-ಸುಶ್ರುತ ದೊಡ್ಡೇರಿ
ರಾತ್ರಿ ಅಂಥಾ ಮಳೆ ಬಂದಿತ್ತು ಅಂತ
ಗೊತ್ತಾಗಿದ್ದು ಬೆಳಗ್ಗೆ ಎದ್ದಮೇಲೇ.
ನಂಬಲಿಲ್ಲ ನಾನು,
ಚೂರೂ
ಒದ್ದೆಯಾಗಿರಲಿಲ್ಲವಲ್ಲ ನೀನು
ನಡೆದು ಬರುವಾಗ ತಡರಾತ್ರಿ
ಕನಸಿನಲ್ಲಿ?
ನೆಂದಿದ್ದರೆ, ಮೆತ್ತನೆ ವಸ್ತ್ರದಲ್ಲಿ
ನಿನ್ನ ತಲೆ ಒರೆಸಿ
ಗರಿಗರಿ ಷರಾಯಿ ತೊಡಿಸಿ
ಬೆಚ್ಚನೆ ಹಾಲು ಕುಡಿಸಿ
ಅಂತಃಪುರದ ಸೋಪಾನದಲ್ಲಿ
ರಜಾಯಿ ಸಮೇತ ಬಳಸಿ
ತಟ್ಟುತ್ತಿದ್ದೆ ಚುಕ್ಕು.
ಆದರೆ, ಬಂದ ನೀನು
ಒದ್ದೆಯಾಗಿರಲೇ ಇಲ್ಲವಲ್ಲ..?
ಹಾಗಾದರೆ ಗಂಧವತೀ ಭೂಮಿ
ಸುಳ್ಳು ಹೇಳುತಿದೆಯೇ?
ಬಿದ್ದಿರುವ ತರಗೆಲೆಗಳು ಒದ್ದೆಯಾಗಿವೆ ಏಕೆ?
ಭವಂತಿ ಅಂಗಳದಲ್ಲಿ ನೀರು ಹೇಗೆ?
ಎಚ್ಚರಾದಾಕ್ಷಣ ಪಕ್ಕದಲ್ಲಿ ತಡವಿ
ನೀನಿಲ್ಲದ್ದು ತಿಳಿದು ಬಾಗಿಲಿಗೆ ಓಡೋಡಿ ಬಂದು
ಎಲ್ಲಿ ಹೋದ ನನ್ನಿನಿಯ ಎಲ್ಲಿ ಹೋದ ಕಾಂತ
ಅಂತ ಅರಮನೆಯನ್ನೆಲ್ಲ ಹುಚ್ಚಿಯಂತೆ ಹುಡುಕುವಾಗ
ಸಖಿಯರು ಬಂದು ಸಮಾಧಾನ ಮಾಡುತ್ತಾರೆ:
ಬಿಡು, ಬಿದ್ದದ್ದು ಎಂದಿನಂತೆ ಒಣ ಕನಸು ಅಂತ.
ಹೌದು, ಬಿಡದ ಭ್ರಮೆ ನನಗೆ..
ಕೃಷ್ಣ ಬಿಟ್ಟುಹೋದಮೇಲೆ
ಗೋಕುಲದಲ್ಲಿ ಮಳೆಯೆಲ್ಲಿ ಆಗಿದೆ?
ಈ ಒದ್ದೆ, ಈ ಒಸರು ಎಲ್ಲ
ರಾಧೆ ಮತ್ತವಳ ಸಖಿಯರ
ಕಣ್ಣೀರ ಹರಿವಿನ ಕುರುಹು
ಎಂಬುದು ಹೊಳೆಯದೆ ಹೋಯಿತಲ್ಲ.
ಬ್ಯೂಟಿಫುಲ್…..