ಸರೋಜಿನಿ ಪಡಸಲಗಿ
ನಿಜವಾಗಲೂ ಸುನಂದಾ ಬೆಳಗಾಂವಕರ ಇನ್ನಿಲ್ಲವೇ?? ಅರಿಯದಂತೆ ಕಣ್ತುಂಬಿ ಬಂದು ಧಾರೆಯಾಯ್ತು.”ಯಾಕೆ ಸರೋಜಿನಿ ೧೫ ದಿನ ಆಯ್ತು ಫೋನ್ ಬಂದು? ಆರಾಮ ಇದ್ದೀಯಲಾ “ಅಂತ ಅಕ್ಕರೆಯಿಂದ, ಕಾಳಜಿಯಿಂದ ಕೇಳುವ ಆ ಮಮತೆಯ ಧ್ವನಿ ಇನ್ನು ಕೇಳಲಾರೆ ಎಂಬುದನ್ನು ನೆನೆದೇ ಮನಭಾರವಾಗಿ , ಮಾತು ಮರೆತು ಕುಳಿತು ಬಿಟ್ಟೆ ಒಂದು ಕ್ಷಣ.
ಧಾರವಾಡದ ಮಣ್ಣಿನ ವಾಸನೆಯ ಅವರ ಲೇಖನಗಳ ಬಗ್ಗೆ ಮಾತಾಡುವಾಗ, “ನನ್ನ ಲೇಖನ ನಿನಗೆ ಯಾಕ ಅಷ್ಟು ಸೇರತಾವ” ಅಂತ ಕೇಳಿದರು. ಆಗ ಅದಕ್ಕೆ ಅವರಿಗೆ ನಾ ಹೇಳಿದ್ದೆ,” ನಮ್ಮ ಸುತ್ತ ಮುತ್ತಲಿನ ಜೀವನಾನೇ ಅಲ್ಲಿರ್ತದ. ನಿಮ್ಮ ನಿರಾಡಂಬರದ ಸರಳ ನಿರೂಪಣೆ ನಮ್ಮ ಮನಹೊಕ್ಕು ಅರಳಿಸಿ, ಒಳಹೊರಗೆ ಸುತ್ತಾಡಿಸಿ ಬಿಡ್ತದ ನೋಡ್ರಿ” ಅದಕ ಅವರ ಸರಳ ನಗೀನ ಉತ್ತರ.”ಮತ್ತ ನಮಗ ಹೆಣ್ಮಕ್ಕಳಿಗೆ ಏನು ಇರ್ತದೆ ಹೇಳು. ಅಡಿಗಿಮನಿ, ಗಂಡಾ, ಮಕ್ಕಳು ಅಲ್ಲೇ ನಮ್ಮ ಸಾಹಿತ್ಯ ಓಡಾಡಬೇಕು, ಅರಳಬೇಕು ಹೌದಲ್ಲೋ ಹೇಳು”. ಸ್ನಾತಕೋತ್ತರ ಪದವೀಧರೆ, ವಿದೇಶದಲ್ಲಿದ್ದು ಕೆಲಸ ಮಾಡ್ತಾ, ಮಕ್ಕಳು ಸಂಸಾರ ನಿಭಾಯಿಸುತ್ತಾ ಸಾಹಿತ್ಯದಲ್ಲಿ ಅಸಾಮಾನ್ಯ ಕೃಷಿ ಮಾಡಿದ ಸುನಂದಾ ಬೆಳಗಾಂವಕರ ಅವರ ಸೌಜನ್ಯದ ಉತ್ತರ, ಮಾತು.
“ನೀವು ಧಾರವಾಡದ ಮಳೀ ಒಳಗ ನೆನಕೋತ, ಆ ರಾಡಿ ಕೆಸರಿನ್ಯಾಗ ಒಂದು ಕಾಲು ಕಿತ್ತಿ ಇನ್ನೊಂದು ಕಾಲು ಇಡೋದು, ಮುಂದೆ ಬರುವ ಜಡೆ ಸರಿಸುತ್ತ ಒಂದು ಕೈಲಿ ಕೊಡೆ, ಇನ್ನೊಂದು ಕೈಲಿ ಪುಸ್ತಕ !!! ಆ ವರ್ಣನೆಯಲ್ಲಂತೂ ನನಗ ನೀವು ಕಾಣಲೇ ಇಲ್ಲ , ನಂದೇ ನೆರಳು ಕಂಡೆ ನೋಡ್ರೀ” ಅಂತ ನಾ ಹೇಳಿದಾಗ ಅದೇ ಸರಳ ನಗಿ ನಗ್ತಾ, “ಸರೋಜಿನಿ ಎಷ್ಟು ಛಂದ ನಿನ್ನ ಅನಿಸಿಕೆ ಹೇಳ್ತೀವಾ” ಇನ್ನೂ ಕಿವಿಯಲ್ಲಿ ಗುಂಯ್ ಗುಡ್ತಿದೆ. ಮನದಲೊಂದು ಧನ್ಯತೆ.
ಮೂರು ಪ್ರಶಸ್ತಿ ಗಳನ್ನು ಗಳಿಸಿದ ಅವರ ಕಾದಂಬರಿ “ನಾಸು”ದ ವಿಶ್ಲೇಷಣೆ ಬರೆದದ್ದನ್ನು ಅವರಿಗೆ ಕಳಿಸಿದ್ದೆ. ಮರುಕ್ಷಣ ಅವರಿಂದ ಫೋನ್. “ಸರೋಜಿನಿ ನಿನ್ನ ವಿಶ್ಲೇಷಣೆ ಉತ್ಕೃಷ್ಟ” ನನಗೋ ಸ್ವರ್ಗಕ್ಕೆ ಮೂರೇ ಗೇಣು. ತುಂಬಿದ ಕೊಡ ತುಳಕೋದಿಲ್ಲ ಅನ್ನೋ ಹೇಳಿಕೆನ ಇವರನ್ನು ನೋಡಿಯೇ ಮಾಡಿದಾರೆ ಅನ್ಕೊಂಡೆ .”ಶಿಕ್ಷಣ ಆಗಿನಿಂದಲೂ ಸ್ವಾಭಿಮಾನ ಮತ್ತು ಅಹಂದ ನಡುವಿನ ನವಿರಾದ ಗೆರೆಯನ್ನು ಅಳಿಸುತ್ತಲೇ ಬಂದಿದೆ ಅನಿಸ್ತದೆ ನಿಮ್ಮ ‘ನಾಸು’ ಓದಿದಾಗ” ಎಂದಿದ್ದೆ ನಾ. “ಅದು ಹೌದವಾ, ಅದs ನೋಡ ವಿಡಂಬನಾ”ಅಂದಿದ್ರು. ಅವರ ಧ್ವನಿಯಲ್ಲಿ ಸಣ್ಣ ನೋವಿನೆಳೆ.
ಈಗ ಎರಡು ತಿಂಗಳ ಹಿಂದೆ ಫೋನ್ ಮಾಡಿದಾಗ, ಎದ್ದು ಕೂರಲಾಗದೇ ಮಲಗಿದ್ದಲ್ಲಿಂದಲೇ ಸುಮಾರು ಮುಕ್ಕಾಲು ಗಂಟೆ ಮಾತನಾಡಿದ್ರು. “ನಿನ್ನ ಧ್ವನಿ ಭಾಳ ಸಣ್ಣವಾ. ಸರೋಜಿನಿ ಒಂದು ಹಾಡು ಹೇಳಿಬಿಡು ನೀನs ಬರೆದದ್ದು” ಅಂದ್ರು. ನಾನೆ ಬರೆದು ಸಂಯೋಜಿಸಿ ದ “ಆಸೆ ಕುದುರೆ” ಎಂಬ ಭಾವಗೀತೆ ಹೇಳಿದಾಗ “excellent ಸರೋಜಿನಿ”ಅಂದ್ರು.ಆ ಮೆಚ್ಚುಗೆಯ ಮಾತು,
ಅವರ ನೆನಪು ನನ್ನೆದೆಯ ಗೂಡಲ್ಲಿ ಬೆಚ್ಚಗೆ ಭಧ್ರವಾಗಿದ್ದರೂ, ಅವರು ಸರಳ ವ್ಯಕ್ತಿತ್ವದ ನೆನಪು ಅವರು ಕೃತಿಗಳ ಮೂಲಕ ಚಿರಸ್ಥಾಯಿಯಾಗಿದ್ದರೂ , ಅವರನ್ನು ಕಾಣೆನಲ್ಲ,ಆ ಮಮತೆಯ ಧ್ವನಿ ಕೇಳೆನಲ್ಲ,
ಈ ಕೊರಗಿನ ಪ್ರಶ್ನೆಗೆ ಏನೆಂದು ಉತ್ತರಿಸಲಿ , ಹೇಗೆ ಹೇಳಲಿ?!
ಸುನಂದಾ ಬೆಳಗಾಂವಕರ ಅವರನ್ನು ನೆನಪಲ್ಲಿ ಎರಡು ಮಾತು ಬರೆಯೋ ಅವಕಾಶ ಮಾಡಿ ಕೊಟ್ಟ ಅವಧಿ ಗೆ ನನ್ನ ಧನ್ಯವಾದಗಳು
Shocked to hear that She is no more. RIP
Avara prabandhagalalli ondu kaalaghattada Dhaarawaadada ghamalu sogadu tumbi tulukuttive…. padhe padhe odisikolluva aparoopada Lekhaki.