ಶಿವಕುಮಾರ್ ಮಾವಲಿ
ನೀವು ಉಂಡದ್ದು ಒಳಗಿಳಿಯುವಾಗಲೇ
ಉದರದೊಳಗಿನ ಕಕ್ಕಸು ಹೊರಗೆ ಬರಲಾಗದೆ ಮಲಿನಗೊಳಿಸುವ ಮೈಯನ್ನು
ಸ್ವಚ್ಛ ಗೊಳಿಸಬೇಕಿದೆ ಸ್ವಲ್ಪ ಗಂಜಲವ ತನ್ನಿ…
ಧರ್ಮದ ಅಫೀಮು ಕುಡಿದು ಸ್ವಯಿಚ್ಛೆಯಿಂದದರ ರಕ್ಷಣೆಗೆ ಕೂಗಾಡಿ, ಟೊಂಕಕಟ್ಟಿದವರ ನೆಲದಲ್ಲಿ ಸಾಗರವೇ ಇದ್ದರೂ ನಿನ್ನೆ ,ಮೊನ್ನೆ ,ನಾಳೆ ನಡೆಯುವ ಸಾವಿನಿಂದ ನೆಲಕ್ಕಂಟಿದ ರಕ್ತ ತೊಳೆಯಲು ಗಂಜಲವೇ ಬೇಕಿದೆ ತಾಮ್ರದ ಕೊಡಗಳಲ್ಲಿ ತನ್ನಿ …
ಹಗರಣಗಳಲ್ಲಿ ಮುಳುಗಿ ,ಬಂದೀಖಾನೆ ಸೇರಿಬಂದವರು,
ಮುಂದೊಮ್ಮೆ ಸೇರಲಿರುವವರು ಶಕ್ತಿಕೇಂದ್ರದಲ್ಲಿ ಸೇರಿ ಹೇಸಿಗೆ ಮಾಡಿಹರು
ಸ್ವಚ್ಛ ಗೊಳಿಸಲು ಗಂಜಲದ ಗಾಡಿಗಳೇ ಬೇಕು ತನ್ನಿ …
ಅಲ್ಲಿ ಹಳ್ಳಿಗಳಲ್ಲಿ ಮನೆಹೊರಗೆ
ಮತ್ತಿಲ್ಲಿ ನಗರಗಳಲ್ಲಿ ಮನೆಯೊಳಗೇ ಇರುವ ಶೌಚಗಳು ಇಡೀ ದೇಶವನ್ನೇ ಮೈಲಿಗೆ ಮಾಡಿಬಿಟ್ಟಿವೆ ತೊಳೆಯಬೇಕಿದೆ
ದೇಶದೆಲ್ಲ ಗಂಜಲವನ್ನು ಮೂರು ಸಮುದ್ರಗಳಿಗೆ ಸುರಿದು ಶುಚಿಗೊಳಿಸೋಣ ಬನ್ನಿ …
ಇಲ್ಲಿ ನಾಯಕನ ಭಾಷಣದ ವೇದಿಕೆಯಿದೆ ,
ಅಲ್ಲಿ ಸನ್ಯಾಸಿಯು ಮಲಿನಗೊಳಿಸಿದ ಆಶ್ರಮವಿದೆ
ಇನ್ನೆಲ್ಲೋ ಕಲಾವಿದ ಕುಂತೆದ್ದ ಕುರ್ಚಿಯಿದೆ
ಜಾಡಮಾಲಿಯ ಜಡವಾದ ಮನೆಯಿದೆ
ಶುದ್ಧ ಗೊಳಿಸಬೇಕಾದ , ಪವಿತ್ರಮಾಡಬೇಕಾದ ಪಟ್ಟಿ ದೊಡ್ಡದಿದೆ
ಇವ್ಯಾವೂ ಸ್ವಚ್ಛ ಭಾರತದ ಅಡಿಯಲ್ಲಿ ಬಾರದ ಕಾರಣ ನೀವು ನಿಮ್ಮ ಶಕ್ತ್ಯಾನುಸಾರ ಗಂಜಲ ತಂದೇ ತರುತ್ತೀರೆಂದು ಅಪೇಕ್ಷಿಸಲಾಗಿದೆ.
0 ಪ್ರತಿಕ್ರಿಯೆಗಳು