ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಪ್ಪೆಗೂ ಒಂದು ಕಾಲ

 


ಅರವಿಂದ ನಾವಡ ಅವರು ವಿಜಯ ಕರ್ನಾಟಕ ಮೈಸೂರು ವಿಭಾಗದ ಮುಖ್ಯಸ್ಥರು. ತಮ್ಮ ‘ಚಂಡೆಮದ್ದಳೆ‘ ಬ್ಲಾಗ್ ನಿಂದ ಸಾಕಷ್ಟು ಪರಿಚಿತರು. ಸಾಹಿತ್ಯ ಇವರ ಪ್ರಮುಖ ಸೆಳೆತ. ನಂತರದ್ದು ಬಹುಷಃ ಇದೇ- ನಳಪಾಕ.
ಅಡುಗೆ ಬಗ್ಗೆ ಬ್ಲಾಗ್ ಗಳು ಇಲ್ಲಾ ಅಂತೇನೂ ಇಲ್ಲ. ಆದರೆ ‘ನಳ’ ಬರೆದ ರೆಸಿಪಿ ಕಡಿಮೆ. ಹಾಗಾಗಿ ನಾವಡರ ಈ ಬ್ಲಾಗ್ ಪಾಕಚಂದ್ರಿಕೆ ಗೆ ವಿಶೇಷ ಮಹತ್ವ. ಹ್ವಾಯ್ ಮಾರಾಯ್ರೇ.. ನೀವು ಯಾರು, ಬಂದಂತ ಕಾರಣವೇನು ಎಂದು ನಾವಡರನ್ನೇನಾದರೂ ಪ್ರಶ್ನಿಸಿದ್ದಲ್ಲಿ ಹೀಗೆ ಹೇಳಿಯಾರು-
ನನ್ನ ಪ್ರವರ
ನಾನು ಬಾಣಸಿಗನಲ್ಲ. ನಳ,ಭೀಮಸೇನರ ವಂಶಜನೂ ಅಲ್ಲ. ಅಡುಗೆ ಮನೆ ನನ್ನ ಪ್ರಯೋಗಶಾಲೆಯೂ ಅಲ್ಲ. ಆಗಾಗ್ಗೆ ಶಾಲೆಯೊಳಗೆ ಹೊಕ್ಕು ಪ್ರಯೋಗ ಮಾಡುವುದಿದೆ. ಹಾಗೆ ಮಾಡಿದಾಗ ಯಶಸ್ವಿ ಆದದ್ದೆಲ್ಲಾ ಹೀಗೇ ಬರೆಯುತ್ತೇನೆ. ಇನ್ನಷ್ಟು ಮಂದಿಯ ಪ್ರಯೋಗಕ್ಕೆ ವೇದಿಕೆಯಾಗಲಿ ಅಂತ. ನಿಮಗೂ ಖುಷಿಯಾದರೆ ಚೆನ್ನಾಗಿದೆ ಅಂತ ಬರೀರಿ. ಇಷ್ಟವಾಗದಿದ್ದರೆ ಸುಮ್ಮನಿರಿ, ಇಲ್ಲದೇ ಇದ್ರೆ ಪ್ರಯೋಗಶಾಲಿಗಳು ಕೊಂದ ಮಹಾಪಾಪ ನಿಮಗೇ ಬರುತ್ತೆ…ಹ್ಹ…ಹ್ಹ….!
+++
ಕಲ್ಲಂಗಡಿ ಸಿಪ್ಪೆ ಪಲ್ಯ !
ಕಲ್ಲಂಗಡಿ ಹಣ್ಣು ಗೊತ್ತಲ್ಲ. ಅದರ ಸಿಪ್ಪೆಯ ಪಲ್ಯ ಗೊತ್ತೇ?
ಕೆಲವರಿಗೆ ಗೊತ್ತಿರಬಹುದು. ಅದರ ರುಚಿ ಅದ್ಭುತ. ನನ್ನ ಮೂರನೇ ರೆಸಿಪಿ ಅದೇ. “ಕಲ್ಲಂಗಡಿ ಸಿಪ್ಪೆ ಪಲ್ಯ’.
ಏನು ? ನಾವಡರು ಸಿಪ್ಪೆ ಇಡ್ಕೊಂಡಿದ್ದಾರಲ್ಲಾ ಅನ್ನಬೇಡಿ. ಇದೂ ಒಂದು ರೀತಿಯಲ್ಲಿ ಕಸವನ್ನು ರಸ ಮಾಡೋದು ಅಂತಲ್ಲ ; ಸಿಪ್ಪೆಯಿಂದ ಮೇಲೋಗರ ಮಾಡೋದು.
ಕಲ್ಲಂಗಡಿ ಸಿಪ್ಪೆ ಪಲ್ಯ ಮಾಡುವುದು ಬಹಳ ಸುಲಭ. ಹಣ್ಣು ತಿಂದ ಮೇಲೆ ಸಿಪ್ಪೇನಾ ತೆಗೆದಿಡಿ. ಫ್ರಿಜ್‌ನಲ್ಲಿಟ್ಟರೆ ನಾಲ್ಕು ದಿನದ ನಂತರವೂ ಆ ಸಿಪ್ಪೇನಾ ಬಳಸಬಹುದು.
ಸಿಪ್ಪೆಯ ಮೇಲಿನ ಸಿಪ್ಪೆಯನ್ನು (ಹಸಿರು ಇರುವಂಥದ್ದು) ತೆಳ್ಳನೆಯದಾಗಿ ತೆಗೆಯಿರಿ, ಕೆರೆದು ತೆಗೆಯಬೇಡಿ. ಚಾಕುವಿನಿಂದ ತೆಗೆತಬೇಕು ಪಪಾಯಿ ಹಣ್ಣಿನ ಸಿಪ್ಪೆ ತೆಗೆದ ಹಾಗೆ. ನಂತರ ಸಣ್ಣ ಸಣ್ಣದಾಗಿ ಹೋಳುಗಳನ್ನು ಮಾಡಿ. ಸಣ್ಣ ಸಣ್ಣ ಚೂರಾದಷ್ಟೂ ರುಚಿ.
ಒಲೆ ಹಚ್ಚಿ ಇಟ್ಟ ಬಾಣಲಿಗೆ ಎಣ್ಣೆ ಸ್ವಲ್ಪ ಹಾಕಿ. ನಂತರ ಒಗ್ಗರಣೆ ಕೊಟ್ಟು ತುಂಡು ಮಾಡಿದ ಕಲ್ಲಂಗಡಿ ಸಿಪ್ಪೆಯ ಚೂರುಗಳನ್ನು ಹಾಕಿ. ಜತೆಗೆ ನೆನೆಸಿದ್ದ ಕಡ್ಲೇಕಾಳಿದ್ದರೆ ಒಂದು ಮುಷ್ಠಿ ಹಾಕಿ (ಇದು ಒಳ್ಳೆ ರುಚಿ ಕೊಡುತ್ತೆ, ಇಲ್ಲದಿದ್ದರೆ ಹೆಸರುಕಾಳು ಚೆನ್ನಾಗಿರುತ್ತೆ). ಉಪ್ಪು ಹಾಕಿ, ಸ್ವಲ್ಪ ಹುಣಸೇಹಣ್ಣು ರಸ ಹಾಕಿ ಬೇಯಲು ಬಿಡಿ. ಸಣ್ಣ ಉರಿಯಲ್ಲಿ
ಹದಿನೈದು ನಿಮಿಷದ ನಂತರ ಅದು ನೀರು ಆರಿ ಬೆಂದಿರುತ್ತೆ.
ಇದಕ್ಕೆ ಸಾಸಿವೆ, ತೆಂಗಿನಕಾಯಿ, ಒಣ ಮೆಣಸು ಹಾಕಿ ಅರೆದ “ಕಾಯಿ ಮಸಾಲೆ’ ಯನ್ನಾದರೂ ಹಾಕಬಹುದು. ಇಲ್ಲದಿದ್ದರೆ ಬರೀ ಅಚ್ಚ ಮೆಣಸಿನ ಪುಡಿ ಹಾಗೂ ತೆಂಗಿನ ಕಾಯಿಯ ತುರಿ (ಎರೆದ ತೆಂಗಿನ ಕಾಯಿ) ಹಾಕಿ ಕಲೆಸಿದರೆ ಪಲ್ಯೆ ಸಿದ್ಧ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಬಹುದು.

‍ಲೇಖಕರು avadhi

22 September, 2008

1 Comment

  1. leelasampige

    ನಾವಡರೆ, ಜಯಕುಮಾರ್ ಮದುವೆ ಆದ ಮೇಲೆ ಈ ಸಿಪ್ಪೆಗಳ ಪಲ್ಯಗಳ ಪರಿಚಯ ಆಗಿತ್ತು. ಆದ್ರೆ ಕಲ್ಲಂಗಡಿ ಸಿಪ್ಪೆ ಪಲ್ಯ ! ಪರಿಚಯಿಸಿದೀರಿ, ಖಂಡಿತ ಜೆ.ಕೆ. ಗೆ ಇನ್ನೊಂದು ಪ್ರಯೋಗ ಕಾದಿದೆ. ಆ ಅವಕಾಶ ಒದಗಿಸಿದ್ದಕ್ಕೆ ಥ್ಯಾಂಕ್ಸ್. ಕರಾವಳಿ ಗಾಳಿ ಕುಡಿದವರ ಕ್ರಿಯಾಶೀಲತೆ ಮೆಚುವನ್ತದ್ದೆ.
    -ಲೀಲಾ ಸಂಪಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading