ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂಗೂರೇಶ ಹಿರೇಮಠ ಅವರ ಸಣ್ ಕತೆಗಳು

ಸೂಗೂರೇಶ ಹಿರೇಮಠ

ಪಕ್ಕದ ಮನೆಯ ರಾಮುವಿಗೆ ಜಮೀನಿಲ್ಲ ಏನಾದರೂ ದಿನಗೂಲಿ ಮಾಡಿ ನೂರೈವತ್ತು ೨೦೦ ಗಳಿಸುತ್ತಿದ್ದ, ಅವನ ಹೆಂಡತಿ ಬೇರೆಯವರ ಜಮೀನಿನಲ್ಲಿ ಕೆಲಸಕ್ಕೆ ಹೋಗುತ್ತಾಳೆ ಅವಳದು ಎಂಬತ್ತೊ – ತೊಂಬತ್ತು ದಿನಕ್ಕೆ ಗಳಿಕೆ. ರಾಮುವಿನ ಗೆಳೆಯ ಶಂಕರ ಬೆಂಗಳೂರಿಗೆ ಗಾರೆ ಕೆಲಸಕ್ಕೆ ಹೋಗುತ್ತಿರುವುದರಿಂದ ಅವನ ಹಳೆಯ ಬೈಕ್ನ್ನು ರಾಮುವಿಗೆ ೧೫ ಸಾವಿರಕ್ಕೆ ಮಾರಾಟ ಮಾಡಿ ಹೋಗುತ್ತಾನೆ. ಇತ್ತ ರಾಮು ಆ ಹಳೆಯ ಬೈಕ್‌ನಲ್ಲಿ ಹಳ್ಳಿಗಳಲ್ಲಿ ಬೆಳೆದ ತರಕಾರಿಗಳನ್ನ, ಕೊತ್ತಂಬರಿ, ಮೆಂತೆ, ಟೊಮ್ಯಾಟೊಗಳನ್ನ ಕೊಂಡು ಪಟ್ಟಣಕ್ಕೆ ಮಾರಾಟ ಮಾಡಲು ಶುರು ಮಾಡುತ್ತಾನೆ. ಹೀಗೆ  ಅವನ ದಿನದ ಆದಾಯದಲ್ಲಿ ನೂರೋ ಇನ್ನೂರೋ ಹೆಚ್ಚಾಗುತ್ತದೆ..! ರಾಮುವಿಗೆ ಈಗ ಬೈಕ್ ಇದ್ದಿದ್ದಕ್ಕೆ ಭಯ ಶುರುವಾಗಿದೆ.

* * * * *

ಹಳೆದಯದೊಂದು ಸ್ಕೂಟರ್‌ನಲ್ಲಿ ಐಸ್ಕ್ಯಾಂಡಿ ಮಾರುವ ಬಡೇಸಾಬು ತನ್ನ ಕುಟುಂಬವನ್ನ ಸಲಹುತ್ತಾನೆ. ಹಳ್ಳಿ ಹಳ್ಳಿ ತಿರುಗಾಡಿ ಪೆಟ್ರೋಲ್ ಖರ್ಚು ತೆಗೆದು ನೂರಿನ್ನೂರು ಉಳಿಸುತ್ತಾನೆ. ಹಳೆ ಗುಜರಿಯ ಸಾಮಾನುಗಳಿಗೆ ಐಸ್ಕ್ರಿಂ ಮಾರಿ ಇದ್ದಿದ್ದರಲ್ಲೆ‌ ದಿನ ಕಳೆಯುತ್ತಾನೆ. ಬಡೇಸಾಬನಿಗೆ ಈಗ ಭಯ ಶುರುವಾಗಿದೆ.

* * * * *

ಅಶೋಕ ಎಸ್ ಎಸ್ ಎಲ್ ಸಿಯಲ್ಲಿ ಫೇಲಾದವ.. ಹಳ್ಳಿ ಹುಡುಗ ಕೃಷಿ ಕೆಲಸ ಮಾಡೋಣವೆಂದರೆ ಅವನಿಗೆ ಜಮೀನಿಲ್ಲ ಹೇಗಾದರು ದುಡಿಯಬೇಕೆಂಬ ಹಠಕ್ಕೆ ಅವನು ತನ್ನೂರಿನಿಂದ ಹತ್ತು ಕಿಮೀ ಇದ್ದ ಪಟ್ಟಣದ ಡಾಭಾ ಒಂದರಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ದಿನವೊಂದಕ್ಕೆ ನೂರು ರೂಪಾಯಿ ಕೂಲಿಯ ರೂಪದಲ್ಲಿ ಸಿಗುತ್ತದೆ. ಹೀಗಿರುವಾಗ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗದೆ ಯಜಮಾನನಿಂದ ಸಾಕಷ್ಟು ಸಲ ಬೈಸಿಕೊಂಡಿರುತ್ತಾನೆ. ಯಜಮಾನ ಇವನ ಕಷ್ಟ ನೋಡಲಾಗದೆ ತಮ್ಮ ಹಳೆಯ ಬೈಕ್ ಒಂದನ್ನು ಕೊಟ್ಟು ಪ್ರತಿ ತಿಂಗಳು ಸಂಬಳದಲ್ಲಿ ಹಣ ಕಟಾವು ಮಾಡಿಕೊಳ್ಳುತ್ತಾನೆ. ಅಶೋಕನಿಗೂ ಖುಷಿಯಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಲು ಅನುಕೂಲವಾಗುತ್ತದೆ. ಹೀಗಿರುವಾಗಲೆ ಅಶೋಕನಿಗೆ ಬೈಕ್ ಇರುವುದರಿಂದಲೆ ಭಯ ಶುರುವಾಗಿದೆ.

* * * * *

ಭೀಮನಿಗೆ ಪ್ಲಾಸ್ಟಿಕ್ ಚೀಲಗಳಿಂದ ಹಗ್ಗ ತಯಾರಿಸುವ ಜಾಣತನವಿದೆ, ಅವನು ಸಣ್ಣದೊಂದು ಕೈಯಿಂದ ತಿರುಗಿಸುವ ರಾಟೇಯನ್ನು ತನ್ನ ಬೈಕಿಗೆ ಕಟ್ಟಿಕೊಂಡು ಹೆಂಡತಿಯೊಂದಿಗೆ ಹಳ್ಳಿ ಹಳ್ಳಿಗೆ ತಿರುಗಿ ಹಗ್ಗ ಮಾಡಿಕೊಟ್ಟು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಒಂದು ಹಗ್ಗಕ್ಕೆ ಹತ್ತು ರೂಪಾಯಿಯಂತೆ ದಿನಕ್ಕೆ ಹತ್ತಿಪ್ಪತ್ತು ಹಗ್ಗ ಮಾಡಿಕೊಟ್ಟು ಗಳಿಸುತ್ತಾನೆ. ಹೀಗೆಯ ಅವನು ತನ್ನ ಬೈಕಿನ ಕಾರಣದಿಂದ ಹೆದರುತ್ತಿದ್ದಾನೆ.

* * * * *

ಒಣಮೆಸಿನಕಾಯಿ ಪುಡಿಯನ್ನು ಬೈಕಿನ ಮೇಲೆ ಮಾರುವ ಅಂಜಪ್ಪಿಗೂ ಭಯವಾಗಿದೆ. ಎರಡು ಎಕರೆ ಭೂಮಿ ಇರುವ ವಯಸ್ಸಾದ ಮಾರಪ್ಪ ಹತ್ತು ಕಿಮಿ ದೂರ ಇರುವ ಹೊಲಕ್ಕೆ ಹೋಗಲೆಂದೆ ಹಳೆಯ ಬೈಕೊಂದನ್ನು ಇಟ್ಟುಕೊಂಡಿದ್ದಾನೆ. ಈಗ ಬೈಕ್ ಮಾರುವ ಯೋಚನೆಯಲ್ಲಿದ್ದಾನೆ.

ಲಾಕ್ ಡೌನ್ ಮುಗುದ ಮೇಲೆ‌ ಕೆಲಸ ಕಳೆದುಕೊಂಡಬಸಪ್ಪ ಈಗ ಬೈಕಿನ ಮೇಲೆಯೆ ಒಲೆಯಿಟ್ಟು ಬಿಸಿ ಬಿಸಿ ದೋಸೆಯನ್ನು ಓಣಿಯಲ್ಲೆಲ್ಲಾ ಓಡಾಡಿ ಶ್ರಮವಹಿಸಿ ಗಳಿಸುತ್ತಾ‌ನೆ. ಈಗ ಅವನಿಗೂ ಭಯ ಶುರುವಾಗಿದೆ.

ಹೀಗೆ ಭಯಗಳ ಕತೆ ಮುಗಿಯುವುದಿಲ್ಲ.

‍ಲೇಖಕರು Avadhi

16 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading