ಪತ್ರಕರ್ತ, ಲೇಖಕ, ರಾಜಕಾರಣಿ ಸುಧೀಂದ್ರ ಕುಲಕರ್ಣಿ ಅವರ ಮೇಲೆ ಹಲ್ಲೆಯಾಗಿದೆ. ಸುಮಾರು ಜನಕ್ಕೆ ಸುಧೀಂದ್ರ ಕುಲಕರ್ಣಿ ನಮ್ಮ ಧಾರವಾಡದವರೇ ಎಂದು ಗೊತ್ತಿಲ್ಲ. ಓದಿದ್ದು ಬೆಳಗಾವಿಯ ಅಥಣಿಯಲ್ಲಿ.
ತಮ್ಮ ವಿದ್ಯಾರ್ಥಿ ಜೀವನದ ಆರಂಭದಲ್ಲಿ ಎಡ ಚಳುವಳಿಗೆ ಆಕರ್ಷಿತರಾಗಿ, ನಂತರ ಪಿ ಸಾಯಿನಾಥ್ ರೊಡನೆ ಸೇರಿ ಮಾಧ್ಯಮದ ಹುಳುಕುಗಳನ್ನು ಬಯಲಿಗೆಳೆಯುತ್ತಾ ಹೋದ ಕುಲಕರ್ಣಿ ಅವರು ಭಾರತೀಯ ಜನತಾ ಪಕ್ಷ ಸೇರಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳನ್ನು ಬರೆಯುತ್ತಿದ್ದ ಸುಧೀಂದ್ರ ಕುಲಕರ್ಣಿ ಬಿಜೆಪಿಯ ‘ಥಿಂಕ್ ಟ್ಯಾಂಕ್’ ಗಳಲ್ಲಿ ಪ್ರಮುಖರು. ನಂತರ ಎಲ್ ಕೆ ಅಡ್ವಾಣಿ ಅವರ ಸಲಹೆಗಾರರಾಗಿದ್ದ ಇವರು ವಿವಾದಕ್ಕೆ ತುತ್ತಾದದ್ದು ಅದ್ವಾನಿ ಅವರ ಜಿನ್ನಾ ಭಾಷಣದಿಂದಾಗಿ. ಭಾರತ ಹಾಗೂ ಪಾಕಿಸ್ತಾನದ ಮೈತ್ರಿಯನ್ನು ಬಯಸುವವರು ಬಿಜೆಪಿಯೊಳಗೆ ಇಲ್ಲ ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿತ್ತು
ಸುಧೀಂದ್ರ ಕುಲಕರ್ಣಿ ಗಾಂಧಿ ಕುರಿತು ಬರೆದ ಕೃತಿ ಸಾಕಷ್ಟು ಸಂವಾದಕ್ಕೆ ದಾರಿ ಮಾಡಿಕೊಟ್ಟಿದೆ. ಈ ಕೃತಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿಯೂ ಬಿಡುಗಡೆಯಾಗಿತ್ತು.
ಇಂದು ಶಿವಸೇನೆ ಅದೇ ಪಾಕಿಸ್ತಾನ ಅಸ್ತ್ರ ಬಳಸಿ ಅವರ ಮುಖಕ್ಕೆ ಮಸಿ ಬಳೆದಿದೆ. ಸುಧೀಂದ್ರ ಕುಲಕರ್ಣಿ ಅವರು ಇದೀಗ ವಿದೇಶಿ ನೀತಿ ಕುರಿತ ಸಂಶೋಧನೆ ಹಾಗೂ ಸಲಹೆ ನೀಡುವ -Observer Research Foundation (ORF) ಸಂಸ್ಥೆಯನ್ನು ಮನ್ನಡೆಸುತ್ತಿದ್ದಾರೆ, ಈ ಸಂಸ್ಥೆ ವತಿಯಿಂದ ಪಾಕಿಸ್ತಾನದ ಮಾಜಿ ವಿದೇಶಾಂಗ ವ್ಯವಹಾರ ಸಚಿವ Khurshid Mahmud Kasuri ಅವರ “Neither a Hawk, Nor a Dove: An Insider Account of Pakistan’s Foreign Policy” ಕೃತಿಯನ್ನು ಇಂದು ಬಿಡುಗಡೆ ಮಾಡುವ ಕಾರ್ಯಕ್ರಮವಿತ್ತು. ಇದನ್ನು ಸಂಘಟಿಸಿದ್ದ ಸುಧೀಂದ್ರ ಕುಲಕರ್ಣಿ ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಖ್ಯಾತ ಗಜಲ್ ಗಾಯಕ ಗುಲಾಂ ಅಲಿ ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡದ ಶಿವಸೇನ ಈಗ ಸುಧೀಂದ್ರ ಕುಲಕರ್ಣಿಯವರ ಮೇಲೆ ತಮ್ಮ ಅಸಹನೆಯ ವಿರಾಟ್ ದರ್ಶನ ಮಾಡಿದೆ.
ಇದೊಂದು ಅಮಾನವೀಯ ಜೊತಗೆ ತಲೆತಗ್ಗಿಸ ಬೇಕಾದ ಘಟನೆ.