂ ದಾಟಿ ಇಡೀ ಭಾರತೀಯ ಸಮಾಜಕ್ಕೂ ಅನ್ವಯಿಸುವಂತದ್ದು. ಈಕೆ ನಿಜಕ್ಕೂ ಬದಲಾವಣೆ ಬಯಸಿದ್ದಾರೆ. ನಾನು ಈಕೆಯ ನಿಲುವನ್ನು ಸಂಭ್ರಮಿಸುವುದು ಈ ಕಾರಣಕ್ಕೇ…

ಇನ್ನು ಸ್ಯಾಂಡಲ್ ವುಡ್ ಬಗ್ಗೆ ನಾನೇನೂ ಹೇಳಲ್ಲ. ಅಲ್ಲಿ ಬಹಳಷ್ಟು ಜನಕ್ಕೆ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಸ್ಪಷ್ಟವಾಗಿ ಗೊತ್ತಿಲ್ಲ.

 

‍ಲೇಖಕರು avadhi

January 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: