ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಳಿ ತಪ್ಪಿರುವ ಕ್ಷಯ ರೋಗ ನಿಯಂತ್ರಣ' – ಡಾ ಶ್ರೀನಿವಾಸ ಕಕ್ಕಿಲಾಯ ಬರೀತಾರೆ


ಡಾ ಶ್ರೀನಿವಾಸ ಕಕ್ಕಿಲಾಯ

ಕವಿ ಮುದ್ದಣನ ಸಲ್ಲಾಪವನ್ನು ಮೂವತ್ತರ ಹರೆಯದಲ್ಲೇ ಮೊಟಕುಗೊಳಿಸಿದ್ದು ಕ್ಷಯ ರೋಗ. ಜಿನ್ನಾ, ಚೆಕೋವ್, ಕೀಟ್ಸ್, ಓರ್ವೆಲ್ ಮುಂತಾದವರು ಅಕಾಲಿಕವಾಗಿ ಸತ್ತಿದ್ದು ಅದರಿಂದಲೇ. ಆ ಕಾಲದಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆಯೇ ಲಭ್ಯವಿರಲಿಲ್ಲ. ಈಗ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಹಲವು ಔಷಧಗಳಿದ್ದರೂ ನಮ್ಮಲ್ಲಿ ಎರಡು ನಿಮಿಷಗಳಿಗೊಬ್ಬರು ಅದರಿಂದ ಸಾಯುತ್ತಲೇ ಇದ್ದಾರೆ. ಹೀಗೇ ಮುಂದುವರಿದರೆ ಲಭ್ಯ ಔಷಧಗಳೂ ನಿರುಪಯುಕ್ತವಾಗಿ ಶತಮಾನಗಳ ಹಿಂದಿದ್ದ ದುಸ್ಥಿತಿಯು ಮರುಕಳಿಸುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ.
ನಮ್ಮ ದೇಶದಲ್ಲಿ 30 ಲಕ್ಷಕ್ಕೂ ಹೆಚ್ಚು (ಅನಧಿಕೃತವಾಗಿ 85 ಲಕ್ಷ) ಜನ ಕ್ಷಯ ರೋಗದಿಂದ ಬಳಲುತ್ತಿದ್ದಾರೆಂದು ಅಂದಾಜಿಸಲಾಗಿದ್ದು, ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಜನ ಹೊಸದಾಗಿ ಕ್ಷಯ ರೋಗವನ್ನು ಅಂಟಿಸಿಕೊಳ್ಳುತ್ತಾರೆ, 3 ಲಕ್ಷದಷ್ಟು ರೋಗಿಗಳು ಪ್ರತಿ ವರ್ಷ ಸಾವನ್ನಪ್ಪುತ್ತಾರೆ. ವರ್ಷಕ್ಕೆ ಸುಮಾರು ಒಂದು ಲಕ್ಷದಷ್ಟು ರೋಗಿಗಳಲ್ಲಿ ಔಷಧಗಳಿಗೆ ಬಗ್ಗದ ಕ್ಷಯ ರೋಗವು ಗುರುತಿಸಲ್ಪಡುತ್ತಿದ್ದು, ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯುವವರ ಪ್ರಮಾಣವು ಶೇ. 1 ಕ್ಕೂ ಕಡಿಮೆಯಿರುವುದರಿಂದ ಅದು ಇನ್ನಷ್ಟು ವ್ಯಾಪಿಸುವ ಅಪಾಯವಿದೆ. ಜೊತೆಗೆ ಕ್ಷಯ ರೋಗಕ್ಕೆ ಸುಲಭದಲ್ಲಿ ತುತ್ತಾಗಬಲ್ಲ ಹೆಚ್ಐವಿ ಪೀಡಿತರ ಸಂಖ್ಯೆಯು ಸುಮಾರು 23 ಲಕ್ಷದಷ್ಟಿದೆ. ಕ್ಷಯ ರೋಗವನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಗುರುತಿಸಿ 130 ವರ್ಷಗಳಾದವು; ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ, ರೋಗವನ್ನು ಗುಣಪಡಿಸಬಲ್ಲ ಔಷಧಗಳು ಬಂದು 70 ವರ್ಷಗಳಾದವು. ಹಾಗಿದ್ದರೂ ಅದನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಸಾಧ್ಯವಾಗಿಲ್ಲವೇಕೆ?
ಕ್ಷಯವನ್ನುಂಟು ಮಾಡುವ ಬ್ಯಾಕ್ಟೀರಿಯಾವು ಬಹಳ ನಿಧಾನವಾಗಿ ವೃದ್ಧಿಯಾಗುತ್ತದೆ, ನಿಧಾನವಾಗಿ ರೋಗವನ್ನುಂಟು ಮಾಡಿ ಒಂದೆರಡು ವರ್ಷಗಳಲ್ಲಿ ರೋಗಿಯನ್ನು ಕೊಲ್ಲುತ್ತದೆ. ಇದೇ ಕಾರಣಕ್ಕೆ ಕ್ಷಯ ರೋಗವನ್ನು ಗುರುತಿಸುವಲ್ಲೂ ತಡವಾಗುತ್ತದೆ, ಚಿಕಿತ್ಸೆಗೂ ಹೆಚ್ಚು ಕಾಲ ತಗಲುತ್ತದೆ ಹಾಗೂ ಅದು ಹರಡುವುದಕ್ಕೆ ಅನುಕೂಲವಾಗುತ್ತದೆ. ಹಿಂದೆ 1940-60ರ ದಶಕಗಳಲ್ಲಿ ಕ್ಷಯ ರೋಗಕ್ಕೆ ಒಂದೆರಡು ವರ್ಷಗಳವರೆಗೂ ಔಷಧಗಳನ್ನು ನೀಡಲಾಗುತ್ತಿತ್ತು ಹಾಗೂ ರೋಗಿಗಳನ್ನು ಊರ ಹೊರಗಿನ ಶುಶ್ರೂಷಾಲಯಗಳಲ್ಲಿರಿಸಲಾಗುತ್ತಿತ್ತು. ನಂತರ ರಿಫಾಂಪಿಸಿನ್, ಪೈರಜಿನಮೈಡ್ ಮುಂತಾದ ಉತ್ತಮ ಔಷಧಗಳು ಲಭ್ಯವಾದಾಗ ಮನೆಯಲ್ಲಿಯೇ ಆರು ತಿಂಗಳುಗಳ ಚಿಕಿತ್ಸೆಯನ್ನು ನೀಡಲು ಸಾಧ್ಯವಾಯಿತು, ಸರಿಯಾಗಿ ಚಿಕಿತ್ಸೆ ಪಡೆದ ಶೇ. 95ರಷ್ಟು ರೋಗಿಗಳು ಸಂಪೂರ್ಣವಾಗಿ ಗುಣ ಹೊಂದುವಂತಾಯಿತು. ಆದರೆ ಈಗ ಮತ್ತೊಮ್ಮೆ ರೋಗಿಗಳನ್ನು ದೂರವಿಟ್ಟು ಲಕ್ಷಗಟ್ಟಲೆ ವೆಚ್ಚದಲ್ಲಿ ವರ್ಷಗಟ್ಟಲೆ ಚಿಕಿತ್ಸೆ ನೀಡಬೇಕಾದ ಸ್ಥಿತಿಯುಂಟಾಗಿದೆ.
ಕ್ಷಯರೋಗಿಗಳು ಸರಿಯಾದ ಚಿಕಿತ್ಸೆಯನ್ನು ಸೇವಿಸುವಲ್ಲಿ ವಿಫಲರಾಗುತ್ತಿರುವುದು ಈ ದುಸ್ಥಿತಿಗೆ ಅತಿ ಮುಖ್ಯವಾದ ಕಾರಣ. ಬಡತನ, ಅಜ್ಞಾನ, ಮದ್ಯಪಾನ, ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ಯಾದಿಗಳಿಂದಾಗಿ ಹಲವರಲ್ಲಿ ರೋಗವೇ ಪತ್ತೆಯಾಗುವುದಿಲ್ಲ. ರೋಗವು ಗುರುತಿಸಲ್ಪಟ್ಟಿರುವವರಲ್ಲೂ ಹಲವರು, ಮುಖ್ಯವಾಗಿ ವೈದ್ಯರ ಹಾಗೂ ಮನೆಯವರ ನಿಗಾವಣೆಯಿಲ್ಲದವರು, ಊರಿಂದೂರು ಸುತ್ತುವವರು, ಪದೇ ಪದೇ ವೈದ್ಯರನ್ನು ಬದಲಾಯಿಸುವವರು, ಚಿಕಿತ್ಸೆಯಿಂದ ವಂಚಿತರಾಗುತ್ತಾರೆ ಯಾ ಅದನ್ನು ಅರೆಬರೆಯಾಗಿ ಸೇವಿಸುತ್ತಾರೆ. ಕ್ಷಯ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಬೇಕಾದರೆ 2-4 ಔಷಧಗಳನ್ನು ಕನಿಷ್ಠ 6 ತಿಂಗಳ ಕಾಲ ಎಡೆಬಿಡದೆ ಸೇವಿಸಬೇಕಾಗುತ್ತದೆ. ಒಂದೆರಡು ತಿಂಗಳಲ್ಲಿ ರೋಗಲಕ್ಷಣಗಳು ವಾಸಿಯಾದೊಡನೆ ಔಷಧಗಳನ್ನು ನಿಲ್ಲಿಸಿದರೆ ರೋಗವು ಮರುಕಳಿಸುತ್ತದೆ. ಔಷಧಗಳನ್ನು ಅರೆಬರೆಯಾಗಿ ಸೇವಿಸಿದರೆ ರೋಗವು ವಾಸಿಯಾಗುವುದಿಲ್ಲ ಮಾತ್ರವಲ್ಲ, ರೋಗಾಣುವು ಔಷಧಗಳಿಗೆ ಒಗ್ಗಿಕೊಂಡು ಚಿಕಿತ್ಸೆಯೇ ನಾಟದಂತಾಗುತ್ತದೆ. ಅಂತಹವರಿಂದ ಇನ್ನೊಬ್ಬರಿಗೆ ಕ್ಷಯವು ಸೋಂಕಿದರೆ ಅವರಲ್ಲೂ ಚಿಕಿತ್ಸೆ ನಾಟದಂತಹ ರೋಗವುಂಟಾಗುತ್ತದೆ.

ನಮ್ಮ ದೇಶದಲ್ಲಿ ಅರ್ಧಕ್ಕೂ ಹೆಚ್ಚು ಕ್ಷಯ ರೋಗಿಗಳು ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಹಳಷ್ಟು ವೈದ್ಯರಲ್ಲಿ ಕ್ಷಯ ರೋಗದ ಪತ್ತೆ ಹಾಗೂ ಚಿಕಿತ್ಸೆಯ ಬಗ್ಗೆ ಅರಿವಿನ ಕೊರತೆಯಿರುವುದರಿಂದ ಹಲವು ಪ್ರಮಾದಗಳಿಗೆ ಕಾರಣವಾಗಿ, ರೋಗ ನಿಯಂತ್ರಣದಲ್ಲಿ ದೊಡ್ಡ ತೊಡಕಾಗುತ್ತಿದೆ. ಕ್ಷಯ ರೋಗ ಚಿಕಿತ್ಸೆಯ ಬಗ್ಗೆ ಏನೇನೂ ತಿಳಿದಿಲ್ಲದ ಬದಲಿ-ನಕಲಿ ವೈದ್ಯರೂ ಅದರ ಚಿಕಿತ್ಸೆಗೆ ಮುಂದಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಾಮಾನ್ಯ ಔಷಧಗಳಿಗೆ ಬಗ್ಗದ ಕ್ಷಯರೋಗಕ್ಕೆ ನೀಡಲಾಗುವ ವಿಶೇಷ ಔಷಧಗಳು ದುರುಪಯೋಗವಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಆದರೆ ಕ್ಷಯರೋಗ ನಿಯಂತ್ರಣದ ಜವಾಬ್ದಾರಿ ಹೊತ್ತಿರುವ ಸರಕಾರಿ ಇಲಾಖೆಗಳು ಹಾಗೂ ಖಾಸಗಿ ವೈದ್ಯರ ನಡುವೆ ಯಾವೊಂದು ರೀತಿಯ ಸಂವಹನವೇ ಇಲ್ಲದಿರುವುದರಿಂದ ಆಧುನಿಕ ವೈದ್ಯರಿಗೆ ಈ ಬಗ್ಗೆ ಸೂಕ್ತ ಮಾಹಿತಿಯು ದೊರೆಯುತ್ತಿಲ್ಲವೆನ್ನುವುದೂ ಅಷ್ಟೇ ಸತ್ಯವಾಗಿದೆ.
ಇತ್ತ ಕ್ಷಯರೋಗ ನಿಯಂತ್ರಣಕ್ಕಾಗಿ ಸರಕಾರವು ಹಮ್ಮಿಕೊಂಡಿರುವ ಕಾರ್ಯಕ್ರಮಗಳೂ ಅಪೇಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯಲಾಗದವರನ್ನು ತಲುಪುವ ಉದ್ದೇಶದಿಂದ 1962ರಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಆದರೆ ಸಾಕಷ್ಟು ಹಣವಿಲ್ಲದೆ, ಬೇಕಾದಷ್ಟು ಔಷಧಗಳಿಲ್ಲದೆ, ಹೆಚ್ಚಿನ (ಶೇ. 70ರಷ್ಟು) ರೋಗಿಗಳನ್ನು ತಲುಪಲಾಗದೆ, ಅರ್ಧಕ್ಕೂ ಹೆಚ್ಚಿನವರಿಗೆ ಸಂಪೂರ್ಣ ಚಿಕಿತ್ಸೆಯನ್ನು ನೀಡಲಾಗದೆ ಈ ಕಾರ್ಯಕ್ರಮವು ಸೋತು ಹೋಯಿತು. ಇದನ್ನೆಲ್ಲ ಸರಿಪಡಿಸುವ ಉದ್ದೇಶದಿಂದ 1993ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮಧ್ಯ ಪ್ರವೇಶಿಸಿತು. ಆದಷ್ಟು ಹೆಚ್ಚು ಸಂಖ್ಯೆಯ ರೋಗಿಗಳಿಗೆ ವಾರಕ್ಕೆ ಮೂರು ಸಲ ನೇರ ನಿಗಾವಣೆಯಲ್ಲಿ ಔಷಧಗಳನ್ನು ನೀಡುವ ಯೋಜನೆಯನ್ನು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆರಂಭಿಸಲಾಯಿತು. ವಾರಕ್ಕೆ ಮೂರು ದಿನಗಳ ಈ ಚಿಕಿತ್ಸೆಯಲ್ಲಿ ಗುಣ ಹೊಂದುವವರ ಪ್ರಮಾಣವು ಶೇ. 85ರಷ್ಟಾದರೂ (ನಿತ್ಯದ ಚಿಕಿತ್ಸೆಯಲ್ಲಿ ಶೇ. 95ಕ್ಕೂ ಹೆಚ್ಚು), ರೋಗದ ಹರಡುವಿಕೆಯನ್ನು ತಡೆಯುವುದಕ್ಕೆ ಅದು ಸಾಕಾಗುತ್ತದೆ ಎಂದು ವಾದಿಸಲಾಯಿತು. ರೋಗಿಗಳು ಚಿಕಿತ್ಸೆಯಿಂದ ತಪ್ಪಿಸಿಕೊಳ್ಳದಂತೆ ನಿಗಾ ವಹಿಸುವುದಕ್ಕೆಂದು ಮೇಲ್ವಿಚಾರಕರನ್ನು ನೇಮಿಸಿ ಅವರಿಗೆ ಬೈಕು, ಪೆಟ್ರೋಲು ಇತ್ಯಾದಿಗಳನ್ನೆಲ್ಲ ಒದಗಿಸಲಾಯಿತು.
ಹಲವು ಖಾಸಗಿ ಸಂಸ್ಥೆಗಳು, ಮಹಾದಾನಿಗಳು ಮುಂತಾದವರ ಸಹಯೋಗವನ್ನೂ ಪಡೆಯಲಾಯಿತು. ನಮ್ಮ ದೇಶದಲ್ಲಿ 1997ರಿಂದ ಹಂತಹಂತವಾಗಿ ಜಾರಿಗೊಂಡ ಈ ಪರಿಷ್ಕೃತ ಕಾರ್ಯಕ್ರಮವು 2006ರ ವೇಳೆಗೆ ಅತ್ಯಂತ ಫಲಪ್ರದವಾಯಿತೆಂದು ಕೊಚ್ಚಿಕೊಂಡದ್ದೂ ಆಯಿತು. ಹಲವು ಅಧ್ಯಯನಗಳು ಈ ಯೋಜನೆಯ ಲೋಪದೋಷಗಳನ್ನು ಎತ್ತಿ ತೋರಿಸಿದ್ದರೂ ಅವನ್ನೆಲ್ಲ ಕಡೆಗಣಿಸಿ ಏನೋ ಮಹತ್ತರವಾದುದನ್ನು ಸಾಧಿಸಲಾಗುತ್ತಿದೆಯೆಂದು ಬಿಂಬಿಸಲಾಯಿತು. ಆದರೆ ಬದ್ಧತೆಯ ಕೊರತೆಯಿಂದಾಗಿ ನಿಗಾವಣೆಯು ಸರಿಯಾಗಿಲ್ಲದೆ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುವವರನ್ನು ತಡೆಯುವುದಕ್ಕೆ ಸಾಧ್ಯವಾದಂತಿಲ್ಲ. ಔಷಧಗಳ ನಿರಂತರ ಪೂರೈಕೆಗೂ ಸಂಚಕಾರವೊದಗಿದ್ದು, ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ಔಷಧಗಳೀಗ ದೊರೆಯುತ್ತಲೇ ಇಲ್ಲ. ಖಾಸಗಿ ವೈದ್ಯರನ್ನು ದೂರವಿಟ್ಟಿರುವುದರಿಂದ ಆ ರೋಗಿಗಳೂ ಹೊರಗುಳಿಯಲ್ಪಟ್ಟಿದ್ದಾರೆ, ಗೊಂದಲಗಳೂ ಮುಂದುವರಿದಿವೆ.
ಈ ಹೊಸ ಕಾರ್ಯಕ್ರಮವು ಜಾರಿಗೊಳ್ಳುತ್ತಿದ್ದ ಕಾಲದಲ್ಲೇ ಔಷಧಗಳಿಗೆ ಬಗ್ಗದ ಕ್ಷಯ ರೋಗವುಳ್ಳವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚತೊಡಗಿತು. ಅದಕ್ಕೆ ಕಾರಣಗಳೇನೆಂದು ಆಳವಾಗಿ ವಿಶ್ಲೇಷಿಸುವ ಬದಲು ಅಂತಹಾ ರೋಗಿಗಳಿಗೂ ಚಿಕಿತ್ಸೆಯನ್ನು ನೀಡುವ (ಪ್ಲಸ್!) ಯೋಜನೆಯನ್ನು ತರಾತುರಿಯಲ್ಲಿ ಹಾಕಿಕೊಳ್ಳಲಾಯಿತು. ಇದು ಸಂಪೂರ್ಣವಾಗಿ ವಿಫಲವಾಗಿದ್ದು, ವರ್ಷಕ್ಕೆ ಸುಮಾರು ಒಂದು ಲಕ್ಷದಷ್ಟಾಗುವ ಅಂತಹಾ ರೋಗಿಗಳ ಪೈಕಿ ಕೇವಲ 3600ರಷ್ಟು ರೋಗಿಗಳಷ್ಟೇ ಈ ವಿಶೇಷ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಔಷಧಗಳ ಕೊರತೆಯಿಂದಾಗಿ ಅದೂ ಸಾಧ್ಯವಾಗುತ್ತಿಲ್ಲ. ಇನ್ನುಳಿದವರೆಲ್ಲ ತಮ್ಮದೇ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ಹೀಗೆ ಚಿಕಿತ್ಸಾ ನಿರೋಧಕ ಕ್ಷಯವುಳ್ಳ ರೋಗಿಗಳು ಸಾವನ್ನಪ್ಪುವ ಹಾಗೂ ಚಿಕಿತ್ಸಾ ನಿರೋಧಕ ಬ್ಯಾಕ್ಟೀರಿಯಾಗಳು ಇತರರಿಗೂ ಹರಡುವ ಅಪಾಯವು ಹೆಚ್ಚುತ್ತಲಿದೆ.
ಒಟ್ಟಿನಲ್ಲಿ ನಮ್ಮ ದೇಶದಲ್ಲೀಗ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮವು ದಿಕ್ಕೆಟ್ಟು ನಿಂತಿದೆ. ಯಾವ ಔಷಧಗಳಿಗೂ ಬಗ್ಗದ ಕ್ಷಯರೋಗವು ಹೆಚ್ಚುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ನಮ್ಮ ಆರೋಗ್ಯ ಇಲಾಖೆಗಳವರೆಗೆ ಎಲ್ಲರೂ ಕೈ ಚೆಲ್ಲಿ ಕುಳಿತಿದ್ದಾರೆ. ಹಿಂದೆ 1993ರಲ್ಲಿ ವಾರಕ್ಕೆ ಮೂರು ದಿನಗಳ ಚಿಕಿತ್ಸೆಯನ್ನು ಸೂಚಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯು 2010ರಲ್ಲಿ ಮತ್ತೆ ಪ್ರತಿ ನಿತ್ಯದ ಚಿಕಿತ್ಸೆಯೇ ಉತ್ತಮವೆನ್ನುವ ನಿಲುವಿಗೆ ಮರಳುವ ಮೂಲಕ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ. ಅದರಿಂದಾಗಿ ಈಗಿನ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದ ತಳಹದಿಯೇ ಕುಸಿದು ಬಿದ್ದಿದೆ.
ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಆಮೂಲಾಗ್ರವಾಗಿ ಪರಿಷ್ಕರಿಸಬೇಕಾದ ತುರ್ತು ಅಗತ್ಯವಿದ್ದು ರಾಜ್ಯ ಹಾಗೂ ಕೇಂದ್ರ ಸರಕಾರಗಳೂ, ವೈದ್ಯಕೀಯ ಸಂಘಟನೆಗಳೂ ಅದನ್ನು ಕಡೆಗಣಿಸಿದರೆ ಇಡೀ ದೇಶಕ್ಕೆ ವಿಪತ್ತು ಖಂಡಿತ. ಮಠ-ಮಂದಿರಗಳ ಜೀರ್ಣೋದ್ಧಾರಕ್ಕೆ ಕೋಟಿಗಟ್ಟಲೆ ಚೆಲ್ಲುವ ನಮ್ಮ ಸರಕಾರಗಳು ಲಕ್ಷಗಟ್ಟಲೆ ಜನರನ್ನು ಕೊಂದು ಚಿಕಿತ್ಸೆಗೇ ಸಡ್ಡು ಹೊಡೆಯುತ್ತಿರುವ ಕ್ಷಯದ ಹೆಮ್ಮಾರಿಯನ್ನು ನಿಯಂತ್ರಿಸಲು ಹಣವಿಲ್ಲವೆನ್ನುವುದು ಅಕ್ಷಮ್ಯವಾಗುತ್ತದೆ.
 

‍ಲೇಖಕರು avadhi

4 August, 2013

1 Comment

  1. ಗೀತಾ

    ಸರ್ ನಿಮ್ಮ ಮಾಹಿತಿಗೆ ದನ್ಯವಾದಗಳು ಕಂಕುಳಲ್ಲಿ ಗಡ್ಡೆ ಕಾಣಿಸಿಕೊಂಡು ಅದು ಕ್ಷಯ ರೋಗದ ಲಕ್ಷಣ ಻ಂತ ಹೇಳುತಾರೆ ಅದು ನೀಜನಾ ಹಾಗೂ ಅದರಿಂದ ರೋಗಿ ಪಾರಗಲು ಎಷ್ಟ ದಿನ ಔಷದಿ ತೆಗೆದುಕೊಳ್ಳಬೇಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading