ಸ್ವಸ್ವರೂಪ ದರ್ಶನ
ಎಸ್ ದಿವಾಕರ್
ನಾನು ಹುಡುಗನಾಗಿದ್ದಾಗ ಡಿ.ವಿ.ಜಿ., ಮಾಸ್ತಿ, ಕುವೆಂಪು, ಬೇಂದ್ರೆ, ಕಾರಂತ – ಇವರಲ್ಲಿ ಯಾರದಾದರೂ ಛಾಯಾಚಿತ್ರವನ್ನು ನೋಡುವ ಭಾಗ್ಯ ಎಲ್ಲರಿಗೂ ಇರುತ್ತಿರಲಿಲ್ಲ. ಆ ಕಾಲದಲ್ಲಿ ಈಗಿನಂತೆ ಬಣ್ಣಬಣ್ಣದ ಪತ್ರಿಕೆಗಳಿರಲಿಲ್ಲ, ಟಿ.ವಿ. ಇರಲಿಲ್ಲ. ಇನ್ನು ಅವರ ಪುಸ್ತಕಗಳಲ್ಲಿ ಒಂದರಲ್ಲಾದರೂ ಅವರ ಭಾವಚಿತ್ರವಿರುತ್ತಿತ್ತೆ? ಇಲ್ಲ. ಇವತ್ತಿಗೆ ಕೂಡ ನವೋದಯ ಕಾಲದ ಅಂಥ ಲೇಖಕರ ಫೋಟೋಗಳು ನೋಡಬೇಕೆಂದರೂ ಸುಲಭವಾಗಿ ಸಿಕ್ಕುವುದಿಲ್ಲ.
ಡಿ.ಎಚ್. ಲಾರೆನ್ಸ್ “ಕತೆಗಾರನನ್ನು ನಂಬಬೇಡ, ಕತೆಯನ್ನಷ್ಟೆ ನಂಬು” ಎಂದು ಸಲಹೆಮಾಡಿದನಷ್ಟೆ. ಆ ಮಾತಿಗೇ ತಮ್ಮ ನಿಷ್ಠೆ ಎನ್ನುವ ಹಾಗೆ ಆ ಕಾಲದ ಲೇಖಕರು ತಮ್ಮ ಪುಸ್ತಕಗಳಿಗಷ್ಟೇ ಮಹತ್ವ ನೀಡುತ್ತಿದ್ದಿರಬೇಕು. ಓದುಗರಾದ ನಮಗೆ ಓದಿದ ಪುಸ್ತಕ ಇಷ್ಟವಾದರೆ ಅದನ್ನು ಬರೆದವರನ್ನು ನೋಡಬೇಕೆನ್ನುವ ಕುತೂಹಲವಿರುತ್ತಿತ್ತು. ಅವರ ಭಾವಚಿತ್ರಗಳನ್ನು ನೋಡುವ ಅವಕಾಶವಿಲ್ಲದ ನಾವು ನಮ್ಮದೇ ರೀತಿಯಲ್ಲಿ ಅವರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಿದ್ದೆವು. ಹೀಗೆ ನಮ್ಮ ನಮ್ಮ ಕಲ್ಪನೆಯೇ ಅವರಿಗೊಂದು ದಿವ್ಯಪ್ರಭೆಯನ್ನು ಕೊಟ್ಟುಬಿಡುತ್ತಿತ್ತು. ಓದುಗರ ಮನಸ್ಸಿನಲ್ಲಿ ಅಂಥ ದಿವ್ಯಪ್ರಭೆಯಿಂದ ಕಂಗೊಳಿಸುತ್ತಿದ್ದ ಲೇಖಕರು ಕಾಲಕ್ರಮೇಣ ‘ಸಾಂಸ್ಕೃತಿಕ ಪ್ರತಿಮೆ’ಗಳಾದದ್ದುಂಟು.
ನಾನು ಹೈಸ್ಕೂಲು ಮುಗಿಸಿ ಕಾಲೇಜು ಸೇರಿದ ಮೇಲೆ ಅಪರೂಪಕ್ಕೆಂಬಂತೆ ನೋಡಿದ ಅಂಥ ಸಾಂಸ್ಕೃತಿಕ ಪ್ರತಿಮೆಗಳ ಕಪ್ಪು-ಬಿಳುಪು ಫೋಟೋಗಳು ಕೆಲವು ಈಗಲೂ ನನ್ನ ಮನಸ್ಸಿನಲ್ಲಿ ನಿಚ್ಚಳವಾಗಿವೆ. ಅವುಗಳಲ್ಲಿ ಒಂದು ಡಿ.ವಿ.ಜಿ. ಅವರದು. ಅವರು ಭಾರಿ ಗ್ರಂಥವೊಂದನ್ನು ಕಣ್ಣಲ್ಲಿ ಕಣ್ಣಿಟ್ಟು ಓದುತ್ತಿದ್ದ ಭಂಗಿಯಲ್ಲೇ ಅವರ ಅಪೂರ್ವ ವಿದ್ವತ್ತಿನ ಮೂಲವೇನೆಂದು ತಿಳಿಯುವಂತಿತ್ತು. ಜಿ.ಪಿ. ರಾಜರತ್ನಂ ತಮ್ಮದೊಂದು ಫೋಟೋದಲ್ಲಿ ಥೇಟ್ ವಿವೇಕಾನಂದರ ಹಾಗೆ ಕೈಕಟ್ಟಿಕೊಂಡು ನಿಂತಿದ್ದರು. ಅವರ ಆ ನಿಲುವಿನಲ್ಲಿದ್ದದ್ದು ಅದಮ್ಯ ಆತ್ಮವಿಶ್ವಾಸ. ತೀ.ನಂ.ಶ್ರೀ. ಅವರದು ಅವರ ಮುಖಾವಯವಗಳನ್ನು ಒಂದು ಮೂತರ್ಿಶಿಲ್ಪದ ಹಾಗೆ ಕೊರೆದು ತೋರಿಸುವಂತಿದ್ದ ಫೋಟೊ. ದ.ರಾ. ಬೇಂದ್ರೆಯವರದು? ಮಾಸ್ತಿಯವರು ‘ನಾದಲೀಲೆ’ ಕವನ ಸಂಗ್ರಹಕ್ಕೆ ಮುನ್ನುಡಿ ಬರೆಯುತ್ತಾ, “ಬೇಂದ್ರೆಯವರು ಬೆಳಗಾವಿಯಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯವನ್ನು ಓದುವಾಗ ತಲೆಗೆ ಹಿಂದುಸ್ತಾನದ ಪಗಡಿಯೊಂದನ್ನು ಸುತ್ತಿ ನಿಂತಿದ್ದರು. ಇವರ ಆಗಿನ ನಿಲುವು ನನ್ನ ಕಣ್ಣಿಗೆ ಗಾರುಡಿಗನೊಬ್ಬನ ನಿಲುವಂತೆ ಕಂಡಿತು. ಈಗಲೂ ನನಗೆ ಬೇಂದ್ರೆಯವರ ಸಹಜವಾದ ನಿಲುವು ಆ ಗಾರುಡಿಗನ ನಿಲುವೆಂದು ಕಾಣುತ್ತದೆ.” ಈ ಮಾತಿಗೆ ಸಾಕ್ಷಿಯೆಂಬಂತೆ ತಲೆಗೆ ಪಗಡಿ ಸುತ್ತಿಕೊಂಡ ಬೇಂದ್ರೆಯವರು ಬಲಗೈಯನ್ನು ಮೇಲೆತ್ತಿ ಆಡಿಸುತ್ತ ಸಾಭಿನಯವಾಗಿ ಕವಿತೆ ಓದುತ್ತಿರುವ ಒಂದು ಅದ್ಭುತವಾದ ಫೋಟೋ ಇದೆ.

ಮುಖವೆನ್ನುವುದು ಇಡೀ ವ್ಯಕ್ತಿತ್ವದ ಒಂದು ಅಭಿವ್ಯಕ್ತಿಯಷ್ಟೆ. ಆ ಅಭಿವ್ಯಕ್ತಿ ಸದಾ ಒಂದೇ ರೀತಿ ಇರುವುದಿಲ್ಲ. ಒಬ್ಬ ಫೋಟೋಗ್ರಾಫರ್ ವ್ಯಕ್ತಿಯೊಬ್ಬನ ಒಟ್ಟು ಅಭಿವ್ಯಕ್ತಿಯಲ್ಲಿ ಒಂದು ಕ್ಷಣವನ್ನಷ್ಟೇ ಸೆರೆಹಿಡಿಯಬಲ್ಲ. ನಾನು ಮೇಲೆ ಸೂಚಿಸಿದ ಫೋಟೋಗಳೆಲ್ಲವೂ ನಿಸ್ಸಂದೇಹವಾಗಿ ಅಂಥ ಕ್ಷಣಗಳನ್ನು ಸೆರೆಹಿಡಿದಿವೆಯೆನ್ನಬೇಕು. ಆದರೆ ಹಾಗೆ (ಬಹುಶಃ ತೀರ ಹಳೆಯ ಡಬ್ಬದ ಕ್ಯಾಮೆರಾದಲ್ಲಿ) ಸೆರೆಹಿಡಿದ ಮಹಾನುಭಾವರು ಯಾರು? ಈಗ ಯಾರಿಗೂ ಗೊತ್ತಿಲ್ಲ. ಅವರೆಲ್ಲರೂ ಆ ಲೇಖಕರಿಗೆ ಒಂದಿಷ್ಟೂ ಸುಳಿವು ಕೊಡದೆ ಆ ಫೋಟೋಗಳನ್ನು ಕ್ಲಿಕ್ಕಿಸಿರಬೇಕು. ಯಾಕೆಂದರೆ ಅವರು ಯಾರೂ ಕ್ಯಾಮೆರಾಕ್ಕಾಗಿ ತಮ್ಮ ಮುಖ-ಮೈ ಒಡ್ಡಲು ಬಡಪೆಟ್ಟಿಗೆ ಒಪ್ಪುತ್ತಿರಲಿಲ್ಲ. ಇನ್ನು ತಮ್ಮ ಅರಿವಿಗೆ ಬರದೆ ಯಾರೋ ತೆಗೆದ ಫೋಟೋವನ್ನು ಮುದ್ರಿಸುವುದಕ್ಕಾದರೂ ಅನುಮತಿ ಕೊಡುತ್ತಿದ್ದರೆ?
1974ರ ಅಂತ್ಯದಲ್ಲಿ ಗೋಪಾಲಕೃಷ್ಣ ಅಡಿಗರು ತಮ್ಮ ಅದುವರೆಗಿನ ಕಾವ್ಯವನ್ನು ಒಂದೇ ಸಂಪುಟದಲ್ಲಿ ಪ್ರಕಟಿಸಬೇಕೆಂದು ತೀರ್ಮಾನಿಸಿದರು. ಅಲ್ಲಿಯವರೆಗೆ ಕನ್ನಡದ ಯಾವುದೇ ಕವಿಯ ಕವನಗಳು ಹಾಗೆ ಒಟ್ಟುಗೂಡಿದ ಉದಾಹರಣೆ ಇರಲಿಲ್ಲ. ಪುಸ್ತಕಕ್ಕೆ ಏನು ಹೆಸರಿಡಬೇಕು? ಇಂಗ್ಲಿಷಿನಲ್ಲಿ ‘ಕಲೆಕ್ಟೆಡ್ ಪೊಯಮ್ಸ್’ ಎನ್ನುತ್ತಾರಷ್ಟೆ. ಕನ್ನಡದಲ್ಲಿ? ಅಡಿಗರು “ಸಮಗ್ರ ಕಾವ್ಯ” ಎಂದರು. (ಅದು ಮುಂದೆ ಅನೇಕಾನೇಕ ಕವಿಗಳ, ಕತೆಗಾರರ ಒಟ್ಟು ಕೃತಿಗಳಿಗೆ ಶೀರ್ಷಿಕೆಯಾದದ್ದು, ಇಂದು ಕೂಡ ಶೀರ್ಷಿಕೆಯಾಗುತ್ತಿರುವುದು ಸರ್ವವಿದಿತ.) ಬಾ.ಕಿ.ನ. ತನ್ನ ಲಿಪಿ ಮುದ್ರಣಾಯಲದಲ್ಲಿ ಅಚ್ಚಿನ ಮೊಳೆಗಳನ್ನು ಜೋಡಿಸಿದ. ನಾನು ಪ್ರೂಫ್ ತಿದ್ದಿದೆ. ನಮಗಿಬ್ಬರಿಗೂ ಮುಖಪುಟಕ್ಕೆ ಅಡಿಗರ ಫೋಟೋ ಹಾಕಬೇಕೆಂಬ ಆಸೆ. ಕೆ.ಜಿ. ಸೋಮಶೇಖರ್ ತೆಗೆದ ಒಂದು ಫೋಟೋವನ್ನು ಆಯ್ಕೆಮಾಡಿಕೊಂಡೆವು. ಸುದ್ದಿ ಗೊತ್ತಾದದ್ದೇ ಅಡಿಗರು ಖಡಾಖಂಡಿತವಾಗಿ ನನ್ನ ಫೋಟೋ ಹಾಕಬೇಡಿ ಎಂದುಬಿಟ್ಟರು. ಏನು ಮಾಡಿದರೂ ನಮ್ಮಿಂದ ಅವರನ್ನು ಒಪ್ಪಿಸಲಾಗಲಿಲ್ಲ. ಕಡೆಗೆ ಬಾ.ಕಿ.ನ. ಆ ಫೋಟೋವನ್ನು ‘ಫೋಟೋಲಿತ್’ (ಅಂದರೆ ಸಣ್ಣ ಸಣ್ಣ ಚುಕ್ಕೆಗಳ ಮೂಲಕ ಫೋಟೋದ ರೂಪರೇಷೆಯಷ್ಟೆ ಉಳಿದುಕೊಳ್ಳುವ) ವಿಧಾನದಲ್ಲಿ ಬ್ಲಾಕ್ ಮಾಡಿಸಿ ಮುಖಪುಟದಲ್ಲಿ ಮುದ್ರಿಸಿದ. ಅದನ್ನು ನೋಡಿದ ಅಡಿಗರಿಗೆ ಅದೆಷ್ಟು ಅಸಮಾಧಾನವಾಯಿತೆಂದು ವಿವರಿಸಲಾರೆ.
ಹಾಗೆ ನೋಡಿದರೆ ಲೇಖಕರು ತಮ್ಮ ಪುಸ್ತಕಗಳಲ್ಲಿ ಸ್ವಭಾವಚಿತ್ರಗಳನ್ನು ಹಾಕಿಕೊಳ್ಳತೊಡಗಿದ್ದು 1950ರ ದಶಕದಲ್ಲಿ. ಅದು ಪ್ರಗತಿಶೀಲರ ಪ್ರಾಬಲ್ಯವಿದ್ದ ಕಾಲ. ಅ.ನ.ಕೃ., ತ.ರಾಸು., ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿ, ನಿರಂಜನ, ತ್ರಿವೇಣಿ ಮೊದಲಾದವರ ಕಾದಂಬರಿಗಳ ಹಿಂಬದಿಯಲ್ಲಿ ಅವರ ಅಂಚೆಚೀಟಿ ಗಾತ್ರದ ಕಪ್ಪು-ಬಿಳುಪು ಚಿತ್ರಗಳಿರುತ್ತಿದ್ದವು. ಅವುಗಳ ಕೆಳಗೆ ಆಗಷ್ಟೇ ರೂಢಿಗೆ ಬಂದಿದ್ದ ಬ್ಲರ್ಬ್ ಅಥವಾ ಬೆನ್ನುಡಿ. ಉದಾಹರಣೆಗೆ ಎಂ. ರಾಮಮೂರ್ತಿಯವರ ಪತ್ತೆದಾರಿ ಕಾದಂಬರಿಗಳ ಹಿಂಬದಿಯಲ್ಲಿ ಅವರ ಫೋಟೋದಡಿ ಮುದ್ರಿಸಿರುತ್ತಿದ್ದ ವಾಕ್ಯ: “ರಾಮಮೂರ್ತಿಯ ಕಾದಂಬರಿಗಳು ನಿಮ್ಮನ್ನೆಂದೂ ವಂಚಿಸುವುದಿಲ್ಲ”. ಹೀಗೆ ಪುಸ್ತಕದ ಹಿಂಬದಿಯಲ್ಲಿರುತ್ತಿದ್ದ ಫೋಟೊ ಮುಂದೆ ನವ್ಯರ ಕಾಲದಲ್ಲಿ ಮುಂಬದಿಗೆ ಲಗ್ಗೆಯಿಟ್ಟಿತು. ಕೆಲವು ಸಂದರ್ಭಗಳಲ್ಲಂತೂ ಅದು ಇಡೀ ಮುಖಪುಟವನ್ನು ಆಕ್ರಮಿಸಿಕೊಂಡದ್ದುಂಟು.
ವಿಖ್ಯಾತ ಫೋಟೋಗ್ರಾಫರ್ ಹೆನ್ರಿ ಕಾರ್ತ್ಯೆ-ಬ್ರೆಸೊನ್ ಪ್ರಕಾರ “ಫೋಟೊಗ್ರಾಫರನಾದವನು ನಿಜಕ್ಕೂ ಒಂದು ಚಿತ್ರವನ್ನು ಸೆರೆಹಿಡಿದುಕೊಳ್ಳುವಾಗ ಏನನ್ನೂ ಯೋಚಿಸಬಾರದು. ಅವನು ಒಬ್ಬ ಜೆನ್ ಬಿಲ್ಲುಗಾರನಂತೆ ತನ್ನ ಗುರಿ ತಾನೇ ಆಗಿಬಿಡಬೇಕು. ಯೋಚಿಸುವುದೇನಿದ್ದರೂ ಸೆರೆಹಿಡಿಯುವುದಕ್ಕೆ ಮೊದಲು ಅಥವಾ ಆಮೇಲೆ.” ಈ ಸೂತ್ರವನ್ನು ಅನುಸರಿಸಿ 1960ರಿಂದ ಈಚೆಗೆ ನಮ್ಮ ಲೇಖಕರನ್ನು ಸೆರೆಹಿಡಿದಿರುವ ಫೋಟೋಗ್ರಾಫರರಲ್ಲಿ ಕೆ.ಜಿ.ಸೋಮಶೇಖರರಿಗೆ ಅಗ್ರಸ್ಥಾನ. ಅವರ ಕ್ಯಾಮೆರಾದಲ್ಲಿ ಮೂಡಿಬಂದಿರುವ ಡಿ.ವಿ.ಜಿ., ಕುವೆಂಪು, ತಿರುಮಲಾಂಬಾ, ವಿ.ಕೃ. ಗೋಕಾಕ್, ಕೆ.ವಿ.ಸುಬ್ಬಣ್ಣ, ಎಸ್.ಎಲ್. ಭೈರಪ್ಪ ಮೊದಲಾದವರ ಫೋಟೋಗಳನ್ನು ನೋಡಿಯೇ ಆಸ್ವಾದಿಸಬೇಕು. ಛಾಯಾಚಿತ್ರ ಕಲೆಯಲ್ಲಿ ‘ಪೋರ್ಟ್ ರೇಟ್’ ಎನ್ನುವುದು ಬೆಳಕಿನ ಮತ್ತು ಮನುಷ್ಯ ವದನದ ನಡುವೆ ನಡೆಯುವ ಒಂದು ಸಂವಾದವಷ್ಟೆ. ಇದಕ್ಕೆ ಅನುಗುಣವಾಗಿ ಸೋಮಶೇಖರರ ಕ್ಯಾಮೆರಾ ಪಡಿಮೂಡಿಸಿದ ವ್ಯಕ್ತಿ ನಿಜಜೀವನದಲ್ಲಿ ಹಾಗಿರುತ್ತಿದ್ದುದೇ ಅಪರೂಪ. ಅವರ ಫೋಟೋಗಳಲ್ಲಿ ವ್ಯಕ್ತಿಯ ಭೌತಿಕ ರೂಪವಷ್ಟೇ ಅಲ್ಲ, ಅದನ್ನೂ ಮೀರಿದ ಆಂತರಿಕ ಚೈತನ್ಯವೊಂದು ಮಿಡಿಯುತ್ತಿತ್ತು. ಅದು ಚಿಂತಕ/ವಿಮರ್ಶಕ ವಾಲ್ಟರ್ ಬೆಂಜಮಿನ್ ಹೇಳಿದಂತೆ “ಎ ಸ್ಪೆಲ್ ಆಫ್ ಪರ್ಸೊನ್ಯಾಲಿಟಿ”.
ಹೀಗೆ ನಮ್ಮ ಲೇಖಕರನ್ನು ಸೆರೆಹಿಡಿದಿರುವ ಇನ್ನೊಬ್ಬ ಫೋಟೋಗ್ರಾಫರ್ ಎ.ಎನ್. ಮುಕುಂದ. ಅವರದು ಸೋಮಶೇಖರರ ಫೋಟೋಗಳಂತೆ ಕಪ್ಪು-ಬಿಳಿಯಲ್ಲ; ಬಣ್ಣದ ಚಿತ್ರಗಳು. ಬಣ್ಣವು ಕಪ್ಪು-ಬಿಳಿಯಲ್ಲಿ ಹೊಮ್ಮುವ ಸಾಂದ್ರತೆಯನ್ನಾಗಲೀ ಆಳವನ್ನಾಗಲೀ ಗೂಢಭಾವವನ್ನಾಗಲೀ ದಕ್ಕಿಸಿಕೊಳ್ಳಲಾರದೆಂಬ ಮಾತಿದೆ. ಈ ಮಾತನ್ನು ಪ್ರಶ್ನಿಸುವಂತಿರುವ ಮುಕುಂದರ ಫೋಟೋಗಳಲ್ಲಿ ನನ್ನನ್ನು ಸದಾ ಪರವಶಗೊಳಿಸುವ ಒಂದು ಫೋಟೊ ಪು.ತಿ.ನ. ಅವರದು. ಅದರಲ್ಲಿ ಪು.ತಿ.ನ. ಅವರ ಮುಖಭಾವ ಆತ್ಮಸಂಧಾನದಲ್ಲಿ ಮುಳುಗಿದಂತಿದೆ ಅಥವಾ ಸಂಗೀತದ ಅನಾಹತನಾದಕ್ಕೆ ಕಿವಿಗೊಟ್ಟಂತಿದೆ. ಜೊತೆಗೆ ಬದುಕಿನ ಸುಖದುಃಖಗಳನ್ನು ನೆನಪುಮಾಡಿಕೊಂಡು ಅನುಭವಿಸಿದಾಗ ಬರುವ ನೆಮ್ಮದಿಯಿದೆ, ‘ಈ ಬದುಕು ಎಷ್ಟು ಅಪಾರ’ ಎಂಬ ವಿಸ್ಮಯವಿದೆ.
ಇವೆಲ್ಲ ಹಳೆಗಾಲದ ಲೇಖಕರ ಮಾತಾಯಿತು. ಈಗ ಪುಸ್ತಕಗಳ ರಕ್ಷಾಕವಚದಲ್ಲಿ ತಮ್ಮ ಫೋಟೋಗಳನ್ನು ಹಾಕಿಕೊಳ್ಳದ ಲೇಖಕರೇ ಅಪರೂಪವಲ್ಲವೆ? ಆದರೆ ನಾನು ಗಮನಿಸಿದಂತೆ ಅವರ ಬಹುಪಾಲು ಫೋಟೋಗಳು ಪೋಸು ಕೊಟ್ಟು ತೆಗೆಸಿಕೊಂಡವು. ಪೋಸು ಕೊಡುವುದಕ್ಕೆ ಒಂದು ಕಾರಣ ನಾವು ಚೆನ್ನಾಗಿ ಕಾಣಬೇಕೆಂಬುದು; ಇನ್ನೊಂದು ನೋಡುವವರಿಗೆ ನಾವು ಒಂದು ನಿರ್ದಿಷ್ಟ ರೀತಿಯಲ್ಲೇ ಕಾಣಿಸಬೇಕೆನ್ನುವುದು. ಮತ್ತೆ ನಮಗಿಲ್ಲದ ಚೆಂದ ನಮ್ಮ ಫೋಟೋಗಳಲ್ಲಿರುತ್ತದೆ ಎಂಬ ನಂಬಿಕೆಯೂ ನಮಗುಂಟು. ‘ಫೋಟೊಜೆನಿಕ್’ ಎನ್ನುವುದರ ಅರ್ಥವಾದರೂ ಏನು? ನಿಮಗೊಂದು ಜೋಕು ಗೊತ್ತಿರಬೇಕು: ಒಬ್ಬರು ಒಂದು ಮಗುವಿನ ತಾಯಿಯನ್ನು ಉದ್ದೇಶಿಸಿ, “ಆಹ, ಎಷ್ಟು ಮುದ್ದಾಗಿದೆ ನಿಮ್ಮ ಮಗು!” ಎಂದರಂತೆ. ಅದಕ್ಕೆ ಆ ತಾಯಿ ಹೇಳಿದ್ದು: “ಅಯ್ಯೋ, ಮಗೂನ ನೋಡಿಯೇ ಹೀಗಂತೀರಲ್ಲ, ಇನ್ನು ಅದರ ಫೋಟೋ ನೋಡಿದರೆ ಏನು ಹೇಳುತ್ತೀರೊ!”
ಕ್ಯಾಮೆರಾದ ಮಸೂರ ನಮ್ಮನ್ನು ನೋಡುತ್ತಿದೆಯೆನಿಸಿದರೆ ಸಾಕು, ನಾವು ‘ಪೋಸು’ಕೊಡುವ ಪ್ರಕ್ರಿಯೆಗೆ ನಮ್ಮನ್ನು ಒಳಪಡಿಸಿಕೊಳ್ಳುತ್ತೇವೆ, ತಕ್ಷಣ ನಮಗಾಗಿ ಇನ್ನೊಂದು ದೇಹವನ್ನು ಕಲ್ಪಿಸಿಕೊಂಡು, ಅದನ್ನೊಂದು ಪ್ರತಿಮೆಯಾಗಿ ಪರಿವರ್ತಿಸಿಕೊಳ್ಳುತ್ತೇವೆ. ಫೋಟೋಗ್ರಾಫರನಿಗೆ ಪೋಸು ಕೊಡುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯೊಳಗೆ ಒಟ್ಟು ಮೂರು ಮಂದಿ ಸೇರಿಕೊಳ್ಳುತ್ತಾರೆ: ಮಸೂರದ ಮುಂದೆ ಹೇಗೆ ಕಾಣಿಸಿಕೊಳ್ಳಬೇಕೆಂದು ತೀಮರ್ಾನಿಸುವವನೊಬ್ಬ; ಇತರರು ತನ್ನ ಬಗ್ಗೆ ಹೇಗೆ ಯೋಚಿಸಬೇಕೆಂದು ನಿರ್ಧರಿಸುವವನೊಬ್ಬ; ಫೋಟೋಗ್ರಾಫರನು ತನ್ನನ್ನು ಹೇಗೆ ಬಗೆಯಬೇಕೆಂದು ಆಶಿಸುವವನೊಬ್ಬ.
ಈಗ ಮತ್ತೆ ನಾನು ಮೊದಲು ಪ್ರಸ್ತಾಪಿಸಿದ ‘ಸಾಂಸ್ಕೃತಿಕ ಪ್ರತಿಮೆ’ಗಳ ವಿಷಯಕ್ಕೆ ಬರೋಣ. ಫೋಟೋಗಳ ಮೂಲಕ ಪ್ರತ್ಯಕ್ಷವಾಗದಿದ್ದರೂ ಅವರು ಪ್ರಸಿದ್ಧರಾಗುವುದಕ್ಕೆ ಕಾರಣ ಅವರ ಸಾಧನೆಗಳು. ಆ ಸಾಧನೆಗಳೇ ಅವರನ್ನು ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲಿಸಿದ್ದವು. ಈಗ ನಮ್ಮ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ (ಟಿ.ವಿಯಲ್ಲಿ ಕೂಡ) ಮತ್ತೆ ಮತ್ತೆ ಕಾಣಿಸಿಕೊಳ್ಳುವವರು ಮಹಾನ್ ವ್ಯಕ್ತಿಗಳಾಗದಿದ್ದರೂ ಸೆಲೆಬ್ರಿಟೀಗಳಾಗಬಹುದು. ಅಮೆರಿಕದ ವಿದ್ವಾಂಸ ಡೇನಿಯಲ್ ಬೂರ್ಸ್ಟಿನ್ನ ಪ್ರಕಾರ “ಎ ಸೆಲೆಬ್ರಿಟಿ ಈಸ್ ಎ ಪರ್ಸನ್ ಹೂ ಈಸ್ ವೆಲ್ನೋನ್ ಫಾರ್ ಹಿಸ್ ವೆಲ್ನೋನ್ನೆಸ್”.
ಒಟ್ಟಿನಲ್ಲಿ ನಮ್ಮ ಓದುಗರಿಗೀಗ ಎಲ್ಲ ಲೇಖಕರೂ ಸುಪರಿಚಿತರೇ. ಹಾಗಾಗಿ ಅವರ ಮನಸ್ಸಿನಲ್ಲಿ ಲೇಖಕರಾದವರು ಹಿಂದಿನಂತೆ ದಿವ್ಯಪ್ರಭೆಯನ್ನು ಹೊಮ್ಮಿಸುವಂತಹ ‘ಸಾಂಸ್ಕೃತಿಕ ಪ್ರತಿಮೆ’ಗಳಾಗಿ ರೂಪುಗೊಳ್ಳಲಾರರು. ನಮ್ಮಲ್ಲಿ ಪ್ರಚಾರದಿಂದ ಗಾವುದ ಗಾವುದ ದೂರವಿರುತ್ತಿದ್ದ ಅಡಿಗರೇ ಬಹುಶಃ ಕೊನೆಯ ಸಾಂಸ್ಕೃತಿಕ ಪ್ರತಿಮೆ.






Good article, recalled my childhood. Thank you Mr. Divakar.
ಈಗಿನ ಕಾಲದ ಲೇಖಕರು ಪುಸ್ತಕದ ತಿರುಳಿಗಿಂಥ ಅಧಿಕವಾಗಿ ಮೆರವಣಿಗೆ ದೇವರುಗಳಂತೇ ವಿಜೃಂಭಿಸುತ್ತಾರೆ . ಆದರೆ ಆ ಕಾಲದ ಲೇಖಕರು ಕಾಣದ ದೇವರುಗಳಂತೆ ತಮ್ಮ ಕ್ರಿಯೆಯನ್ನಷ್ಟೇ ಸಮರ್ಥವಾಗಿ ಮಾಡುತ್ತಿದ್ದರೆಂಬುದಕ್ಕೆ ಈ ಲೇಖನ ಒಂದು ಒಳ್ಳೆಯ ಉದಾಹರಣೆ.